Archive for June, 2008

ಮಾನ್ಸೂನು

ಚಿಮಣಿಯಿಂದ
ಬುಸು
ಬುಸು
ಹೊಗೆ
ಒಲೆಯ ಮುಂದೆ
ಕುಕ್ಕರುಗಾಲು ಹಾಕಿದ
ಅಪ್ಪ
ಹೊರಗೆ
ಪಿರಿ
ಪಿರಿ
ಮಳೆ
ಜಾರುವ ಪಾಚಿಹಾದಿ
ವಾರೆ ಸುರುಳಿ
ಕಣ್ಣೊಳಗೆ ಹಸಿರು
ಚಳಿಯ ಧ್ಯಾನಿಸುತ್ತ
ಒದ್ದೆ ಸೌದೆಯ ವಾಸನೆ
ಸೇದುತ್ತ
ಇದ್ದರೆ
ಏನೇನೊ ಜ್ಞಾಪಕ
ತವಕ.

ಪುಟ್ಟ ತರಲೆ ಹುಡುಗಿ
ತುಡುಗು
ಮಾಡುವ
ಹಾಗೆ
ಅ  ತ್ತಿಂ   ದಿ   ತ್ತ
ಗೂರಾಡುವ
ಬಿಳಿಹೊಗೆ
ಮಾಡಿಂದ
ಸುರಿವ
ನೀರಪರದೆ
ಮತ್ತೆಲ್ಲ
ಮೌನವಾದರು
ಮನಕ್ಕೆ
ಮಳೆ
ವೀಣೆ
 

Comments (17)

‘ಅಗ್ನಿಯ ನದಿ’ ಆನಿ ಆಪಾ

ನನ್ನ ‘ಆನಿ’ ಆಪಾ (ಆಪಾ – ಅಕ್ಕ) ತೀರಿಹೋಗಿ ಹತ್ತಿರ ಹತ್ತಿರ ಒಂದು ವರುಷ ಕಳೆಯಿತು.  ಇನ್ನೂ ನೆನಪಿದೆ ಆ ದಿನ ನನಗೆ. ಅಮ್ಮ ಫೋನು ಮಾಡಿ ‘ಕುರ್ರತುಲೈನ್ ಹೈದರ್ ಹೋಗಿಬಿಟ್ರಲ್ಲ!!’ ಎಂದು ಪೇಚಾಡಿಕೊಂಡರು. ನಾನು ಸುಮ್ಮನೆ ಕಟ್ಟೆಯ ಮೇಲೆ ಕುಳಿತು ಆಗೀಗ ಇಣುಕುತ್ತಿದ್ದ ಬಿಸಿಲು ಕಾಯಿಸಲು ಹವಣಿಸುತ್ತ ಇದ್ದೆ. ನನ್ನವ ‘ಅಲ್ಲ, ನಿಂಗೆ ಏನೂ ಅನ್ನಿಸ್ತ ಇಲ್ವ?’ ಎಂದು ಟೀಕಿಸಿದ. ಅವರಾರೂ ‘ಆನಿ’ ಆಪಾ ಬರೆದಿರುವುದನ್ನು ಓದಿಲ್ಲ. ಆದರೆ ಆಕೆಯ ಪುಸ್ತಕಗಳ ಬಗ್ಗೆ ನನಗಿರುವ ಪ್ರೀತಿ, ಹುಚ್ಚು ಅವರಿಗೆ ತಿಳಿದಿದೆ. ತೇಜಸ್ವಿಯವರು ತೀರಿಕೊಂಡ ದಿನ ಕಾಲುಸುಟ್ಟ ಬೆಕ್ಕಿನ ಹಾಗೆ ನಾನು ಓಡಾಡಿರುವುದನ್ನು ನೋಡಿರುವ ಅವರಿಗೆ ನಾನು ಹಾಗೆ ನಿರುಮ್ಮಳವಾಗಿ ಇರುವುದು ನೋಡಿ ಹೇಗೆಹೇಗೊ ಅನ್ನಿಸಿರಬೇಕು.

ಉರ್ದುಸಾಹಿತ್ಯದ ಮಹಾರಥಿ ಲೇಖಕಿಯೆಂದು ಪರಿಗಣಿಸಲಾಗಿರುವ ಕುರ್ರತುಲೈನ್ ಹೈದರರನ್ನು ಎಲ್ಲರು ಪ್ರೀತಿಯಿಂದ ಕರೆಯುತ್ತಿದ್ದಿದ್ದೆ ‘ಆನಿ ಆಪಾ’ ಎಂದು. ನಾವು ಮಿಲನ್ ಕುಂದೇರಾ, ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಮ್ಯಾಜಿಕ್ ರಿಯಲಿಸಂ ಎಂದೆಲ್ಲ ಹೇಳಿಕೊಂಡು ಓಡಾಡುತ್ತೇವೆ. ಮಾರ್ಕ್ವೆಜನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಬಗ್ಗೆ ಅಕೆಡೆಮಿಕ್ಕಾಗಿ ಮಾತಾಡಿಕೊಳ್ಳುತ್ತೇವೆ. ಹಿಸ್ಪಾನಿಕ್ ಸಾಹಿತ್ಯಕ್ಕೆ, ಮತ್ತು ವಿಶ್ವಸಾಹಿತ್ಯಕ್ಕೆ ಮಾರ್ಕ್ವೆಜ್ ನೀಡಿದ ಅತ್ಯಪೂರ್ವ ಕೊಡುಗೆಯೆಂದು 1967ರಲ್ಲಿ ಹೊರಬಂದ ‘ಒನ್ ಹಂಡ್ರೆಡ್..’ ಅನ್ನು ಕೊಂಡಾಡಲಾಗುತ್ತದೆ. ಆದರೆ 1959ರಲ್ಲಿಯೆ ಕುರ್ರತುಲೈನ್ ಉರ್ದುವಿನಲ್ಲಿ ಬರೆದ ‘ಆಗ್ ಕಾ ದರಿಯಾ’ ಎಂಬ ಬೃಹತ್ ಕಾದಂಬರಿಯಲ್ಲಿ ಮ್ಯಾಜಿಕ್ ರಿಯಲಿಸಮ್ಮಿನ ಜತೆಗೇ ಉತ್ತಮವಾದ ಹೊಳಹುಗಳಿವೆ. ಓದುತ್ತ ಹೋದಂತೆ ಮಾರ್ಕ್ವೆಜನೇ ಬಹುಶಃ ಆಕೆಯಿಂದ ಪ್ರಭಾವಿತನಾಗಿದ್ದನೇನೊ ಎನ್ನುವಂತೆ ಭಾಸವಾಗುತ್ತದೆ! ಈ ಕಾದಂಬರಿಯನ್ನು ಬಹಳಕಾಲ ಯಾರಿಂದಲು ಭಾಷಾಂತರಿಸಲೂ ಸಾಧ್ಯವಾಗಲಿಲ್ಲ. 1998ರಲ್ಲಿ ಹೈದರ್ ತಾವೆ ಕೂತುಕೊಂಡು ಇದನ್ನು ಆಂಗ್ಲಕ್ಕೆ ‘ರಿವರ್ ಆಫ್ ಫೈರ್’ ಆಗಿ ಅನುವಾದಿಸಿ ಪ್ರಕಟಿಸಿದರು. ಆಗ ಎಲ್ಲರಿಗು ಆಕೆ ರಚಿಸಿದ ಸಾಹಿತ್ಯದ ಆಳ, ಮಹತ್ವ ಅರಿವಾಯಿತು. ’ನಮ್ಮ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಎಷ್ಟೊಂದು ಸಮೃದ್ಧವಾಗಿದೆ! ಆದರೆ ಆಂಗ್ಲಭಾಷೆಯಲ್ಲಿ ಬರೆದವರಿಗೆ ದೊರಕುವ ಮಾನ್ಯತೆ ಇತರ ಭಾರತೀಯ ಭಾಷೆಗಳ ಬರಹಗಾರರಿಗೆ ದೊರಕುವುದೇ ಇಲ್ಲ. ಎಲ್ಲ ಮಲತಾಯಿ ಧೋರಣೆ!” ಎಂದು ನನ್ನ ಹಿರಿಯ ಸ್ನೇಹಿತರೊಬ್ಬರು ಆಗಾಗ ಬೇಸರಿಸುತ್ತ ಇರುತ್ತಾರೆ ಮತ್ತು ಇದು ನಿಜ ಕೂಡ.

ಕುರ್ರತುಲೈನ್ ಹೈದರ್ ಹುಟ್ಟಿದ್ದು 1927ರ ಆಧುನಿಕ ಲಿಬರಲ್ ಮುಸ್ಲಿಂ ಕುಟುಂಬವೊಂದರಲ್ಲಿ. ತಂದೆತಾಯಿ ಇಬ್ಬರೂ ಕಾದಂಬರಿಕಾರರು. ಮನೆಯಲ್ಲಿ ತುಂಬಿತುಳುಕುತ್ತ ಇದ್ದ ಸಾಹಿತ್ಯಾಸಕ್ತಿ. ತಂದೆಯ ವರ್ಗಾವಣೆಯ ಕೆಲಸದಿಂದಾಗಿ ಹೈದರ್ ತನ್ನ ಬಾಲ್ಯ ಮತ್ತು ಹರೆಯದ ಹೆಚ್ಚುಸಮಯವನ್ನು ಭಾರತದ ಎಲ್ಲೆಡೆ ಕಳೆದರು. ಕೊನೆಗೆ ಲಖನೌನ ಪ್ರತಿಷ್ಠಿತ ‘ಇಸಬೆಲ್ಲಾ ಥೋಬರ್ನ್’ ಕಾಲೇಜಿಗೆ ಸೇರಿದ ಹೈದರ್ ತನ್ನ ಸೌಂದರ್ಯ, ಆಧುನಿಕ ವಿಚಾರಧಾರೆ ಮತ್ತು ಶಿಫಾನ್ ಸೀರೆಗಳಿಂದ ಕ್ಯಾಂಪಸಿನಲ್ಲಿ ವಿಖ್ಯಾತರಾದರು. ಉರ್ದು ಸಾಹಿತ್ಯದಲ್ಲಿ ‘ಆಧುನಿಕ ಯುವತಿ’ಯನ್ನು ಗ್ಲಾಮರಿನೊಂದಿಗೆ ಪರಿಚಯಿಸಿದ್ದು ಈಕೆಯೆ. ಪಾರ್ಟಿಶನ್ನಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ ಕುರ್ರತುಲೈನ್ ಗೆ ಅಲ್ಲಿ ಬಹಳಕಾಲ ಇರಲಾಗಲಿಲ್ಲ. ಬ್ರಿಟನ್ನಿಗೆ ಹೋಗಿ ಅಲ್ಲಿ ಸಾಹಿತ್ಯ, ರೇಡಿಯೊ ಎಂದು ಕೆಲವು ಸಮಯವಿದ್ದ ಆಕೆ ಮರಳಿದ್ದು ತನ್ನ ನೆಚ್ಚಿನ ಭಾರತಕ್ಕೆ. ಇದೇ ಸಮಯದಲ್ಲಿ ಬರೆದ ‘ಆಗ್ ಕಾ ದರಿಯಾ’ದಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆಗಳ ನಿರಂತರ ಹರಿವೇ ಮುಖ್ಯ ವಸ್ತುವಾಗಿದೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಯುವ ಬೌದ್ಧ ಸನ್ಯಾಸಿ ಹರಿಶಂಕರ ಮತ್ತು ಗುರುಕುಲವೊಂದರ ವಿದ್ಯಾರ್ಥಿ ಗೌತಮ ನೀಲಾಂಬರ ಸಾಕೇತದ ಕಾಡೊಂದರಲ್ಲಿ ಭೇಟಿಯಾಗುವುದರೊಂದಿಗೆ ಪ್ರಾರಂಭವಾಗುವ ಕಾದಂಬರಿ, ಮೌರ್ಯರ ಆಳ್ವಿಕೆ, ಮೊಘಲರು, ಆಂಗ್ಲರನ್ನು ದಾಟಿಕೊಂಡು, ಸ್ವಾತಂತ್ರ್ಯ, ದೇಶದ ಇಬ್ಭಾಗ, ಆನಂತರದ ಪರಿಸ್ಥಿತಿಗಳವರೆವಿಗೆ ಬಂದುನಿಂತು ಆಧುನಿಕ ಹರಿಶಂಕರ ಮತ್ತು ಗೌತಮ ನೀಲಾಂಬರರು ಅದೇ ಜಾಗದಲ್ಲಿ ಬೇರೊಂದು ಶತಮಾನದಲ್ಲಿ ಬೇರಾರಂತೆಯೊ ಭೇಟಿಯಾಗುವುದರೊಂದಿಗೆ ಕೊನೆಗೊಳ್ಳುತ್ತದೆ. ಮಧ್ಯದಲ್ಲಿ ಬರುವ ಕಮಲ್, ಚಂಪಾ, ನಿರ್ಮಲಾ, ಯಕ್ಷಿಣಿಯ ಮೂರ್ತಿ, ಸರಯೂನದಿ ಮುಂತಾದ ಪಾತ್ರಗಳು ಗೌತಮ, ಹರಿಯರಂತೆಯೆ ಬದಲಾಗುವ ಪ್ರತಿ ಕಾಲಘಟ್ಟದಲ್ಲಿಯೂ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರೆಲ್ಲದರ ಮಧ್ಯೆ ಹರಿಯುವುದು ಇತಿಹಾಸ. ಕುರ್ರತುಲೈನರಿಗೆ  ಸಲ್ಲಬೇಕಾದ ವಿಶ್ವವಿಖ್ಯಾತಿ ತಡವಾಗಾದರು ಆಕೆ ಬದುಕಿದ್ದಾಗಲೆ ದೊರಕಿದ್ದು ಸಂತಸದ ವಿಚಾರ.

ಇದಲ್ಲದೆ ಹೈದರ್ ಬರೆದಿರುವ, ಕಥೆಗಳು, ನಾಟಕ ಇತ್ಯಾದಿಗಳನ್ನು ಓದುತ್ತಿದ್ದರೆ ಆಕೆಯ ಯೋಚನೆ ಎಷ್ಟು ‘ಗ್ಲೋಬಲ್’ ಆಗಿತ್ತು ಎಂದು ಅನ್ನಿಸತೊಡಗುತ್ತದೆ. ಆಕೆಯ ರಚನೆಗಳನ್ನು ‘ಮುಸ್ಲಿಂ ಮಹಿಳಾ ಸಾಹಿತ್ಯ’ ಎಂದು ಬ್ರ್ಯಾಂಡ್ ಮಾಡುವಂತೆಯೆ ಇಲ್ಲ. ಮದುವೆಯಾಗದೆ ಉಳಿದ ಹೈದರ್ ಬಹಳ ‘ಮೂಡೀ’ ವ್ಯಕ್ತಿಯೆನಿಸಿದರು ಸಾಹಿತ್ಯದ ಬಗ್ಗೆ ಸಂವಾದ ನಡೆಸುವುದೆಂದರೆ ಸಂತಸದಿಂದ ತಯಾರಾಗಿಬಿಡುತ್ತಿದ್ದರು. ಅವರ ಪತ್ರಿಕೋದ್ಯಮಿ ಗೆಳೆಯರ ಬಳಗದಲ್ಲಿ ಸದಾ ತನ್ನ ಹೊಳಹುಗಳ ಆಣಿಮುತ್ತುಗಳನ್ನುದುರಿಸುತ್ತ ಜನಪ್ರಿಯವಾಗಿದ್ದರು. ಕ್ಯಾಲಿಫೋರ್ನಿಯಾ, ವಿಸ್ಕಾನ್ಸಿನ್, ಶಿಕಾಗೋ ಮೊದಲಾದ ಹಲವಾರು ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕಿಯಾಗಿದ್ದ ಹೈದರ್ ಗಳಿಸಿದ ಪ್ರಶಸ್ತಿಗಳು – ಪದ್ಮಶ್ರೀ, ಪದ್ಮಭೂಷಣ, ಜ್ಜಾನಪೀಠ, ಸಾಹಿತ್ಯ ಅಕಾಡೆಮಿ, ಸೋವಿಯೆತ್ ಲ್ಯಾಂಡ್ ನೆಹರೂ, ಗಾಲಿಬ್ – ಒಂದೇ ಎರಡೇ?

ಜೀವನವನ್ನು ತನ್ನದೆ ರೀತಿಯಲ್ಲಿ ವ್ಯಾಖ್ಯಾನಿಸಿ, ಅದೇ ರೀತಿ ಬಾಳಿದ ನನ್ನ ‘ಆನಿ’ ಆಪಾ ಇಂದು ಇಲ್ಲ. ನನಗೆ ಅದನ್ನು ಜೀರ್ಣ ಮಾಡಿಕೊಳ್ಳಲಾಗುತ್ತಿಲ್ಲವೊ, ಅಥವಾ ನಾನೆ ಕೊರಡಿನ ತರಹ ಆಗಿದ್ದೇನೊ ತಿಳಿಯುತ್ತ ಇಲ್ಲ. ಸುಮ್ಮನೆ ಅಡ್ಡಾಡಿಕೊಂಡಿದ್ದೇನೆ, ಆಕೆಯ ನೂರಾರು ಪಾತ್ರಗಳ ವೈಭವಯುತ ಮೆರವಣಿಗೆಯ ನಡುವೆ ಎಲ್ಲೊ. ಅಲ್ಲೆ ಒಮ್ಮೆಯಾದರು ಆಕೆಯನ್ನು ಭೇಟಿಯಾಗಬಹುದು ಎಂಬ ಆಸೆ ಹೊತ್ತು.
 

ಚಿತ್ರಕೃಪೆ: ಜ್ಜಾನ

www.i16.tinypic.com/520td79.jpg

Comments (13)

ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ ಕ್ಯಾಂಟೀನಿನಲ್ಲಿ ಟೀ ಕುಡಿದುಕೊಂಡು ಮಶ್ಕಿರಿ ಮಾಡಿಕೊಂಡು ಕಾಲಕಳೆಯುವ ಗೆಳೆಯರ ಗುಂಪುಗಳು, ಮೈದಾನದಲ್ಲಿ ಆಡುವವರ ಕೇಕೆ, ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂತು ಹರಟೆ ಕೊಚ್ಚುವವರು, ಇಬ್ಬಿಬ್ಬರೆ ಅಲ್ಲಿಇಲ್ಲಿ ಓಡಾಡಿಕೊಂಡು ತಾವು ಪ್ರೇಮಿಗಳೆಂದು ಸಾರುವ ಜೋಡಿಗಳು..ಹಾಗೂ ಇದನ್ನೆಲ್ಲ ಮೌನವಾಗಿ ನಿಂತು ನೋಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು.

ನಾವು ಹೊಸತಾಗಿ ಕ್ಯಾಂಪಸ್ಸಿಗೆ ಬಂದಾಗ ಅಲ್ಲಿನ ಇತರ ಎಲ್ಲ ಕಟ್ಟಡ, ಜನರು ಹಾಗೂ ಮರಗಿಡಗಳ ಜತೆಗೇ ಕುವೆಂಪುರವರೂ ನಿಗೂಢವಾಗಿ ಕಂಡಿದ್ದರು. ಅವರಿರುವ ದೊಡ್ಡ ಕಲ್ಲುಕಟ್ಟೆ ಸೀನಿಯರುಗಳ ಸ್ವತ್ತಾಗಿದ್ದಿದ್ದೂ ಒಂದು ಬಲವಾದ ಕಾರಣ. ಸಂಜೆಗಳಲ್ಲಿ ಆರಾಮವಾಗಿ ಕುವೆಂಪುರವರ ಕಾಲಬುಡದಲ್ಲಿ ಕೂತುಕೊಂಡು ಅವರು ನಡೆಸುವ ಮಾತುಕತೆಗಳ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಆದರೆ ನಾವೇನಾದರೂ ಅಪ್ಪಿತಪ್ಪಿ ಆ ಕಟ್ಟೆಯ ಮೆಟ್ಟಿಲು ಹತ್ತಿದರೂ ಸೀನಿಯರುಗಳ ಕೆಂಗಣ್ಣಿಗೆ ಗುರಿಯಾಗುವ ಭಯ. ನಾವುಗಳು ಸ್ವಲ್ಪ ನಿರ್ಭಿಡೆಯಿಂದ ನಡೆದುಕೊಂಡರೆ ನಮ್ಮ ವಿಭಾಗಗಳಲ್ಲಿ ಹೊಸಬರಿಗೆ ನೀಡಲಾಗುವ ‘ವೆಲ್ಕಂ’ ಸಮಯದಲ್ಲಿ ತೊಂದರೆಯಾಗಬಹುದು ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಹಿರಿಯ ವಿದ್ಯಾರ್ಥಿಗಳೂ ಕೂಡ (ಮೊದಲ ಕೆಲವು ದಿನಗಳವರೆಗೆ..)ನಾವು ಕಂಡರೂ ಕಾಣದಂತೆ ವರ್ತಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಹೀಗಾಯಿತು. ನಾನು ಕವಿತೆ ಬರೆಯುತ್ತೇನೆ ಎಂದು ನಮ್ಮ ವಿಭಾಗದ ಒಬ್ಬ ಸೀನಿಯರ್ ವಿದ್ಯಾರ್ಥಿಗೆ ತಿಳಿದುಬಂತು. ಅವ ಹೌದೆ ಎಂದು ಕೇಳಿದ. ನಾನು ಹೂಂ ಎಂದೆ. ಆತನೂ ಚೆನ್ನಾಗಿ ಬರೆಯುತ್ತಾನೆಂದು ಹೆಸರಿದ್ದುದರಿಂದ ನಾನು ನನ್ನ ಬರಹದ ಕೆಲವು ಸ್ಯಾಂಪಲ್ಲುಗಳನ್ನು ಆತನಿಗೆ ತೋರಿಸುವುದೆಂದು ತೀಮರ್ಮಾನವಾಯಿತು. ಸಂಜೆ ನನ್ನ ಒಂದೆರಡು ಕವನಗಳನ್ನು ಆತನಿಗೆ ಲೈಬ್ರರಿಯಲ್ಲಿ ಕೊಟ್ಟೆ. ಆತ ಅವನ್ನು ಓದಿ, ‘ನಾನು ನಿನ್ನ ಕವನಗಳ ಬಗ್ಗೆ ಒಂದೆರಡು ಮಾತು ಹೇಳಬೇಕಿದೆ.’ ಎಂದ. ಸರಿ ಎಂದು ಮಾತನಾಡುತ್ತ ಲೈಬ್ರರಿಯಿಂದ ಹೊರಗೆ ಬಂದು ಕುಳಿತೆವು. ಕವಿತೆಗಳ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ. ಚರ್ಚೆ ಮುಗಿಯಿತು. ನಾವು ಅಲ್ಲಿಯತನಕ ಕೂತದ್ದು ಕುವೆಂಪು ಕಟ್ಟೆಯ ಮೇಲೆ ಎಂದು ಆಗ ನನಗೆ ಅರಿವಾಯಿತು. ಸುಮಾರುಜನ ಹಿರಿಯ ಹಾಗು ನನ್ನ ಬ್ಯಾಚಿನ ವಿದ್ಯಾರ್ಥಿಗಳು ನನ್ನನ್ನು ವಿಚಿತ್ರವಾಗಿ ನೋಡುತ್ತ ಇದ್ದರು. ನಾನು ಒಳೊಳಗೆ ಸಣ್ಣ ಆತಂಕವಿದ್ದರೂ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಹಾಸ್ಟೆಲ್ಲಿಗೆ ಹೋದೆ.

ರಾತ್ರಿ ಊಟದ ವೇಳೆ ಸುಮಾರು ಗೆಳತಿಯರು ಬಂದು ನನ್ನ ಧೈರ್ಯವನ್ನು ಅಭಿನಂದಿಸಿದರು. ಕೆಲವರು ನಾನು ಅಲ್ಲಿ ಕೂತದ್ದು, ಅದೂ ಒಬ್ಬ ಸೀನಿಯರ್ ಹುಡುಗನೊಡನೆ -  ಸರಿಯಲ್ಲವೆಂದೂ, ನನ್ನ ಇಮೇಜಿಗೆ ತೊಂದರೆಯಾಗಬಹುದೆಂದೂ ಮಾತನಾಡಿದರು. ನನ್ನದೊಂದು ‘ಇಮೇಜು’ ಕೂಡ ಇತ್ತು ಹಾಗೂ ಅದು ಸಂಜೆಯ ನಂತರ ಬದಲಾಯಿತು ಎಂದು ನನಗೆ ತಿಳಿಯಿತು. ಕೆಲವು ಹಿರಿಯ ಹುಡುಗಿಯರು ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು ನನ್ನ ಕಿವಿಗೆ ಬಿತ್ತು.

ನಾನು ಮಾರನೆಯ ದಿನ ಸಂಜೆ ಒಂದು ಕೆಲಸ ಮಾಡಿದೆ. ನನ್ನ ಶಿವಮೊಗ್ಗೆಯಿಂದ ಬರುವ ಕೆಲವು ಸ್ನೇಹಿತೆಯರೊಡನೆ ಬೇಕೆಂದೆ ಕಟ್ಟೆಯ ಮೇಲೆ ಕುಳಿತು ಅವರ ಬಸ್ಸು ಬರುವ ತನಕ ಹರಟೆ ಹೊಡೆದೆ. ಅವರು ನನ್ನ ತರಲೆಯನ್ನೆಲ್ಲ ಖುಶಿಯಾಗಿ ಆನಂದಿಸಿ ಹೋದರು. ಮಾರನೆಯ ದಿನ ನನ್ನ ಕ್ಲಾಸಿನ ಸ್ನೇಹಿತೆಯರನ್ನು ಎಳೆದುಕೊಂಡು ಹೋದೆ. ಬಹಳ ಗಾಬರಿಯಾದರೂ ಅವರಿಗೂ ಒಂದು ಬಗೆಯ ಥ್ರಿಲ್ಲೆನಿಸಿತು. ಆಮೇಲೆ ನಾವು ಯಾರ ಪರಿವೆಯೂ ಇಲ್ಲದೆ ಕುವೆಂಪುರವರ ಬಳಿ ಕೂರಲಾರಂಭಿಸಿದೆವು. ಮೆಲ್ಲಮೆಲ್ಲನೆ ಇತರ ಗೆಳೆಯರೂ ಶಾಮೀಲಾದರು. ಆಮೇಲೆ ನಮ್ಮ ಮಾಸ್ಟರ್ಸ್ ಕೋರ್ಸು ಮುಗಿಯುವವರೆಗೂ ನಮ್ಮ ಸಂಜೆಗಳ ಕವಿತಾವಾಚನಗಳಲ್ಲಿ, ಚರ್ಚೆ, ಗುದ್ದಾಟ, ಹರಟೆ, ಸಂಭ್ರಮಗಳಲ್ಲಿ ಕುವೆಂಪುರವರ ದಿವ್ಯಮೌನ ಇದ್ದೇ ಇರುತ್ತಿತ್ತು. ಏನೆ ಇರಲಿ, ನಾನು ಅಂದು ಮೊದಲ ಬಾರಿಗೆ ಆ ಕಟ್ಟೆಯ ಮೇಲೆ ಪರಿವೆಯಿಲ್ಲದೆ ಅಚಾನಕ್ಕಾಗಿ ಕೂತದ್ದು, ಆ ಮೂಲಕ ಒಂದು ಸಣ್ಣ ನಿಯಮವನ್ನು ಮುರಿದದ್ದು ನನ್ನ ‘ಇಮೇಜ’ನ್ನು ಬದಲಾಯಿಸಿದ್ದಂತೂ ಸತ್ಯ.

ಚಿತ್ರಕೃಪೆ: www1.istockphotos.com
 

Comments (12)