Archive for May, 2008

ನೀನಾವೆಡೆ ಓಡುತ್ತಿರುವೆ, ಓ ಪಾಪಿ ಮನುಷ್ಯನೆ.


ಆಂಖೋನ್ ಕೆ ಸಾಗರ್
ಹೋಂಟೋನ್ ಕೆ ಸಾಗರ್
ಲೇ ಡೂಬೇ ಹಮೇ…

ಪಾಕಿಸ್ತಾನ ಮೂಲದ ‘ಫ್ಯೂಜೋನ್’ ಬ್ಯಾಂಡಿನ ಹಾಡು ಕೇಳುತ್ತ ಮೈಮರೆತಿದ್ದೇನೆ. ಮನೆಯವರೆಲ್ಲ ಬೇಸತ್ತುಹೋಗಿ ಈಗೀಗ ಊಟಕ್ಕೆ, ತಿಂಡಿಗೆ ಕರೆಯುವುದನ್ನು ಕೂಡ ಬಿಟ್ಟುಬಿಟ್ಟಿದ್ದಾರೆ. ನನಗೆ ಆಗಾಗ ತಗುಲಿಕೊಳ್ಳುವ ದರವೇಶಿತನದ ರೋಗ ಕಳೆದ ತಿಂಗಳಿನಿಂದ ಜಾಸ್ತಿಯಾಗಿರುವುದೇ ಇದಕ್ಕೆ ಕಾರಣ ಎಂದು ನನ್ನ ಭಾವನೆ. ಹೀಗಾದಾಗೆಲ್ಲ ವಟವಟ ಎಂದು ಸಾಮಾನ್ಯವಾಗಿ ತಿರುಗುತ್ತಿರುವ ನನ್ನ ಮಾತು ಕಡಿಮೆಯಾಗುತ್ತದೆ. ಊಟತಿಂಡಿಗಳ ಪರಿವೆ ಇರುವುದಿಲ್ಲ. ಇದ್ದಕ್ಕಿದ್ದಹಾಗೆ ಏನೋ ನೆನೆಸಿಕೊಂಡು ಎದ್ದುಹೋಗಿಬಿಡುತ್ತೇನೆ. ಮಧ್ಯರಾತ್ರಿಯಲ್ಲಿ ಎದ್ದುಕೂತು ಹಾಡು ಗುನುಗುವುದೋ, ಕೇಳುವುದೋ, ಇಲ್ಲವೇ ದೀಪ ಹಚ್ಚಿಕೊಂಡು ಬರೆಯುವುದೋ ಮಾಡುತ್ತ ಇರುತ್ತೇನೆ. ನನ್ನವ ಒಂದು ನಿಟ್ಟುಸಿರು ಬಿಟ್ಟು ನಕ್ಕು ಮಗ್ಗುಲು ಬದಲಾಯಿಸಿ ತನ್ನ ಮಗುವಿನಂತಹ ನಿದ್ದೆಗೆ ಜಾರುತ್ತಾನೆ. ಅವನೊಬ್ಬನಿಗೆ ಮಾತ್ರ ಇದೆಲ್ಲ ಚೆನ್ನಾಗಿ ಅರ್ಥವಾಗುತ್ತದೆ.

ಎಂಟು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಮೈಸೂರಿನ ರೆಸ್ಟುರಾವೊಂದರ ಮೂಲೆಯಲ್ಲಿ ಕೂತು ನಾನು ಆತನಲ್ಲಿ ಇದುವರೆಗೆ ಏನು ಕಂಡೆ, ಇದರಿಂದ ನನಗೇನು ಫಾಯಿದೆ ಎಂದು ಮುಂತಾಗಿ ಒಂದು ಕ್ಷಣವೂ ತೂಕಹಾಕಲು ಹೋಗದೆ ಸುಮ್ಮನೆ ಒದರಿದ್ದೆ – ’ನನಗೆ ಇದೆಲ್ಲ ಸಾಕಾಗಿದೆ, ಯಾವಾಗ ಮದುವೆಯಾಗೋಣ?’ ಆತ ರೆಪ್ಪೆಯನ್ನೂ ಮಿಟುಕಿಸದೆ ಅದೇ ಪ್ರಶ್ನೆಗೋಸ್ಕರ ವರುಷಗಳಿಂದ ಕಾಯುತ್ತ ಇದ್ದವನಂತೆ ಸಣ್ಣಗೆ ನಕ್ಕಿದ್ದ. ಆತ ಧರಿಸಿದ್ದ ಕಪ್ಪು ಟೀಶರ್ಟಿನ ಮೇಲಿದ್ದ ‘ಸ್ಪೀಡ್ ಡೆಮನ್’ ಎಂಬ ಗಾಥಿಕ್ ಶೈಲಿಯ ಲೇಬಲ್ಲನ್ನೆ ದಿಟ್ಟಿಸುತ್ತ ಆತಂಕದಿಂದ ಅವನ ಉತ್ತರಕ್ಕೆ ಕಾಯುತ್ತಿದ್ದ ನನಗೆ ಲೈಫಿನಲ್ಲಿ ಮೊದಲ ಬಾರಿಗೆ ಗಲಿಬಿಲಿ ತುಂಬಿದ ನಾಚಿಕೆಯಂಥ ಭಾವನೆಯಾಗಿತ್ತು. ‘ಓ ಮೆರೇ ದಿಲ್ ಕೆ ಚೈನ್.. ಚೈನ್ ಆಯೆ ಮೆರೆ ದಿಲ್ ಕೊ ದುವಾ ಕೀಜಿಯೇ..’ ನೆನಪಾಗಿ ನಕ್ಕಿದ್ದೆ. ಆಗ ಧ್ವನ್ಯಾಲೋಕದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ನನಗೆ ಪ್ರೊ.ಸಿಡಿಎನ್ ಒಂದು ಮುಂಜಾವ ಜತೆಕೂತು ಟೀ ಕುಡಿಯುತ್ತಿರುವಾಗ ಅ ಹುಡುಗ ಯಾರು ಎಂದು ಸೂಕ್ಷ್ಮವಾಗಿ ಕೇಳಿದರು. ಇತರರಿಂದ ಅವರ ಮೂಡುಗಳ ಬಗ್ಗೆ ತರತರಹದ ಕಥೆಗಳನ್ನು ಕೇಳಿ ಬೇಕಾದಷ್ಟು ವಾರ್ನಿಂಗುಗಳನ್ನು ಅದಾಗಲೇ ಪಡೆದಿದ್ದ ನಾನು ಬೆವೆತುಹೋಗಿದ್ದೆ. ಆದರೆ ಸುಳ್ಳುಹೇಳಲು ಧೈರ್ಯಬರದೆ ಉಗುಳುನುಂಗುತ್ತ ನಿಜ ಹೇಳಿಬಿಟ್ಟೆ. ಎಲ್ಲವನ್ನೂ ತಲೆಯಾಡಿಸುತ್ತ ಕೇಳಿದ ಅವರು ’ಮೈಸೂರಿನಲ್ಲಿ ಒಬ್ಬಳೆ ಇರುತ್ತಿದ್ದೀಯ, ಹುಷಾರಾಗಿರು’ ಎಂದಷ್ಟೆ ಹೇಳಿ ಯಾವುದೋ ಪತ್ರ ಬರೆಯಲು ಕುಳಿತರು. ಬದುಕಿದೆಯಾ ಬಡಜೀವವೆ ಎಂದು ಅಲ್ಲಿಂದ ಓಟಕಿತ್ತೆ. ನನ್ನ ತಂದೆತಾಯಂದಿರ ಒಪ್ಪಿಗೆಯಿಲ್ಲದೆಯೆ ಮದುವೆ ನಿಶ್ಚಯವಾದಾಗ ಪ್ರೊಫೆಸರರ ಆಶೀರ್ವಾದ ಪಡೆಯಲು ಹೋಗಿದ್ದೆವು. ಪ್ರೊ.ಸಿಡಿಎನ್ ಮತ್ತು ಅವರ ಪತ್ನಿಯವರು ಆಶೀರ್ವದಿಸಿ ನನ್ನ ತಂದೆತಾಯಂದಿರನ್ನು ಒಲಿಸಿಕೊಳ್ಳಬೇಕೆಂದು ಬುದ್ಧಿವಾದ ಹೇಳಿದರು. ನಾನೂ ಇವನೂ ಮುಖಮುಖ ನೋಡಿಕೊಂಡು ಸುಮ್ಮನಾಗಿದ್ದೆವು.

ಬೆಳಜಾವ ನಾಲ್ಕು ಗಂಟೆ. ಇದನ್ನೆಲ್ಲ ಥೇಟು ದರವೇಶಿಯ ಥರ ಧ್ಯಾನಿಸಿಕೊಂಡು ಕುಳಿತಿದ್ದೇನೆ. ಮಗಳು ಕನಸು ಕಾಣುತ್ತ ‘ಸುಂ ಸುಂ ಸಾ.. ಜೇನುನೊಣ ಬಾ..’ ಎಂಬ ಹಾಡೊಂದನ್ನು ಜೊಲ್ಲುಸುರಿಯುವ ಬಾಯಲ್ಲಿ ತೊದಲುತ್ತ ಇದ್ದಾಳೆ. ನನಗೆ ಇವಳು ನನ್ನ ತರಹವೇನೇ ಎನ್ನಿಸಿ ಸ್ಥಬ್ದಳಾಗಿದ್ದೇನೆ. ಇಲ್ಲಿಯವರೆಗಿನ ನನ್ನ ಕೋಪ, ತಟವಟ, ಹುಚ್ಚುತನಗಳನ್ನೆಲ್ಲ ಸಾವಿರಾರುಸಾರಿ ತಡೆದು, ಜ್ವರಗಳಲ್ಲಿ ಅಮ್ಮನಂತೆ ಸಂತಯಿಸಿ, ಮಲಗುವ ಮುನ್ನ ಮೂಗಿಗೆ ಟೈಗರ್ ಬಾಮು ಹಚ್ಚದಿದ್ದರೆ ಮಾರನೆ ದಿನ ಮಾತು ಬಿಡುವವನ ಪ್ರೀತಿ ಎಂದಿಗೂ ನನಗೆ ಅರ್ಥವಾಗದು ಅನ್ನಿಸುತ್ತದೆ. ಕೆಲಕಾಲದ ಹಿಂದೆ ಮೈಸೂರಿನಲ್ಲಿ ಸ್ನೇಹಿತನೊಬ್ಬನ ಮೇಲೆ ತೀರಾ ಇಂಪಲ್ಸಿವ್ ಆಗಿ ಕೋಪಮಾಡಿಕೊಂಡು ಜಗಳವಾಡಿ ಮೊಬೈಲು ಸ್ವಿಚ್ ಆಫ್ ಮಾಡಿಕೊಂಡು ದಿನವೆಲ್ಲ ಸುಮ್ಮನೆ ಬೀದಿಗಳಲ್ಲಿ ಅಲೆದಾಡಿ, ’ಯು ಆರ್ ಬಿಹೇವಿಂಗ್ ಲೈಕ್ ಅ ರೆಚೆಡ್ ವುಮನ್’ ಎಂದು ಮುಂತಾಗಿ ಬಲ್ಲವರೊಬ್ಬರ ಕೈಲಿ ಬೈಯಿಸಿಕೊಂಡ ಮೇಲೆ ಹಗುರವೆನ್ನಿಸಿ ಸುಮ್ಮನಾದ ಹೆಣ್ಣು ನಾನು. ನನ್ನ ಪುನಃ ಪುನಃ ತಪ್ಪುಗಳನ್ನ ಮಾಡಿ ಯಾರ ಕೈಲಾದರು ಬಾಯಿಗೆ ಬಂದಹಾಗೆ ಅನ್ನಿಸಿಕೊಳ್ಳುವ ಬುದ್ಧಿ.

ಕಿವಿಗಳಲ್ಲಿ ‘ಜಿ. ಲವ್’ ಎಂಬ ಗಾಜಿನಂಥ ಕಣ್ಣುಗಳ ಸ್ಫುರದ್ರೂಪಿ ಹಾಡುಗಾರ ಹಾಡಿರುವ ‘ಓ ಸಿನರ್ ಮ್ಯಾನ್, ವೇರ್ ಡು ಯು ರನ್ ಟು?’ ಎಂಬ ಹಾಡು ಸುಮ್ಮನೆ ಓಲಾಡುತ್ತಿದೆ.

ಚಿತ್ರಕೃಪೆ: www.thebiscuitfactory.com  
 

Comments (9)

ಹೀಗೆ ಯೋಚಿಸುವುದು ತಪ್ಪೋ ಸರಿಯೊ?

 

ಕೆಲವೊಂದು ವಿಷಯಗಳು ಬೇಡವೆಂದರು ನಮ್ಮ ಮೆದುಳಿನೊಳಗೆ ಅಚ್ಚೊತ್ತಿದ ಹಾಗೆ ಕೂತುಬಿಡುತ್ತವೆ. ಮರೆಯಲೇ ಆಗದು. ‘ಅದೆಷ್ಟು ಹಳೇದನ್ನೆಲ್ಲ ನೆನಪಿಡ್ತೀ!’ ಎನ್ನುವ ನನ್ನ ಸ್ನೇಹಿತರಿಗೆ ನಾನು ವಿಪರೀತ ಮರೆಯುವುದು ನಾನು ಬೇಕೆಂದೇ ಮಾಡುವ ತಮಾಷೆ ಎಂದು ಎಷ್ಟೋ ಸಾರಿ ಅನಿಸಿದ್ದಿದೆ. ಇದು ನನಗೂ ಬಿಡಿಸಲಾರದ ಕಗ್ಗಂಟು. ಹಾಗೆ ನಾನು ನೆನಪಿಟ್ಟುಕೊಂಡಿರುವ ಒಂದು ದಿನ ಎಂದರೆ ನಾನು ಒಂದನೆ ಕ್ಲಾಸಿಗೆ ಸೇರಿದ ದಿನ.

ಕ್ಲಾಸಿನೊಳಗೆ ಟೀಚರೊಬ್ಬರು ಬಂದರು. ಕೆಂಪುಬಣ್ಣದ ಒಡಲಿನ ಮೇಲೆ ಬಿಳಿಯ ಪೋಲ್ಕಾಡಾಟುಗಳಿದ್ದ ಸೀರೆಯುಟ್ಟಿದ್ದ ಅವರು ನನಗೆ ವಿಚಿತ್ರವಾಗಿ ಕಂಡುಬಂದು ನಾನು ಅವರನ್ನೆ ಪಿಳಿಪಿಳಿ ಕಣ್ಣುಬಿಡುತ್ತ ನೋಡುತ್ತಿದ್ದೆ. ಒಂದು ರಿಜಿಸ್ಟರು ಬಿಚ್ಚಿದ ಅವರು, ‘ಮಕ್ಕಳೆ, ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ಹೆಸರು, ತಂದೆಯ ಹೆಸರು, ಜಾತಿ ಹೇಳಿ ನೋಡೋಣ! ‘ ಅಂದರು. ‘ನೀನು ಯಾವ ಜಾತಿ? ‘ ನನ್ನ ಪಕ್ಕದಲ್ಲಿ ಕೂತಿದ್ದ ಹುಡುಗಿಯೊಬ್ಬಳು ನನ್ನನ್ನು ಕೇಳಿದಳು. ನಾನು ಅವಳನ್ನು ತಿರುಗಿ ಕೇಳಿದೆ, ‘ಹಂಗಂದ್ರೆ? ‘ ನನಗೆ ಆಗ ನಿಜಕ್ಕೂ ಗಾಬರಿಯಾಯಿತು. ಏನು ಹೇಳುವುದು? ಜಾತಿ ಅಂದರೆ ಏನಿರಬಹುದು? ಆ ವೇಳೆಗಾಗಲೆ ನನಗೆ ಕನ್ನಡ ಚೆನ್ನಾಗಿ ಓದಲು ಬರೆಯಲು ಬರುತ್ತಿತ್ತು. ದಿನಪತ್ರಿಕೆ, ಮ್ಯಾಗಜೀನುಗಳನ್ನು ಅರ್ಥವಾಗದಿದ್ದರು ಸ್ಪಷ್ಟವಾಗಿ ಓದುತ್ತಿದ್ದೆ. ಅಮ್ಮ ಮಗಳು ಕಲಿಯಲಿ ಎಂದು ಆಗಷ್ಟೆ ಆಂಗ್ಲ ಕಲಿಸಲು ಆರಂಭಿಸಿದ್ದರು. ಅಗೊ, ನನ್ನ ಸರದಿ ಬಂದೇಬಿಟ್ಟಿತು. ನನ್ನ ಹೆಸರು ನನ್ನ ತಂದೆಯ ಹೆಸರು ಹೇಳಿ ಸುಮ್ಮನೆ ನಿಂತೆ. ಟೀಚರು ‘ಯಾವ ಜಾತಿ ಹೇಳು? ‘  ಅಂದರು. ನಾನು ಜೈಕಾರ ಹಾಕುವವಳ ಹಾಗೆ ಕೈ ಮೇಲೆತ್ತಿ ‘ನಾನು ಕನ್ನಡ ಇಂಗ್ಲಿಷ್ ಜಾತಿ! ‘ ಎಂದು ಘೋಷಿಸಿದೆ. ಟೀಚರು ಬಿದ್ದೂ ಬಿದ್ದೂ ನಗಲು ಪ್ರಾರಂಭಿಸಿಬಿಡಬೇಕೆ? ನನ್ನ ಪ್ರಕಾರ ನಾನು ಕಲಿಯುತ್ತಿದ್ದ ಭಾಷೆಯೆ ನನ್ನ ಜಾತಿಯಾಗಿತ್ತು. ಕೊನೆಗೆ ಟೀಚರು ‘ಮಗೂಗೆ ಜಾತಿ ಯಾವುದು ಅಂತ ಹೇಳಲಿಕ್ಕೆ ಗೊತ್ತಿಲ್ಲ. ಹೇಳಿಕೊಡಿ ‘ ಎಂದು ಅಮ್ಮನಿಗೆ ಹೇಳಿಕಳಿಸಿದರಂತೆ. ‘ಒಂದನೆ ಕ್ಲಾಸಿನ ಮಕ್ಕಳಿಗೆ ಜಾತಿ-ಗೀತಿ ಅಂತ ಕೇಳುವುದ್ಯಾಕಂತೆ? ಅವಕ್ಕೇನು ತಿಳಿಯತ್ತೆ ? ‘ ಎಂದು ಅವತ್ತು ಸಂಜೆ ಅಮ್ಮ ಜೋರಾಗಿ ರೇಗುತ್ತಿದ್ದರು. ‘ಈ ಹುಡುಗಿ ಲಿಟರೇಚರ್ ಓದತ್ತೆ ಅಂತ ಆವಾಗ್ಲೇ ಭವಿಷ್ಯ ಹೇಳಿಕೊಂಡುಬಿಟ್ಟಿತ್ತು! ‘ ಎಂದು ನೆನೆಸಿ ಈಗಲು ನಗುತ್ತಿರುತ್ತಾರೆ.

ನನಗೆ ಮಾತ್ರ ನನ್ನ ಪಕ್ಕ ಕೂತು ನನ್ನ ಜಾತಿ ಕೇಳಿದ ಹುಡುಗಿಯೆ ನೆನಪಾಗುತ್ತಾಳೆ. ಆಕೆಯ ಸಣ್ಣ ಪ್ರಶ್ನೆಯನ್ನ ನಾನು ಇನ್ನುವರೆಗೂ ಮರೆಯಲಾಗಿಲ್ಲ. ಒಂದನೆ ಕ್ಲಾಸಿಗೆ ಆಗಷ್ಟೆ ಕಾಲಿಟ್ಟಿದ್ದ ಪುಟ್ಟ ಹುಡುಗಿಯೊಬ್ಬಳು ಜಾತಿಯ ಬಗ್ಗೆ ಅರಿತಿರಬಹುದಾದರೆ ಎಷ್ಟರಮಟ್ಟಿಗೆ ಆ ಮಗುವಿನ ದೈನಂದಿನ ಜೀವನದಲ್ಲಿ ‘ಜಾತಿ’ ಎಂಬ ಪದ ಬಳಸಲ್ಪಟ್ಟಿರಬಹುದು? ಅದನ್ನು ಯಾವ ರೀತಿ ಆ ಮಗುವಿಗೆ ಆಕೆಯ ಹಿರಿಯರು ತಿಳಿಸಿಕೊಟ್ಟಿರಬಹುದು?

ನನಗೆ ಇವೆಲ್ಲ ಈಗಲು ತಿಳಿಯುವುದಿಲ್ಲ. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದೆ ಎಂದು ಏಳನೇ ಕ್ಲಾಸಿನ ಸಮಾಜಶಾಸ್ತ್ರ ಪಠ್ಯದಲ್ಲಿ ಎಂದೋ ಕಲಿತ ವಾಕ್ಯಕ್ಕೆ ನಾನು ಈವತ್ತು ಭೂತಕನ್ನಡಿಯೇನು ಮೈಕ್ರೋಸ್ಕೋಪಿಟ್ಟು ಹುಡುಕಿದರು ಪ್ರೂಫು ದೊರಕುವದಿಲ್ಲ. ಯಾವುದೆ ಅಪ್ಲಿಕೇಶನ್ನುಗಳಿಗೆ ಬಯೋಡಾಟಾ ಬರೆವಾಗ ನನ್ನ ರಾಷ್ಟ್ರೀಯತೆಯ ಬಗೆಗೆ ಬರೆವಾಗ ಎಷ್ಟು ಹೆಮ್ಮೆಯೆನಿಸುತ್ತದೋ ಅದೇ ಕಾಲಮ್ಮಿನ ಕೆಳಗೆ ನನ್ನ ಜಾತಿಯನ್ನು ನಮೂದಿಸಲೇಬೇಕಾಗಿ ಬಂದಾಗ ಅಷ್ಟೆ ಗಲಿಬಿಲಿ,ಹಿಂಸೆ ಆಗಿದ್ದಿದೆ. ಜಾತಿಗೆ ಬೆಲೆಕೊಡದೆ ಪ್ರೇಮೆವಿವಾಹವಾದ ನನ್ನಿಬ್ಬರು ಸ್ನೇಹಿತರ ಬಗ್ಗೆ ಇತರರು ಆಡಿದ ಕುಹಕದ ಮಾತುಗಳನ್ನು ಕೇಳಿ ಬೇಸರಿಸಿಕೊಂಡಿದ್ದೇನೆ. ಜಾತಿ ನೋಡಿ ಸ್ನೇಹ ಬೆಳೆಸುವವರು, ಪ್ರೇಮಿಸುವವರನ್ನು ನೋಡಿ ಅಚ್ಚರಿಯುಕ್ಕಿದ್ದಿದೆ. ಸ್ನೇಹಿತನೊಬ್ಬ ಜಾತಿಜಗಳವನ್ನು ಸಮರ್ಥಿಸಿ ಮಾತನಾಡಿದಾಗ ಆತ ಮನುಷ್ಯನೆ ಅಲ್ಲವೆನಿಸಿ ಅವತ್ತಿಗೇ ಆತನ ಜತೆ ಸ್ನೇಹಕ್ಕೆ ಒಂದು ಪೂರ್ಣವಿರಾಮ ಕೊಟ್ಟು ಸುಮ್ಮನಾಗಿದ್ದೇನೆ. ಮನೆಗೆ ಕರೆದು ನೀರು ಕೊಡುವ ಮುನ್ನ ಜಾತಿ ವಿಚಾರಿಸುವ ಮನೆಗಳಲ್ಲಿ ಏನೊ ನೆಪಹೂಡಿ ಊಟ ಮಾಡದೆ ಎದ್ದುಬಂದಿದ್ಡೇನೆ. ನೇರವಾಗಿ ಕೇಳುವ ಸೌಜನ್ಯ ತೋರಿದವರಿಗೆ ಅಷ್ಟೆ ನೇರವಾಗಿ ಅದು ತೀರ ಪರ್ಸನಲ್ ವಿಚಾರವೆಂದು ವಿವರಿಸಿ ಹೇಳಿದ್ದೇನೆ.

ನಾನು ಹೀಗೆ ಯೋಚಿಸುವುದು ತಪ್ಪೋ ಸರಿಯೊ ನನಗೆ ತಿಳಿದಿಲ್ಲ. ಆದರೆ ಭಕ್ತಿಯಿಂದ ದೇವಸ್ಥಾನಗಳಿಗೆ ಹೋಗಿಬರುವ ಹಿಂದೂಗಳಲ್ಲದ ಸ್ನೇಹಿತರನ್ನು ಕಂಡಿದ್ದೇನೆ. ಗುಟ್ಟಾಗಿ ಕುಂಕುಮ, ಸ್ಟಿಕರುಗಳನ್ನು ಹಣೆಗಿಟ್ಟುಕೊಂಡು ಸ್ನೇಹಿತೆಯರಿಗೆ ತೋರಿಸಿ ಸಂತಸಪಟ್ಟುಕೊಳ್ಳುವ ಮುಸಲ್ಮಾನ ಸ್ನೇಹಿತೆಯರನ್ನು ನೊಡಿದ್ದೇನೆ. ರಂಜಾನಿನ ತಿಂಗಳಲ್ಲಿ ತಮ್ಮ ಮುಸಲ್ಮಾನ ಸ್ನೇಹಿತೆಯರೊಡನೆ ಉಪವಾಸ ವ್ರತವಿಟ್ಟ ಮುಸಲ್ಮಾನರಲ್ಲದ ಹುಡುಗಿಯರು ನನಗೆ ಪರಿಚಯವಿದ್ದಾರೆ. ಪ್ರತೀ ಭಾನುವಾರ ಚರ್ಚಿಗೆ ಹೋಗಿ ಕ್ಯಾಂಡಲು ಹೊತ್ತಿಸಿ ಮಂಡಿಯೂರಿ ಬರುತ್ತಾಳೆ ಕ್ರಿಶ್ಚಿಯನ್ನಳಲ್ಲದೆ ನನ್ನ ಗೆಳತಿ. ತಾನು ಕಟ್ಟಾ ಸಸ್ಯಾಹಾರಿಯಾಗಿದ್ದೂ ಜತೆಗಿನ ಗೆಳೆಯರು ಮಾಂಸಾಹಾರ ಮಾಡುತ್ತ ಇದ್ದರೆ ಮುಖ ಸಿಂಡರಿಸಿಕೊಂಡು ಎದ್ದುಹೋಗದ ಗೆಳೆಯನ ಬಗ್ಗೆ ನನಗೆ ಅಪಾರ ಗೌರವವಿದೆ. ಇವರ ಪೈಕಿ ಯಾರ ಮನಸ್ಸಿನಲ್ಲು ಭೀಕರವಾದ ಆದರ್ಶಗಳಿಲ್ಲ, ಒಣ ಆಡಂಬರದ ಭಾವನೆಗಳು ಇವರ ಹತ್ತಿರವೂ ಸುಳಿದಿಲ್ಲ. ಆದರೆ ನಮ್ಮ ಸುತ್ತಮುತ್ತಲೂ ಇನ್ನೊಂದು ರೀತಿಯ ಹುಡುಗಹುಡುಗಿಯರು ಇದ್ದಾರೆ. ಭಿಡೆಯಿಲ್ಲದೆ ಎಲ್ಲರಂತೆ ನಕ್ಕುನಲಿಯುವ ಇವರು ತಂತಮ್ಮ ಜಾತಿ, ಧರ್ಮಗಳ ವಿಷಯ ಬಂದೊಡನೆಯೆ ರೇಜಿಗೆ ಹುಟ್ಟಿಸುವಷ್ಟು ಅಪರಿಚಿತರಾಗಿಬಿಡುತ್ತಾರೆ. ನನಗೆ ರಾಷ್ಟ್ರಪ್ರೇಮದ ಬಗೆಗಿನ ದೊಡ್ಡದೊಡ್ಡ ಮಾತುಗಳು ಅರ್ಥವಾಗುವದೇ ಇಲ್ಲ. ಅರ್ಥವಾಗುತ್ತಿರುವುದೇನೆಂದರೆ ಕೆಲವು ದಶಕಗಳ ಹಿಂದೆ ಇದ್ದಿರದ ಅಭದ್ರತೆಯ ಭಾವನೆ ಎಲ್ಲರನ್ನು ಕಾಡಿಸುತ್ತಿದೆ ಅನ್ನುವದು. ಅರ್ಥವಾಗುತ್ತಿರುವುದೇನೆಂದರೆ ಇನ್ನು ಕೆಲವೇ ವರುಷಗಳಲ್ಲಿ ನನ್ನ ಹಾಗೆ ಯೋಚಿಸುವವರು ಬಹುಶಃ ಐಡಿಯಲಿಸ್ಟ್ ರೆಲಿಕ್ಕುಗಳಾಗಿ ಉಳಿದುಹೋಗಬಹುದು ಅನ್ನುವದು.

ನನ್ನ ಮಗಳಿಗೆ ಅವಳ ಜಾತಿಯ ಬಗ್ಗೆ ಯಾರಾದರು ಕೇಳಿದರೆ ಅವಳು ಏನು ಉತ್ತರ ಕೊಡಬಹುದು? 

ಚಿತ್ರಕೃಪೆ: www.theharmonyinstitute.org
 

Comments (39)

ಪಡಖಾನೆಯ ಹುಡುಗಿ – ಜೇನುಗಣ್ಣ ಹುಡುಗನಿಗೆ

ನಿನಗೆನ್ನ ಮೇಲೆ ಪ್ರೇಮವಿದೆಯೆ
ಕೇಳಲು ಸಮಯ ಸಾಲದಾಯಿತು
ನಿನ್ನ ಜೇನಕಂಗಳು
ನನ್ನೊಳಗಿಳಿವ ಪರಿಗೆ ಮರುಳಾದೆ
ಮಾತು ಮರೆತು ಹೋದವು

ಅದಕೆಂದೆ ಈಗ ಹೇಳುವೆ,

ಅಲ್ಲಿ ನೀನು ಚೆಲ್ಲಿಬಿಡುವ
ಹುಣ್ಣಿಮೆ ಬೆಳಕು ನನ್ನ
ನೀರಡಿಕೆಯನು ಹಿಗ್ಗಿಸುತ್ತದೆ

ಹಗುರಾಗಿ ನೀನು ನಕ್ಕಾಗ
ನಶೆಯೇರಿದಂತಾಗಿ
ಹಾವಿನಂತೆ
ಒಳಗೊಳಗೇ ಮಿಸುಕಾಡುವೆ

ಇಲ್ಲಿ ನಾನು ಒಂಟಿಯಾದಾಗೆಲ್ಲ
ನೀನು ಪಿಸುಗುಟ್ಟಿದಂತಾಗಿ
ಪುಳಕಗೊಳ್ಳುವೆ

ಒಮ್ಮೊಮ್ಮೆ  ನಾ ಸೋಕಿದಾಗ
ಅಪರಾಹ್ನದ ಕೊಳದಂತೆ ಮಿನುಗುವ
ನಿನ್ನ ಕಂಗಳ ನೆನೆನೆನೆದು
ಬೆವರುವೆ

ಆದರೆ,
ನಾನು ನಿಜವಾಗಿ ಕೇಳಬೇಕೆಂದಿದ್ದು
ನಿನ್ನ ಕಣ್ಣ  ಸತ್ಯಗಳು
ನಿನ್ನೂರ ಮಲೆಯ ಮರಗಳಷ್ಟೆ
ಗಟ್ಟಿಮುಟ್ಟು, ಒರಟು ಹಾಗೂ
ಪ್ರಾಮಾಣಿಕವಾಗಿರಲಿ
ಎಂದು ಮಾತ್ರ.

ಚಿತ್ರಕೃಪೆ: www.thepioneerwoman.com 

Comments (12)

ಅರಿವು, ನಿದ್ದೆಗಳ ಕಂಸದೊಳಗೆ..

 

Life Is something which happens when you can’t get to sleep – Fran Lebowitz.

ಬೆಳಜಾವ. ಅರೆ ತೂಕಡಿಕೆ. ಅರೆ ಎಚ್ಚರ. ಎಲ್ಲಿಂದಲೋ ಎಂ.ಎಸ್ ಸುಬ್ಬಲಕ್ಷ್ಮಿಯವರ ಸಖತ್ ಖಡಕ್ಕಾದ ಕಂಠದಿಂದ ‘ಕೌಸಲ್ಯಾ ಸುಪ್ರಜಾರಾಮ..’ ಬೆಳಗ್ಗೆ ಮೂರಕ್ಕೇ ಚುರುಕೇರುವ ಬೀದಿಗಳು. ವಾಕಿಂಗಿಗೆ ಎದ್ದು ಓಡಾಡುವವರ ಮನೆಗಳ ಗೇಟುಸದ್ದು. ಹೊಸ್ತಿಲಿಗೆ ನೀರು ಹುಯಿದು ರಂಗೋಲೆ ಬಿಡುತ್ತ ಬೆಳಗಿನ ತಿಂಡಿ, ಕಟ್ಟಬೇಕಾಗಿರುವ ಟಿಫನ್ ಬಾಕ್ಸು ಹಾಗು ಸಂಜೆಯ ಶಾಪಿಂಗ್ ಲಿಸ್ಟಿನ ಲೆಕ್ಕಾಚಾರ ಮಾಡುತ್ತ ಇರುವ ಮಲ್ಟಿಟಾಸ್ಕರ್ ಮನೆಯೊಡತಿ. ಹಾಲು, ಪೇಪರು, ಹೂವು ಮಾರುವವರ ಸೈಕಲಿನ ಕಿಣಿಕಿಣಿ. ನಿದ್ದೆಬಾರದೆ ಕಷ್ಟಪಡುತ್ತ ಈಮೇಲು ನೋಡಲು ಲಾಗಿನ್ನಾದರೆ, ಈ ಹೊತ್ತಲ್ಲದ ಹೊತ್ತಲ್ಲಿ ಸಕ್ಕರೆನಿದ್ದೆ ಹೊಡೆವುದ ಬಿಟ್ಟು ದೆವ್ವದ ಹಾಗೆ ಎಚ್ಚರವಿದೀಯಲ್ಲ ಎಂದು ಅಣಗಿಸುವ ದೂರದೇಶದ ಸ್ನೇಹಿತ. ಮೂರುಗಂಟೆಗೆ ಅಲಾರಮು ಇಟ್ಟು ಎದ್ದು ಓದುತ್ತ ಇರುವ ಹಿಂದಿನ ಮನೆಯ ಹುಡುಗ.

ನಿದ್ದೆಗೆಡುವುದು ಅಂದರೆ ಆಗುತ್ತಿರಲಿಲ್ಲ ನನಗೆ. ಮನೆಯಲ್ಲಿ ಯಾವಾಗಲು ನನ್ನ ನಿದ್ದೆಯ ಬಗ್ಗೆ ಕಂಪ್ಲೇಂಟುಗಳೆ. ಹತ್ತನೆ ಕ್ಲಾಸಿನಲ್ಲಿರುವಾಗ ಅಮ್ಮ ಒಮ್ಮೆ ಹಠಾತ್ತನೆ ನನ್ನ ಸ್ಕೂಲಿಗೆ ಭೇಟಿನೀಡಿ ನನ್ನ ಮೇಷ್ಟರುಗಳ ಬಳಿ ನನ್ನ ನಿದ್ದೆಖೋರತನದ ಬಗ್ಗೆ ತಿಳಿಸಿಬಿಟ್ಟು ನನಗೆ ಫಜೀತಿ ಮಾಡಿದ್ದರು. ಆಗಿಂದ ನನಗೆ ಡಬಲ್ ಹೋಂವಕರ್ು, ಟಿಆರೆನ್ ಮೇಷ್ಟರು ಹೇಳದೆ ಕೇಳದೆ ನನ್ನ ಓದಿನ ಬಗ್ಗೆ ವಿಚಾರಿಸಲು ಮನೆಗೆ ಭೇಟಿ ನೀಡುವುದು, ಇತ್ಯಾದಿ ತೊಂದರೆಗಳು ಆರಂಭವಾದವು. ಅದಕ್ಕು ಮುಂಚೆ ಪುಟ್ಟದಾಗಿದ್ದಾಗ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುತ್ತ ಇದ್ದೆ. ಸಂಜೆಯಾದರೆ ಕರೆಂಟು ಇರುತ್ತಿರಲಿಲ್ಲ. ಹೊರಗೆ ಯಾವಾಗಲು ಸುರಿಯುತ್ತಲೆ ಇರುವ ಮಳೆ. ಮನೆಯಲ್ಲಿ ನನ್ನ ಅಜ್ಜಿಯನ್ನು ನೋಡಲು ಬರುವ ಮುದುಕಿಯರು ವಿಧೇಯಳಂತೆ ಕಾಣುತ್ತಿದ್ದ ನನ್ನ ಕೂರಿಸಿಕೊಂಡು ಪ್ರಾರ್ಥನೆಗಳನ್ನು ಹೇಳಿಕೊಡುವರು. ಅದಾದ ಮೇಲೆ ನಾನು ಅವರನ್ನು ಕಥೆ ಹೇಳಲು ಗೋಗರೆಯುವೆ. ಆವಾಗ ಅವರು ತಮ್ಮ ಅಜ್ಜಿಯಂದಿರು ತಮಗೆ ಹೇಳಿದ ರಾಜರಾಣಿಯರ, ಪ್ರಾಣಿಪಕ್ಷಿಗಳ, ಭೀಕರ ಡಕಾಯಿತರ, ಭೂತಪ್ರೇತಗಳ ಕಥೆಗಳನ್ನು ರಿಪೀಟು ಮಾಡುವರು. ಆ ಮೂಲಕ ನನ್ನಲ್ಲಿ ದೈವಭೀತಿಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುವರು. ಲಾಟೀನಿನ ಮಂದಬೆಳಕಿನಲ್ಲಿ ಅವರ ಮುಖಗಳು ಹಗಲಿನಲ್ಲಿ ಕಾಣುವುದಕ್ಕಿಂತ ವಿಚಿತ್ರವಾಗಿ ಕಂಡು ನಾನು ಕಂಬಳಿಯನ್ನು ಗಟ್ಟಿಯಾಗಿ ಹೊದ್ದುಕೊಳ್ಳುವ ಹಾಗೆ ಮಾಡುತ್ತಿದ್ದವು. ಗೋಡೆಯ ಮೇಲೆ ಆಡುವ ನಮ್ಮ ನೆರಳುಗಳನ್ನೆ ನೋಡುತ್ತ ಮಳೆಯ ಸದ್ದು ಕೇಳುತ್ತ ನಾನು ನಿದ್ರೆಗೆ ಜಾರುತ್ತಿದ್ದೆ.

ಒಮ್ಮೊಮ್ಮೆ ಅಪ್ಪ ಅಮ್ಮ ಇಬ್ಬರೂ ಕೆಲಸದ ಮೇರೆಗೆ ಎಲ್ಲಾದರು ಹೋಗಬೇಕಾಗಿ ಬಂದಾಗ ಕೆಪಿಜಿ ಮೇಷ್ಟರ ಮಗಳು ಸಂಧ್ಯಾ ನಮ್ಮ ಜತೆ ಬಂದು ಇರುವುದಿತ್ತು. ಎಸೆಸೆಲ್ಸಿ ಎಕ್ಸಾಮಿನ ಸಮಯ. ಆಕೆ ರಾತ್ರಿಯೆಲ್ಲ ಕರೆಂಟು ಇಲ್ಲದಿದ್ದರು ಚಿಮಣಿಎಣ್ಣೆದೀಪದ ಬೆಳಕಲ್ಲಿ ಓದುವಳು. ಚಿಮಣಿ ಬುಡ್ಡಿಯಿಂದ ಪುಸ್ತಕದ ಮೇಲೆ ಸಿಡಿವ ಕಪ್ಪನ್ನು ಮೆಲ್ಲಗೆ ಒರೆಸುತ್ತ.. ಕಣ್ಣಿಗೆ ಆಗಾಗ ರೋಸ್ ವಾಟರು ಬಿಟ್ಟುಕೊಳ್ಳುತ್ತ…ಅವಳ ಗುಂಗುರುಕೂದಲು, ಪುಸ್ತಕದುದ್ದಕ್ಕು ಹರಿದಾಡುವ ಚುರುಕುನೋಟ, ಪೆನ್ಸಿಲಿನ ಹರಿದಾಟ…. ನೋಡನೋಡುತ್ತ ನನಗೆ ತೂಕಡಿಕೆ. ‘ಒಂದಿನಾನಾದ್ರು ಅವಳ ಹಾಗೆ ಓದಿದೀಯೇನೆ?’ ಎಂದು ಬೇಸರಿಸುವ ಅಮ್ಮ. ನನ್ನ ಎಸೆಸೆಲ್ಸಿಯ ದಿನಗಳಲ್ಲಿ ನಾನು ನಿದ್ದೆಗೆಟ್ಟು ಓದಿದ್ದು ಕೊನೆಯ ಹದಿನೈದು ದಿನಗಳು ಮಾತ್ರ. ಅದೂ ಅಮ್ಮನ ಕಾಫಿ, ಅಲಾರಮ್ಮುಗಳ ದೆಸೆಯಿಂದ. ‘ಮನಸ್ಸಿಟ್ಟು ಓದಿದ್ದಿದ್ರೆ ಇನ್ನೂ ಹೆಚ್ಚಿಗೆ ಸ್ಕೋರು ಮಾಡ್ತಿತ್ತು’ ಎಂದು ಅಮ್ಮ ಅಪ್ಪ ಮಾತಾಡಿಕೊಂಡಾಗ ತಲೆಕೆರೆದುಕೊಂಡು ಸುಮ್ಮನೆ ಕೂತಿದ್ದೆ.  ಹಾಸ್ಟೆಲು ಸೇರಿದ ಮೇಲೆ ಹಾಳು ನಿದ್ದೆ ಎಲ್ಲಿ ಹಾರಿಹೋಯಿತೊ ತಿಳಿಯದು. ಮನೆಯಲ್ಲಿ ತಬ್ಬಿಕೊಳ್ಳುತ್ತಿದ್ದ ಸಿಹಿನಿದ್ದೆ ಯಾಕೊ ಬರಲೆ ಒಲ್ಲೆನೆನ್ನತೊಡಗಿತು. ಎಷ್ಟೆಷ್ಟೋ ಹೊತ್ತಿಗೆ ಮಲಗುವದು, ಏಳುವದು, ಓದುವದು.. ಹತ್ತಕ್ಕೆ ಮಲಗಿ ಐದಕ್ಕೇಳುವ ರುಟೀನು ಮರೆತೇ ಹೋಯಿತು.

ಮಗಳು ಹುಟ್ಟಿನಿಂದಲೆ ನಿಶಾಚರಿ. ಹಗಲೆಲ್ಲ ಮಲಗಿ ರಾತ್ರಿಯೆಲ್ಲ ಆಡುವ ಚಕೋರಿ. ನನಗೋ ನಿದ್ದೆಗೆಟ್ಟು ಹಲುಬುವಂತಾಗುತ್ತಿತ್ತು. ಕಣ್ಣ ಸುತ್ತ ಕಪ್ಪು ವತರ್ುಲಗಳು. ಸುಮಾರುಸಾರಿ ಮಗುವನ್ನು ತೊಡೆಯಮೇಲಿಟ್ಟುಕೊಂಡು ‘ಮಲಗೇ ತಾಯಿ!’ ಎಂದು ಗೋಳಾಡುತ್ತ ಇದ್ದೆ. ಅದು ನನ್ನ ಮುಖ ನೋಡಿ ಕಿಲಕಿಲ ನಗುತ್ತಿತ್ತು. ಆಕೆಗಾಗಿ ಹಾಡುವದು, ಕಥೆ ಹೇಳುವುದು, ಆಟವಾಡುವದು.. ಇದು ನಾನೇ ಏನು? ಅಮ್ಮನ ಮಾತು ಕೇಳದೆ ನಿದ್ದೆಮಾಡುತ್ತಿದುದಕ್ಕೆ, ಅವರ ರಾತ್ರಿಗಳ ನಿದ್ದೆಗೆಡಿಸಿದ್ದಕ್ಕೆ ನನಗೆ ದೊರಕಿರುವ ಶಿಕ್ಷೆಯಿದು ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಆ ರಾತ್ರಿಗಳಲ್ಲಿ ನಾನು ಕಂಡುಕೊಂಡ ಮಮತೆ, ಅಕ್ಕರೆ, ಹೊಳಹುಗಳಿಗೆ ಯಾವ ಯಮನಿದ್ದೆಯೂ ಸಾಟಿಯಾಗಲಾರದು.

ಈಗ ಬೇಕೆಂದರು ನಿದ್ದೆ ಬರದು. ಎಚ್ಚರವಾದೊಡನೆ ಕಿಟಕಿಯಿದೆ, ಹೊರಗಿನ ನೀರವ ಬೀದಿಗಳಿವೆ. ಹಿಂದಿನ ಮನೆಯ ಇನ್ಸೊಮ್ನಿಯಾಕ್ ಮುದುಕಿಯ ಗೊಣಗಾಟಗಳಿವೆ, ಶೆಲ್ಫಿನಲ್ಲಿ ಓದದೆ ಬಿಟ್ಟಿರುವ ಪುಸ್ತಕಗಳಿವೆ, ಲೇಖನಿಯಿದೆ. ನಿದ್ರೆ ಬರದ ರಾತ್ರಿಗಳೆ ಸಿಹಿಯಾಗಿ ಕಾಣತೊಡಗಿವೆ. ಕನ್ನಡಿ ಕಂಡಕೂಡಲೆ ನಿಂತು ಪ್ರತಿಬಿಂಬ ನೋಡಿಕೊಳ್ಳುವ ಹಾಗೆ, ಒಂದು ರೀತಿಯ ಚಟ ಇದು. ಹಗಲಿನ ಎಲ್ಲ ಖಾಲಿತನ, ನಾಟಕಗಳ ಅವಲೋಕಿಸಲು ಸರಿಯಾದ ಸಮಯ. ಯಾವುದನ್ನು ನಾನು ನನ್ನ ಜೀವನದ ಪ್ರಮುಖ ಭಾಗವೆಂದುಕೊಡಿದ್ದೆನೋ ಅದು ಇಂದು ಗೌಣವಾಗಿರುವುದು, ನಿದ್ದೆಗೆಟ್ಟು ಕೂರುವ ಸಂತಸಕ್ಕಾಗಿ ನಾನು ಹೀಗೆ ಎಚ್ಚರಗೊಳ್ಳುವುದು, ಹಳೆಯ ಮುದುಕಿಯರ ಕಥೆಗಳಷ್ಟೆ ಆತ್ಮೀಯವೆನಿಸುವುದು. ಯಾವುದೊ ರೇಡಿಯೋ ಚ್ಯಾನೆಲ್ಲಿನಲ್ಲಿ ಹಾಡುಗಾರನೊಬ್ಬ ತಾರಸ್ಥಾಯಿಯಲ್ಲಿ ಗುನುಗುತ್ತಿರುವ:
 

And you can’t fight the tears that ain’t coming
Or the moment of truth in your lies
When everything feels like the movies
Yeah you bleed just to know you’re alive

(Iris, City of Angels)

 

Pic courtesy: www.victorainweb.org

Pic info: ‘A Fairy Tale’ by Arthur Wardle RBI RBA, 1864-1949. Oil on canvas. 115 x 165 centimetres. “All seemed to Sleep, the timid Hare on Form” — Scott. Exhibited at the Royal Academy, 1895 (no. 222). The artrist’s well-known skill at drawing and painting animals here plays a part in a late example of ‘Fairy Painting’ 

Comments (9)

ನಂಬಿಕೆ ಎಂಬ ಪುಟ್ಟ ಪದ.

 

ನಂಬಿಕೆ. ಫೆಯಿತ್.
ಎಷ್ಟು ಪುಟ್ಟ ಪದ!
ಆದರೆ ಅಷ್ಟೆ ದೊಡ್ಡದು ಕೂಡ.

ಎಲ್ಲೀ ಆರೋವೇ ಒಬ್ಬ ವಿಜ್ನಾನಿ. ಅಂತರಿಕ್ಷದಲ್ಲಿ ಇತರ ಜೀವಿಗಳು ಇರುವ ಸಾಧ್ಯತೆಗಳನ್ನು ಹುಡುಕುತ್ತ ತನ್ನ ಜೀವನವನ್ನೆ ಕಳೆದಿರುವಾಕೆ. ಆಕೆಗೆ ತನ್ನ ಕೆಲಸದೆದುರು ಎಲ್ಲವೂ ಗೌಣ. ಆಕೆಯನ್ನು ಪ್ರೀತಿಸುವ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಪಾಮರ್ ಜಾಸನನ್ನು ಕೂಡ ಈ ಕಾರಣದಿಂದ ನಿರಾಕರಿಸಿರುವಾಕೆ. ಬಹಳ ಶ್ರಮಿಸಿ, ಅಡಚಣೆಗಳನ್ನು ಎದುರಿಸಿದ ಮೇಲೆ ಒಂದು ದಿನ ಎಲ್ಲೀ ನಕ್ಷತ್ರವೊಂದರ ಕಡೆಯಿಂದ ಬಂದ ಒಂದು ಸಿಗ್ನಲ್ಲನ್ನು ಯಶಸ್ವಿಯಾಗಿ ಪಡೆದುಕೊಳ್ಳುತ್ತಾಳೆ. ಸಿಗ್ನಲ್ಲನ್ನು ಡಿಕೋಡ್ ಮಾಡಿ ಅದರಲ್ಲಿ ಸೂಚಿಸಿರುವಂತೆ ಇನ್ನೊಂದು ಪ್ರಪಂಚವನ್ನು ತಲುಪಲು ಯಂತ್ರವೊಂದನ್ನು ನಿರ್ಮಿಸಲಾಗುತ್ತದೆ. ಭೂಮಿಯನ್ನು ಪ್ರತಿನಿಧಿಸಲು ಸರಿಯಾದ ಅಭ್ಯರ್ಥಿಗೆ ಹುಡುಕಾಟ ಆರಂಭವಾಗುತ್ತದೆ. ಆಯ್ಕೆಸಮಿತಿಯೆದುರು ಎಲ್ಲೀ ಬಂದುನಿಲ್ಲುತ್ತಾಳೆ. ಆದರೆ ಸಮಿತಿಯಲ್ಲಿರುವ ಪಾಮರ್ ಜಾಸನಿಗೆ ಆಕೆಯನ್ನು ಹೋಗಗೊಡಲು ಇಷ್ಟವಿಲ್ಲ. ಆತ ಎಲ್ಲರ ಮುಂದೆ ಎಲ್ಲೀಯನ್ನು ಕುರಿತು ’ನಿನಗೆ ದೇವರಲ್ಲಿ ನಂಬಿಕೆಯಿದೆಯೆ?’ ಎಂದು ಪ್ರಶ್ನಿಸುತ್ತಾನೆ. ದೇವರನ್ನು ನಂಬದ ಆಕೆ ಈ ಪ್ರಶ್ನೆಯ ಮಹತ್ವವನ್ನು ಪ್ರಶ್ನಿಸುತ್ತಾಳೆ. ’ಭೂಮಿಯ ಹೆಚ್ಚೂಕಡಮೆ ತೊಂಭತ್ತೈದು ಪರ್ಸೆಂಟು ಜನ ದೇವರನ್ನು ನಂಬುವವರು. ಹಾಗಾಗಿ ಭೂಮಿಯನ್ನು ಪ್ರತಿನಿಧಿಸುವ ಅಭ್ಯರ್ಥಿಯಲ್ಲಿ ಕೂಡ ನಂಬಿಕೆಯಿರುವುದು ಬಹಳ ಅವಶ್ಯ ’ ಎನ್ನುತ್ತಾನೆ ಪಾಮರ್. ಎಲ್ಲೀಯ ಮೌನ ಆಕೆಯನ್ನು ಅನರ್ಹಳನ್ನಾಗಿ ಮಾಡುತ್ತದೆ.

ಜೋಡೀ ಫಾಸ್ಟರ್ ಮತ್ತು ಮ್ಯಾಥ್ಯೂ ಮೆಕ್ಕೋನಾಹೀ ನಟಿಸಿರುವ ‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ನಡೆವ ಘಟನೆಯಿದು. ವಿಜ್ನಾನಿಯಾಗಿರುವ ಎಲ್ಲೀಯ ತೊಳಲಾಟ ಇಲ್ಲಿ ಬಹಳ ಮುಖ್ಯವಾದ್ದು. ಜೀವನವಿಡೀ ರಾಶನಲ್ ಆಗಿ ಪ್ರತಿಯೊಂದನ್ನೂ ಪ್ರಶ್ನಿಸಿಕೊಂಡು ಬೆಳೆದ ವಿಜ್ನಾನಿಯೊಬ್ಬಳು ತನ್ನ ಜೀವನದ ಅತ್ಯಂತ ಪ್ರಮುಖ ಅವಕಾಶವನ್ನು ತನ್ನ ನಂಬಿಕೆಯ ಕಾರಣದಿಂದಾಗಿ ಕಳೆದುಕೊಳ್ಳಬೇಕಾಗಿ ಬರುವ ಸನ್ನಿವೇಶ. ದೇವರಲ್ಲಿ ನಂಬಿಕೆಯಿದೆ ಎಂದರೆ ಆಕೆ ಇಲ್ಲಿಯತನಕದ ತನ್ನ ಕೆಲಸಕ್ಕೆ, ತನ್ನ ವೈಯುಕ್ತಿಕ ನಂಬಿಕೆಗೆ ಕೊಡಲಿಪೆಟ್ಟು ಹಾಕಿದಹಾಗಾಗುತ್ತದೆ. ಇಲ್ಲವೆಂದರೆ ಆಕೆಯ ಇಲ್ಲಿಯತನಕದ ಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆಹಣ್ಣಿನ ಹಾಗೆ ತೊಳೆದುಹೋಗುತ್ತದೆ. ಸಾಕ್ರಟೀಸನ ಮುಂದೆಯೂ ಇಂಥದೇ ಪ್ರಶ್ನೆಯಿದ್ದದ್ದು. ಆತ ಆಯ್ಕೆಮಾಡಿಕೊಂಡಿದ್ದು ವಿಷವನ್ನು. ಗೆಲಿಲಿಯೊನ ವಿಷಯದಲ್ಲಿ ನಡೆದದ್ದೂ ಇದೇ. ಸೂರ್ಯ ಸ್ಥಿರವಾದ್ದೆಂದೂ, ಭೂಮಿ ತಿರುಗುವುದೆಂಬ ತನ್ನ ವಾದವನ್ನು ಬಿಟ್ಟುಕೊಡಲು ಆತ ಸಿದ್ಧನಿರಲಿಲ್ಲ. ಆದರೆ ಭೂಮಿ ತಿರುಗದೆಂದು ಪಾಶ್ಚಿಮಾತ್ಯ ಬೈಬಲ್ಲಿನಲ್ಲಿ ಬರೆದಿದ್ದು ಗೆಲಿಲಿಯೋನ ವಾದ ಇದಕ್ಕೆ ಧಕ್ಕೆಯಾಗುವಂತಿತ್ತು ಎಂಬುದು ಚರ್ಚಿನ ವಾದ. ತನ್ನ ಅರಿವಿನೆಡೆಗೆ ವಾಲಿನಿಂತ ಗೆಲಿಲಿಯೋನನ್ನು ಗೃಹಬಂಧನದಲ್ಲಿರಿಸಲಾಯಿತು. ಸುಮಾರು ಮುನ್ನೂರು ವರುಷಗಳ ನಂತರ ಪೋಪ್ ಪಯಸ್ ಗೆಲಿಲಿಯೋನ ಯಾರಿಗೂ ತಲೆಬಾಗದ ಚೈತನ್ಯವನ್ನು ಪ್ರಶಂಸಿಸಿದರು. ಚರ್ಚು ಆಗಿನಕಾಲದ ಸಮಾಜದ ನಂಬಿಕೆಯನ್ನು ಎತ್ತಿಹಿಡಿಯಲು ಗೆಲಿಲಿಯೋನ ವಿರುದ್ಧ ತಾವು ಮಾಡಿದ್ದು ಸರಿ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.

ಈಗಿನ ದಿನಗಳ ಬಗ್ಗೆ ಮಾತನಾಡುವದಾದರೆ ನಾವು ಬಲುದೂರ ಸಾಗಿಬಂದಿದ್ದೇವೆ. ನಮ್ಮ ನಂಬಿಕೆ ಶ್ರದ್ಧೆಗಳು ಹೆಚ್ಚಿನಪಕ್ಷ ನಮ್ಮ ಆಯ್ಕೆಗೆ ಒಳಪಟ್ಟಿವೆ. ಸಾಮಾಜಿಕ ಚೌಕಟ್ಟುಗಳ ಆಚೆ ನಿಂತು ನಮ್ಮ ನಂಬಿಕೆಗಳನ್ನು ಅಳೆದುಕೊಳ್ಳುವದು ನನ್ನಂತಹ ಜನಸಾಮಾನ್ಯರಿಗು ಇಂದು ಸಾಧ್ಯವಿದೆ. ಕೆಲವೆಡೆ ಇದು ಟೀಕೆಗೆ, ಕೆಲವೆಡೆ ಪ್ರಶಂಸೆಗೆ ಗುರಿಯಾಗಿದೆ. ನಂಬಿಕೆಯಿರುವ ಒಬ್ಬ ವ್ಯಕ್ತಿ ನಂಬಿಕೆಯನ್ನು ಪ್ರಶ್ನಿಸುವ ವ್ಯಕ್ತಿಯೊಡನೆ ಕೂತು ವಿಚಾರವಿನಿಮಯ ನಡೆಸುವ ಸಾಧ್ಯತೆಗಳು ಇವತ್ತು ಇವೆ. ನಾವು ನೈತಿಕ ಅವನತಿಯ ಕಡೆ ಸಾಗಿದ್ದೇವೆಯೆ ಅಥವಾ ಏಳಿಗೆಯೆಡೆ ಹೆಜ್ಜೆಹಾಕುತ್ತಿದ್ದೇವೆಯೆ, ನಿರ್ಧಾರ ನಿಜಕ್ಕು ಕಷ್ಟ. ಆದರೆ ನಂಬಿಕೆಯ ಎರಡೂ ಮುಖಗಳು ಒಂದನ್ನೊಂದು ಕಣ್ಣಿಟ್ಟು ನೋಡುವುದು ಸಾಧ್ಯವಾಗಿರುವುದು ನಮ್ಮ ಕಾಲದಲ್ಲಿಯೇ ಎನ್ನುವದು ಹೆಮ್ಮೆಯ ವಿಚಾರ. ಹಲವಾರು ವೈರುಧ್ಯಗಳು ನಮ್ಮೊಳಗೇ ಇವೆ. ಅವು ನಮ್ಮ ನಂಬಿಕೆಯನ್ನು ಪ್ರಶ್ನಿಸುತ್ತ ಅವನ್ನು ಗಟ್ಟಿಗೊಳಿಸುತ್ತಲೋ, ಇಲ್ಲ ಕಡಿಮೆಮಾಡುತ್ತಲೋ ಹೋಗುತ್ತವೆ.

‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ಎಲ್ಲೀ ಆರೋವೇಗೆ ಕೊನೆಗೂ ಆ ಇನ್ನೊಂದು ಪ್ರಪಂಚಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಸುಮಾರು ಇಪ್ಪತ್ತಾರು ಜ್ಯೋತಿರ್ವರ್ಷಗಳನ್ನು ದಾಟಿ ಹೊಸಲೋಕಕ್ಕೆ ಕಾಲಿಡುವ ಎಲ್ಲೀ ತಾನು ಕಾಣುವ ಅದ್ಭುತ ನೋಟಗಳಿಗೆ ನಿಬ್ಬೆರಗಾಗಿ ಕಣ್ಣೀರು ಸುರಿಸುತ್ತ ತನಗೆ ಅರಿವಿಲ್ಲದಂತೆ, ’ಓಹ್, ದೇವರೆ!” ಎಂದು ಉದ್ಗರಿಸುತ್ತಾಳೆ. ’ಇಲ್ಲಿಗೆ ನನ್ನ ಬದಲು ಕವಿಯೊಬ್ಬರನ್ನು ಕಳಿಸಿರಬೇಕಿತ್ತು’ ಎಂದು ಯೋಚಿಸುತ್ತಾಳೆ. ಮಾನವಜನಾಂಗಕ್ಕೆ ಆಕೆಗಿಂತ ಒಳ್ಳೆಯ ಪ್ರತಿನಿಧಿ ಸಿಗುವುದು ಸಾಧ್ಯವಿತ್ತೆ?

 ಚಿತ್ರಕೃಪೆ: www.impawarads.com ಮತ್ತು www.seti.org

 

 

 

 

 

Comments (11)

Older Posts »