ನಂಬಿಕೆ ಎಂಬ ಪುಟ್ಟ ಪದ.

 

ನಂಬಿಕೆ. ಫೆಯಿತ್.
ಎಷ್ಟು ಪುಟ್ಟ ಪದ!
ಆದರೆ ಅಷ್ಟೆ ದೊಡ್ಡದು ಕೂಡ.

ಎಲ್ಲೀ ಆರೋವೇ ಒಬ್ಬ ವಿಜ್ನಾನಿ. ಅಂತರಿಕ್ಷದಲ್ಲಿ ಇತರ ಜೀವಿಗಳು ಇರುವ ಸಾಧ್ಯತೆಗಳನ್ನು ಹುಡುಕುತ್ತ ತನ್ನ ಜೀವನವನ್ನೆ ಕಳೆದಿರುವಾಕೆ. ಆಕೆಗೆ ತನ್ನ ಕೆಲಸದೆದುರು ಎಲ್ಲವೂ ಗೌಣ. ಆಕೆಯನ್ನು ಪ್ರೀತಿಸುವ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಪಾಮರ್ ಜಾಸನನ್ನು ಕೂಡ ಈ ಕಾರಣದಿಂದ ನಿರಾಕರಿಸಿರುವಾಕೆ. ಬಹಳ ಶ್ರಮಿಸಿ, ಅಡಚಣೆಗಳನ್ನು ಎದುರಿಸಿದ ಮೇಲೆ ಒಂದು ದಿನ ಎಲ್ಲೀ ನಕ್ಷತ್ರವೊಂದರ ಕಡೆಯಿಂದ ಬಂದ ಒಂದು ಸಿಗ್ನಲ್ಲನ್ನು ಯಶಸ್ವಿಯಾಗಿ ಪಡೆದುಕೊಳ್ಳುತ್ತಾಳೆ. ಸಿಗ್ನಲ್ಲನ್ನು ಡಿಕೋಡ್ ಮಾಡಿ ಅದರಲ್ಲಿ ಸೂಚಿಸಿರುವಂತೆ ಇನ್ನೊಂದು ಪ್ರಪಂಚವನ್ನು ತಲುಪಲು ಯಂತ್ರವೊಂದನ್ನು ನಿರ್ಮಿಸಲಾಗುತ್ತದೆ. ಭೂಮಿಯನ್ನು ಪ್ರತಿನಿಧಿಸಲು ಸರಿಯಾದ ಅಭ್ಯರ್ಥಿಗೆ ಹುಡುಕಾಟ ಆರಂಭವಾಗುತ್ತದೆ. ಆಯ್ಕೆಸಮಿತಿಯೆದುರು ಎಲ್ಲೀ ಬಂದುನಿಲ್ಲುತ್ತಾಳೆ. ಆದರೆ ಸಮಿತಿಯಲ್ಲಿರುವ ಪಾಮರ್ ಜಾಸನಿಗೆ ಆಕೆಯನ್ನು ಹೋಗಗೊಡಲು ಇಷ್ಟವಿಲ್ಲ. ಆತ ಎಲ್ಲರ ಮುಂದೆ ಎಲ್ಲೀಯನ್ನು ಕುರಿತು ’ನಿನಗೆ ದೇವರಲ್ಲಿ ನಂಬಿಕೆಯಿದೆಯೆ?’ ಎಂದು ಪ್ರಶ್ನಿಸುತ್ತಾನೆ. ದೇವರನ್ನು ನಂಬದ ಆಕೆ ಈ ಪ್ರಶ್ನೆಯ ಮಹತ್ವವನ್ನು ಪ್ರಶ್ನಿಸುತ್ತಾಳೆ. ’ಭೂಮಿಯ ಹೆಚ್ಚೂಕಡಮೆ ತೊಂಭತ್ತೈದು ಪರ್ಸೆಂಟು ಜನ ದೇವರನ್ನು ನಂಬುವವರು. ಹಾಗಾಗಿ ಭೂಮಿಯನ್ನು ಪ್ರತಿನಿಧಿಸುವ ಅಭ್ಯರ್ಥಿಯಲ್ಲಿ ಕೂಡ ನಂಬಿಕೆಯಿರುವುದು ಬಹಳ ಅವಶ್ಯ ’ ಎನ್ನುತ್ತಾನೆ ಪಾಮರ್. ಎಲ್ಲೀಯ ಮೌನ ಆಕೆಯನ್ನು ಅನರ್ಹಳನ್ನಾಗಿ ಮಾಡುತ್ತದೆ.

ಜೋಡೀ ಫಾಸ್ಟರ್ ಮತ್ತು ಮ್ಯಾಥ್ಯೂ ಮೆಕ್ಕೋನಾಹೀ ನಟಿಸಿರುವ ‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ನಡೆವ ಘಟನೆಯಿದು. ವಿಜ್ನಾನಿಯಾಗಿರುವ ಎಲ್ಲೀಯ ತೊಳಲಾಟ ಇಲ್ಲಿ ಬಹಳ ಮುಖ್ಯವಾದ್ದು. ಜೀವನವಿಡೀ ರಾಶನಲ್ ಆಗಿ ಪ್ರತಿಯೊಂದನ್ನೂ ಪ್ರಶ್ನಿಸಿಕೊಂಡು ಬೆಳೆದ ವಿಜ್ನಾನಿಯೊಬ್ಬಳು ತನ್ನ ಜೀವನದ ಅತ್ಯಂತ ಪ್ರಮುಖ ಅವಕಾಶವನ್ನು ತನ್ನ ನಂಬಿಕೆಯ ಕಾರಣದಿಂದಾಗಿ ಕಳೆದುಕೊಳ್ಳಬೇಕಾಗಿ ಬರುವ ಸನ್ನಿವೇಶ. ದೇವರಲ್ಲಿ ನಂಬಿಕೆಯಿದೆ ಎಂದರೆ ಆಕೆ ಇಲ್ಲಿಯತನಕದ ತನ್ನ ಕೆಲಸಕ್ಕೆ, ತನ್ನ ವೈಯುಕ್ತಿಕ ನಂಬಿಕೆಗೆ ಕೊಡಲಿಪೆಟ್ಟು ಹಾಕಿದಹಾಗಾಗುತ್ತದೆ. ಇಲ್ಲವೆಂದರೆ ಆಕೆಯ ಇಲ್ಲಿಯತನಕದ ಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆಹಣ್ಣಿನ ಹಾಗೆ ತೊಳೆದುಹೋಗುತ್ತದೆ. ಸಾಕ್ರಟೀಸನ ಮುಂದೆಯೂ ಇಂಥದೇ ಪ್ರಶ್ನೆಯಿದ್ದದ್ದು. ಆತ ಆಯ್ಕೆಮಾಡಿಕೊಂಡಿದ್ದು ವಿಷವನ್ನು. ಗೆಲಿಲಿಯೊನ ವಿಷಯದಲ್ಲಿ ನಡೆದದ್ದೂ ಇದೇ. ಸೂರ್ಯ ಸ್ಥಿರವಾದ್ದೆಂದೂ, ಭೂಮಿ ತಿರುಗುವುದೆಂಬ ತನ್ನ ವಾದವನ್ನು ಬಿಟ್ಟುಕೊಡಲು ಆತ ಸಿದ್ಧನಿರಲಿಲ್ಲ. ಆದರೆ ಭೂಮಿ ತಿರುಗದೆಂದು ಪಾಶ್ಚಿಮಾತ್ಯ ಬೈಬಲ್ಲಿನಲ್ಲಿ ಬರೆದಿದ್ದು ಗೆಲಿಲಿಯೋನ ವಾದ ಇದಕ್ಕೆ ಧಕ್ಕೆಯಾಗುವಂತಿತ್ತು ಎಂಬುದು ಚರ್ಚಿನ ವಾದ. ತನ್ನ ಅರಿವಿನೆಡೆಗೆ ವಾಲಿನಿಂತ ಗೆಲಿಲಿಯೋನನ್ನು ಗೃಹಬಂಧನದಲ್ಲಿರಿಸಲಾಯಿತು. ಸುಮಾರು ಮುನ್ನೂರು ವರುಷಗಳ ನಂತರ ಪೋಪ್ ಪಯಸ್ ಗೆಲಿಲಿಯೋನ ಯಾರಿಗೂ ತಲೆಬಾಗದ ಚೈತನ್ಯವನ್ನು ಪ್ರಶಂಸಿಸಿದರು. ಚರ್ಚು ಆಗಿನಕಾಲದ ಸಮಾಜದ ನಂಬಿಕೆಯನ್ನು ಎತ್ತಿಹಿಡಿಯಲು ಗೆಲಿಲಿಯೋನ ವಿರುದ್ಧ ತಾವು ಮಾಡಿದ್ದು ಸರಿ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.

ಈಗಿನ ದಿನಗಳ ಬಗ್ಗೆ ಮಾತನಾಡುವದಾದರೆ ನಾವು ಬಲುದೂರ ಸಾಗಿಬಂದಿದ್ದೇವೆ. ನಮ್ಮ ನಂಬಿಕೆ ಶ್ರದ್ಧೆಗಳು ಹೆಚ್ಚಿನಪಕ್ಷ ನಮ್ಮ ಆಯ್ಕೆಗೆ ಒಳಪಟ್ಟಿವೆ. ಸಾಮಾಜಿಕ ಚೌಕಟ್ಟುಗಳ ಆಚೆ ನಿಂತು ನಮ್ಮ ನಂಬಿಕೆಗಳನ್ನು ಅಳೆದುಕೊಳ್ಳುವದು ನನ್ನಂತಹ ಜನಸಾಮಾನ್ಯರಿಗು ಇಂದು ಸಾಧ್ಯವಿದೆ. ಕೆಲವೆಡೆ ಇದು ಟೀಕೆಗೆ, ಕೆಲವೆಡೆ ಪ್ರಶಂಸೆಗೆ ಗುರಿಯಾಗಿದೆ. ನಂಬಿಕೆಯಿರುವ ಒಬ್ಬ ವ್ಯಕ್ತಿ ನಂಬಿಕೆಯನ್ನು ಪ್ರಶ್ನಿಸುವ ವ್ಯಕ್ತಿಯೊಡನೆ ಕೂತು ವಿಚಾರವಿನಿಮಯ ನಡೆಸುವ ಸಾಧ್ಯತೆಗಳು ಇವತ್ತು ಇವೆ. ನಾವು ನೈತಿಕ ಅವನತಿಯ ಕಡೆ ಸಾಗಿದ್ದೇವೆಯೆ ಅಥವಾ ಏಳಿಗೆಯೆಡೆ ಹೆಜ್ಜೆಹಾಕುತ್ತಿದ್ದೇವೆಯೆ, ನಿರ್ಧಾರ ನಿಜಕ್ಕು ಕಷ್ಟ. ಆದರೆ ನಂಬಿಕೆಯ ಎರಡೂ ಮುಖಗಳು ಒಂದನ್ನೊಂದು ಕಣ್ಣಿಟ್ಟು ನೋಡುವುದು ಸಾಧ್ಯವಾಗಿರುವುದು ನಮ್ಮ ಕಾಲದಲ್ಲಿಯೇ ಎನ್ನುವದು ಹೆಮ್ಮೆಯ ವಿಚಾರ. ಹಲವಾರು ವೈರುಧ್ಯಗಳು ನಮ್ಮೊಳಗೇ ಇವೆ. ಅವು ನಮ್ಮ ನಂಬಿಕೆಯನ್ನು ಪ್ರಶ್ನಿಸುತ್ತ ಅವನ್ನು ಗಟ್ಟಿಗೊಳಿಸುತ್ತಲೋ, ಇಲ್ಲ ಕಡಿಮೆಮಾಡುತ್ತಲೋ ಹೋಗುತ್ತವೆ.

‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ಎಲ್ಲೀ ಆರೋವೇಗೆ ಕೊನೆಗೂ ಆ ಇನ್ನೊಂದು ಪ್ರಪಂಚಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಸುಮಾರು ಇಪ್ಪತ್ತಾರು ಜ್ಯೋತಿರ್ವರ್ಷಗಳನ್ನು ದಾಟಿ ಹೊಸಲೋಕಕ್ಕೆ ಕಾಲಿಡುವ ಎಲ್ಲೀ ತಾನು ಕಾಣುವ ಅದ್ಭುತ ನೋಟಗಳಿಗೆ ನಿಬ್ಬೆರಗಾಗಿ ಕಣ್ಣೀರು ಸುರಿಸುತ್ತ ತನಗೆ ಅರಿವಿಲ್ಲದಂತೆ, ’ಓಹ್, ದೇವರೆ!” ಎಂದು ಉದ್ಗರಿಸುತ್ತಾಳೆ. ’ಇಲ್ಲಿಗೆ ನನ್ನ ಬದಲು ಕವಿಯೊಬ್ಬರನ್ನು ಕಳಿಸಿರಬೇಕಿತ್ತು’ ಎಂದು ಯೋಚಿಸುತ್ತಾಳೆ. ಮಾನವಜನಾಂಗಕ್ಕೆ ಆಕೆಗಿಂತ ಒಳ್ಳೆಯ ಪ್ರತಿನಿಧಿ ಸಿಗುವುದು ಸಾಧ್ಯವಿತ್ತೆ?

 ಚಿತ್ರಕೃಪೆ: www.impawarads.com ಮತ್ತು www.seti.org

 

 

 

 

 

Comments (7)

ಪರಿಚಯ: ಹೀಗೊಬ್ರಿದಾರೆ ವೆಂಕಟೇಶ್ ಅಂತ!!

ನಮಸ್ಕಾರ ಎಲ್ಲರಿಗೂ,

ನನಗೆ ಕೆಲದಿನಗಳ ಹಿಂದೆ ’ಏನು ಮಾಡಬಹುದು?’ ಮತ್ತು ’ಹೀಗೆ ಶುರು ಮಾಡೋಣವೆ?’ ಪೋಸ್ಟುಗಳಿಗೆ ಬಹಳ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪ್ರತಿಕ್ರಿಯೆ ದೊರಕಿತು. ಸರಿ ಏನಾದರು ಆಗಲಿ ಒಂದೆಡೆ ಭೇಟಿಯಾಗಿ ಈ ಬಗ್ಗೆ ಚರ್ಚೆ ಮಾಡಲೆಬೇಕೆಂಬ ಹುಮ್ಮಸ್ಸು ಹೊತ್ತು ಪ್ಲಾನು ಮಾಡುತ್ತಿರುವಾಗ ಶ್ರೀಯುತ ವೆಂಕಟೇಶರೆಂಬ ಮಹಾನುಭಾವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ನಮ್ಮ ಅಭಿಪ್ರಾಯಗಳನ್ನು ನಾವು ವ್ಯಕ್ತಪ ಡಿಸಿದರೆ ವೆಂಕಟೇಶರು ನಾವು ನಿರೀಕ್ಷಿಸಿರದ ಮಟ್ಟದ ವಿಕೃತಮನೋಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಿ ತಾವು ಎಂಥವರೆಂದು ಪ್ರಪಂಚಕ್ಕೇ ಸಾರುವ ಹುಂಬತನವನ್ನು ತೋರಿದ್ದಾರೆ. ಈ ಮನುಷ್ಯನ ಐಡಿ ವೆಬ್ ದುನಿಯಾದ್ದಾಗಿದ್ದರು ಸ್ನೇಹಿತ ತವಿಶ್ರೀಯವರು ವೆಬ್ ದುನಿಯಾವನ್ನು ಸಂಪರ್ಕಿಸಿದಾಗ ಅವರು ತಮ್ಮಲ್ಲಿಈ  ಹೆಸರಿನ ಯಾವ ವ್ಯಕ್ತಿ ಇಲ್ಲವೆಂದೂ, ಈ ಐಡಿಯನ್ನು ವೆಬ್ ದುನಿಯಾ ಉಪಯೋಗಿಸುವವರಿಗೆ ನೀಡಲಾಗುವುದರಿಂದ ಇದು ಬೇರಾರೋ ಇರಬೇಕೇಂಬ ಸಮಜಾಯಿಶಿಯನ್ನು ನೀಡಿದರು. ಇದಲ್ಲದೆ ಅಚ್ಚರಿಹುಟ್ಟಿಸುವ ವಿಚಾರವೆಂದರೆ ಗೆಳತಿ ಚೇತನಾಳ ಬಗ್ಗೆ ಏಕವಚನ ಬಳಸಿ ಹೊಲಸಾಗಿ ಬರೆದಿರುವ ಬರೆದಿರುವ ಇದೇ ಮನುಷ್ಯ ಚೇತನಾ ಹಾಗು ಸುಪ್ರೀತರು ಸಹಲೇಖಕರಾಗಿರುವ ಓಶೋ ಬಗೆಗಿನ ಬ್ಲಾಗ್ ಆದ www.hakkihadu.blogspot ನ ಸಹಲೇಖಕನಾಗಿರುವುದು. ಎಲ್ಲಿ ಓಶೋ, ಎಲ್ಲಿ ವೆಂಕಟೇಶ್?

ಯಾಕೆ ವೆಂಕಟೇಶ್, ನಿಮಗೆ ನಿಮ್ಮ ಸಹಲೇಖಕಿಯ ಬಗ್ಗೆ ತಿಳಿದಿಲ್ಲವೆ? ಈ ಕೆಳಗಿನ ಮಾತುಗಳು ಉದ್ದೇಶಪೂರ್ಣವೆ ಅಥವ ಈ ವಿಕೃತಬುದ್ಧಿ ನಿಮ್ಮ ಸ್ಪ್ಲಿಟ್ ಪರ್ಸನಾಲಿಟಿಯ ಕಡೆಗೆ ಬೆರಳು ಮಾಡುತ್ತದೆಯೆ? ಈ ಕೆಳಗಿನ ಕಮೆಂಟುಗಳನ್ನು ಪ್ರಕಟಿಸುತ್ತಿರುವ ಒಂದೇ ಉದ್ದೇಶ - Mr. Venkatesh - whoever-you -are, I will not give you the pleasure of relishing your words. I give them back to you. Eat them and be content with your MCP attitude. I warn you for the first and last time that If I see another mail from you on my blog, I will lodge a complaint against you, what if you are in Haryana or Alaska. I know very well that people like you are sick and need counseling. Therefore this warning. Mind your language before saying anything about a person, especially a woman. I can understand why you could not stand my blog post. ನನಗೆ ಟೈಟಲ್ಲುಗಳ ನೀಡಲು, ನನ್ನ ಸ್ನೇಹಿತೆಯ ಬಗ್ಗೆ ಅಸಹ್ಯವಾಗಿ ಮಾತನಾಡಲು ನಿಮಗೆಷ್ಟು ಧೈರ್ಯ?

ಈ ಕೆಳಗೆ ವೆಂಕಟೇಶರ ಮೊನ್ನೆಯ ಕಮೆಂಟು, ಅದರ ನಂತರ ಹಿಂದಿನ ಕಮೆಂಟುಗಳು ಹಾಗೂ ನಮ್ಮ ಉತ್ತರಗಳನ್ನು ನಿಮಗಾಗಿ ನೀಡಿದೇನೆ.

 

 

 Venkatesh
venkven@webdunia.com | 125.20.36.178

ಮಿಸ್. ಕಿರು’ಚಾಟರ್ ಬಾಕ್ಸ್,
ಪರವಾಗಿಲ್ವೆ ಗೆದ್ದೆನೆಂಬ ತಮ್ಮ ಅಟ್ಟಹಾಸ, ಕುಹಕ ಯಾವುದೇ ಅತ್ಯಾಚಾರಿಗಿಂತ ಕಡಿಮೆಯೇನಿಲ್ಲ……
ತಾವು ಉತ್ತರವಾಗಿ ಬಳಸಿರುವ ಕಲಹ ಕೌಶಲ ಪದಗಳು, ವೈಯುಕ್ತಿಕ ಮಟ್ಟದ ಆರೋಪಗಳನ್ನು ತುಂಬ ಸಲೀಸಾಗಿ ಉಪಯೋಗಿಸಿದ್ದಿರಾ..
ಇದು ಚರ್ಜೆ ಹುಟ್ಟು ಹಾಕುವವರ ಸ್ಥಿಮಿತ, ಹಾಗು ಲಕ್ಷಣವಂತೂ ಅಲ್ಲ. ಒಬ್ಬರ ತೇಜೋವಧೆಗೆ ಯಾವುದೇ ಮಟ್ಟಕ್ಕೆ ಹೋಗಬಲ್ಲಿರೆಂದು ಕಾಣಿಸುತ್ತದೆ.
ಇನ್ನು ಅಸಮಾನತೆ, ಅತ್ಯಾಚಾರ ಇವುಗೆಳೆಲ್ಲದರ ದುಷ್ಪರಿಣಾಮ ಸಮಾಜದ ಎಲ್ಲರೂ ಅನುಭವಿಸುತ್ತಿರುತ್ತಾರೆ. ರೀತಿ ಬೇರೆಯಿರಬಹುದು. ತನ್ನ ಮಾನಸಿಕ ಕಹಿಯನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಸಣ್ಣ ಮಕ್ಕಳ ತಫ್ಫಿನಲ್ಲೂ ಭವಿಶ್ಯದ ಪೀಡಕನಂತೆ ಭಾವಿಸಿಕೊಂಡು ಅವರ ಮೇಲೆ ಎರಗುವ, ಪರಚುವ ನಿಮ್ಮಂತ ಮನೋವಿಕಾರಿ ಮಾನಿನಿಯರನ್ನು ಹುಡುಗರು ಅನುಭವಿಸಿರುತ್ತಾರೆ. ಬಾಲ್ಯದಲ್ಲಿ ಅದು ಉಂಟುಮಾದುವ ಆಘಾತಗಳು ಕಡಿಮೆಯೇನಲ್ಲ.
ಹಾಗೆ ಇಲ್ಲಿ ಬಹಳ ಉರಿ ಬಿದ್ದಿರುವುದು ಸಂಸ್ಕ್ರತಿ ವಿಷಯದಲ್ಲಿ, ದೇಶದ ಪ್ರತಿಯೊಬ್ಬರಿಗೂ ಅದರ ಸಂಸ್ಕ್ರತಿಯನ್ನು ಟೀಕಿಸುವ, ಅಭಿಪ್ರಾಯ ಹೊಂದುವ ಅದಿಕಾರವಿದ್ದೆ ಇದೆ. ನಾವು ನಮ್ಮದಲ್ಲದೇ ಬೇರೆ ದೇಶದ ಸಂಸ್ಕ್ರತಿಯನ್ನು ಟೀಕಿಸಲು ಬರುವುದಿಲ್ಲ. ತಮ್ಮ ಮನೆಯ, ಜನಾಂಗದ ಆಚರಣೆಗಳನ್ನೆ ದೇಶದ ಸಂಸ್ಕ್ರತಿಯನ್ನಾಗಿ ಬಿಂಬಿಸಲು, ಪ್ರಚಾರ ಮಾಡ ಹೊರಟವರಿಗೆ ಹೀಗೆ ಉರಿ ಬೀಳುವುದು ಸಹಜ. ತಮ್ಮ ಲೇಖನದಲ್ಲಿ ಎಲ್ಲಾ ಗಂಡಸರೂ ದುರುದ್ದೇಶದಿಂದಲೇ ನೋಡುತ್ತಿದ್ದರು ಎಂದಿದ್ದೀಯೆ ಹಳದಿಯಾಗಿ ನೋಡುವುದು ಅಭ್ಯಾಸ ಆಗಿಬಿಟ್ಟಿರಬೇಕು. ಚರ್ಚೆ ಹುಟ್ಟುಹಾಕುವವರು ಹೀಗೆಲ್ಲಾ ಬಾಯಿಮಾಡಿ, ನೈಲ್ ಪಾಲಿಷ್ ನ ಪಂಜವನ್ನು ತೋರಿಸಿದರೆ ಬಂದವರು ಆಯ್ತು ಮೇಡಮ್ ಯಾವಗಲೂ ಬ್ರಾಂಡೆಡ್ ಖಾರದಪುಡಿಯನ್ನೆ ಉಪಯೋಗಿಸಿ ಎಂದು ಅಚ್ಚ ಅಚ್ಚ ಹೇಳಿ ಹೋಗಬೇಕಾಗುತ್ತದೆ ಇನ್ನು ಚಿಂತನೆ ಖಾರದಪುಡಿಗಿಂತ ಮುಂದೆ ಎಲ್ಲಿ ಹೋಗುತ್ತದೆ.
            ಇನ್ನು ಚೇತನಾ, ನಾಲಿಗೆ ಇರುವಷ್ಟು ಹರಿಬಿಟ್ಟಿದ್ದೀಯೇ, ಅಪ್ಪಟ ಗಂಡಸ್ತನದ ಬಗ್ಗೆ ಮಾತಾಡಿದ್ದೀ. ಅವಶ್ಯಕತೆಯಿಲ್ಲದಿದ್ದರೂ.
ನಿನ್ನನ್ನು ನೀನು ಗೂಷ್ಲು ಎಂದು ಕರೆದುಕೊಂಡಿರುವುದು ಸರಿ, ಹೀಗೆ ಹೇಳಿಕೊಂಡಿರುವುದು ತಾವು ತಮ್ಮ ಅಪ್ಪಟ ಹೆಣ್ತನದ ಬೇಲಿ ಹಾರಿರುವ ಮತ್ತು ಹಾರುವ ಕುರುಹು ತವಕ ತೋರಿಸುತ್ತದೆ ಅಂತ ನಾನು ಹೇಳಬೇಕಾಗುತ್ತದೆ.
ಇದನ್ನೆಲ್ಲಾ ಓದಿದ ಮೇಲೆ ಚಾಟರ್ ಬಾಕ್ಸ್ ಮತ್ತೆ ಸಿಡಿಯುತ್ತದೆ ಅದರೆ ತಮ್ಮ ಕಲಹ ಚಾತುರ್ಯವನ್ನ ಬೀದಿನಲ್ಲಿ ಮಟ್ಟಕ್ಕೆ ಕೊಂಡು ಹೋಗುವುದಿಲ್ಲ ಎಂದುಕೊಂಡಿದ್ದೇನೆ.
ಮತ್ತೆ ನೋಡಲು ಹೋಗುವುದಿಲ್ಲ, ಏಕೆಂದರೆ ಎಲ್ಲರೂ ಕಿರುಚಾಟರ್ ಬಾಕ್ಸ್ ಗಳಂತೆಯೇ ಕಾಣುವ ಅಪಾಯವಿದೆ.

 

Older comments from Venkatesh and our replys

 

From ಹೀಗೆ ಶುರು ಮಾಡೋಣವೆ?, 2008/04/29 at 6:52 PM
Venkatesh said,
April 3, 2008 @ 06:30 p04 · Edit

ಹುಹ್ ಏನ್ರಿ ಇದು ರೂಲು ದೊಣ್ಣೆ, ಖಾರದ ಪುಡಿ, ಕರಾಟೆ ಎಲ್ಲಾ ಕಲಿಯುವುದು… ಆತ್ಮ ರಕ್ಷಣೆಗಾಗಿ ಇದೆಲ್ಲಾ ಆಗೊ ಹೋಗೊ ಮಾತಾ? ನಮ್ಮದು ಏನು ದರಿದ್ರ ಸಂಸ್ಕ್ರತಿನೋ, ದೇಶಾನೋ? ಇದನ್ನೆಲ್ಲಾ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡವರ ಮನಸ್ಸು ಆರೋಗ್ಯದಿಂದ ಸಮಾಜದ ಕಡೆ ನೋಡುವಂತಾಗಬೇಕಲ್ಲಾ, ಕಣ್ಣಿಗೆ ಕಾಣುವ ಹುಡುಗರೆಲ್ಲಾ , ಗಂಡಸರೆಲ್ಲಾ ಮನುಷ್ಯರಂತೆ ಕಾಣದೆ ರೂಲು ದೊಣ್ಣೆ, ಖಾರದ ಪುಡಿಯಂತೆ ಕಂಡರೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವೇ? ಇಲ್ಲಿ ಸಿಂಧುರವರು ಇದನ್ನೆಲ್ಲಾ ತಿಳಿದು ಓದಿಯೂ ಏನಾದರೂ ಉಪಯುಕ್ತ ಇನಿಶಿಯೇಟಿವ್ ಮಾಡೋಣ ಅಂದಿದ್ದಾರೆ ಹೌದು ಹಾಗೆ ಮಾಡುವುದರ ಮೂಲಕವೇ ಸ್ವಾಸ್ಥ್ಯ ಸಾಧ್ಯ. ಕರಾಟೆಯನ್ನು ಒಂದು ವಿದ್ಯೆ, ಕಲೆ, ಫಿಟ್ ನೆಸ್ ಗಾಗಿ ಕಲಿಯೋದು ಆರೋಗ್ಯಕರವಾದದ್ದು, ಸಣ್ಣ ಹೆಣ್ಣುಮಕ್ಕಳಿಗೆ ನೀನು ಗಂಡು ಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಅಂತ ಕಳಿಸಿದರೆ ಆ ಹುಡುಗಿ ತನ್ನ ಮುಂದಿರುವ ಸಮಾಜದ ಬಗ್ಗೆ ಏನು ಯೋಚಿಸಬೇಕು.
ಒಮ್ಮೆ ತೇಜಸ್ವಿಯವರಿಗೆ ಅವರ ಆರೋಗ್ಯಕರ ಚೇತೋಹಾರಿ ಬರಹದ ಬಗ್ಗೆ ಕೇಳುತ್ತಿದ್ದಾಗ ಅಥವಾ ಅಂಥ ಒಂದು ಸಂಧರ್ಬದಲ್ಲಿ ತೇಜಸ್ವಿಯವರೆಂದರು ಅವರು ವಯಸ್ಕರ ಶಿಕ್ಷಣದ ಪುಸ್ತಕಗಳನ್ನು ನೋಡಿದರಂತೆ ಅದರಲ್ಲಿ ಇದ್ದ ವಿಷಯಗಳು, “ರೇಪ್ ಗೆ ಓಳಗಾದಾಗ ಹೆಣ್ಣು ಏನು ಮಾಡಬೇಕು?” “ಪೋಲಿಸ್ ಕಂಪ್ಲೇಂಟ್, ಕೋರ್ಟ್ ಮೂಲಕ ರಕ್ಷಣೆ, ಇಂತಹ ವಿಷಯಗಳಿದ್ದವಂತೆ, ಸೋ ಅಕ್ಷರಲೋಕಕ್ಕೆ ಕಾಲಿಡುವವರಿಗೆ ಮೊದಲಿಗೆ ಇಂತಹ ಭೀಕರ ಲೋಕದ ಪರಿಚಯದ ಮೂಲಕ ಸ್ವಾಗತ ಮಾಡಹೋದರೆ ಅವರ ಕಲಿಯುವಾಸೆ ಇಂಗಿ ಹೋಗುತ್ತದೆ. ನನಗೆ ತೇಜಸ್ವಿಯವರ ಈ ಹೇಳಿಕೆ ನನಗೆ ಬಹಳ ಮಹತ್ವದೆನಿಸಿತು. ನಾನು ಹಲವು ವರ್ಷಗಳ ಮೊದಲು ನನಗಿರುವಂತೆ ಪುಸ್ತಕ ಓದುವ ಅಭ್ಯಾಸ ನನ್ನ ಅಕ್ಕ, ತಮ್ಮ, ತಂಗಿಯರಿಗೂ ಹತ್ತಿಸಲು ಪ್ರಯತ್ನ ಮಾಡುತ್ತಿದ್ದೆ ಅವರು ಓದಲು ಹಿಂಜರಿಯುತ್ತಿದ್ದರು ಬಹುಶ: ಕಥೆ ಕಾದಂಬರಿಗಳಲ್ಲಿ ಬರುವ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಅರಗಿಸಿಕೊಳ್ಳಲು ಒಳಗೆ ಶಕ್ತಿ, ಧೈರ್ಯ, ಬೇಕಾಗುತ್ತದೆ ಅದು ಸುಪ್ತವಾಗಿ ಅವರನ್ನು ತಡೆಯುತ್ತದೆ ಎನಿಸುತ್ತದೆ.
ಅಂತೆಯೇ ಈ ಬ್ಲಾಗ್ [ಅತ್ಯಚಾರದ] ಓದುವಾಗಲು ತಥ್ ಎನಿಸುತ್ತದೆ.

 
Tina said,
April 4, 2008 @ 06:30 p04 · Edit

ಶ್ರೀಯುತ ವೆಂಕಟೇಶ ಅವರೆ,
ನಿಮ್ಮ ಬಗ್ಗೆ ನನಗೆ ಅಯ್ಯೊ ಪಾಪ ಎಂತಲೂ ಅನಿಸುವದಿಲ್ಲ. ಯಾವ ಪ್ರಪಂಚದಲ್ಲಿ ಬದುಕುತ್ತಿದೀರಿ ನೀವು? ರೇಪು, ವಯಸ್ಕರ ಶಿಕ್ಷಣ, ಪೋಲೀಸು ಕಂಪ್ಲೇಂಟು, ಕೋರ್ಟು ಮೂಲಕ ರಕ್ಷಣೆ ಇತ್ಯಾದಿಗಳ ಬಗ್ಗೆ ಓದಿದರೆ ಅಕ್ಷರಲೋಕಕ್ಕೆ ಕಾಲಿಡುವವರು ಹಿಂಜರಿಯುತ್ತಾರೆಯೆ? ಹಾಗಿದ್ದರೆ ಇವತ್ತಿನ ನ್ಯೂಸ್ ಪೇಪರುಗಳು, ಟೀವಿ ಚ್ಯಾನೆಲ್ಲುಗಳು ನಿಮ್ಮ ಸ್ಟಾಂಡರ್ಡಿನ ಪ್ರಕಾರ ತಮ್ಮ ಕಚೇರಿಗಳಿಗೆ ಬೀಗ ಜಡಿದುಕೊಂಡು ಮನೆಗೆ ಹೋಗಬೇಕು. ಯಾಕೆಂದರೆ ನಿಮ್ಮ ಅನಕ್ಷರಕುಕ್ಷಿ ಅಥವ ಹೊಸತಾಗಿ ಅಕ್ಷರಸ್ಥರಾಗಿರುವ ನಿಮ್ಮಂತೆ ಪುಸ್ತಕ ಓದಲು ಹಿಂಜರಿಯುವ ಅಕ್ಕತಂಗಿಯರು ಟೀವಿ ನೋಡಿದರೆ, ನ್ಯೂಸು ಓದಿದರೆ ಮಾನಸಿಕವಾಗಿ ಬಹಳ ತೊಂದರೆ ಪಟ್ಟುಕೊಂಡಾರು ಅಲ್ಲವೆ? ಛೇ ಛೇ! ಅವ್ರಿಗೆ ಏನೂ ನೋಡದೆ ಅಡುಗೆಮನೆಯಲ್ಲಿ ತೆಪ್ಪಗೆ ಬೇಯಿಸಿ ಬಡಿಸಲು ತಾಕೀತುಮಾಡಿ. ನಿಮ್ಮ ಮನೆಯ ಹೆಣ್ಣುಮಕ್ಕಳು ಪ್ರಪಂಚದ ಯಾವ ತೊಂದರೆಯೂ ಇಲ್ಲದ ಹಾಗೆ ಅಲ್ಲಿ ಸೇಫಾಗಿರುತ್ತಾರೆ. ಇನ್ನು ನಮ್ಮ ಸಂಸ್ಕೃತಿಯ ಬಗ್ಗೆ, ದೇಶದ ಬಗ್ಗೆ ನಿಮಗಿರೋ ಐಡಿಯದ ಬಗ್ಗೆ ನನಗೆ ಚೆನ್ನಾಗಿ ಅರಿವಾಗಿದೆ. ಕರಾಟೆ ಆರೋಗ್ಯವರ್ಧನೆಗಾಗಿ ಫಿಟ್ನೆಸ್ಸಿಗಾಗಿ ಕಲಿಯುವ ವಿದ್ಯೆಯಲ್ಲ ಮಹಾಸ್ವಾಮೀ, ಅದು ಆತ್ಮರಕ್ಷಣೆಗಾಗಿಯೇ ಇರುವ ವಿದ್ಯೆ. ನಿಮ್ಮ ಜನರಲ್ ನಾಲೆಡ್ಜಿಗೆ ನನ್ನ ನಮಃಸ್ಕಾರ! ರೂಲುದೊಣ್ಣೆ ಖಾರದಪುಡಿಗಳೆಲ್ಲ ಗಂಡಸರಾಗಿ ಕಾಣುವದಿಲ್ಲ ಸ್ವಾಮೀ, ಅದು ಕೇವಲ ಹೆಂಗಸರನ್ನು ಹೆಂಗಸರಂತೆ ಕಾಣದೆ ತಮ್ಮ ಖಯಾಲಿ ಪೂರಯಿಸಿಕೊಳ್ಳಲು ಮಾಧ್ಯಮದಂತೆ ಕಾಣುವ ನರಾಧಮರ ಮೇಲೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಪಯೋಗಿಸಲು ಮಾತ್ರ. ಹೌದು, ನಿಮಗೇಕೆ ಇಷ್ಟೊಂದು ಹಿಂಸೆ ಅನ್ನಿಸುತ್ತಿದೆ? ನಾವು ನಿಮ್ಮ ವಿಷಯಾನ ಇಲ್ಲಿ ಚರ್ಚಿಸ್ತಾ ಇಲ್ಲ! ಕಣ್ಣುಬಿಟ್ಟು ಈ ಬರಹವನ್ನ ಮೊದಲು ಓದಿ. ಸಣ್ಣ ಹೆಣ್ಣುಮಕ್ಕಳಿಗೆ ಗಂಡುಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಎಂದು ಕಲಿಸಲಾಗುವುದಿಲ್ಲ, ತಮ್ಮನ್ನು ಸಾವಿರಾರು ವರುಷಗಳಿಂದ ’ನೀನು ಅಬಲೆ’ ಅಂತ ತಲೆಗೆ ತುಂಬಿಸುತ್ತ ಬಂದಿದೆಯಲ್ಲ ನಮ್ಮ ಪ್ರಜ್ನೆ? ಅದನ್ನ ತೆಗೆದುಹಾಕಿ ’ನೀನು ಸಬಲೆ, ಯಾರಿಗೂ ಕಡಿಮೆಯಿಲ್ಲ’ ಅನ್ನುವ ಧೈರ್ಯವನ್ನ ತುಂಬುವ ಕೆಲಸ ಇದು. ನಿಮ್ಮ ಯೋಚನೆಗೆ ಬಹುಶಃ ನಿಲುಕಲಿಕ್ಕಿಲ್ಲ ಬಿಡಿ ಸಾರ್. ಮತ್ತೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೂಡ ಇದು ಅನ್ವಯಿಸುತ್ತದೆ. ಅವ್ರ ಸುಪ್ತಪ್ರಜ್ನೆಯ ಬಗ್ಗೆ ಕೂಡ ನೀವು ಆಳ ಅಧ್ಯಯನ ನಡೆಸಿ ಅವ್ರು ಪುಕ್ಕಲುಗಳು ಅಂತ ಡಿಸೈಡು ಮಾಡಿಯಾಗಿದೆ. ಇನ್ನೇನು ಹೇಳಲಿ? ಪಾಪ ಟೀವಿ ಸೀರಿಯಲ್ಲುಗಳನ್ನು ನೋಡಿಯೂ ಗಡಗಡ ನಡುಗುತ್ತಿರುತ್ತಾರೇನೊ ಅವರು?
ನಮ್ಮಲ್ಲಿ ಪುರುಷದ್ವೇಷವಿಲ್ಲ ಎಂದು ನಾವು ನಿಮಗೇಕೆ ಸಮಜಾಯಿಶಿ ಕೊಡಲಿ?

ನನಗೆ ನಿಮ್ಮ ಥರದವರ ಬಗ್ಗೆ, ನೀವುಗಳು ಹೀಗೆಲ್ಲ ತೇಜಸ್ವಿ, ಸಂಸ್ಕೃತಿ ಅಂತೆಲ್ಲ ಮಾತನಾಡುತ್ತ ನಡೆಸುವ ಮಾನಸಿಕ ಅತ್ಯಾಚಾರದ ಬಗ್ಗೆ ’ಅಸಹ್ಯ’ ಅನ್ನಿಸತ್ತೆ.
chetana chaitanya said,
April 5, 2008 @ 06:30 p04 · Edit

ನಮಸ್ತೇ ವೆಂಕಟೇಶ್,

ನಾಚಿಕೆಯಾಗ್ಬೇಕು ನಿಮಗೆ. ದಿನದಿನವೂ ಹೆಣ್ಣುಮಕ್ಕಳ ಮೇಲೆ ನಡೀತಿರೋ ಲೈಂಗಿಕ ಅತ್ಯಾಚಾರಗಳ ಬಗ್ಗೆ ತಿಳಿದಿದ್ದೂ ( ತಿಳಿಯದಿದ್ದರೆ ಅಯ್ಯೋ ಪಾಪ!) ಹೀಗೆಲ್ಲ ಕಮೆಂಟು ಮಾಡಿರುವುದು ನಿಮ್ಮ ‘ಲೆವೆಲ್’ ಅನ್ನು ಸೂಚಿಸುತ್ತದೆ. ನಮ್ಮದು ಏನು ದರಿದ್ರ ಸಂಸ್ಕೃತೀನೋ, ದೇಶಾನೋ ಅಂತ ಹೇಳಿರುವ ನಿಮ್ಮ ದರಿದ್ರ ಮನಸ್ಥಿತಿಗೆ ನನ್ನ ಧಿಕ್ಕಾರ. ನಿಮ್ಮಂಥವರು ಮಾಡೋದೆಲ್ಲವನ್ನೂ ಸಹಿಸ್ಕೊಳ್ಳುತ್ತ ಬಿದ್ದಿರಬೇಕು,
ಸಣ್ನದೊಂದು ಪ್ರತಿಭಟನೆಯನ್ನೂ ತೋರಬಾರದು ಅನ್ನುವ ನಿಮ್ಮ ದಬ್ಬಾಳಿಕೆಯ ಮನೋಭಾವ ನಿಜಕ್ಕೂ ಅನುಕಂಪ ತರಿಸ್ತಿದೆ.
ಅಥವಾ ನೀವ್ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದೀರಿ? ಅನ್ನೋ ಅನುಮಾನವೂ ಮೂಡ್ತಿದೆ.
ಬಿಟ್ಬಿಡಿ. ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ.
ನಾವು ಪುರುಷ ದ್ವೇಷಿಗಳಲ್ಲ. ಇದೇ ಬರಹಕ್ಕೆ ಪ್ರತಿಕ್ರಿಯಿಸಿರುವ ಸಹೃದಯೀ ಗಂಡಸರನ್ನು ನೋಡಿ ನಾಚಿಕೊಳ್ಳಿ.
ನಮ್ಮೆಲ್ಲ ಪ್ರಯತ್ನಕ್ಕೂ ಜೊತೆಯಾಗಬಲ್ಲ ಅಂಥವರು ‘ಅಪ್ಪಟ ಗಂಡಸರು’
ನಿಮ್ಮ ಬಗ್ಗೆ ಏನನ್ನಬೆಕೋ ತಿಳೀತಿಲ್ಲ.
ಸಧ್ಯಕ್ಕೆ, ‘ಅಸಹ್ಯ’ ಅನ್ನಿಸುತ್ತಿದೆ ಅಷ್ಟೇ.

ವಂದೇ,
ಚೇತನಾ ತೀರ್ಥಹಳ್ಳಿ
Venkatesh said,
April 7, 2008 @ 06:30 p04 · Edit

ಟೀನಾ ಜಿ,
ಅಕ್ಷರ ಕಲಿಯುವುದು ಬೇರೆ, ಪುಸ್ತಕ ಓದುವ ಹವ್ಯಾಸ ಬೇರೆ ಕೆಲವರಿಗೆ ಒಗ್ಗುತ್ತದೆ, ಕೆಲವರಿಗೆ ಒಗ್ಗುವುದಿಲ್ಲ.
ಇದನ್ನು ಈ ಸಂದರ್ಭದಲ್ಲಿ ಹೆಳಿದೆನೆ ಹೊರತು ಜೆನೆರಲೈಸ್ ಮಾಡಿಲ್ಲ. ಆದರೆ ನೀವು ಜನರಲೈಸ್ ಮಾಡಿಕೊಂಡಿದ್ದೀರ.
ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.
ನಿಮ್ಮ ಬರಹವೇನು ಅಪ್ರಸ್ತುತ ಎಂದೇನೂ ನಾನು ಹೇಳಿಲ್ಲ.
ಮಹಿಳೆಯರ ಪ್ರಚೋದಕ ರೀತಿ, ನೀತಿ,ಉಡುಗೆಗಳೇ ಕಾರಣ ಎಂದೇನಾದರೂ ಹೇಳಿದ್ದರೆ ನೀವು ಹೀಗೆ ಹಾರಾಡಬಹುದಿತ್ತು, ಆದ್ದರಿಂದ ಮಾನಸಿಕ ಪ್ರಬುದ್ದತೆಯ ಸರ್ಟಿಫಿಕೇಟನ್ನು ಯಾರಿಗೆ ಅನ್ವಯಿಸುತ್ತದೋ ನೋಡಿಕೊಳ್ಳೀ.
Tina said,
April 8, 2008 @ 06:30 p04 · Edit

ವೆಂಕಟೇಶ್,
ಯಾಕೊ ನಿಮ್ಮ ಮೂಡೇ ಬದಲಾದಹಾಗಿದೆ ಈ ಸಾರಿ! ನಾನು ಜನರಲೈಸ್ ಮಾಡುವ ಪೇಟೆಂಟನ್ನ ನೀವು ತೆಗೆದುಕೊಂಡುಬಿಟ್ಟಿದೀರಿ ಅಂದುಕೊಂಡಿದ್ದೆ, ಸದ್ಯ ಇನ್ನೂ ಆ ವಿಭಾಗ ಫ್ರೀಯಾಗಿ ಉಳಿದುಕೊಂಡಿದೆ ಎಂದು ತಿಳಿದು ಸಮಾಧಾನವಾಗಿದೆ. ನಿಮ್ಮ ಪದಗಳಿಗೆ ನನ್ನ ಪ್ರತಿಕ್ರಿಯೆಯನ್ನ ಓದಿದೀರಿ ತಾನೆ? ಅದರ ಹಿಂದೆಯೆ ನಿಮ್ಮ ಕಮೆಂಟು ಕೂಡ ಇತ್ತಲ್ಲ, ಅದನ್ನ ಇನ್ನೊಂದು ಸಲ ನೀವೇ ಸರಿಯಾಗಿ ಓದಿದ್ದರೆ ಚೆನ್ನಾಗಿತ್ತು. ಬರೆಯೋದು ಬರೆದುಬಿಟ್ಟು ’ನೀವು ಜನರಲೈಸ್ ಮಾಡಿದೀರ’ ಅಂತ ನುಣುಚಿಕೊಳ್ಳೋ ಹಿಪಾಕ್ರಸಿ ನನಗೆ ಹೊಸತೇನಲ್ಲ. ಸ್ವಾಮಿ, ನನ್ನ ಮಾನಸಿಕ ಪ್ರಬುದ್ಢತೆಯ ಬಗ್ಗೆ ನನಗೆ ಖಾತ್ರಿ ಇದೆ, ಅದ್ರ ಬಗ್ಗೆ ತಾವು ಬರೆದು ಬೆರಳು ನೋಯಿಸಿಕೊಳ್ಳುವ ತೊಂದರೆ ತೆಗೆದುಕೊಳ್ಳದಿದ್ದರೇನೆ ಒಳಿತು. “ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.” ಅಂದಿದೀರಿ, ಅಂಥಾ ಕಾಳಜಿ ನಿಮ್ಮ ಹಿಂದಿನ ಕಮೆಂಟಿನಲ್ಲಿ ನನಗೆ ಎಲ್ಲಿಯೂ ಕಾಣಲಿಲ್ಲವಲ್ಲ!! ನಾನು ಯಾವ ವಿಷಯದ ಬಗ್ಗೆ ಹಾರಾಡಬಹುದು ಎಂದು ಕೂಡ ನೀವು ಊಹಿಸಿಬಿಟ್ಟಿದೀರ. ವಾಹವಾ! ನಾನು ಈ ರೀತಿ ತಮ್ಮ ಸಮಯ ವ್ಯಯ ಮಾಡಿದ್ದಕ್ಕೆ ವಿಪ್ರೀತ ಗಿಲ್ಟೀ ಫೀಲಿಂಗು ಸಾರ್! ಪುನಃ ತಮ್ಮ ಕೈ ಬಾಯಿ ನೋಯಿಸಿಕೊಳ್ಳುವ ಗೋಜಿಗೆ ಹೋಗಬೇಡಿರಿ. ಧನ್ಯವಾದ.

Ganesh K said,
April 11, 2008 @ 06:30 p04 · Edit

ಸೀರೆ ಉಟ್ಟುಕೊಂಡವರ ಮೇಲೆ ಅತ್ಯಾಚಾರಗಳಾಗುವುದಿಲ್ಲ. ಸೆಕ್ಸಿಯಾದ figure hugging, skimpy ಬಟ್ಟೆ ಹಾಕಿಕೊಂಡವರ, ಜೀನ್ಸ್, ಟೀ ಶರ್ಟ್ ಹಾಕಿಕೊಂಡವರ ಮೇಲೆ ರೇಪ್ ಆಗೋ ಚಾನ್ಸ್ ಇರ್ತವೆ ಅನ್ನೋ ಮಾತು ಕೇವಲ ವಿವೇಚನಾರಹಿತವಾದದ್ದು, ಬಾಲಿಶವಾದದ್ದು ಹಾಗೂ ಪಜ್ಞಾ ಶೂನ್ಯವಾದದ್ದು ಅನ್ನಿಸುತ್ತದೆ. ಆದರೆ ಡ್ರೆಸ್ ಕೋಡ್ ಅಂದರೆ ಬೇರೆಯವರಿಗೆ ಮುಜುಗರ ಆಗದ ರೀತಿಯಲ್ಲಿ, ಪ್ರಚೋದಕ ಅನ್ನಿಸದ ರೀತಿಯಲ್ಲಿ ಇರಬೇಕೆಂಬ ಸದಾಶಯ ತಪ್ಪಲ್ಲವೆಂದು ಭಾವಿಸುವೆ. ವೆಂಕಟೇಶರ ಮೊದಲ ಪ್ರತಿಕ್ರಿಯೆಯೇ ಒಂದು ದಿಕ್ಕಿನಲ್ಲಿದ್ದರೆ ನಂತರದ್ದು ಇನ್ನೊಂದು ದಿಕ್ಕಿನಲ್ಲಿದೆ. ಎರಡರ ನಡುವೆ ಸಾಮ್ಯತೆ ಇಲ್ಲ. ಅವರು ಸಮರ್ಥನೆಯ ಆಸೆ ಕೈಬಿಡುವುದು ಉತ್ತಮ.

ಬೆಂಗಳೂರಿನಲ್ಲಿ ಐ.ಟಿ. ಸಾಫ್ಟ್ವ್ ವೇರ್ ಎಂಜಿನಿಯರುಗಳ ಮೇಲೆ ದಿನವೂ ನೆಡೆಯುವ ಹಲ್ಲೆಗಳನ್ನ ನೋಡಿದರೆ(ನಾನಿಲ್ಲಿ ಹೇಳುತ್ತಿರುವುದು ಪುರುಷರ ಬಗ್ಗೆ) ಸ್ತ್ರೀಯರು ತಮ್ಮ ಆತ್ಮರಕ್ಷಣೆಗೆ ತಕ್ಕುದಾದ ತಯ್ಯಾರಿ ಮಾಡಿಕೊಳ್ಳುವುದು ಉತ್ತಮ. ವೆಂಕಟೇಶರಿಗೆ ಉತ್ತರಿಸುವಾಗ, ಸ್ತ್ರೀಯರು ಮಾಡಿಕೊಳ್ಳಬೇಕಾದ ತಯ್ಯಾರಿಗಳ ಬಗ್ಗೆ ಸ್ತ್ರೀಯರು ಚರ್ಚಿಸಿದರೆ, ಪುರುಷರೇಕೆ ಪುರುಸೊತ್ತು ಮಾಡಿಕೊಂಡು ಬಂದು ಅಡಸಾ ಬಡಸಾ ಕಾಮೆಂಟ್ ಹಾಕೋದು ಅನ್ನೋದನ್ನ ನೇರವಾಗೇ, ಖಡಕ್ಕಾಗಿ ಹೇಳಿದ್ದರೆ ಚೆನ್ನಾಗಿರ್ತಿತ್ತು ಟೀನಾ.

ಟೀನಾ ಒಂದು ಉತ್ತಮ ಚರ್ಚೆಯನ್ನ ಹುಟ್ಟುಹಾಕಿದ್ದಾರೆ. ಅವರಿಗೆ ಧನ್ಯವಾದಗಳು.
ಗಣೇಶ್.ಕೆ

Comments (18)

ನೋವಿಗೆ ಬಣ್ಣ ನೀಡಿದ ಫ್ರೀಡಾ

 

ಸಂಜೆ ಬಂದವನ ಮುಖದ ಮೇಲೆ ಒಂದು ಸಣ್ಣ ನಗು. ’ಯಾಕೆ?’ ಕೇಳಿದೆ. ’ನಿನ್ನೆ ನಂಜೊತೆ ಜಗಳ ಮಾಡಿದ್ದಕ್ಕೆ ಇದು ಉತ್ತರ!’ ಅಂದು ಒಂದು ಡಿವಿಡಿ ಕೈಗಿತ್ತ. ಹಿಂದಿನ ಸಂಜೆ ಪೆಯಿಂಟಿಂಗುಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಸಾಲ್ವಡಾರ್ ಡಾಲಿಯ ಬಗ್ಗೆ ಮಾತು ಬಂತು. ಮಾಮೂಲು ಹೊಗಳಿಕೆ, ಉದ್ಗಾರಗಳು. ನನ್ನ ವುಮನಿಸ್ಟ್ ಪ್ರಜ್ನೆ ಇದ್ದಕ್ಕಿದ್ದಹಾಗೆ ಜಾಗೃತವಾಗಿಬಿಟ್ಟಿತು. ’ಈ ಪೆಯಿಂಟರುಗಳ ಬಗ್ಗೇ ಮಾತಾಡೋವಾಗ ಯಾವಾಗಲು ನಾವು ಮಾತಾಡೋದೇ ಪಿಕಾಸೋ, ವ್ಯಾನ್ಗಾಗ್, ಎಮೆಫ್ ಹುಸೇನ್, ಡಾಲಿ..ಬರೀ ಗಂಡಸ್ರು ಮಾತ್ರಾನೇ ಯಾಕೆ? ಇಂಡಿಯಾನಲ್ಲು ಫೀಮೇಲ್ ಪೆಯಿಂಟರ್ ಅಂದರೆ ಒಂಜೋಲಿ ಇಲಾ ಮೆನನ್ ಮಾತ್ರಾನೇ! ಯಾರೂ ಇಲ್ವಾ? ಅಥ್ವಾ ಈ ಫೀಲ್ಡಿನಲ್ಲಿ ಹೆಂಗಸ್ರು ಸಕ್ಸೆಸ್ಫುಲ್ ಆಗಕ್ಕೆ ಸಾಧ್ಯ ಇಲ್ವಾ?’ ಎಂದು ವಿಷಯವೆ ಇಲ್ಲದೆ ಕಿತ್ತಾಡಿದ್ದೆ. ಇವ ’ಯಾಕಿಲ್ಲ? ಇದಾರೆ. ಐ ವಿಲ್ ಗೆಟ್ ಯು ಪ್ರೂಫ್!’ ಅಂದಿದ್ದ. ಈಗ ನನ್ನ ಕೈಯಲ್ಲಿ ಸಲ್ಮಾ ಹಯೆಕ್ ನಟಿಸಿರುವ ‘ಫ್ರೀಡಾ’ ಚಲನಚಿತ್ರದ ಡಿವಿಡಿ.

1907ರಲ್ಲಿ ಮೆಕ್ಸಿಕೋ ನಗರದ ಹೊರವಲಯದಲ್ಲಿದ್ದ ಮನೆಯೊಂದರಲ್ಲಿ ಜನಿಸಿದ ಫ್ರೀಡಾ ಕಾಹ್ಲೋ ಆರನೆ ವಯಸ್ಸಿಗೇ ಪೋಲಿಯೋ ಖಾಯಿಲೆಗೆ ತುತ್ತಾದಳು. ಆಕೆಯ ಒಂದು ಕಾಲು ಇನ್ನೊಂದಕ್ಕಿಂತ ಸಣ್ಣ. ಇದನ್ನು ಮರೆಮಾಚಲು ಆಕೆ ಸದಾ ಉದ್ದನೆಯ ಸ್ಕರ್ಟುಗಳನ್ನೆ ಧರಿಸುತ್ತಿದ್ದಳು. ದೈಹಿಕ ನ್ಯೂನತೆಯಿದ್ದರು ಆಕೆ ತನ್ನ ಶಾಲಾ ದಿನಗಳಲ್ಲಿ ಒಳ್ಳೆಯ ಬಾಕ್ಸಿಂಗ್ ಪಟುವಾಗಿದ್ದಳು! ಮೆಕ್ಸಿಕೋನ ಬಹಳ ಒಳ್ಳೆಯ ಶಾಲೆಯೊಂದರಲ್ಲಿ ತನ್ನ ಪ್ರತಿಭೆಯಿಂದಾಗಿ ಪ್ರವೇಶ ಪಡೆದುಕೊಂಡಳು. ತಂದೆಯ ಮೂಲ ಜರ್ಮನಿ, ತಾಯಿ ಸ್ಪ್ಯಾನಿಶ್. 1925ರ ಒಂದು ಬಸ್ ಅಪಘಾತದಲ್ಲಿ ಸಿಕ್ಕಿಹಾಕಿಕೊಂಡ ಫ್ರೀಡಾಳ ದೇಹ ಜರ್ಝರಿತವಾಯಿತು. ಬೆನ್ನುಹುರಿ, ಸೊಂಟ, ಭುಜ, ಎದೆಗೂಡುಗಳಿಗೆ ತೀವ್ರ ಜಖಮು, ಬಲಗಾಲಿನಲ್ಲಿ ಹನ್ನೊಂದು ಫ್ರಾಕ್ಚರುಗಳು, ಜಜ್ಜಿಹೋದ ಬಲಪಾದ, ಇದನ್ನೆಲ್ಲ ಮೀರಿ ಆಕೆಯ ಹೊಟ್ಟೆ ಮತ್ತು ಯೋನಿಯನ್ನು ಭೇದಿಸಿದ ಒಂದು ಕಬ್ಬಿಣದ ಸರಳು!! ಈ ಅಪಘಾತದಿಂದ ಹೊರಬರಲು ಫ್ರೀಡಾಳ ಮೇಲೆ ಸುಮಾರು ಮೂವತ್ತೈದು ಆಪರೇಶನ್ನುಗಳು ನಡೆದವು. ಆಕೆ ಮಕ್ಕಳನ್ನು ಪಡೆಯುವಂತಿರಲಿಲ್ಲ. ಹೊರದೇಹ ಸರಿಹೋದಂತೆ ಕಂಡರು ಆಕೆ ಜೀವನವಿಡೀ ಅಪಾರ ಯಾತನೆ ಅನುಭವಿಸಿದಳು. ಒಮ್ಮೊಮ್ಮೆ ನೋವು ಶುರುವಾದರೆ ಆಕೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಯೆ ಇರಬೇಕಾಗಿ ಬರುತ್ತಿತ್ತು. ಈ ಕಾಲಘಟ್ಟದಲ್ಲಿಯೆ ಆಕೆ ತನ್ನ ವೈದ್ಯಕೀಯ ಅಧ್ಯಯನಕ್ಕೆ ಮಂಗಳ ಹಾಡಿದಳು. ಆಸ್ಪತ್ರೆಯ ಬೇಸರ ಕಳೆಯಲು ಚಿತ್ರ ರಚಿಸಲು ತೊಡಗಿದ ಫ್ರೀಡಾ ಚಿತ್ರಕಲಾವಿದೆಯಾಗಲು ನಿಶ್ಚಯಿಸಿದ್ದು ಕೂಡ ಆಗಲೆ. ಹೆಚ್ಚಿನ ಚಿತ್ರಗಳಲ್ಲಿ ತಾನೆ ಮಾಡೆಲ್ ಆಗಿರುವ ಬಗ್ಗೆ ಆಕೆ ಹೇಳುತ್ತಿದ್ದಿದ್ದು, ’ನಾನು ಒಂಟಿ ಮತ್ತು ನನಗೆ ಚೆನ್ನಾಗಿ ಗೊತ್ತಿರುವ ವಿಷಯ ಅಂದರೆ ನಾನು. ಹಾಗಾಗಿ ನನ್ನ ಪೆಯಿಂಟಿಂಗುಗಳಲ್ಲಿ ಹೆಚ್ಚಾಗಿ ನಾನೆ ಕಾಣುವುದು”. ಸುಮಾರು 143 ಚಿತ್ರಗಳನ್ನು ರಚಿಸಿರುವ ಫ್ರೀಡಾಳ ಚಿತ್ರಗಳಲ್ಲಿ 55 ಆಕೆಯದೆ ಭಾವಚಿತ್ರಗಳು!

ಮೂಲತಃ ಜರ್ಮನ್ನಳಾದರೂ ಮೆಕ್ಸಿಕನ್ ಸಂಸ್ಕೃತಿಯಿಂದ ಪ್ರಭಾವಿತಳಾಗಿದ್ದ ಫ್ರೀಡಾಳ ವರ್ಣಚಿತ್ರಗಳಲ್ಲಿ ಗಾಢ ಬಣ್ಣಗಳು ಹಾಗೂ ಮೆಕ್ಸಿಕನ್ ಸಂಕೇತಗಳು ಕಾಣುತ್ತವೆ. ಮೆಕ್ಸಿಕನ್ ಸಂಸ್ಕೃತಿಯಲ್ಲಿ ಕಾಮುಕತೆಯ ಸಂಕೇತವಾದ ಮಂಗ ಆಕೆಯ ಹಲವಾರು ಚಿತ್ರಗಳಲ್ಲಿ ಕಂಡುಬರುತ್ತದೆ.. ಆಕೆಯ ಭಾವಚಿತ್ರಗಳಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ನೋವಿನ ಚಿತ್ರಣವಿದೆ. ಉದಾಹರಣೆಗೆ ಆಕೆಯ ಕತ್ತಿಗೆ ಹಾರದ ಬದಲು ಮುಳ್ಳುಕಂಟಿಗಳು ಸುತ್ತಿಕೊಂಡಿರುವುದು, ಇನ್ನೊಂದರಲ್ಲಿ ಆಕೆಯ ಎದೆ ಕತ್ತಿನ ಭಾಗಗಳು ತೆರೆದುಕೊಂಡು ರಕ್ತ ಸುರಿಯುತ್ತಿರುವುದು.. ಆಕೆಯ ಪ್ರಮುಖ ಭಾವಚಿತ್ರವಾದ ‘ರೂಟ್ಸ್’ ಆಕೆಯನ್ನು ಭೂಮಿಗೆ ಬೇರುಬಿಟ್ಟುಕೊಂಡು ಮಲಗಿರುವ ಹೆಣ್ಣಿನಂತೆ ಬಿಂಬಿಸುತ್ತದೆ. ಈ ಚಿತ್ರ ಹರಾಜಿನಲ್ಲಿ ಸುಮಾರು 5.6 ಬಿಲಿಯನ್ ಡಾಲರು ಗಳಿಸಿತು.

ವಿಖ್ಯಾತ ಮ್ಯೂರಲ್ ಕಲಾವಿದ ಡಿಯೆಗೋ ರಿವೆರಾನನ್ನು 1929ರಲ್ಲಿ ಮದುವೆಯಾದ ಫ್ರೀಡಾಳ ವೈವಾಹಿಕ ಜೀವನ ಸದಾ ಏಳುಬೀಳುಗಳಿಂದ ಕೂಡಿತ್ತು. ಇಬ್ಬರದೂ ಕೋಪಿಷ್ಠ ಸ್ವಭಾವ. ಮೇಲಾಗಿ ಫ್ರೀಡಾಳ ಹೆಂಗಸರ, ಗಂಡಸರ ಜೊತೆಗಿನ ಲೈಂಗಿಕಸಂಬಂಧಗಳು ಸುಮಾರು ಜಗಳಗಳಿಗೆ ಕಾರಣವಾದವು. ರಿವೇರಾ ತನ್ನ ತಂಗಿಯೊಡನೆ ಸಂಬಂಧ ಬೆಳೆಸಿದಾಗ ಆತನಿಂದ ವಿಚ್ಛೇದನ ಪಡೆದ ಫ್ರೀಡಾ ಕೆಲಕಾಲದ ನಂತರ ಪುನಃ ಆತನನ್ನೆ ಮದುವೆಯಾದಳು. ಆದರೂ ಇಬ್ಬರ ಸಂಬಂಧದಲ್ಲಿ ಯಾವುದೆ ವ್ಯತ್ಯಾಸವಾಗದೆ ಇಬ್ಬರೂ ಜಗಳವಾಡಿಕೊಂಡೆ ಇದ್ದರು. ಕೊನೆಕೊನೆಗೆ ಇಬ್ಬರೂ ಒಂದೇ ಸೂರಿನಡಿ ಇದ್ದರೂ ಬೇರೆಬೇರೆ ಕೊಠಡಿಗಳಲ್ಲಿ ವಾಸವಾಗಿದ್ದರು. ರಿವೆರೋನಿಂದ ಆಕೆಯ ಶೈಲಿ ಯಾವಾಗಲು ಪ್ರಭಾವಿತವಾಗಲಿಲ್ಲ. ಕಮ್ಯುನಿಸ್ಟರ ಬಗ್ಗೆ ಒಲವು ಹೊಂದಿದ್ದ ರಿವೆರಾ ಮತ್ತು ಫ್ರೀಡಾ ರಶಿಯಾದಿಂದ ರಾಜಕೀಯ ಶರಣು ಕೋರಿ ಬಂದಿದ್ದ ಟ್ರಾಟ್ಸ್ಕಿಗೆ ತಮ್ಮ ಮನೆಯಲ್ಲಿ ಆತಿಥ್ಯ ನೀಡಿದರು.

ಫ್ರೀಡಾಳ ಕೊನೆಯ ದಿನಗಳು ಬಹಳ ನೋವಿನಿಂದ ಕೂಡಿದ್ದವು. ಒಂಟಿತನ ಆಕೆಯ ಜೀವನದ ಅವಿಭಾಜ್ಯ ಅಂಗವಾಗಿತ್ತು. ಸಾಯುವ ಕೆಲದಿನಗಳ ಮುನ್ನ ತನ್ನ ದಿನಚರಿಯಲ್ಲಿ ’ಈ ತೆರಳುವಿಕೆ ಸಂತಸಮಯವಾಗಿರಲೆಂದು ಆಶಿಸುವೆ. ವಾಪಾಸು ಬರುವ ಇಚ್ಛೆ ನನಗಿಲ್ಲವೇ ಇಲ್ಲ - ಫ್ರೀಡಾ’ ಎಂದು ಬರೆದುಕೊಂಡಿದ್ದಳು. 1954ರ ಜುಲೈ 13ರಂದು ಪಲ್ಮನರಿ ಎಂಬೋಲಿಸಂ ಎಂಬ ತೊಂದರೆಯಿಂದ ಆಕೆ ಸಾವನ್ನಪ್ಪಿದಳು ಎಂದು ವರದಿಯಾದರು ಆಕೆ ಹೆಚ್ಚು ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳೆಂದು ಹೇಳಲಾಗುತ್ತದೆ. ಆಕೆಯ ಸಾವಿನ ನಂತರ ರಿವೆರಾ ಆಕೆಯ ಬಗ್ಗೆ ತನಗಿದ್ದ ಪ್ರೇಮವನ್ನು ಕಂಡುಕೊಂಡ. ಆಕೆಯ ಕಲೆಯ ನಿಜವಾದ ಬೆಲೆಯನ್ನು ಅರಿತಿದ್ದ ರಿವೆರೊ ಅವರು ವಾಸವಾಗಿದ್ದ ಸುಂದರ ‘ಬ್ಲೂ ಹೌಸ್’ ಅನ್ನು ಫ್ರೀಡಾಳಿಗೋಸ್ಕರ ಮ್ಯೂಸಿಯಂ ಆಗಿ ದಾನ ಮಾಡಿದ.. ಅದೇ ಮನೆಯಲ್ಲಿ ಫ್ರೀಡಾಳ ಅಸ್ಥಿಗಳು ಒಂದು ಸುಂದರವಾದ ಮಣ್ಣಿನ ಜಾಡಿಯಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದೆ. ಎಂಭತ್ತರ ದಶಕದಲ್ಲಿ ಆಕೆಯ ಚಿತ್ರಗಳು ಮೆಕ್ಸಿಕೋ, ಅಮೆರಿಕಾಗಳಲ್ಲಿ ಹೆಚ್ಚು ಹೆಸರು ಮಾಡಿದವು. ಫ್ರೀಡಾಳ ಜೀವನ, ಕಲೆಗಳ ಬಗ್ಗೆ ಹಲವಾರು ಚಲನಚಿತ್ರ, ಪುಸ್ತಕಗಳು ಹೊರಬಂದಿವೆ. ತನ್ನ ನೋವನ್ನು ಸುಂದರ ಬಣ್ಣಗಳನ್ನಾಗಿ ಪರಿವರ್ತಿಸಿದ ಫ್ರೀಡಾ ತನ್ನ ಕ್ಯಾನ್ವಾಸುಗಳಲ್ಲಿ ಇಂದಿಗೂ ಜೀವಂತಳಾಗಿದ್ದಾಳೆ.
 

Comments

ಝಗಮಗವೆನ್ನುವ ಜಾಹೀರಾತು

‘ವಾಶಿಂಗ್ ಪೌಡರ್ ನಿರ್ಮಾ’ದ ಜಾಹೀರಾತು ಯಾರಿಗೆ ನೆನಪಿಲ್ಲ? ದೂರದರ್ಶನ ಆಗಷ್ಟೆ ಮನೆಮನೆಗಳಲ್ಲಿ ಇಣುಕುತ್ತಿದ್ದ ಕಾಲ. ತಲೆಗೆ ರಿಬ್ಬನ್ನು ಕಟ್ಟಿ ಕೂದಲು ಇಳಿಬಿಟ್ಟ ಹುಡುಗಿಯೊಬ್ಬಳು ಬೆಳ್ಳಗಿನ ಫ್ರಾಕು ಧರಿಸಿ ಗಿರಿಗಿರಿ ಬುಗುರಿಯಂತೆ ತಿರುಗುವ ಜಾಹೀರಾತು ನೋಡಿ ನಾವು ವಿಪರೀತ ಮೋಹಕ್ಕೊಳಗಾಗುತ್ತಿದ್ದೆವು. ನಮ್ಮ ಹಳೆಯ ಫ್ರಾಕುಗಳ ಅಂಚುಗಳನ್ನು ಹಿಡಿದು ‘ದೂಧ್ ಸಿ ಸಫೇದಿ..ರಂಗೀನ್ ಕಪಡಾ ಭೀ ಖಿಲ್ ಖಿಲ್ ಜಾಯೇ’ ಎಂದು ಅಪಸ್ವರದಲ್ಲಿ ಅರಚಿಕೊಳ್ಳುತ್ತ ಆ ಹುಡುಗಿಯಂತೆಯೆ ತಿರುಗಲು ಹೋಗಿ ತಲೆಸುತ್ತು ಬಂದು ಕುಕ್ಕರಿಸಿ ಮುಖಮುಖ ನೋಡಿಕೊಂಡು ನಗಾಡಿಕೊಳ್ಳುತ್ತಿದ್ದುದುಂಟು. ಆಗ ಟಿ.ವಿ.ಯಲ್ಲಿ ಯಾವ ಹೊಸ ಪ್ರಾಡಕ್ಟು ಬಂದರೂ ಕೊಳ್ಳೋಣವೆಂದು ಅಮ್ಮನ ಬಳಿ ಕಾಡುವುದಿತ್ತು-ಹೆಚ್ಚಾಗಿ ಶಾಂಪೂ, ಸೋಪು, ಕ್ರೀಮುಗಳಿಗಾಗಿ. ಶ್ರೀಮಂತರ ಮನೆಯ ಹುಡುಗಿಯರು ತಮ್ಮ ಅಪ್ಪ ಅಮ್ಮಂದಿರು ಕೊಡಿಸಿದ ಹೊಸವಸ್ತುಗಳನ್ನು ಬ್ಯಾಗಿನಲ್ಲಿ ಬಚ್ಚಿಟ್ಟುತಂದು ಕ್ಲಾಸಿನಲ್ಲಿ ಪ್ರದರ್ಶಿಸುವಾಗ ನಮ್ಮ ಬೇಡಿಕೆಗಳಿಗೆ ಸೊಪ್ಪುಹಾಕದ ನಮ್ಮ ಮಿಡಲ್ ಕ್ಲಾಸ್ ಪೇರೆಂಟುಗಳ ಮೇಲೆ ಒಮ್ಮೊಮ್ಮೆ ಕೋಪವುಕ್ಕಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾಗುತ್ತ ಇದ್ದೆವು. ನಮ್ಮ ಟಿ.ವಿ. ಹುಚ್ಚಿಗೆ ನಮ್ಮ ಅಪ್ಪಮ್ಮಂದಿರು ಹಿಡಿಶಾಪ ಹಾಕಿಕೊಂಡು ಅವರೂ ಸುಮ್ಮನಾಗುತ್ತಿದ್ದರು. ಈ ಜಾಹೀರಾತುಗಳಲ್ಲಿ ಕಾಣಬರುತ್ತಿದ್ದ ಸುಂದರ ಮಹಿಳೆಯರು, ಹ್ಯಾಂಡ್ಸಂ ಪುರುಷರು, ಅವರ ಉಡುಗೆತೊಡುಗೆಗಳು, ನೀಟಾದ ಮನೆಗಳು, ಆ ಮನೆಗಳ ಆಧುನಿಕ ಸಲಕರಣೆಗಳು ಇವನ್ನೆಲ್ಲ ಅಕ್ಕಪಕ್ಕದ ಮನೆಯ ಹೆಂಗಸರು ನೋಡಿ ಕರುಬಿ ನಿಟ್ಟುಸಿರು ಬಿಡುತ್ತಿದ್ದರೆ ನಾವು ಮಕ್ಕಳು ಮಿಕಿಮಿಕಿ ನೋಡುವುದಾಗಿತ್ತು.

ನಾನು ಮೊದಲಬಾರಿಗೆ ಗೆಳತಿಯೊಬ್ಬಳ ಮನೆಯಲ್ಲಿ ‘ಫೆಮಿನಾ’ ನೋಡಿದ್ದು, ಅದರಲ್ಲಿನ ತರಹೇವಾರಿ ಗೃಹಾಲಂಕಾರದ ಚಿತ್ರಗಳು, ವಿವಿಧ ರಂಗಿನ ಜಾಹೀರಾತುಗಳನ್ನು ನೋಡಿ ಮರುಳಾಗಿದ್ದು, ನನಗೂ ಅವೆಲ್ಲ ದಕ್ಕಬೇಕೆಂಬ ಹಂಬಲ ಉಂಟಾಗಿದ್ದು - ಎಲ್ಲವನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ‘ಇವೆಲ್ಲ ಪಡೆಯಲು ತುಂಬ ದುಡ್ಡು ಬೇಕು. ಅದು ನಮ್ಮ ಬಳಿ ಇಲ್ಲ’ ಎಂಬ ತರಹದ ಯೋಚನೆಗಳು ಬಂದದ್ದೂ ಆಗಲೆ. ಆಗೆಲ್ಲ ನಾವು ಒಟ್ಟಿಗೆ ಕೂತು ಪೇಪರುಗಳಲ್ಲಿ ರಾಶಿರಾಶಿ ದುಡ್ಡು ತುಂಬಿದ ಮನೆಗಳ ಚಿತ್ರ ಬರೆದುಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಈ ಜಾಹೀರಾತುಗಳು ಅಲ್ಲಿಯತನಕ ಕೆಲವು ಚಾಕಲೇಟು, ಸಿಹಿತಿಂಡಿಗಳನ್ನು ಮಾತ್ರ ಬಯಸುತ್ತಿದ್ದ ನಮ್ಮ ಮನಸ್ಸಿನಲ್ಲಿ ತರತರಹದ ಆಸೆಗಳನ್ನು ಹುಟ್ಟಿಸಿದ್ದಷ್ಟೇ ಅಲ್ಲ, ನಮ್ಮಲ್ಲಿ ಕ್ಲಾಸ್ ಕಾನ್ಶಿಯಸ್ನೆಸ್ ಅನ್ನು ಕೂಡ ಮೂಡಿಸಲಾರಂಭಿಸಿದವು. ನಾವು ಉಳ್ಳವರ ಮನೆಯ ಮಕ್ಕಳನ್ನು ಆದಷ್ಟು ನಮ್ಮ ಗುಂಪಿನಿಂದ ದೂರವಿಡಲಾರಂಭಿಸಿದೆವು. ಅವರ ಚರ್ಚೆಯ ಕಾಮನ್ ವಿಷಯಗಳಾದಂತಹ ಫಾರಿನ್ ವಸ್ತುಗಳು, ಹೊಸತಾಗಿ ರಿಲೀಸ್ ಆದ ಚಲನಚಿತ್ರಗಳ ವಿಡಿಯೊಕ್ಯಾಸೆಟ್ಟುಗಳು, ಹೊಸಬ್ರ್ಯಾಂಡಿನ ವಾಚು, ಶೂ, ಆಭರಣಗಳು ಇತ್ಯಾದಿಗಳ ಜತೆ ನಮ್ಮನ್ನು ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತ ನಮಗೇ ಅರಿವಿಲ್ಲದ ಹಾಗೆ ನಾವು ಅಂತಹ ಮಕ್ಕಳಿಂದ ದೂರವಾಗತೊಡಗಿದೆವು. ಅವರಿಗಿಂತ ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಾಗೆಲ್ಲ ನಮ್ಮ ’ಈಗೋ’ಗಳೆಂಬ ಬೆಂಕಿ ಸ್ವಲ್ಪವಾದರು ಆರುತ್ತಿತ್ತು. ಕಾಲೇಜು ಓದುವಾಗ ಗೆಳತಿಯರು ನನ್ನ ಹೊಸ ಬಟ್ಟೆ, ಚಪ್ಪಲಿಗಳ ನಿರ್ಮೋಹದ ಬಗ್ಗೆ ಛೇಡಿಸಿ ‘ನೀನು ಹುಡುಗಿಯಾಗಿರಲಿಕ್ಕೆ ನಾಲಾಯಕ್ಕು!’ ಅನ್ನುತ್ತಿದ್ದರು. ಅವರೆಲ್ಲ ಬೀದಿಯ ಬಿಲ್ಬೋರ್ಡುಗಳ ನೋಡಿ ಕನಸು ಕಟ್ಟುವಾಗ ನಾನು ಮೂರು ಮಕ್ಕಳನ್ನು ತನ್ನ ಸಂಬಳದಲ್ಲಿ ಓದಿಸಬೇಕಾಗಿದ್ದ ಅಮ್ಮನನ್ನು ನೆನೆದು ನಕ್ಕು ಸುಮ್ಮನಾಗುತ್ತಿದ್ದೆ. ಎಂ.ಎ ಓದುವಾಗ ನಮ್ಮ ಲೆಕ್ಚರರೊಬ್ಬರು ‘ಜಾಹೀರಾತು ಸಂಸ್ಕೃತಿಯ ಮೇಲೆ ಸೆಮಿನಾರು ಮಾಡಿ’ ಎಂದು ಹೇಳಿದಾಗ ತಮಾಷೆಯೆನಿಸಿತ್ತು. ಆದರೆ ಚರ್ಚೆ ಮಾಡುತ್ತ ಹೋದಹಾಗೆ ನಾವೆಲ್ಲ ಈ ಜಾಹೀರಾತು ಸಂಸ್ಕೃತಿಯ ಅದೃಶ್ಯ ಭಾಗಗಳೆ ಎಂದು ಅರಿವಾದಾಗ ಅಷ್ಟೇನೂ ತಮಾಷೆಯ ಭಾವನೆ ಉಂಟಾಗಲಿಲ್ಲ. 

ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದ ಹುಡುಗನೊಬ್ಬ ತನ್ನ ತಂದೆ ಮೊಬೈಲುಫೋನು ಕೊಡಿಸದಿದ್ದಕ್ಕೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಗೆಳತಿ ಸುಪ್ರಿಯಾ ಹೇಳುತ್ತ ಈಗಿನ ಮಕ್ಕಳು ನಮ್ಮ ಹಾಗೆ ಅಡ್ಜಸ್ಟ್ ಮಾಡ್ಕೊಳೊಲ್ಲ ಕಣೆ. ನನ್ನ ಮಗನ ಹತ್ರ ಬೇಬ್ಲೇಡ್ (ಒಂದು ರೀತಿಯ ಆಟಿಕೆ) ಇರಲಿಲ್ಲ ಅಂತ ನಮ್ಮ ಅಪಾರ್ಟ್ಮೆಂಟಿನ ಮಕ್ಕಳು ಆಟಕ್ಕೇ ಸೇರಿಸ್ತಿರ್ಲಿಲ್ಲ. ಪಾಪ. ಡಿಪ್ರೆಸ್ ಆಗ್ಬಿಟ್ಟಿದ್ದ. ನಂಗೆ ತಡ್ಕೊಳೋಕಾಗದೆ ಅವನು ಹೇಳಿದಂಥದೆ ಕೊಡಿಸಿದೆ. ಭಯ ಆಗತ್ತೆ ಕಣೆ ಅನ್ನುತ್ತಿದ್ದಳು. ಜಾಹೀರಾತು ಸಂಸ್ಕೃತಿ ಇವತ್ತು ನಮ್ಮನ್ನು ಹಿಂದೆಂದೂ ಇಲ್ಲದಂತೆ ಆವರಿಸಿಕೊಂಡುಬಿಟ್ಟಿದೆ. ಕಂಪನಿಗಳು ಮಕ್ಕಳು, ಹೆಂಗಸರು, ಗಂಡಸರು, ಯುವಕಯುವತಿಯರು, ವಯಸ್ಸಾದವರು ಎಂದು ಮುಂತಾಗಿ ವರ್ಗೀಕರಿಸಿ, ಪ್ರತಿಯೊಂದು ವರ್ಗವನ್ನೂ ವಿಶೇಷ ಜಾಹೀರಾತುಗಳ ಮೂಲಕ ಓಲೈಸಲಾರಂಭಿಸಿವೆ. ಜಾಹೀರಾತುಗಳ ಮೇಲೆ ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ‘ನಮ್ಮ ಕಂಪನಿಯ ವಸ್ತು ಕೊಂಡರೇ ನಿಮಗೆ ಮೋಕ್ಷ’ ಎಂದು ಸಾರುತ್ತವೆ. ನಮಗೆ ಇತ್ತೀಚೆಗೆಲ್ಲ ಬೀದಿಬದಿಯ ಸಣ್ಣ ಅಂಗಡಿಗಳಲ್ಲಿ ಮಾರಲ್ಪಡುವ ಲೋಕಲ್ ಕಂಪನಿಯ ಪದಾರ್ಥಗಳು ಒಗ್ಗುವದಿಲ್ಲ. ಮಕ್ಕಳು ಗಲಾಟೆ ಮಾಡದಿರಲು ಟಿ.ವಿ ತೋರಿಸುವವರೂ ನಾವೆ. ಮಕ್ಕಳನ್ನು ಸೂಪರ್ ಮಾರ್ಕೆಟ್ಟಿಗೆ ಕರೆದುಕೊಂಡು ಹೋಗುವವರೂ ನಾವೆ. ಅಲ್ಲಿ ಕಂಡ ವಸ್ತುಗಳು ಬೇಕೆಂದು ಅವರು ರಂಪಾಟ ಮಾಡಿದರೆ ಹುಸಿಕೋಪ ತೋರುತ್ತ ಮುಜುಗರದ ನಗೆ ನಗುತ್ತ ನಮ್ಮ ಕೈಗೆಟುಕದಿದ್ದರೂ ಕೊಡಿಸುವವರೂ ನಾವೆ. ಅವರಿಗೆ ನಮ್ಮ ತೊಂದರೆಗಳು ಎಂದೆಂದಿಗೂ ಅರಿವಿಗೆ ಬರದಂತೆ ಮಾಡುವವರೂ ನಾವೆ. ಅಲ್ಲವೆ?
 
ಸುಪ್ರಿಯಾಳ ತರಹ ನನಗೂ ಭಯವಾಗುತ್ತಿದೆ.

ಚಿತ್ರಕೃಪೆ: www.pagog.com

 

Comments (5)

ಹೀಗೆ ಪ್ರತಿಸಾರಿ ಕಾಡುವ ಅವಳು

‘ಹಯ್ಯೊ, ಅವಳು ಬಂದಳೆಂದು ಕಾಣುತ್ತೆ. ನೀನೆ ಹೋಗು ಮಗಳೆ!’
‘ಉಹುಂ. ನಾನು ಯಾಕೆ ಆ ಹೆಂಗಸಿನ ಹತ್ತಿರ ಮಾತಾಡಬೇಕು? ನೀವೆ ಹೋಗ್ರಮ್ಮ!!’
‘ನಂಗೆ ತಲೆನೋವು ಅಂದುಬಿಡು. ಪ್ಲೀಸ್ ಕಣೆ. ನಂಗಾಗಲ್ಲ ಮಾರಾಯ್ತಿ ಆ ಪುರಾಣ ಕೇಳೋಕೆ!’
‘ಪ್ರತಿ ಸಾರಿ ಹಬ್ಬಕ್ಕೆ ಮನೆಗೆ ಬರೋದು ಈ ಹಿಂಸೆಗಾ? ಸರಿ. ನೀವು ಒಳಗಿರಿ. ಮಿನಿಮಂ ಒಂದು ಗಂಟೆ ಅಂತೂ ಆಗತ್ತೆ.’

ನಾನು ಮುಸಿಮುಸಿ ನಗುತ್ತ ಹಿತ್ತಲ ಬಾಗಿಲು ತೆರೆಯುತ್ತಿದ್ದೆ. ಅಲ್ಲಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಆಕೆ ನಿಂತಿರುತ್ತ ಇದ್ದಳು - ಶೋಕದ ಪ್ರತೀಕವೆ ತಾನೆಂಬಂತೆ. ಅವಳು ಎಂದರೆ ಒಂದು ರೀತಿಯ ಸರಿಯಾಗಿ ಒಣಗಿರದ ಸೀರೆಗಳ ಚುಂಗು ವಾಸನೆಯೆ ಇವತ್ತಿಗು ನನ್ನ ಮನಸ್ಸಿಗೆ ಬರುವುದು. ಆಕೆ ಸದಾ ರವಿಕೆಯಂತೆ ಇರುವ ತಾನೆ ಕೈಯಾರ ಹೆಣೆದ ವುಲನಿನ ರವಿಕೆಯನ್ನೆ ಉಡುತ್ತಿದ್ದುದು. ತಲೆಯ ಸೆರಗೊಳಗಿಂದ ಅಸ್ತವ್ಯಸ್ತವಾಗಿ ಇಣುಕುತ್ತಿದ್ದ ಕೂದಲುಗಳು ವಾರದಿಂದ ಬಾಚಣಿಕೆಯ ಪ್ರಯೋಗಕ್ಕೆ ಒಳಪಡದಿರುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದವು. ಇನ್ನು ಆಗೀಗ ಇಣುಕುತ್ತಿದ್ದ ಹೇನುಗಳ ವಿಚಾರವನ್ನು ನಾನು ಮಾತನಾಡದಿದ್ದರೇನೆ ಒಳಿತು. ಹಾಗೆ ಬೇಕಾದರೆ ಆಕೆಯ ಮಾಮೂಲು ಉಡುಗೆಯನ್ನು ಬದಲಾಯಿಸಿ ರೇಷ್ಮೆಸೀರೆ ಉಡಿಸಿ ತಲೆಗೂದಲನ್ನು ಒಪ್ಪವಾಗಿ ಬಾಚಿ ಒಂದೆರಡು ಆಭರಣಾದಿಗಳನ್ನು ತೊಡಿಸಿದರೆ ಆಕೆಗೆ ರಾಜಕುಮಾರಿ ಗಾಯತ್ರೀದೇವಿಯವರಿಗೆ ದೊರಕುವಷ್ಟೆ ಗೌರವ ಆರಾಮವಾಗಿ ದೊರಕಿಬಿಡುತ್ತಿತ್ತು. ಆಂಥಾ ಗತ್ತು ಆಕೆಯ ಮುಖದ ಮೇಲೆ ಲಾಸ್ಯವಾಡುತ್ತಿತ್ತು. ನನ್ನ ಮುಖದ ಮೇಲಿನ ಸ್ವಾಗತದ ನಗುವನ್ನೂ ಆಕೆ ಅಸಹ್ಯವೆಂಬಂತೆ ನೋಡಿ ಮನೆಯೊಳಗೆ ಠೀವಿಯಿಂದ ಕಾಲಿಡುತ್ತಿದ್ದಳು ಮತ್ತು ನಮ್ಮ ಅಡುಗೆ ಒಲೆಗೂ ರುಬ್ಬುಗಲ್ಲಿಗೂ ನಡುವೆ ಇರಿಸಲಾಗಿರುತ್ತಿದ್ದ ಕುಳ್ಳನೆಯ ಸ್ಟೂಲೊಂದರ ಮೇಲೆ ತಣ್ಣಗೆ ಆಸೀನಳಾಗುತ್ತಿದ್ದಳು.

ಆಮೇಲೆ ಆಕೆಯ ಸೊಂಟಕ್ಕೆ ಸಿಗಿಸಲಾಗಿದ್ದ ಅಡಿಕೆಪುಡಿಯ ಪಾಕೆಟು, ಸುಮಾರು ಮಲೆನಾಡಿನ ಹೆಂಗಸರು ಇಟ್ಟುಕೊಳ್ಳುವಂಥದು - ಈಚೆ ಬರುತ್ತಿತ್ತು. ಆಕೆ ಮೆಲ್ಲಗೆ ಸುಮಾರು ಹಳೆಯದಾಗಿ ಒಣಗಿಹೋಗಿದ್ದ ವೀಳೆಯದೆಲೆಯನ್ನೂ, ನಾಲಕ್ಕಯಿದು ಅಡಿಕೆಯ ತುಂಡುಗಳನ್ನೂ, ಸುಣ್ಣದ ಹೊಳೆಯುವ ಡಬ್ಬಿಯೊಂದನ್ನೂ ತನ್ನ ತೊಡೆಯ ಮೇಲೆ ಇಡುತ್ತಿದ್ದಳು. ಎಲೆಯ ತೊಟ್ಟು ಮುರಿವ ಶಾಸ್ತ್ರವಾದ ಮೇಲೆ ತನ್ನ ಬಲಗೈಯ ನಡುಬೆರಳಿಂದ ಸುಣ್ಣವನ್ನು ಎಲೆಗೆ ಬಳಿದು ಅಡಿಕೆಯ ತುಂಡುಗಳನ್ನು ಎಲೆಗೆ ಸುರಿದು ಹುಷಾರಾಗಿ ಕಟ್ಟಿ ಅದನ್ನು ತನ್ನ ಬಾಯಿಯ ಒಂದು ಮೂಲೆಗೆ ಭದ್ರವಾಗಿ ಸೇರಿಸುವ ಕ್ರಿಯೆ ನಡೆಯುವುದು. ಆ ಇಡೀ ಪ್ರಕ್ರಿಯೆ ನನ್ನಲ್ಲಿ ಒಂದು ಬಗೆಯ ಕಚಗುಳಿ ಹುಟ್ಟಿಸಿ ನನ್ನ ಬಾಯಲ್ಲಿಯೂ ಎಲಡಿಕೆ ತಿನ್ನಲೇಬೇಕೆಂಬ ತುರಿಕೆಯನ್ನು ಹುಟ್ಟಿಸುತ್ತಿತ್ತು. ಆಕೆಗೂ ಇದು ತಿಳಿದಿತ್ತು ಎಂದು ನನಗೆ ಗುಮಾನಿ. ಆಕೆ ನನ್ನನ್ನು ಹದ್ದಿನಂಥ ಕಣ್ಣುಗಳಿಂದ ನೋಡುತ್ತ ಇರುತ್ತಿದ್ದಿದ್ದು ಇದಕ್ಕೆ ಕಾರಣ. ನಾನು ಅಪ್ಪಿತಪ್ಪಿ ತಲೆಕೆಟ್ಟು ಆಕೆಯಿಂದ ಒಂದು ತುಂಡು ಅಡಿಕೆ ಕೇಳಿದ್ದಿದ್ದರೆ ನನಗೆ ಒದಗಬಹುದಾದ ಪರಿಸ್ಥಿತಿಯ ಬಗ್ಗೆ ನನಗೆ ಒಳ್ಳೆಯ ಅಂದಾಜು ಇದ್ದುದರಿಂದ ನಾನು ನನ್ನ ಆಸೆಯನ್ನು ಬಲವಾಗಿ ದವಡೆಗಳೆಡೆಯಲ್ಲಿ ಅದುಮಿ ಹಿಡಿದು ಆಕೆಗೆ ಕಾಫಿ ನೀಡಲು ಹೊರಡುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಆಕೆ ನನ್ನ ತಾಯಿಯವರಿಗೆ ಪ್ರತೀ ಸಾರಿಯಂತೆ ಆಕೆ ಬಂದಾಗಲೆ ಬರುವ ತಲೆನೋವು ಹೊಟ್ಟೆಬೇನೆ ಏನಾದರು ಬಂದಿದೆಯೆ ಎಂದು ವಿಚಾರಿಸುವಳು. ನಾನು ಹೌದೆನ್ನುತ್ತ ಆಕೆಯ ಕೈಗೆ ಕಾಫಿಯ ದೊಡ್ಡ ಲೋಟವನ್ನು ಥಮಾಯಿಸಿ ಸುಮ್ಮನಾಗುವೆ. ಆಕೆ ಎಲ್ಲ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ಅಲೌಕಿಕ ಆನಂದದಿಂದ ಕಾಫಿ ಕುಡಿಯತೊಡಗುವಳು.

ಆಮೇಲೆ ಆಕೆಯ ಬಾಯಿ ತೆರೆಯುತ್ತಿತ್ತು. ಕೇವಲ ನಲವತ್ತೈದು ನಿಮಿಷಗಳ ಕಾಲ ಆಕೆಯ ಕೆಲಸಕ್ಕೆ ಬಾರದ ಗಂಡುಮಕ್ಕಳು, ಪಿತೂರಿ ಮಾಡುವ ಸೊಸೆಯಂದಿರು, ತನಗೆ ಬರಬೇಕಾದ ಆಸ್ತಿಪಾಲನ್ನು ಇಪ್ಪತ್ತೈದು ವರ್ಷಗಳಿಂದಲೂ ಕೊಡದಿರುವ ನಾದಿನಿ ಮೈದುನಂದಿರು, ತನ್ನ ಬಗ್ಗೆ ಹಿಂದಿನಿಂದ ಹೀಯಾಳಿಸುವ ಜನರು ತನಗೆ ಒಳ್ಳೆಯದು ಮಾಡದ ಜನರು ಯಾವರೀತಿ ನರಕದ ಬೆಂಕಿಯಲ್ಲಿ ಬೇಯುವರು ಎಂದು ಆಕೆ ಸಚಿತ್ರವಾಗಿ ವರ್ಣಿಸುತ್ತಿದ್ದಳು. ಕೇವಲ ಒಂದು ಬಡಪಾಯಿ ಕಾಲೇಜುಹುಡುಗಿಯಾಗಿದ್ದ ನಾನು ಭೀತಿಯನ್ನು ಪ್ರಕಟಿಸುತ್ತ ಗಡಗಡ ನಡುಗುತ್ತ ಕೂತಿರುತ್ತಿದ್ದೆ. ಆಮೇಲೆ ಆಕೆ ನಾನು ಕಾಲೇಜಿಗೆ ಹೋಗಿ ದೊಡ್ಡ ತಪ್ಪು ಮಾಡುತ್ತಿರುವೆನೆಂದೂ, ನನ್ನ ತಂದೆತಾಯಂದಿರಿಗೆ ತಲೆಕೆಟ್ಟಿದೆಯೆಂದೂ, ನನಗೆ ಮದುವೆಯಾಗಿದ್ದರೆ ಈಗಾಗಲೆ ಸುಮಾರು ಮಕ್ಕಳನ್ನು ಹಡೆದು ಫಾರಿನ್ನಿನಲ್ಲಿ ನನ್ನ ಗಂಡನೊಡನೆ ಹಾಯಾಗಿದ್ದಿರಬಹುದಿತ್ತೆಂದೂ ಹೇಳಿ ಏನಿದ್ದರು ಏನೆ ಓದಿದರು ನೀನು ನಾಳೆ ಒಲೆಯ ಬೂದಿ ಕೆದಕುವುದು ತಪ್ಪುತ್ತದೆಯೆ? ಯಾರಿಗಾದರು ತಪ್ಪಿದೆಯೆ? ಎಂದು ಹೇಳಿ ನನ್ನ ಮುಖವನ್ನೆ ದುರದುರನೆ ನೋಡುತ್ತಿದ್ದಳು. ನಾನು ಹೆಚ್ಚಿಗೆ ತಡೆದುಕೊಳ್ಳಲಾಗದೆ ಆಕೆಗೆಂದೆ ತೆಗೆದಿಡಿಟ್ಟಿದ್ದ ಕಾಟನ್ ಸೀರೆ ಹಾಗು ನೂರು ರೂಪಾಯಿಗಳನ್ನು ಹೆಚ್ಚೂಕಡಿಮೆ ಅವಳ ಕೈಯಿಗೆ ತುರುಕುತ್ತಿದ್ದೆ. ಆಕೆ ಆದನ್ನು ತೆಗೆದುಕೊಳ್ಳುವುದು ನಮಗೆ ಮಾಡುವ ಮಹದುಪಕಾರ ಎಂಬಂತೆ ನನ್ನೆಡೆಗೆ ನೋಡುತ್ತಿದ್ದಳು. ಏನಿದ್ದರು ನಿನ್ನ ಅಮ್ಮ ತಪ್ಪಿಸಿಕೊಂಡುಬಿಟ್ಟಳು ನೋಡು ಈ ಸಾರಿ. ಭಾರಿ ಹುಶಾರಿ ಅವಳು ಎಂದು ಸಟ್ಟನೆದ್ದು ಹೊರಗೆ ಹೋಗಿಬಿಡುತ್ತಿದ್ದಳು. ನಾನು ಒಳಗೆ ಹೋಗಿ ಅಮ್ಮನಿಗೆ ಸಿಗ್ನಲ್ಲು ಕೊಡುವೆ. ಇಬ್ಬರೂ ಬಿದ್ದೂ ಬಿದ್ದೂ ನಗುವುದು. ಪ್ರತಿ ವರುಷವೂ ಹೀಗೇ. ತಪ್ಪದೆ ನಡೆಯುವುದು.

ಆಗಾಗ ನಾನು ತಪ್ಪಿಸದೆ ಹೋಗಲೆಬೇಕಾಗುವ ಕೆಲವು ಮದುವೆಗಳಲ್ಲಿ ಈಕೆಯ ನೆರಳು ಕಂಡುಬರುತ್ತಿದ್ದುದುಂಟು. ಅಲ್ಲೆಲ್ಲ ಈಕೆ ಒಬ್ಬಳೆ ಯಾರನ್ನೂ ಅಂಟಿಸಿಕೊಳ್ಳದಂತೆ ತಿರುಗಾಡುತ್ತಿದ್ದಳು. ಆಕೆಯ ತಲೆ ಕೊಂಚ ಒಪ್ಪವಾಗಿ ಮೈಮೇಲೆ ಸುಮಾರುಮಟ್ಟಿಗಿನ ಸೀರೆ ರವಿಕೆಗಳು ಕಂಡುಬರುತ್ತಿದ್ದವು. ಆಕೆಯನ್ನು ಯಾರೂ ಏನು ಕೆಲಸಕ್ಕೂ ಕರೆಯರು. ಆಕೆ ಯಾರಿಗೂ ಬೇಡವಾದಾಕೆ. ಆದರೆ ಈ ಇಮೇಜನ್ನು ಆಕೆಯೆ ಕಟ್ಟಿಟ್ಟುಕೊಂಡಿದ್ದೆಂದು ನನಗೆ ಬಲವಾದ ನಂಬಿಕೆಯಿತ್ತು. ಸಾವಿನ ಮನೆಗಳಿಗೆ ಮಾತ್ರ ಆಕೆ ತಪ್ಪದೆ ಹಾಜರಾಗಿ ಎರಡು ನಿಮಿಷ ಸುಮ್ಮನೆ ಕುಳಿತು ಎದ್ದುಹೋಗುವಳು. ಆಕೆ ಹೋದಮೇಲೆ ಎಷ್ಟೊ ಹೊತ್ತಿನವರೆಗು ಆಕೆಯ ಕಮಟುವಾಸನೆ ಹೋಗಲೊಲ್ಲದೆ ಅಲ್ಲಿಯೆ ಸುಳಿದಾಡುತ್ತಿರುವುದು. ಆಕೆ ನಮ್ಮೆಲ್ಲರನ್ನೂ ಬೇಕಂತೆ ಮೂರ್ಖರನ್ನಾಗಿ ಮಾಡಿ ಸೀಕ್ರೆಟಾಗಿ ನಗುತ್ತಿರುವಳೆಂದೇ ನನಗೆ ಸದಾ ಅನ್ನಿಸುವುದು.

ಚಿತ್ರಕೃಪೆ: www.mattwrigley.com

 

Comments (15)

« Previous entries