Archive for October, 2007

‘ಹೋಟೆಲ್ ರುವಾಂಡಾ’

1-2004-hotelrwanda-usa-975611.jpg

“ಎಂದು ಉದಯಿಸುವ ಆ ಸೂರ್ಯ?
ಎಂದು ನಮಗೆ ‘ಅದರ’ ದರ್ಶನ ಮಾಡಿಸುವ?
   ರುವಾಂಡಾ ರುವಾಂಡಾ

ಹೌದು, ರುವಾಂಡಾ ರುವಾಂಡಾ

… ಅವರು ಹೇಳುವರು, ‘ಮನುಷ್ಯನ ಬೆಲೆ ಅವನ ಕೆಲಸದಿಂದ.’
ಹಾಗಿದ್ದರೆ ಹೇಳು ಆಫ್ರಿಕಾ, ನಿನ್ನ ಬೆಲೆಯೇನು?…”

-ಮಿಲಿಯನ್ ವಾಯ್ಸಸ್. OST:’ಹೋಟೆಲ್ ರುವಾಂಡಾ’, ಗಾಯಕ: ವೈಕ್ಲೆಫ್ ಜೀನ್

***
ಪಾಲ್ ರಸೀಬಗಿನಾ ತನ್ನ ಹೋಟೆಲಿಗೆಂದು ಆಹಾರವಸ್ತುಗಳನ್ನು ಕೊಳ್ಳಲು ಸಹಾಯಕನೊಡನೆ ಜೀಪಿನಲ್ಲಿ  ಹೊರಟಿದ್ದಾನೆ. ದಂಗೆಯ ಭೀತಿಯಿರುವುದರಿಂದ ಕಾಡಿನಿಂದ ಆಗಿಹೋಗುವ ಮಾರ್ಗವೊಂದನ್ನು ಆಯ್ದುಕೊಂಡಿರುವ ಅವರು ಎಲ್ಲ ವಸ್ತುಗಳನ್ನು ಜೀಪಿನಲ್ಲಿ ಹೇರಿಕೊಂಡು ಬಂದ ಮಾರ್ಗದಿಂದಲೇ ವಾಪಾಸು ಹೋಗುತ್ತ ಇದ್ದಾರೆ. ಎಲ್ಲೆಡೆ ಮುಸುಕಿದ ಮಂಜು. ಅಷ್ಟರಲ್ಲಿ ಜೀಪಿನ ಚಕ್ರಕ್ಕೆ ಗಟ್ಟಿಯಾದದ್ದೇನೋ ತಗುಲತೊಡಗಿ ಡ್ರೈವ್ ಮಾಡಲು ತೊಂದರೆ. ಪಾಲ್ ತನ್ನ ಸಹಾಯಕನಿಗೆ ‘ನೀನು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ. ನಿಲ್ಲಿಸು!’ ಎಂದು ಗದರುತ್ತಾನೆ. ಜೀಪು ನಿಲ್ಲಿಸಿ ಕೆಳಗಿಳಿದರೆ ಕಾಲಡಿಗೆ ಮೆತ್ತಗಿನದೇನೋ ತಗುಲುತ್ತದೆ. ಬಗ್ಗಿ ನೋಡುತ್ತಾನೆ, ಕೆಲವು ಹೆಣಗಳು ಕಾಣುತ್ತವೆ. ಗಾಬರಿಯಾಗಿ ಮುಗ್ಗರಿಸಿ ಬೀಳುತ್ತಾನೆ, ಮುಟ್ಟಿದಲ್ಲೆಲ್ಲ ಹೆಣಗಳೇ ತಗುಲುತ್ತವೆ. ಅಷ್ಟರಲ್ಲಿ ಮುಸುಕಿದ ಮಂಜು ಎದ್ದೇಳುತ್ತದೆ. ಪಾಲ್ ಬಂದಾಗ ನಿರ್ಮಾನುಷ್ಯವಾಗಿದ್ದ ದಾರಿಯ ತುಂಬ ಈಗ ಹೆಣಗಳೇ ತುಂಬಿಕೊಂಡಿವೆ. ತಮ್ಮ ಜೀಪು ಇಲ್ಲಿಯವರೆವಿಗೂ ಚಲಿಸುತ್ತಿದ್ದುದು ಹೆಣಗಳ ಮೇಲೆ ಎಂದು ತಿಳಿದುಬಂದು ಪಾಲ್ ತತ್ತರಿಸಿಹೋಗುತ್ತಾನೆ.

ಇದು ಕೇವಲ ‘ಹೋಟೆಲ್ ರುವಾಂಡಾ’ ಎಂಬ ಚಲನಚಿತ್ರದ ದೃಶ್ಯವಾಗಿದ್ದರೆ ಪರವಾಗಿರಲಿಲ್ಲ. ಆದರೆ ಇದು ರುವಾಂಡಾ ದೇಶದ ಕಿಗಾಲಿ ಪಟ್ಟಣದ ಹಾದಿಯೊಂದರಲ್ಲಿ ನಿಜವಾಗಿ ನಡೆದ ಘಟನೆಯಾಗಿತ್ತು. 1994ರಲ್ಲಿ ಆಫ್ರಿಕಾ ಖಂಡದ ರುವಾಂಡಾ ದೇಶದಲ್ಲಿ ಹುಟು ಜನಾಂಗದವರು ಟೂಟ್ಸಿ ಜನಾಂಗದವರ ಮೇಲೆ ಬಂಡೆದ್ದು ನಡೆಸಿದ ಮಾರಣಹೋಮದಲ್ಲಿ ಕೇವಲ ಮೂರು ತಿಂಗಳಲ್ಲಿ ಒಂದು ಮಿಲಿಯನ್ ಜನ ಕೊಲೆಯಾದರು. ತಮ್ಮ ನ್ಯೂಯಾರ್ಕ್, ಲಂಡನ್ನುಗಳಲ್ಲಿ ಒಂದು ಬಾಂಬು ಸ್ಫೋಟವಾದರೆ ದೆವ್ವಬಂದವರಂತೆ ಆಡುವ ಅಮೆರಿಕಾ, ಯುನೈಟೆಡ್ ಕಿಂಗ್ಡಂಗಳು ಈ ಸಮಯದಲ್ಲಿ ರುವಾಂಡಾಗೂ ತಮಗೂ ಸಂಬಂಧವೇ ಇಲ್ಲವೇನೋ ಅನ್ನುವ ಹಾಗೆ ಮೂಕವಾಗಿದ್ದುಬಿಟ್ಟವು. ಈ ವಿಕೃತ ಜನಾಂಗೀಯ ಹತ್ಯೆಯ ಹಿನ್ನೆಲೆಯಲ್ಲಿ ನಿರ್ದೇಶಕ ಟೆರಿ ಜಾರ್ಜ್ ‘ಹೋಟೆಲ್ ರುವಾಂಡಾ’ವನ್ನು ಚಿತ್ರಿಸಿದ್ದಾನೆ.

ಪಾಲ್ ರಸೀಬಗಿನಾ ಕಿಗಾಲಿಯ ಯುರೋಪಿಯನ್ ಒಡೆತನದ ಹೋಟೆಲ್ ‘ಮಿಲ್ ಕಾಲಿನ್ಸ್’ನ ಮ್ಯಾನೇಜರ್. ಆತ ದಂಗೆ ಶುರುವಾದಾಗ ಎದೆಗೆಡುವುದಿಲ್ಲ. ಆತ ಹಾಲಿವುಡ್ ಫ್ಯಾಂಟಸಿ ಚಲನಚಿತ್ರಗಳ ಹೀರೋಗಳಂತೆ ಚಿತ್ರವಿಚಿತ್ರವಾಗಿ ಕಾದಾಡುವುದಿಲ್ಲ. ಆತ ತೊಂದರೆಯಲ್ಲಿ ದಿಕ್ಕೆಟ್ಟು ಓಡಾಡುವವನಲ್ಲ. ಪಾಲ್ ಒಬ್ಬ ನಾಜೂಕಯ್ಯ. ಆತನಿಗೆ ಯಾರ ಕೈಲಿ ಹೇಗೆ ಕೆಲಸ ತೆಗೆಯಬೇಕು, ಯಾರ ಕೈ ಬಿಸಿಮಾಡಿದರೆ ಕೆಲಸವಾಗುತ್ತದೆ, ಎಲ್ಲ ಗೊತ್ತು. ದಂಗೆಯ ವಿವಿಧ ಕ್ರೂರ ಮುಖಗಳನ್ನು ನೋಡುತ್ತ ಏಕಾಂತದಲ್ಲಿ ವಿಚಲಿತನಾದರು ತನ್ನ ಕುಟುಂಬ ಹಾಗೂ ಹೊಟೆಲಿನ ಕೆಲಸಗಾರರೆದುರು ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ತನ್ನ ಸುತ್ತಮುತ್ತಲ ಜನರನ್ನು ಆತ ಆಳವಾಗಿ ಅಭ್ಯಸಿಸಿದ್ದಾನೆ. ಹುಟು ಜನಾಂಗದವರ ಕ್ರೌರ್ಯ ಮಿತಿಮೀರಿದಾಗ ತನ್ನ ಹೊಟೆಲಿನಲ್ಲಿ ಸುಮಾರು 1200 ಟೂಟ್ಸಿಗಳನ್ನು ಅವಿಸಿಡುತ್ತಾನೆ. ತನ್ನ ಹೊಟೆಲಿನ ನಿರಾಶ್ರಿತರಿಗೋಸ್ಕರ ಆತ ಏನು ಮಾಡಲೂ ತಯಾರು. ಅವರು ಹೊರಹೋದರೆ ಹೆಂಗಸರು-ಮಕ್ಕಳೆನ್ನದೆ ಎಲ್ಲರೂ ಹುಟುಗಳ ಕೈಯಲ್ಲಿ ಕಗ್ಗೊಲೆಯಾಗುವುದು ಖಚಿತವಾಗಿ ಆತನಿಗೆ ತಿಳಿದಿದೆ. ಮಿಲಿಟರಿಯವರಿಗೆ ಲಂಚ ಕೊಡುವುದರಿಂದ ಹಿಡಿದು, ಅಮೆರಿಕದವರು ಸ್ಯಾಟೆಲೈಟ್ ಮೂಲಕ ಅವರನ್ನು ನೋಡುತ್ತಿದ್ದಾರೆಂದು ಬೆದರಿಸುವವರೆಗೂ, ತನ್ನ ಹೊಟೆಲಿನ ‘ಅತಿಥಿ’ಗಳಿಗಾಗಿ ಹುಟುಗಳ ನಾಯಕನಿಂದ ಆಹಾರವಸ್ತುಗಳನ್ನು ಇಸಿದುಕೊಂಡು ಬರುವವರೆಗೂ ಆತನ ವ್ಯವಹಾರಿಕಜ್ನಾನ ಬೇರೆಬೇರೆ ಮುಖಗಳನ್ನು ಪಡೆದುಕೊಳ್ಳುತ್ತ ಹೋಗುತ್ತದೆ. ನಾಳೆ ಸಾವು ಕಾದಿದೆ ಎಂದು ಖಚಿತವಾದಾಗ ಹೆಂಡತಿ ಟೆಸ್ಸಿಯಾನಾಳಿಗೆ ಕ್ಯಾಂಡಲ್ ಲೈಟ್ ಔತಣ ಏರ್ಪಡಿಸಿ ಆಕೆಯಿಂದ ಒಂದು ಭಾಷೆ ಇಸಿದುಕೊಳ್ಳುತ್ತಾನೆ - ‘ನಾಳೆ ಹುಟುಗಳು ಇಲ್ಲಿಗೆ ದಾಳಿಮಾಡಿದರೆ ನೀನು ಮಕ್ಕಳನ್ನು ಕರೆದುಕೊಂಡು ಟೆರೇಸಿನಿಂದ ಕೆಳಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು. ನೀವು ಅವರ ಕೈಗೆ ಸಿಕ್ಕಿಹಾಕಿಕೊಂಡು ಸಾಯೋದಕ್ಕಿಂತ ಇದು ಮೇಲು.’ ತನ್ನ ಜನರನ್ನು ರಕ್ಷಿಸಲು ಆತ ವಿಶ್ವಸಂಸ್ಥೆಯ ಕರ್ನಲ್ ಒಬ್ಬನಿಂದ ಹಿಡಿದು, ತನ್ನ ವಿದೇಶೀ ಮಾಲೀಕ, ಲಂಚಕೋರ ಮಿಲಿಟರಿ ಅಧಿಕಾರಿ ಮತ್ತು  ತನಗೆ ತಿಳಿದ ಎಲ್ಲ ಪಾಶ್ಚಿಮಾತ್ಯ ಜನರನ್ನು ಸಂಪರ್ಕಿಸುವುದು ನಾಗರೀಕತೆಗೇ ನಾಚಿಕೆ ಬರಿಸುವಂತಿದೆ. ವಿಶ್ವಸಂಸ್ಥೆಯ ಕರ್ನಲನ ಅಸಹಾಯಕತೆ, ಕೋಪಗಳು, ಟೂಟ್ಸಿಗಳ ಹಾಡುಹಗಲ ಕೊಲೆಗಳನ್ನು ವಿಡಿಯೋಚಿತ್ರಣ ಮಾಡುವ ವಿದೇಶೀ ಪತ್ರಕರ್ತನ ನೋವು, ಇವೆಲ್ಲ ಮುಂದುವರಿದ ದೇಶಗಳ ಹಿಪಾಕ್ರಸಿಗೆ ಹಿಡಿದ ಕನ್ನಡಿ.

ಆ ಮಾರಣಹೋಮದ ಹೊತ್ತು ರುವಾಂಡಾದಲ್ಲಿ ತಾಂಡವವಾಡಿದ್ದು ರೌರವ ದ್ವೇಷ. ಮಾನವತೆಗೆ ಅಲ್ಲಿ ಸಾರಾಸಗಟಾಗಿ ಮಸಿ ಬಳಿಯಲಾಯಿತು. ಇವೆಲ್ಲದರ ವಿರುದ್ಧ ನಿಂತು ತನ್ನ ಹೊಟೆಲಿನ ನಿರಾಶ್ರಿತರನ್ನು ವಿಶ್ವಸಂಸ್ಥೆಯ ರೆಫ್ಯೂಜಿ ಕ್ಯಾಂಪಿಗೆ ತಲುಪಿಸುವಲ್ಲಿ ಯಶಪಡೆದ ಪಾಲ್ ರಸೀಬಗಿನಾನ ಕಥೆ ಸಾಮಾನ್ಯವಾದ್ದಲ್ಲ. ಇಂದಿಗೂ ಆತ ಬೆಲ್ಜಿಯಂ ದೇಶದಲ್ಲಿ ತನ್ನ ಹೆಂಡತಿ, ಮಕ್ಕಳು ಹಾಗೂ ತಾನು ಸಾಕುತ್ತಿರುವ ರುವಾಂಡಾದ ಇಬ್ಬರು ಅನಾಥ ಮಕ್ಕಳೊಡನೆ ವಾಸವಾಗಿದ್ದಾನೆ.’ಹೊಟೆಲ್ ರುವಾಂಡಾ’ ಆತನ ಕಥೆಯನ್ನು ತಣ್ಣಗೆ ಬಣ್ಣಿಸಿ ಹೇಳುತ್ತದೆ. ಪಾಲ್ ನ ಪಾತ್ರವನ್ನು ಅಭಿನಯಿಸಿರುವ ಡಾನ್ ಶೀಡ್ಲ್ ಇಂದಿನ ಅತ್ಯುತ್ತಮ ನಟರಲ್ಲೊಬ್ಬ. ಈ ಚಲನಚಿತ್ರಕ್ಕೋಸ್ಕರ ಗಾಯಕ ವೈಕ್ಲೆಫ್ ಜೀನ್ ಹಾಡಿರುವ ’ಮಿಲಿಯನ್ ವಾಯ್ಸಸ್’ ಬಹಳ ಸರಳ ಸುಂದರ ಸೌಂಡ್ ಟ್ರಾಕ್. ಈ ಹಾಡಿನ ಯು-ಟ್ಯೂಬ್ ಲಿಂಕ್ ಈ ಕೆಳಗಿದೆ:

http://www.youtube.com/watch?v=yT0l4VqH0ds

*** 
 ಚಿತ್ರ: www.allposters.com
 

Comments (4)

‘ಅಪೋಕ್ಯಾಲಿಪ್ಟೋ’ - ಒಂದು ಅಪೂರ್ವ ಅನುಭವ

bdiam.jpg

(Thank you Rajiv, for reminding me!! I have kept my promise!!)

ಮೊದಲ ಸಾರೆ ನಾವು ವಿಸ್ಮಯವೊಂದಕ್ಕೆ ಸಾಕ್ಷಿಗಳಾದೆವೆಂದಿಟ್ಟುಕೊಳ್ಳಿ,. ಆಗ ನಮಗೆ ಆಗಬಹುದಾದ ಆಘಾತ, ಆಶ್ಚರ್ಯ ಅಪಾರ. ಇದಾದ ಮೇಲೆ ಪುನಃ ಇನ್ನೊಂದು ವಿಸ್ಮಯ ನಮಗೆದುರಾದರೆ ಸ್ವಲ್ಪ ತಣ್ಣಗೆ ಆದರೆ ಅಷ್ಟೇ ಗೌರವದಿಂದ ಪ್ರತಿಕ್ರಿಯಿಸುತ್ತೇವೆ. ಅದೇ ರೀತಿ ಮೆಲ್ ಗಿಬ್ಸನ್ನನ ‘ದ ಪ್ಯಾಶನ್ ಆಫ್ ದ ಕ್ರೈಸ್ಟ್’ ‘ಬ್ರೇವ್ ಹಾರ್ಟ್’ ಚಲನಚಿತ್ರಗಳನ್ನು ನೋಡಿದವರಿಗೆ ಆತನದೇ ನಿರ್ದೇಶನದ ‘ಅಪೋಕ್ಯಾಲಿಪ್ಟೋ’ ನೋಡಿದಾಗ ಅಂತಹ ಆಶ್ಚರ್ಯವೆನಿಸುವುದಿಲ್ಲ. ಆದರೆ ಮೆಲ್ ಗಿಬ್ಸನ್ನನ ನಿರ್ದೇಶನದ ಬಗ್ಗೆ, ಆತನ ಚಿತ್ರಗಳ ‘ಅಥೆಂಟಿಕ್’ ಕ್ವಾಲಿಟಿಯ ಬಗ್ಗೆ ಗೌರವ ಇಮ್ಮಡಿಯಾಗದಿರದು. ಪ್ರೇಕ್ಷಕನ ಕುತೂಹಲ ಕೆಡದಂತೆ, ರಕ್ತಪಾತದ ದೃಶ್ಯಗಳನ್ನೂ ಕ್ಲಾಸಿಕ್ ರೀತಿಯಲ್ಲಿ ನೀಡುವ, ತನ್ನೆಲ್ಲ ಚಿತ್ರಗಳಲ್ಲೂ ವೈವಿಧ್ಯಮಯ ವಿಷಯಗಳನ್ನಾಯ್ದುಕೊಂಡು ಸಫಲರಾಗಿರುವ ಹಲವೇ ನಿರ್ದೇಶಕರಲ್ಲಿ ಮೆಲ್ ಗಿಬ್ಸನ್ ಒಬ್ಬ.’ಅಪೋಕ್ಯಾಲಿಪ್ಟೋ’ವನ್ನು ಕೇವಲ ಆಕ್ಷನ್ ಚಲನಚಿತ್ರವೆನ್ನಲಾಗದು. ಅನೇಕ ಚಾರಿತ್ರಿಕ ಘಟನೆಗಳು ವಿವರಗಳೂ ಕೂಡ ಇದರ ಕಥೆಯೊಡನೆ ಹೆಣೆದುಕೊಂಡಿವೆ. ಚಲನಚಿತ್ರದ ನಾಯಕ ‘ಜಗ್ವಾರ್ ಪಾ’ ತನ್ನ ಬುಡಕಟ್ಟಿನ ನಾಯಕನ ಪ್ರೀತಿಯ ಮಗ. ಬಲಶಾಲಿ. ಬೇಟೆಯಲ್ಲಿ ನಿಪುಣ. ತನ್ನ ಗರ್ಭಿಣಿ ಮಡದಿ ಸೆವೆನ್ ಹಾಗೂ ಪುಟ್ಟ ಮಗನ ಮೇಲೆ ಅಪಾರ ಪ್ರೀತಿ ಹೊಂದಿದವ. ಅರಣ್ಯದ ಬಗ್ಗೆ ತನ್ನ ಅನುಭವೀ ತಂದೆ ಹೇಳುವ, “ಈ ಅರಣ್ಯ ನನ್ನದು, ಇಲ್ಲಿ ನನ್ನ ಪೂರ್ವಜರು ಬೇಟೆಯಾಡಿದ್ದಾರೆ. ನಾಳೆ ನನ್ನ ಮಕ್ಕಳೂ ಬೇಟೆಯಾಡುತ್ತಾರೆ” ಎಂಬ ಮಾತಿನಲ್ಲಿ ನಂಬಿಕೆಯಿಟ್ಟವ. ಇಂಥವನ ನೆಮ್ಮದಿಯ ಜೀವನ ಒಂದು ಮುಂಜಾವ ಮಾಯನ್ ಬುಡಕಟ್ಟಿನ ಯೋಧರಿಂದ ಬುಡಮೇಲಾಗುತ್ತದೆ. ತಮ್ಮ ಸೂರ್ಯದೇವತೆಗೆ ನರಬಲಿ ನೀಡಲು ಮಾಯನ್ನರು ಸಣ್ಣಪುಟ್ಟ ಬುಡಕಟ್ಟುಗಳ ಮಧ್ಯವಯಸ್ಕರನ್ನು ಅಪಹರಿಸುತ್ತಾ ಜಗ್ವಾರನ ಗ್ರಾಮಕ್ಕೂ ದಾಳಿಯಿಡುತ್ತಾರೆ. ರಕ್ತಪಾತ ನಡೆಯುತ್ತದೆ. ತನ್ನ ಮಗ, ಹೆಂಡತಿಯನ್ನು ಜಗ್ವಾರ್ ಬಾವಿಯೊಂದರಲ್ಲಿ ಅವಿಸಿಡುತ್ತಾನೆ. ಆದರೆ ತಾನು ಕಾಳಗದಲ್ಲಿ ಸೆರೆಯಾಗುವುದಲ್ಲದೆ ತನ್ನ ಪ್ರೀತಿಯ ತಂದೆ ತನ್ನ ಕಣ್ಣೆದುರೇ ಕ್ರೂರವಾಗಿ ಕೊಲೆಯಾಗುವುದನ್ನು ನೋಡುತ್ತಾನೆ. ಉಕ್ಕಿಬಂದ ಕ್ರೋಧವನ್ನು ತನ್ನ ಜೊತೆ ಸೆರೆಯಾಗುವ ತಮ್ಮಂದಿರನ್ನು ನೋಡಿ ತಡೆದುಕೊಳ್ಳಬೇಕಾಗುತ್ತದೆ. ಸೆರೆಯಾದವರನ್ನು ಹಿಂಬಾಲಿಸುವ ಮಕ್ಕಳ ಅಸಹಾಯಕತೆ, ಕೊನೆಗೆ ಅವರು ತಮ್ಮ ತೊಂದರೆಗಳಲ್ಲಿ ಒಂದಾಗುವ ರೀತಿ ಮಾರ್ಮಿಕವಾಗಿದೆ.
 
ಮಾಯನ್ ನಗರದವರೆಗಿನ ಅವರ ಪ್ರಯಾಣದಲ್ಲಿ ಅಸಂಖ್ಯಾತ ತೊಂದರೆಗಳು ಒದಗುತ್ತವೆ. ಸಾವುನೋವುಗಳು, ಮಾಯನ್ ಸೈನಿಕರಿಂದ ಹೆಂಗಸರ ಮಾನಾಪಹರಣಗಳು ನಡೆಯುತ್ತವೆ. ದಾರಿಯಲ್ಲಿ ತನ್ನ ತಂದೆಯನ್ನು ಕಳೆದುಕೊಂಢು ಅನಾಥಳಾದ ಬುಡಕಟ್ಟು ಬಾಲಕಿಯೊಬ್ಬಳು ಮಾಯನ್ ನಾಗರೀಕತೆಗೆ ಸರ್ವನಾಶ ತರುವವನು ಅವರೊಡನೆಯೇ ಇದ್ದಾನೆಂದೂ, ಆತ ಹಗಲಿನಲ್ಲಿ ಇರುಳಾಗುವ ವೇಳೆ ಮಣ್ಣಿನಿಂದ ಪುನರ್ಜನ್ಮ ಪಡೆಯುತ್ತಾನೆಂದೂ ಹೇಳಿ ಸೈನಿಕರ ಎದೆ ನಡುಗಿಸುತ್ತಾಳೆ. ‘ಸರ್ವೈವಲ್ ಆಫ್ ದ ಫಿಟ್ಟೆಸ್ಟ್’ ಎಂಬ ಡಾರ್ವಿನ್ ವಾದಕ್ಕೆ ತಕ್ಕಹಾಗೆ ಗಟ್ಟಿಮುಟ್ಟಾಗಿರುವವರು ಮಾತ್ರ ಉಳಿದುಕೊಂಡು ಮಾಯನ್ ನಗರಪ್ರವೇಶ ಮಾಡುತ್ತಾರೆ. ಅಲ್ಲಿಯವರೆಗೂ ಜಗ್ವಾರ್ ಗೆ ಮುಂದೇನಾಗುವುದೆಂದು ತಿಳಿದಿರುವುದಿಲ್ಲ. ಮಾಯನ್ ಪದ್ಧತಿಯ ಪ್ರಕಾರ ಬಲಿಪೀಠಕ್ಕೆ ತೆರಳುವ ಮುನ್ನ ಅವರ ಮೈಗೆಲ್ಲ ನೀಲಿ ಬಣ್ಣ ಬಳಿಯಲಾಗುತ್ತದೆ. ಗೋಡೆಯ ಮೇಲೆ ಚಿತ್ರೀಕರಿಸಿರುವ ನರಬಲಿಯ ವಿವಿಧ ದೃಶ್ಯಗಳನ್ನು ನೋಡುತ್ತ ಜಗ್ವಾರ್ ವಿಚಲಿತನಾದರೂ ತಪ್ಪಿಸಿಕೊಳ್ಳುವ ಆಸೆ ಬಿಡುವುದಿಲ್ಲ. ಹೆಂಡತಿ ಮಕ್ಕಳ ಚಿತ್ರ ಕಣ್ಣೆದುರಿಗೆ ಕಾಡುತ್ತದೆ. ಬಾವಿಯಲ್ಲಿ ಸಿಲುಕಿಕೊಂಡ ಜಗ್ವಾರನ ಹೆಂಡತಿ ಮತ್ತು ಮಗ ಹಸಿವು, ಕಾಡುಪ್ರಾಣಿಯ ಆಕ್ರಮಣ ಮುಂತಾದ ತೊಂದರೆಗಳನ್ನು ಎದುರಿಸುತ್ತಾರೆ. ಆ ಸಮಯಕ್ಕೆ ಸರಿಯಾಗಿ ಸುರಿವ ಮಳೆಯ ನೀರು ಬಾವಿಯಲ್ಲಿ ತುಂಬಲು ಪ್ರಾರಂಭವಾಗುತ್ತದೆ.

ಇತ್ತಕಡೆಗೆ ನರಬಲಿ ಆರಂಭವಾಗುತ್ತದೆ. ಮೊದಲು ಬಲಿಗೊಳಗಾಗುವವನ ಹೃದಯ, ಕರುಳು ಮೊದಲಾದವನ್ನು ಆತ ಜೀವಂತವಿರುವಂತೆಯೇ ಬಗೆದು ಪ್ರದರ್ಶಿಸಲಾಗುತ್ತದೆ. ಆನಂತರ ಆತನ ಶಿರಚ್ಛೇದನ ಮಾಡಿ ಅದನ್ನು ದೇವಸ್ಥಾನದ ಮೆಟ್ಟಿಲುಗಳಿಂದ ಕೆಳಗುರುಳಿಸಲಾಗುತ್ತದೆ. ಆನಂತರ ದೇಹವನ್ನು ಕೆಳಕ್ಕೆಸೆಯಲಾಗುತ್ತದೆ. ಪ್ರತೀ ಬಲಿಯೊಡನೆ ಜನರ ಕೇಕೆ ಅಟ್ಟಹಾಸಗಳು ಮುಗಿಲುಮುಟ್ಟುತ್ತವೆ. ಜಗ್ವಾರನ ಸರದಿ ಬಂದಾಗ ಸರಿಯಾಗಿ ಒದಗುವ ಸೂರ್ಯಗ್ರಹಣವನ್ನು ಒಳ್ಳೆಯ ಶಕುನವೆಂದು ಭಾವಿಸಿ ಮಾಯನ್ನರು ಆತನನ್ನೂ, ಉಳಿದವರನ್ನೂ ನರಬಲಿಯಿಂದ ವಿಮುಕ್ತಗೊಳಿಸುತ್ತಾರೆ. ‘ಬೆಂಕಿಯಿಂದ ಬಾಣಲಿಗೆ’ ಎಂಬಂತೆ ಅವರನ್ನು ಅಪಹರಿಸಿದ ಸೈನಿಕರು ತಮ್ಮ ಬೇಟೆಯಾಟಕ್ಕೋಸ್ಕರ ಜಗ್ವಾರ್ ಮತ್ತು ಸಂಗಡಿಗರನ್ನು ಊರಮೇರೆಯ ಮೈದಾನವೊಂದಕ್ಕೆ ಕೊಂಡೊಯ್ದು ಮೈದಾನವನ್ನು ಓಡಿ ದಾಟುವಾತ ಸ್ವತಂತ್ರನೆಂದು ಆಮಿಷವೊಡ್ಡುತ್ತಾರೆ. ಓಡುವವರನ್ನು ಬಾಣಗಳಿಂದ ಇಲ್ಲವೇ ಗದೆಗಳಿಂದ ಹೊಡೆದು ಸಾಯಿಸುವ ಆಟ ಪ್ರಾರಂಭವಾಗುತ್ತದೆ. ಜಗ್ವಾರ್ ಒಬ್ಬ ಮಾತ್ರ ಗಾಯಗೊಂಡರೂ ಸೇನಾದಳದ ನಾಯಕನ ಮಗನನ್ನು ಸಾಯಿಸಿ ಮೈದಾನ ದಾಟಿ ಪಾರಾಗುತ್ತಾನೆ. ಸೇನಾದಳದ ಬಲಶಾಲಿ ನಾಯಕನ ದ್ವೇಷಕ್ಕೆ ತುತ್ತಾದ ಜಗ್ವಾರನನ್ನು ಮಾಯನ್ ಸೈನಿಕರು ಅಟ್ಟಿಸಿಕೊಂಡು ಬರುತ್ತಾರೆ. ಹೇಗೆ ಜಗ್ವಾರ್ ತನ್ನ ಚಾಣಾಕ್ಷತನದಿಂದ ತನಗೆ ಒದಗಿದ ವಿಪತ್ತಿನಿಂದ ಪಾರಾಗುತ್ತಾನೆ, ತನ್ನ ಹೆಂಡತಿ ಮಕ್ಕಳನ್ನು ಪುನಃ ಸೇರುತ್ತಾನೆ, ಹೇಗೆ ಮಾಯನ್ ನಾಗರೀಕತೆಯ ಅಳಿವಿನ ಹರಿಕಾರನಾಗುತ್ತಾನೆ ಎನ್ನುವುದನ್ನು ಚಲನಚಿತ್ರದಲ್ಲಿ ರಿಯಲಿಸ್ಟಿಕ್ ಆಗಿ ಚಿತ್ರೀಕರಿಸಲಾಗಿದೆ. ತಲೆಮಟ್ಟ ನೀರಿನಲ್ಲಿಯೇ ಮಗುವನ್ನು ಹೆರುವ ಜಗ್ವಾರನ ಹೆಂಡತಿ ಸೆವೆನ್ ತನ್ನ ಗಂಡನ ಶೂರತನಕ್ಕೆ ಸಾಟಿಯಾಗಿ ನಿಲ್ಲುತ್ತಾಳೆ.

ಚಿತ್ರದ ಸೆಟ್ಟು, ಕಾಸ್ಟ್ಯೂಮ್ ಮೊದಲಾದವುಗಳಲ್ಲಿ ಕಂಡುಬಂದಿರುವ ಅಧಿಕೃತತೆ ಚಿತ್ರಕಥೆ, ನಟನೆಗಳಲ್ಲಿ ಕೂಡ ಕಂಡುಬರುತ್ತದೆ. ನರಬಲಿಯ ದ್ರಶ್ಯಗಳು ಭಯಹುಟ್ಟಿಸಿದರೂ ಮಾಯನ್ ನಾಗರೀಕತೆಯಲ್ಲಿ ಪ್ರಚಲಿತವಿದ್ದ ನರಬಲಿಯ ವಿವರಗಳನ್ನೇ ಕಣ್ಣಿಗೆಕಟ್ಟುವಂತೆ ಸಹಜವಾಗಿ ಚಿತ್ರೀಕರಿಸಲಾಗಿದೆ. ಮಾಯನ್ನರ ಪದ್ಧತಿಗಳ ಬಗ್ಗೆ ಯಾವುದೇ ವಿಶೇಷ ಔದಾರ್ಯ ತೋರುವ ಅವಶ್ಯಕತೆ ಇಲ್ಲಿ ಕಾಣಬರದು. ಮಾಯನ್ ನಾಗರೀಕತೆಯನ್ನು ಆಳವಾಗಿ ಆಧ್ಯಯನ ಮಾಡಿರುವ ಪ್ರಖ್ಯಾತ ಇತಿಹಾಸಕಾರ ಡಾ. ರಿಚರ್ಡ್ ಡಿ. ಹ್ಯಾನ್ಸೆನ್ನರ ನೆರವನ್ನು ಮೆಲ್ ಗಿಬ್ಸನ್ ಪಡೆದುಕೊಂಡದ್ದು ಚಲನಚಿತ್ರಕ್ಕೆ ಸಹಜತೆಯ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಚಲನಚಿತ್ರ ಯಾವುದೇ ರಾಜಕೀಯ ಹೊಳಹನ್ನು ನೇರವಾಗಿ ನೀಡದಿದ್ದರೂ ಮಾಯನ್ ಪದ್ಧತಿಗಳು ಅಮೆರಿಕಾದ ಇರಾಕ್ ನರಮೇಧವನ್ನು ನೆನಪಿಸುತ್ತವೆ. ದೇವತೆಗಳನ್ನು ಸಂತೃಪ್ತಗೊಳಿಸಲು ನರಬಲಿ ನೀಡುವ ಮಾಯನ್ನರು, ವಿಶ್ವಶಾಂತಿಯ ಹೆಸರಿನಲ್ಲಿ ತಮ್ಮ ‘ಈಗೋ’ ಸಂತೃಪ್ತಗೊಳಿಸಲು ಯುದ್ಧಗಳನ್ನು ನಡೆಸುವ ಅಮೆರಿಕಾ ಇಂಗ್ಲೆಂಡುಗಳ ತರಹ ಕಾಣುತ್ತಾರೆ. ಹಾಗಾದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲವೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಚಲನಚಿತ್ರದ ಕೊನೆಗೆ ಜಗ್ವಾರ್ನನ್ನು ಅಟ್ಟಿಸಿಕೊಂಡು ಬರುವ ಮಾಯನ್ನರಿಗೆ ಎದುರಾಗುವ ಬೃಹತ್ ಸ್ಪಾನಿಶ್ ಆರ್ಮಡಾ(ಸೈನ್ಯ) ಅವರ ನಾಗರೀಕತೆಯ ಅಳಿವಿಗೆ ನಾಂದಿಯಾಗುತ್ತದೆ.
 

Comments (8)

ಈಸಿಯಾಗಿ ಸಾಯುವುದು ಹೇಗೆ?

(This one is for you Chethana and my dear sis Dimpu!!)

ಪಿ.ಯು.ಸಿ ಸೈನ್ಸ್ ಓದಲೇಬೇಕೆಂದು ಹಠಹಿಡಿದು ಬೆಚ್ಚಗಿನ ಮನೆಬಿಟ್ಟು ಕಾರ್ಕಳದ ಭುವನೇಂದ್ರ ಕಾಲೇಜು ಸೇರಿ ಹಾಸ್ಟೆಲ್ ವಾಸ ನಡೆಸುತ್ತಿದ್ದೆ. ಸೀನಿಯರುಗಳ ಕೈಲಿ ಒಂದಿಲ್ಲೊಂದು ರೀತಿ rag ಮಾಡಿಸಿಕೊಂಡು ಕಾಲೇಜಿನಲ್ಲಿ ತಲೆಯೆತ್ತಿ ನಡೆಯಲೂ ಭಯವಾಗುತ್ತಿತ್ತು. ಎಲ್ಲ ಹಾಳಾಗಲಿ ಎಂದು ಶನಿವಾರ ‘ಔಟಿಂಗ್’ ಹೋದರೆ ಅಲ್ಲಿಯೂ ಕಾರ್ಕಳದ ಆರ್ಥೋಡಾಕ್ಸ್ ಬೀದಿಗಳು ಚುಚ್ಚುವಂತೆ ಕಾಣುತ್ತಿದ್ದವು. ಎಲ್ಲ ಅಂಗಡಿಯವರಿಗೂ ನಾವು ಹಾಸ್ಟೆಲ್ಲಿನ ಹುಡುಗಿಯರು ಎಂದು ಅದು ಹೇಗೋ ತಿಳಿದುಹೋಗುತ್ತಿತ್ತು. ತರಲೆ ಸೀನಿಯರ್ಗಳು ಜೂನಿಯರುಗಳ ಕೈಲಿ ಶಾಪಿಂಗ್, ಹೋಟೆಲ್ ಬಿಲ್ಲುಗಳನ್ನು ತುರುಕಿ ಚೌರ ಮಾಡಿದ ನಿದರ್ಶನಗಳು ಬಹಳವಿದ್ದುದರಿಂದ ನಾವು ಪಿಯುಸಿ ಹುಡುಗಿಯರು ಆದಷ್ಟು ಸೀನಿಯರ್ ಹುಡುಗಿಯರು ಮತ್ತು ಬಾಯ್ಸ್ ಹಾಸ್ಟೆಲಿನ ಹುಡುಗರು ಹೋಗದಿರುವ ಜಾಗಗಳನ್ನೆ ಪ್ರಿಫರ್ ಮಾಡುತ್ತಿದ್ದೆವು. ಆದರೂ ಒಮ್ಮೊಮ್ಮೆ ಸಿಕ್ಕಿಹಾಕಿಕೊಂಡರೆ ಏನೂ ಅರಿಯದ ಮುಗ್ಧಮಕ್ಕಳಂತೆ ನಟಿಸಿ ಪಾರಾಗಬೇಕಿತ್ತು. ಇಂಥ ಸಮಯದಲ್ಲಿ ನನಗೆ ಪರಿಚಯವಾದವಳು ರೇಶ್ಮಾ ಶೆಟ್ಟಿಗಾರ್.

ರೆಫೆಕ್ಟರಿಯ ಮೂಲೆಯೊಂದರಲ್ಲಿ ಒಂದು ದಿನ ಬಿಸಿಬಿಸಿ ಕುಚಲಕ್ಕಿ ಅನ್ನ ಮತ್ತು ಅಡಿಗೆಭಟ್ಟರ ಸ್ಪೆಶಲ್ ‘ದಾಳಿದೋವೆ’ ಮತ್ತು ಬಟಾಣಿಸಾಂಬಾರನ್ನು ಸವಿಯುತ್ತ ಎಂಜಾಯ್ ಮಾಡುತ್ತ ಕುಳಿತಿದ್ದ ನನಗೆ ರೇಶ್ಮಾ ಪಕ್ಕ ಬಂದು ಕುಳಿತಾಗ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಗಿ ಪೇಚಾಡತೊಡಗಿದೆ. ಸೀನಿಯರ್ ಅಲ್ಲವೆ? ತುಳುವನ್ನೂ ಆಕ್ಸೆಂಟಿನೊಡನೆ ಮಾತನಾಡುತ್ತಿದ್ದ ಆಕೆಯನ್ನು ಊಟ ಬಡಿಸುವ ಪದ್ಮಕ್ಕ, ರಾಜಕ್ಕ ಲೇವಡಿ ಮಾಡಿ ನಗುತ್ತಿದ್ದರು. ಆಕೆಯೂ ಅವರ ಜತೆ ಸೇರಿ ತುಳುವಿನ ನಾನ್ವೆಜ್ ಲಿಮರಿಕ್ಕುಗಳನ್ನು ಹಾಡುತ್ತ ಅವುಗಳ ಅರ್ಥವನ್ನು ತುಳು ಬರದ ಸುತ್ತಮುತ್ತಲಿನವರಿಗೆ ಜೋರಾಗಿ ವಿವರಿಸುತ್ತ ನನ್ನ ಕೆನ್ನೆ ಕೆಂಪು ಮಾಡುವುದರ ಜತೆಗೇ ನನ್ನ ಮೊದಲ ‘ಸೀನಿಯರ್’ ಸ್ನೇಹಿತೆಯಾಗಿಬಿಟ್ಟಳು. ಆಕೆ ದುಬಾಯಿಯಿಂದ ನನ್ನ ಹಾಗೇ ಹಠಹಿಡಿದು ಕಾರ್ಕಳಕ್ಕೆ ಓದಲು ಬಂದವಳಾಗಿದ್ದಳು. ಸಂಬಂಧಿಗಳ ಜತೆ ಒಂದು ವರ್ಷವಿದ್ದು ಸರಿಹೋಗದೆ ಹಾಸ್ಟೆಲ್ ಸೇರಿದ್ದಳು. ನನ್ನ, ಆಕೆಯ ಸ್ನೇಹ ಬಹಳ ಜನರ ಹುಬ್ಬೇರಿಸಿತ್ತು. ಅದಕ್ಕೆ ಕಾರಣವೂ ಇತ್ತೆನ್ನಿ. ನಾನು ಒಂದು ಸದ್ದಾದರೂ ಬೆಚ್ಚಿಬೀಳುವ ಕಾಡುಪಾಪದ ಹಾಗೆ ಇದ್ದರೆ ರೇಶ್ಮಾ ಸಿಂಹಿಣಿಯ ಹಾಗಿದ್ದಳು. ಕೆಂಚನೆಯ ಬಣ್ಣ ಹಚ್ಚಿದ್ದ ಆಕೆಯ ಮಶ್ರೂಮ್ ಕಟ್ ಆಗ ‘ಟ್ರೆಂಡಿ’ಯಾಗಿತ್ತು. ಮೇಲಾಗಿ ಆಕೆಯ ಕಡಿಮೆಯೆಂದರೂ ಎರಡಿಂಚುದ್ದದ ರೆಪ್ಪೆಗಳ ಮೀನುಗಣ್ಣು, ಆರೋಗ್ಯಕರ ಫಿಗರ್ ಮತ್ತ್ತು ಆಕೆ ತೊಡುತ್ತ ಇದ್ದ ಪಾಶ್ಚಾತ್ಯಶೈಲಿಯ ಉಡುಗೆ-ಅಲಂಕಾರಗಳಿಗೆ ಮಾರುಹೋಗದ ಹುಡುಗನೇ ನಮ್ಮ ಕಾಲೇಜಿನಲ್ಲಿ ಇರಲಿಲ್ಲ. ಆಕೆಯ ರೂಮಿಗೆ ಕಾಲಿಟ್ಟರೆ ರಾಶಿ ಪೋಸ್ಟರು, ಡಿಸೈನರ್ ಬಟ್ಟೆಗಳು, ಪುಸ್ತಕಗಳು, ಭಯಹುಟ್ಟಿಸುವಷ್ಟು ಎತ್ತರದ ಹೀಲ್ ಉಳ್ಳ ಚಪ್ಪಲಿಗಳು ಹಾಗೂ ಕೇಳಲು ಒಂದಿಷ್ಟು ಕಥೆಗಳು. ರೇಶ್ಮಾ ವಾರಕ್ಕೆ ಒಂದು ದಿನ ಮೌನಾಚರಣೆ ಮಾಡುತ್ತಿದ್ದಳು. ತನ್ನ ಮೇಲೆ ‘ಫಿದಾ’ ಆಗಿದ್ದ ಪಾಕಿಸ್ತಾನದ ಹುಡುಗ ನಾಸಿರನನ್ನು ಕಿರುಬೆರಳಲ್ಲಿ ಆಟವಾಡಿಸುತ್ತಲೆ ತಾನು ದುಬಾಯಿ ಬಿಟ್ಟುಬರಲು ಪ್ರಮುಖ ಕಾರಣವಾಗಿದ್ದ ಹುಡುಗ ಮೈಕೆಲನನ್ನು ನೆನೆದು ಪರಿತಪಿಸುತ್ತಿದ್ದಳು. ನನ್ನ ನೋಡಿ “ಹೌ ಕೆನ್ ಯು ಬಿ ಸೋ ಅನವೇರ್ ಆಫ್ ಯುವರ್ ಸೆಕ್ಷುವಾಲಿಟಿ!” ಎಂದು ಅಚ್ಚರಿಪಡುತ್ತಿದ್ದಳು.

ಹೀಗೇ ಒಂದು ಶನಿವಾರ ಮಧ್ಯಾಹ್ನ ರೇಶ್ಮಾ ನನ್ನ ರೂಮಿಗೆ ನುಗ್ಗಿದವಳೇ “ಬಾ, ಇವತ್ತು ಒಂದು ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ಅರ್ಜೆಂಟ್. ಕ್ವೆಶ್ಚನ್ ಆಫ್ ಲೈಫ್ ಅಂಡ್ ಡೆತ್!” ಎಂದು ಅವಸವಸರವಾಗಿ ಏನೇನೋ ಉಸುರಲು ತೊಡಗಿದಳು. ನಾನು ಬೇಗಬೇಗ ತಯಾರಾಗಿ ಹೊರಟೆ. ಕಾರ್ಕಳದ ಯಾವುದೋ ಮೂಲೆಯ ಮನೆಯೊಂದಕ್ಕೆ ನನ್ನನ್ನು ರೇಶ್ಮಾ ಕರೆದುಕೊಂಡುಹೋದಳು. ಆ ಮನೆಯ ಮೊದಲನೆಯ ಮಹಡಿಯಲ್ಲಿಯೆ ನಾನು ಮೊದಲನೆ ಬಾರಿಗೆ ಹರೀಶನನ್ನು ಕಂಡಿದ್ದು. ಕುರುಚಲುಗಡ್ಡ, ಮಾಸಿದ ಜೀನ್ಸ್ ಹಾಗೂ ಕೊಳಕು ಟಿ-ಶರ್ಟು ಧರಿಸಿದ್ದ ಕಪ್ಪಗಿನ ಕಾಂಪ್ಲೆಕ್ಶನ್ನಿನ ಕುಳ್ಳ ಆಸಾಮಿ. ರೇಶ್ಮಾಳಿಗೆಂದೆ ಕಾಯುತ್ತ ಕುಳಿತಿದ್ದ. ನನ್ನ ಜತೆಕಂಡು ಸ್ವಲ್ಪ ಆಶ್ಚರ್ಯವೆನಿಸಿದರು ತನ್ನ ಮನೆಯ ಸರ್ವೆ ಮಾಡಿಸಿ ಕಂಪ್ಯೂಟರೊಂದನ್ನು ಆನ್ ಮಾಡಿ ಅದರ ಬಗ್ಗೆ ಕೆಲವು ಮಾತು ಹೇಳಿದ. ಅದೊಂದು ಸೈಬರ್ ಕೆಫೆಯೋ ಕಂಪ್ಯೂಟರ್ ಟ್ರೈನಿಂಗ್ ಸೆಂಟರೋ ನೆನಪಾಗುತ್ತಿಲ್ಲ. ಆದರೆ ಆ ಜಾಗದಲ್ಲಿ ಸುಮಾರು ಕಂಪ್ಯೂಟರುಗಳಿದ್ದವು ಮತ್ತು ನಾನು ಅದೇ ಮೊದಲ ಸಾರಿ ಕಂಪ್ಯೂಟರೊಂದನ್ನು ಮುಟ್ಟಿ ರೋಮಾಂಚನ ಅನುಭವಿಸಿದ್ದೆ. ಆದರೆ ಯಾವಾಗ ಹರೀಶ್ ತನ್ನ ಬಗ್ಗೆ ಮಾತನಾಡಲು ಶುರುಮಾಡಿದನೋ, ನನಗೆ ಅಲ್ಲಿ ಕೂರುವುದು ದೂರವಿರಲಿ, ಒಂದು ನಿಮಿಷ ನಿಲ್ಲುವುದೂ ದುಸ್ತರವೆನ್ನಿಸತೊಡಗಿತು. ನಾನು ಯಾಕೆ ಹೋಗಿಹೋಗಿ ಇವಳ ಮಾತು ಕೇಳಿ ಈ ಜಾಗಕ್ಕೆ ಬಂದೆನೋ ಎಂದು ನನಗೇ ಪರಿಪರಿಯಾಗಿ ಶಾಪಹಾಕಲು ತೊಡಗಿದೆ. ವಿಪರೀತ ಹಿಂಸೆಯೆನಿಸತೊಡಗಿತು.

ಏಕೆಂದರೆ ಆತ ಮಾತನಾಡುತ್ತಿದ್ದಿದ್ದು ತನ್ನ ಆತ್ಮಹತ್ಯೆಯ ಹಲವಾರು ಪ್ರಯತ್ನಗಳ ಬಗ್ಗೆ! ಯಾರಾದರು ಹೀಗೂ ಮಾತನಾಡಬಹುದು ಎಂಬ ಕಲ್ಪನೆಯೂ ಇಲ್ಲದ ನಾನು ಅವಾಕ್ಕಾಗಿದ್ದೆ. ಆತ ಇದ್ದಕ್ಕಿದ್ದ ಹಾಗೆ ನನ್ನೆಡೆ ತಿರುಗಿ, “ನಿನಗೆ ಎಲ್ಲದಕ್ಕಿಂತ ಈಸಿಯಾಗಿ ಸಾಯೋದು ಹೇಗೆ ಗೊತ್ತುಂಟ? ನಾನು ಹೇಳ್ತೇನೆ. ರಾತ್ರಿ ಒಂದು ಬಾಟಲು ವಿಸ್ಕಿ ತಗೊ, ಜೊತೆಗೆ ಸ್ವಲ್ಪ ನೇಂದ್ರಬಾಳೆಹಣ್ಣು ತಗೊ. ಸ್ವಲ್ಪ ವಿಸ್ಕಿ ಕುಡಿ, ಬಾಳೆಹಣ್ಣು ತಿನ್ನು ಹಾಗೇ ಮಾಡ್ತಾ ಹೋಗು. ಬೆಳಿಗ್ಗೆ ಆಗುದ್ರೊಳಗೆ ನಿಂಗೆ ಹಾರ್ಟ್ ಅಟ್ಯಾಕ್!! ಗೊತ್ತೇ ಆಗುದಿಲ್ಲ” ಎಂದ. ಮದ್ಯದ ಬಗ್ಗೆ ಆಗ ಬೇಸಿಕ್ ತಿಳುವಳಿಕೆಯೂ ಇರದ ನನಗೆ ಈತ ನನಗೇಕೆ ಇದನ್ನೆಲ್ಲ ಹೇಳುತ್ತಿದ್ದಾನೆ ಎಂದು ಭೀತಿಯಾಯಿತು. ಅಲ್ಲದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಇದಲ್ಲದೆ ಅತ ತನಗೆ ಕೈಕೊಟ್ಟ ಹುಡುಗಿ, ಅಮೇಲಿನ ಹತಾಶೆ, ಡ್ರಗ್ಸ್ ಚಟ, ಕುಡಿತ, ಮೂರು ಆತ್ಮಹತ್ಯೆ ಪ್ರಯತ್ನಗಳು ಇತ್ಯಾದಿಗಳ ಬಗ್ಗೆ ಹೇಳುತ್ತಾ ಹೋಗುತ್ತಿದ್ದರೆ ನಾನು ’ದೇವರೇ, ಈತನ ಒಂದು ಆತ್ಮಹತ್ಯೆಯನ್ನಾದರೂ ಯಶಸ್ವಿಯನ್ನಾಗಿ ನಡೆಸಿಕೊಡಬಾರದಾಗಿತ್ತೆ? ನಾನಾದರು ಈ ಪ್ರಾರಬ್ಧದಿಂದ ಪಾರಾಗಬಹುದಿತ್ತು’ ಎಂದು ಪ್ರಾರ್ಥಿಸುತ್ತ ರೇಶ್ಮಾಳೆಡೆ ನೋಡಿದೆ. ಆಕೆ ಅತನ ತೊಂದರೆಗಳಿಗೆ ಸಂತಾಪಸೂಚಿಸುತ್ತ ಇನ್ನೇನು ಗೋಳೋ ಎಂದು ಅಳುವವಳ ಹಾಗೆ ಕಂಡಳು. ನಾನು ನನ್ನ ತಂದೆತಾಯಂದಿರನ್ನೂ. ಹಾಸ್ಟೆಲ್ಲಿನ ವಾರ್ಡನ್ ಪ್ರೊ. ತಂಕಮ್ಮ ನಾಯರರನ್ನೂ ನೆನಪಿಸಿಕೊಂಡು ಗಟ್ಟಿ ಮನಸ್ಸು ಮಾಡಿ “ರೇಶ್ಮಾ, ನಾನು ಹೊರಗಿರ್ತೇನೆ. ನೀನು ಮಾತನಾಡಿ ಬಾ” ಎಂದು ಒಂದೇ ಉಸಿರಿಗೆ ಒದರಿ ಹೊರಗೋಡಿದೆ. ಕೆಲವೇ ನಿಮಿಷಗಳಲ್ಲಿ ಹೊರಬಂದ ರೇಶ್ಮಾ -”ಪೂರ್ ಚ್ಯಾಪ್. ಐ ಹೋಪ್ ಹಿ ವಿಲ್ ನೆವರ್ ಟ್ರೈ ಟು ಕಮಿಟ್ ಸೂಯಿಸೈಡ್” ಎಂದಳು. ನಾನು “ನಡಿನಡಿ, ಇಫ್ ಹಿ ರಿಯಲಿ ವಾಂಟೆಡ್ ಟು, ನಿನಗೆ ಹೇಳುತ್ತಿರಲಿಲ್ಲ. ಪುನಃ ಹೀಗೆಲ್ಲ ಇಂಥವರ ಹತ್ತಿರ ಹೋಗಬೇಡ ಪ್ಲೀಸ್!” ಎಂದೆ. ಆಕೆ ಮುದ್ದಾಗಿ ’ಓಕೆ’ ಎಂದವಳೆ ಹೋಟೆಲೊಂದಕ್ಕೆ ಎಳೆದುಕೊಂಡುಹೋಗಿ ಗೋಭಿಮಂಚೂರಿ ತಿನ್ನಿಸಿದಳು.

Comments (6)

ಪಡಖಾನೆಯ ಹುಡುಗಿ - ಸಂಜೆಗಣ್ಣಿನ ಮಾತುಗಳು

51pl-wrla3l1.jpg

ನಿನ್ನ ಕಣ್ಣು ಥೇಟು
ಪುರಾತನ ಮಾಂತ್ರಿಕನ ಹಾಗೆ
ನೂರೆಂಟು ತಾರೆಗಳನ್ನು
ತುಂಬಿಟ್ಟುಕೊಂಡು ಶತಮಾನಗಳ
ಭರವಸೆ ಸೂಸುತ್ತ
ನಿಗೂಢವಾಗಿ ಮಿನುಗುತ್ತವೆ
***

ಈ ಸೆಳೆತದ ಹುಚ್ಚು
ನಮ್ಮನ್ನು ಕಾಡಿಸುವುದೆ ಅಥವಾ
ನಾವು ಈ ಸೆಳೆತದ ಹುಚ್ಚಿನೊಡನೆ
ಆಟವಾಡುತ್ತಿದ್ದೇವೆಯೆ
ಅರಿವಾಗದೆ
ಒಬ್ಬರನೊಬ್ಬರು ಬಳಸುತ್ತೇವೆ
***

ನನಗೆ ಅವಳಲ್ಲಿ ಮತ್ಸರವಿಲ್ಲ
ಎಂದು ನಾನು ಮಿಥ್ಯೆ ನುಡಿದರೆ
ಕಟುಕನೆ,
ನಿನ್ನ ತುಂಟತನಗಳ ಸಾವಿರ ಕಥೆ
ಹೇಳಿ ಒಳಗೊಳಗೇ ನಕ್ಕು ಕಾಡುವೆಯಲ್ಲ!!
***

ಅಲ್ಲಿ ನಿನ್ನ ಬಗಲಲ್ಲಿ
ಮಲಗಿರುವವಳ ಮೇಲೆ
ನಾನು ವಿಷ ಕಾರುವುದಿಲ್ಲ
ಇಲ್ಲಿ ನನ್ನೆದೆಗೆ ಬೆನ್ನೊತ್ತಿ
ಮಗುವಂತೆ ನಕ್ಕ ನಿನ್ನ ನೆನೆದು
ಮದಿರೆಯ ಬಟ್ಟಲಿಗೆ ತುಟಿಯಿಡುತ್ತೇನೆ.

Comments (4)

ಲಾಲಾ ರುಖಳ ಪ್ರೇಮಗಾಥೆ.

wwwcolumbiaedu.jpg

‘ಹಸನ್ ಅಬ್ದಾಲ್’ ಎನ್ನುವುದು ಪಾಕಿಸ್ತಾನದ ಉತ್ತರ ಪಂಜಾಬ್ ಪ್ರಾಂತ್ಯದ ಒಂದು ಮುಖ್ಯ ಐತಿಹಾಸಿಕ ತಾಣ. ಶೇರ್ ಶಾ ಸೂರಿ ನಿರ್ಮಿಸಿದ ಗ್ರಾಂಡ್ ಟ್ರಂಕ್ ರಸ್ತೆಯು ಕರಾಕೊರಂ ಹೈವೇಯನ್ನು ಸೇರುವ ಪ್ರದೇಶದಲ್ಲಿರುವ ಈ ಜಾಗ ತನ್ನ ‘ಶ್ರೀ ಪಂಜಾ ಸಾಹಿಬ್’ ಗುರುದ್ವಾರಾದಿಂದ ಪ್ರಸಿದ್ಧಿ ಪಡೆದಿದೆ. ಸಿಖ್ ಧರ್ಮದ ಪ್ರಮುಖ ತೀರ್ಥಸ್ಥಾನವಾದ ಇಲ್ಲಿಗೆ ಬೈಸಾಖಿ ಹಬ್ಬದ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಖ್ಖರು ಭೇಟಿನೀಡುತ್ತಾರೆ. ಅಲ್ಲಿಯ ಬೆಟ್ಟವೊಂದರ ಮೇಲೆ ವಾಸಿಸುತ್ತಿದ್ದ ‘ಬಾಬಾ ವಲಿ ಕಾಂಧಾರಿ’ ಎಂದು ಹೆಸರುಪಡೆದಿದ್ದ 15ನೇ ಶತಮಾನದ ಬಾಬಾ ಹಸನ್ ಅಬ್ದಾಲ್ ಎಂಬ ಸೂಫೀ ಸಂತರ ಹೆಸರೇ ಈ ಊರಿಗೆ ಅಂಟಿಕೊಂಡಿತು. 

ನನ್ನನ್ನು ಈ ಊರಿಗೆ ಆಕರ್ಷಿಸಲು ಕಾರಣವೇ ಬೇರೆ. ಬಾಬಾ ಅಬ್ದಾಲ್ ವಾಸಿಸುತ್ತ ಇದ್ದ ಬೆಟ್ಟದ ಬಳಿಯಲ್ಲೆ ಒಂದು ಉದ್ಯಾನವನ. ಅಲ್ಲಿ ಒಂದು ಸಮಾಧಿ. ಸಮಾಧಿಯ ಎದುರಿಗೆ ದೈತ್ಯ ಮಾಹಶೀರ್ ಮೀನುಗಳ ಕೊಳ. ಈ ಸಮಾಧಿ ಲಾಲಾ ರುಖಳದ್ದು ಎಂದು ಪ್ರತೀತಿ. ಆದರೆ ಇತಿಹಾಸ ಬಲ್ಲವರು ಮಾತ್ರ ಈ ಜಾಗದಲ್ಲಿ ಲಾಲಾ ರುಖಳ ಸಮಾಧಿ ಇರಲು ಸಾಧ್ಯವೇ ಇಲ್ಲ, ಯಾರೋ ಸುಮ್ಮನೆ ಮಾಡಿರುವ ಕೆಲಸ ಇದು ಎಂದು ವಾದಿಸುತ್ತಾರೆ. ಯಾರೂ ಸಮಾಧಿಯನ್ನು ಇಂದಿನವರೆಗೆ ಪರೀಕ್ಷಿಸಿಲ್ಲ. ಚಕ್ರವರ್ತಿ ಅಕ್ಬರನ ಮಂತ್ರಿಯೊಬ್ಬ ಈ ಸಮಾಧಿ ಹಾಗೂ ಕೊಳವನ್ನು ಕಟ್ಟಿಸಿದ ಎನ್ನುತ್ತಾರೆ. ಹಾಗಿದ್ದರೆ ಎಲ್ಲಿದೆ ಲಾಲಾ ರುಖಳ ನಿಜವಾದ ಸಮಾಧಿ? ಯಾರೀ ಲಾಲಾ ರುಖ್?

ಲಾಲಾ ರುಖಳ ಬಗ್ಗೆ ಮೊದಲಬಾರಿಗೆ ನಾನು ಕೇಳಿದ್ದು ಔರಂಗಜೇಬನ ಬಗ್ಗೆ ಓದುವಾಗ. ಲಾಲಾ ರುಖ್ ಆತನ ಮಗಳು. ಅಸಾಧಾರಣ ರೂಪವಂತೆ, ಗುಣವಂತೆ. ಸ್ವಭಾವತಃ ದಿಟ್ಟೆ. ಪ್ರಚಲಿತ ಕಥೆಗಳ ಪ್ರಕಾರ ಈಕೆ ‘ಬ್ಯಾಕ್ಟ್ರಿಯ’ದ (ಬುಖಾರಿಯ, ಈಗಿನ ಬುಖಾರಾ, ಉಜ್ಬೆಕಿಸ್ತಾನ) ರಾಜನನ್ನು ವರಿಸುವವಳಿದ್ದಳು. ಕೆಲವರು ಆಕೆಯ ವಿವಾಹ ನಿಶ್ಚಯವಾಗಿದ್ದು ಕಾಶ್ಮೀರದ ರಾಜನೊಡನೆ ಎನ್ನುತ್ತಾರೆ. ಕೆಲವರು ಬ್ಯಾಕ್ಟ್ರಿಯ ರಾಜ್ಯದ ಪ್ರದೇಶವ್ಯಾಪ್ತಿಯಲ್ಲಿಯೇ ಕಾಶ್ಮೀರವೂ ಇದ್ದದ್ದು ಎನ್ನುತ್ತಾರೆ. ಕಾಶ್ಮೀರೀ ಸಾಹಿತ್ಯದಲ್ಲಿ ‘ಲಾಲಾ ರುಖ್’ ಎಂಬ ಕವಯಿತ್ರಿಯ ಅದ್ಭುತ ಕವಿತೆಗಳು ಇಂದಿಗೂ ಮನೆಮಾತಾಗಿವೆ. ಕಾಶ್ಮೀರದಲ್ಲಿ ‘ಲಾಲಾ ರುಖ್’ ಪರಿಚಿತ ಹೆಸರು.  ಈಕೆ ಮದುವೆಗೆ ಮುಂಚೆ ತಾನು ವರಿಸುವವನನ್ನು ಭೇಟಿಯಾಗಲು ಅಪೇಕ್ಷೆಪಟ್ಟು ಆತನ ರಾಜ್ಯಕ್ಕೆ ಪ್ರಯಾಣ ಹೊರಟಳು. ದಾರಿಯಲ್ಲಿ ’ಫೆರಾಮೊಝ್’ಎಂಬ ಹೆಸರಿನ ಯುವಕ ಭೇಟಿಯಾದ. ಆತನೋ ಹೇಳಿಕೇಳಿ ಒಬ್ಬ ಅಪೂರ್ವ ಕವಿ. ಲಾಲಾ ರುಖಳಿಗೂ ಅಪಾರ ಸಾಹಿತ್ಯಾಸಕ್ತಿ. ಆತ ರಾಜಕುಮಾರಿಗಾಗಿ ಕಥೆಗಳನ್ನು ಕವಿತೆಗಳನ್ನಾಗಿಸಿ ಹಾಡಿದ. ಆಕೆ ಮನಸೋತು ತನ್ನ ಹೃದಯವನ್ನು ಆತನಿಗೆ ಒಪ್ಪಿಸಿದಳು. ಆದರೇನು? ಬ್ಯಾಕ್ಟ್ರಿಯದ ರಾಜನ ಅಂತಃಪುರ ಆಕೆಯ ಬರವನ್ನೇ ಕಾದಿತ್ತು. ಈಕೆಗೆ ಇಕ್ಕಟ್ಟು. ಫೆರಾಮೊಝ್ ಆಕೆಗೆ ವಿದಾಯ ಹೇಳಿದ. ಆಕೆ ಅರಮನೆ ಪ್ರವೇಶಿಸಿದ ಕೂಡಲೆ ವಿರಹವೇದನೆ ತಾಳಲಾರದೆ ಮೂರ್ಛೆಹೋದಳು. ಯಾವುದೋ ಪರಿಚಿತ ಸ್ವರವೊಂದು ಕರೆವ ದನಿಗೆ ಎಚ್ಚರವಾಯಿತು. ಕಣ್ತೆರೆದರೆ ಫೆರಾಮೊಝನ ಪ್ರೀತಿ ತುಂಬಿದ ನಗುಮುಖ. ಫೆರಾಮೊಝ್ ಬೇರಾರೂ ಅಲ್ಲ, ತಾನು ವರಿಸಬೇಕಾದ ಬ್ಯಾಕ್ಟ್ರಿಯದ ರಾಜನೇ ಎಂದು ತಿಳಿದು ಲಾಲಾ ರುಖಳಿಗೆ ನಸುನಾಚಿಕೆ.

ಹಿಂದಿ ಫಿಲ್ಮೊಂದರ ಮೇಲಿನ ಕಥೆಯಂತಿದೆ ಅಲ್ಲವೆ? 1958ರಲ್ಲಿ ನಿರ್ಮಿಸಲಾದ ‘ಲಾಲಾ ರುಖ್’ ಎಂಬ ಚಲನಚಿತ್ರದಲ್ಲಿ ಸ್ವತಃ ಪೃಥ್ವೀರಾಜ್ ಕಪೂರರೇ ನಟಿಸಿದ್ದಾರೆ. ಐರಿಶ್ ಕವಿ ಥಾಮಸ್ ಮೂರ್ ಈ ಕಥೆಯ ಮೇಲೇ ಆಧರಿತವಾಗಿರುವ ‘ಲಲ್ಲಾ ರೂಖ್’ (1817) ಎಂಬ ಮಹಾಕವಿತೆಯನ್ನು ಬರೆದಿದ್ದಾನೆ. ಪ್ರಪಂಚದ ಎಲ್ಲಾ ಮುಖ್ಯ ಭಾಷೆಗಳಿಗೆ ಈ ಮಹಾಕವಿತೆ ಅನುವಾದಿಸಲ್ಪಟ್ಟಿದೆ. ಸಂಗೀತಜ್ನರು ಈ ಕಥೆಯ ಮೇಲೆ ಒಪೆರಾಗಳನ್ನು ರಚಿಸಿ ಪ್ರದರ್ಶಿಸಿದ್ದಾರೆ, ತನ್ನ ‘ರೊಮಾಂಟಿಕ್ ಓರಿಯೆಂಟಲಿಸ್ಟ್’ ಶೈಲಿಗೆ ಹೆಸರುವಾಸಿಯಾಗಿರುವ ಮೂರನ ‘ಲಲ್ಲಾ ರೂಖ್’ ನಾಲ್ಕು ಭಾಗಗಳಲ್ಲಿದೆ - ‘ದ ಸ್ಟೋರಿ ಆಫ್ ದಿ ವೆಯಿಲ್ಡ್ ಪ್ರೊಫೆಟ್ ಆಫ್ ಖೊರಾಸಾನ್’, ‘ದ ಸ್ಟೋರಿ ಆಫ್ ಪ್ಯಾರಾಡೈಸ್ ಅಂಡ್ ದ ಪೆರಿ’, ‘ದ ಸ್ಟೋರಿ ಆಫ್ ದ ಫೈರ್ ವರ್ಶಿಪರ್ಸ್’ ಹಾಗೂ ‘ದ ಸ್ಟೋರಿ ಆಫ್ ದ ಲೈಟ್ ಆಫ್ ದ ಹರಂ’. ಫೆರಾಮೊಝ್ ಲಾಲಾ ರುಖಳಿಗೆ ಹೇಳುವ ನಾಲ್ಕು ಕಥಾಕವಿತೆಗಳಿವು. ಇಲ್ಲಿಯ ‘ದ ಸ್ಟೋರಿ ಆಫ್ ದ ಫೈರ್ ವರ್ಶಿಪರ್ಸ್’ ಭಾಗದಲ್ಲಿ ಒಂದು ಪ್ರೇಮಕಥೆಯಿದೆ. ಪರ್ಶಿಯನ್ ಪಡೆಯ ನಾಯಕ ‘ಹಾಫೆದ’ನಿಗೆ ಮುಸ್ಲಿಮರ ಅಮೀರನೊಬ್ಬನ ಮಗಳಾದ ‘ಹಿಂದಾ’ಳ ಮೇಲೆ ಪ್ರೇಮ. ವಿಪರ್ಯಾಸವೆಂದರೆ ಅಗ್ನಿಯನ್ನು ಪೂಜಿಸುವ ಪರ್ಶಿಯನರಿಗೂ ಅವರನ್ನು ಆಳುವ ಮುಸ್ಲಿಮರಿಗೂ ಬದ್ಧದ್ವೇಷ.. ಈ ಭಾಗವು ಕೇವಲ ಪ್ರೇಮಕಥೆಯಾಗಿ ಉಳಿಯುವುದಿಲ್ಲ. ಐರ್ಲೆಂಡಿನ ಸ್ವತಂತ್ರ ನಿಲುವು ಹಾಗೂ ಅವರನ್ನಾಳುತ್ತಿದ್ದ ಇಂಗ್ಲೆಂಡಿನ ದಬ್ಬಾಳಿಕೆಯ ಸಂಕೇತವಾಗಿ ನಿಲ್ಲುತ್ತದೆ. ಈ ಕವಿತೆ ಶಾರ್ಲಟ್ ಬ್ರಾಂಟೆಯಂಥ ಉತ್ತಮ ಲೇಖಕಿಯ ಬರವಣಿಗೆಯ ಮೇಲೂ ತನ್ನ ಪ್ರಭಾವ ಬೀರಿತು.

ಲಾಲಾ ರುಖ್ ಬ್ಯಾಕ್ಟ್ರಿಯದ ರಾಜನನ್ನು ಮದುವೆಯಾಗಿದ್ದೇ ನಿಜವಾದರೆ ಅಕೆಯ ಸಮಾಧಿ ಎಲ್ಲಿದೆ? ಆಕೆಯ ಸಮಾಧಿಯ ಬಗ್ಗೆ ಗೊಂದಲವೇಕೆ? ಮೊಘಲ್ ವಂಶದ ಈ ರಾಜಕುಮಾರಿ ಎಲ್ಲಿ ಅಜ್ನಾತಳಾಗಿ ಪವಡಿಸಿದ್ದಾಳೆ? ಇತಿಹಾಸತಜ್ನರೇ ಸರಿಯಾದ ಪರೀಕ್ಷೆಗಳನ್ನು ನಡೆಸಿ ಉತ್ತರ ಹೇಳುವವರೆಗೂ ನಾವು ಕಾಯಬೇಕಿದೆ.

*ಚಿತ್ರ: ಥಾಮಸ್ ಮೂರನ ಲಾಲಾ ರುಖ್.
ಚಿತ್ರಕೃಪೆ: www.columbia.edu 

Comments (2)

« Previous entries