Archive for December, 2008

‘ಫ್ರಾಂಕೆನ್ ಸ್ಟೈನನ ತಾಯಿ’

shelley11

ಆಕೆಯ ಹುಟ್ಟೇ ವಿಶೇಷವಾದ್ದಾಗಿತ್ತು. ಆಕೆ ಜನಿಸಿದ್ದು ಫ್ರೆಂಚ್ ಕ್ರಾಂತಿ ನಡೆಯುತ್ತಿದ್ದಾಗ. ಗುಪ್ತ ಪ್ರಣಯವೊಂದರ ಫಲ ಅವಳು. ಆಕೆ ಜನಿಸಿದ ಘಳಿಗೆ ಗಾಥಿಕ್ ಕಥೆಯೊಂದರ ಭಾಗದಂತೆ ಇತ್ತು – ಎಲ್ಲೆಲ್ಲು ಬಿರುಗಾಳಿ, ಶಕುನಗಳು, ಬೆಚ್ಚಿಬೀಳಿಸುವ ಘಟನೆಗಳು, ಹಾಗೂ ಆಕೆಯ ಬರವನ್ನು ಸಹಸ್ರಾರು ಜನರಿಗೆ ತನ್ನ ನೆನಪೋಲೆಗಳ ಮುಖಾಂತರ ಸಾರಿದ ಆಕೆಯ ತಂದೆ. ಆಕೆ ತನ್ನ ಹೆಸರು ಬರೆಯಲು ಕಲಿತಿದ್ದು ತನ್ನದೇ ಹೆಸರುಳ್ಳ ತಾಯಿಯ ಸಮಾಧಿಯ ಮೇಲೆ ಬರೆದಿದ್ದ ಅಕ್ಷರಗಳಿಂದ! ಬಾಲ್ಯದಲ್ಲು ಆಕೆಯನ್ನು ಒಂದು ವಿಶೇಷ ವ್ಯಕ್ತಿಯಂತೆ ನಡೆಸಿಕೊಳ್ಳಲಾಯಿತು. ಆಕೆ ದಿನಬೆಳಗಾಗೆದ್ದು ನೋಡುತ್ತಿದ್ದದ್ದೇ ಕವಿಗಳು ಹಾಗೂ ಲೇಖಕರನ್ನು. ಕೊಲ್ರಿಜ್, ಚಾರ್ಲ್ಸ್ ಲ್ಯಾಂಬ್ ಮೊದಲಾದವರು ಆಗಾಗ್ಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು. ಆಕೆಯ ಬಗ್ಗೆ ಆಗಲೆ ಬಹಳಷ್ಟು ಚರ್ಚೆಗಳು, ನಿರೀಕ್ಷೆಗಳು ಹುಟ್ಟಿಕೊಳ್ಳಲಾರಂಭಿಸಿದವು. ಆದರೆ ಆಕೆ ಬದುಕಿದ್ದು ಈ ಎಲ್ಲ ನಿರೀಕ್ಷೆಗಳಿಗೆ ವಿರುದ್ಧವಾಗಿ. ಆಕೆ ಮೇರಿ ಶೆಲ್ಲಿ.
ರೊಮ್ಯಾಂಟಿಕ್ ಪಂಥದ ಪ್ರಮುಖ ಬರಹಗಾರರಾದ ಶೆಲ್ಲಿ, ಬೈರನ್ ಮತ್ತು ಕೀಟ್ಸರ ಜತೆಗೆ ಮೇರಿ ಶೆಲ್ಲಿಯ ಹೆಸರು ಕೇಳಬರುತ್ತದೆ. ಆದರೆ ರೊಮ್ಯಾಂಟಿಕ್ ಚಳುವಳಿಯಿಂದ ವಿಕ್ಟೋರಿಯನ್ ಚಳುವಳಿಯವರೆಗೂ ಬದುಕಿದ ಅಪರೂಪದ ಬರಹಗಾರ್ತಿ ಮೇರಿ ಶೆಲ್ಲಿ. ತಾಯಿ ಪ್ರಖ್ಯಾತ ಮಹಿಳಾವಾದಿ ಮೇರಿ ವೂಲ್ಸ್ಟೊನ್ ಕ್ರಾಫ್ಟ್. ತಂದೆ ವಿಲಿಯಂ ಗಾಡ್ವಿನ್, ಖ್ಯಾತ ಬರಹಗಾರ. ಜನನ ಆಗಸ್ಟ್ 30, 1797 ರಂದು.
ಕೇವಲ ಹದಿನಾರನೆ ವಯಸ್ಸಿನಲ್ಲಿ ಆಕೆ ತನ್ನ ತಂದೆಯ ಶಿಷ್ಯ ಕವಿ ಶೆಲ್ಲಿಯನ್ನು ಪ್ರೇಮಿಸಿ ಅತನೊಡನೆ ಯುರೋಪಿಗೆ ಪಲಾಯನ ಮಾಡಿದಳು. ಬ್ಯಾರೊನೆಟ್ ಒಬ್ಬಾಕೆಯನ್ನು ಆಗಲೇ ಮದುವೆಯಾಗಿದ್ದ ಶೆಲ್ಲಿ ಅಸಂತುಷ್ಟನಾಗಿದ್ದ. ಇಬ್ಬರೂ ಹಲವಾರು ಬಾರಿ ಯುರೋಪಿಗೆ ಹೋಗಿಬಂದರು. ಎಲ್ಲೆಡೆ ಇವರ ಸಂಬಂಧಕ್ಕೆ ಅಪಾರ ವಿರೋಧ ವ್ಯಕ್ತವಾಯಿತು. ಮೇರಿಯ ತಂದೆ ಗಾಡ್ವಿನ್ ಆಕೆಯನ್ನು ವಾಪಾಸು ಮನೆಗೆ ಸೇರಿಸಿಕೊಳ್ಳಲಿಲ್ಲ. ಮೇರಿ ತನ್ನ ಪ್ರಿಯಕರನನ್ನು ಬಿಡಲು ಸಿದ್ಧಳಿರಲಿಲ್ಲ. 1816ರಲ್ಲಿ ಇಬ್ಬರೂ ಸ್ವಿಜರ್ಲ್ಯಾಂಡಿನ ಲೇಕ್ ಜಿನೀವಾಗೆ ಕವಿ ಬೈರನ್ ಮತ್ತು ಆತನ ಸ್ನೇಹಿತ ಪಾಲಿಡೊರಿಯ ಸಂಗಡ ಪ್ರಯಾಣ ಬೆಳೆಸಿದರು. ಅಲ್ಲಿ ಬೈರನ್ ತಾವೆಲ್ಲರೂ ಒಂದೊಂದು ಭೂತಪಿಶಾಚಿಗಳ ಕಥೆಯನ್ನು ಬರೆಯಬೇಕೆಂದು ಸಲಹೆ ನೀಡಿದ. ನಾಲ್ವರೂ ಕೂತು ಕಥೆ ಬರೆದರು. ಆ ನಾಲ್ಕೂ ಕಥೆಗಳಲ್ಲಿ ಪ್ರಕಟವಾದ ಕಥೆ ಮೇರಿ ಶೆಲ್ಲಿಯದು. ಅದರ ಶೀರ್ಷಿಕೆ ‘ಫ್ರಾಂಕೆನ್ ಸ್ಟೈನ್’. ಮೇರಿಗೆ ಆಗ ಕೇವಲ ಹತ್ತೊಂಬತ್ತು ವರುಷ.
ಅದೇ ವರುಷ ಶೆಲ್ಲಿಯ ಹೆಂಡತಿ ಹ್ಯಾರಿಯೆಟ್ ಆತ್ಮಹತ್ಯೆ ಮಾಡಿಕೊಂಡಳು. ಶೆಲ್ಲಿ ಮತ್ತು ಮೇರಿ ಮದುವೆ ಮಾಡಿಕೊಂಡರು. ಈ ಮದುವೆಯ ಇಂಗ್ಲೆಂಡಿನಲ್ಲಿ ಬಹಳ ಆಕ್ರೋಶ, ವಿರೋಧಗಳನ್ನು ದಂಪತಿಗಳು ಎದುರಿಸಬೇಕಾಯಿತು. ಹಿಂಸೆ ತಡೆಯಲಾರದೆ ಇಬ್ಬರೂ ಇಟಲಿಗೆ ವಲಸೆ ಹೋದರು. ಆದರೆ ಅಲ್ಲಿ ತನ್ನ ಎರಡೂ ಮಕ್ಕಳ ಸಾವಿನಿಂದ ಮೇರಿ ಚೇತರಿಸಿಕೊಳ್ಳಲಾಗದಷ್ಟು ನೋವು ಅನುಭವಿಸಿದಳು. ಆದರೆ ಶೆಲ್ಲಿ ಆಕೆಯನ್ನು ಹೆಚ್ಚು ಬರೆಯಲು ಹಾಗೂ ಸ್ವತಂತ್ರವಾಗಿ ಬದುಕಲು ಪ್ರೋತ್ಸಾಹಿಸಿದ. ಒಂದು ಗಂಡುಮಗುವೂ ಆಯಿತು. ಇನ್ನೇನು ಎಲ್ಲ ಸರಿಹೋಯಿತು ಎನ್ನುವಾಗ ಇಪ್ಪತ್ನಾಲ್ಕರ ಹರೆಯದ ಮೇರಿಯನ್ನು ಶೆಲ್ಲಿಯ ಆತ್ಮಹತ್ಯೆ ಧೃತಿಗೆಡಿಸಿತು. ಆಕೆಯ ಬಳಿ ಕವಡೆಕಾಸೂ ಇರಲಿಲ್ಲ. ತಂದೆಯ ಬಳಿಗೆ ವಾಪಾಸು ಬಂದ ಆಕೆಯನ್ನು ಎಲ್ಲರು ತಿರಸ್ಕರಿಸಿದರು. ಬಡತನದ ಬಾಳು. ಆಕೆಗೆ ಬೇಸರವಿದ್ದರು ತಂದೆ ಹಾಗೂ ಮಗನನ್ನು ನೋಡಿಕೊಳ್ಳಲು ವೃತ್ತಿನಿರತ ಲೇಖಕಿಯಾಗಿ ಕೆಲಸ ಮಾಡಿದಳು. ಶೆಲ್ಲಿಯ ಮರಣಾನಂತರದ ಇಪ್ಪತ್ತೊಂಬತ್ತು ವರ್ಷಗಳನ್ನು ಆಕೆ ಕಳೆದಿದ್ದು ಹೀಗೆ. ಮೆಲ್ಲನೆ ಆಕೆಯ ಸುತ್ತ ಕವಿಗಳು, ಲೇಖಕರು ಹಾಗೂ ರಾಜಕಾರಣಿಗಳ ಒಂದು ಗುಂಪು ಹುಟ್ಟಿಕೊಂಡಿತು. ತನ್ನ ಮಧ್ಯವಯಸ್ಸಿನಲ್ಲಿ ಮೇರಿ ತನ್ನ ತಾಯಿ ಪ್ರತಿಪಾದಿಸಿದ ಸಾಂಪ್ರದಾಯಿಕ ಮಹಿಳಾವಾದವನ್ನು ಅಪ್ಪಿಕೊಂಡಳು. ಆಕೆಯ ಈ ನಿರ್ಧಾರ ಆಗಿನ ಸಾಮಾಜಿಕ ಪರಿಸ್ಥಿತಿಯ ಆಳವಾದ ಅಧ್ಯಯನದಿಂದ ಮೂಡಿಬಂದಿದ್ದಾಗಿತ್ತು.
1851ರಲ್ಲಿ ಮೇರಿ ಮೆದುಳಿನ ರಕ್ತಸ್ರಾವದಿಂದ ಮರಣ ಹೊಂದಿದಳು. ಇಂದಿಗೂ ‘ಫ್ರಾಂಕೆನ್ ಸ್ಟೈನ್’ ಅನ್ನು ವಿಶ್ವಸಾಹಿತ್ಯ ಪರಂಪರೆಯ ಅತ್ಯುತ್ತಮ ಗಾಥಿಕ್ ಕಾದಂಬರಿಯೆಂದು ಪರಿಗಣಿಸಲಾಗುತ್ತದೆ. ಆಕೆಯ ‘ಫ್ರಾಂಕೆನ್ ಸ್ಟೈನ್’ನ ನಾಯಕ ವಿಕ್ಟರ್ ಫ್ರಾಂಕೆನ್ ಸ್ಟೈನ್ ಓರ್ವ ವಿಜ್ನಾನಿ. ಜೀವಸೃಷ್ಟಿಯ ತಂತ್ರಜ್ನ್ಯಾನವನ್ನು ಸಾಧಿಸಿಕೊಂಡವ. ತಾನು ದೇವರಿಗೆ ಸರಿಸಮಾನನೆಂಬ ಮತ್ತಿನಲ್ಲಿ ಆತ ಮನುಷ್ಯನಂತೆ ಇರುವ ಆದರೆ ಅಪಾರ ಬಲಶಾಲಿಯಾದ ‘ಜೀವಿ’ಯೊಂದನ್ನು ಸೃಷ್ಟಿಸುತ್ತಾನೆ. ನಂತರ ಆ ಜೀವಿ ಮಾಡುವ ಅನಾಹುತಗಳನ್ನು ಕಂಡು ಹೌಹಾರುತ್ತಾನೆ. ತನ್ನ ‘ಫ್ರಾಂಕೆನ್ ಸ್ಟೈನ್’ನಲ್ಲಿ ತಂತ್ರಜ್ನ್ಯಾನದ ಅನಾಹುತಗಳ ಬಗ್ಗೆ ಸಾರಿದ್ದ ಮೇರಿ ಮರಣ ಹೊಂದಿದ ವರುಷವೇ ಇಂಗ್ಲೆಂಡಿನಲ್ಲಿ ತಂತ್ರಜ್ನಾನದ ಬೆಳವಣಿಗೆಯನ್ನು ಬಿಂಬಿಸಲೆಂದು ಒಂದು ಬೃಹತ್ ಪ್ರದರ್ಶನ ಚಾಲನೆಗೊಂಡಿತು. ಇದು ಕವಿಸಮಯವೇ, ವಿಪರ್ಯಾಸವೆ?

pic coutesy: www.education.mcgill.ca

Comments (9)

ಡಿಸೆಂಬರ್ ಮೆಲುಕುಗಳು

pic-solan-women20in20fog1

‘ಬೂಹೂ!’ ಎಂದು ಆಕೆ ಅಳುತ್ತ ಇದ್ದಳು ಮತ್ತು ಆಕೆಯನ್ನು ನೋಡುತ್ತ ನನಗೆ ಯಾಕೊ ನಗೆ ಉಕ್ಕಿ ಉಕ್ಕಿ ಬರುತ್ತ ಇತ್ತು. ಆಕೆಯ ಹುಡುಗ ಕಾಣಲು ಬರುತ್ತೇನೆ ಎಂದು ಹೇಳಿ ಕೈಕೊಟ್ಟಿದ್ದ. ನನಗೆ ಈ ಥರದ ‘ಸೊರಬರ’ ಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗಿ ಮುಜುಗರ ಬರಿಸುತ್ತವೆ. ಟಿಶ್ಯೂ ಪೇಪರಿನ ಬಾಕ್ಸು ಆಕೆಯ ಕೈಗಿತ್ತು ನೋಡಿದೆ. ಉಹೂಂ. ಧಾರೆ ಜೋರಾಗಿ ಉಕ್ಕಲಾರಂಭಿಸಿತೆ ವಿನಃ ಕಡಿಮೆಯಾಗುವ ಹಾಗೆ ಕಾಣಲೆ ಇಲ್ಲ. ಒಂದು ಲೋಟ ನೀರು. ಒಳ್ಳೆಯ ಮದ್ದು. ‘ಮುಖ ತೊಳಕೋ, ಫ್ರೆಶ್ ಅನ್ಸತ್ತೆ’ ಎಂದು ಎದ್ದು ಹೋಗಿ ಎರಡು ಕಪ್ ಬಿಸಿಬಿಸಿ ಟೀ ಮಾಡಿಕೊಂಡು ಬಂದೆ. ಆಕೆ ಅಳಿಸಿಹೋಗಿದ್ದ ಐಲೈನರು ಹಚ್ಚಿಕೊಳ್ಳುತ್ತ ಇದ್ದಳು. ಆಕೆಯ ಕಣ್ಣ ರೆಪ್ಪೆಗಳ ಉದ್ದಕ್ಕು ಹಾವಿನಂತೆ ಹಬ್ಬಿದ್ದ ಕರಿಯ ಗೆರೆಯನ್ನೆ ನೋಡುತ್ತ ನಿಂತೆ. ‘ಅಳು ಎಂದರೆ ಅಳಿಸಿಹೋದ ಐಲೈನರು’ ಅನ್ನಿಸಿ ಮತ್ತೆ ನಗು ಉಕ್ಕಿತು. ಟೀ ಕುಡಿದು ‘ಹೊರಡ್ತೀನಿ. ಆಫೀಸಿಗೆ ಹೋಗ್ಬೇಕು.’ ಎಂದು ಹೊರಟಳು. ಆಕೆಯ ದುಃಖ ಆಫೀಸಿನ ಮೆಟ್ಟಿಲು ಹತ್ತುವವರೆಗಷ್ಟೆ ಸೀಮಿತವಾಗಿರುವುದೆ ಎಂದು ಯೋಚನೆ ಮಾಡಿದೆ.

ಚಳಿಗಾಳಿ ಮುಖಕ್ಕೆ ರಾಚಿತು. ಕಿಟಕಿ ಮುಚ್ಚಿದೆ. ಮನೆಗಳು ಬೆಚ್ಚಗಿರಬೇಕು. ಅಪ್ಪ ಚಳಿಗಾಲದಲ್ಲಿ ಬೆಳಜಾವ ತಾನೆದ್ದ ಮೇಲೆ ತನ್ನ ಕಂಬಳಿಯನ್ನು ನಮಗೆ ಹೊದಿಸಿ ಹೋಗುತ್ತ ಇದ್ದರು. ನಾವು ತಲೆಪೂರ್ತಿ ಕಂಬಳಿ ಹೊದ್ದು ಅದರೊಳಗೆ ಹೊಡೆದಾಟ ನಡೆಸುತ್ತ ಇರುತ್ತಿದ್ದೆವು. ನೀರೊಲೆಗೆ ಉರಿ ಹಾಕಿ ನಮ್ಮನ್ನೆಬ್ಬಿಸಿದ ಮೇಲೆ ನಾವು ಮಂಕಿಕ್ಯಾಪು ಹಾಕಿಕೊಂಡು ಅಂಗಳದಲ್ಲಿ ಬೀಳುತ್ತಿದ್ದ ಮಂಜು ನೋಡುತ್ತ ಉಫ್ ಉಫ್ಫೆಂದು ಊದಿ ನಮ್ಮ ಬಾಯಿಂದ ಬರುವ ಹಬೆಯನ್ನು ನೋಡುತ್ತ ನಾವು ಸಿಗರೇಟು ಸೇದುತ್ತಿದ್ದೇವೆಂದು ಭಾವಿಸಿಕೊಂಡು ಸಂತಸಪಡುತ್ತಿದ್ದೆವು. ಆಮೇಲೆ ತೆಂಗಿನಸಸಿಗಳಿಗೆ ನೀರು ಹಣಿಸಬೇಕು. ಅದೆಲ್ಲ ಆದಮೇಲೆ ಸ್ನಾನ, ತಿಂಡಿ, ಸ್ಕೂಲು.. ನಮ್ಮ ದಿನಕ್ಕೊಂದು ಲಯಬದ್ಧತೆಯಿತ್ತು. ತುಂಟತನ ಮೇರೆಮೀರಿದರೆ ಬೀಳುವ ಏಟುಗಳಿಗೆ ನೋವಾಗಿ ಅಳು ಬರುತ್ತಿತ್ತೆ ವಿನಃ ದುಃಖ ಅಂದರೆ ಏನೆಂದು ನಮಗೆ ಗೊತ್ತೇ ಇರಲಿಲ್ಲ. ಕಾಲೇಜಿನಲ್ಲಿ ಗೆಳತಿಯರೆಲ್ಲ ‘ನೀನು ಯಾಕೆ ಅಳೊಲ್ಲ?’ ಎಂದು ಕೇಳಿದರು ನಕ್ಕುಬಿಡುತ್ತ ಇದ್ದೆ.

ಮೊನ್ನೆ ಸಂಜೆ ಯಾಕೊ ಸ್ವೆಟರು ಹಾಕಲು ಕೇಳದೆ ಮೊಂಡಾಟ ಮಾಡುತ್ತ ಇದ್ದ ಮಗಳ ಮೇಲೆ ರೇಗಿದೆ. ದುಃಖಿಸೀ ದುಃಖಿಸೀ ಅತ್ತಳು. ‘ನೀನು ನಂಗೆ ಬೈದ್ರೆ ನಾನು ತುಂಬಾ ಅಳ್ತೀನಿ. ಮನೇ ಬಿಟ್ಟು ಚಿಕ್ಕಪ್ಪನ ಮನೆಗೆ ಹೋಗ್ತೀನಿ.’ ಅಂದಳು. ನನಗೆ ತಲೆಯ ಮೇಲೆ ಪಟ್ಟನೆ ಬಾರಿಸಿದ ಹಾಗಾಗಿ ಸುಮ್ಮನೆ ಕೂತೆ. ಏನು ಹೇಳಲಿ ಇಂಥ ಮಗುವಿಗೆ? ‘ಎಲ್ಲದನ್ನೂ ಚೆಂದ ಮಾಡಿಕೋಬೇಕು ಕಣವ್ವಾ, ಇದು ಆಗದೆ ಇರೋ ಕೆಲಸ ಏನಲ್ಲ’ ಮಂಜು ಯಾವಾಗಲು ಹೇಳುವುದು ನೆನಪಾಯಿತು. ಅವಳ ಬಳಿ ಹೋದೆ. ‘ಎಷ್ಟು ಹೊತ್ತಿಗೆ ಮನೆಬಿಟ್ಟು ಹೋಗ್ತೀ?’ ಕೇಳಿದೆ. ಮುಖ ಉಬ್ಬಿಸಿಕೊಂಡು, ‘ಈಗ ಕತ್ತಲಾಗಿದೆ, ಚಳಿ. ನಾಳೆ ಬೆಳಿಗ್ಗೆ ಹೋಗ್ತೀನಿ’ ಅಂದಳು. ನಾನು ಹುಬ್ಬು ಹಾರಿಸಿದೆ. ಕೆಟ್ಟಕೆಟ್ಟ ಮುಖ ಮಾಡಿದೆ. ಇಬ್ಬರೂ ನಕ್ಕೆವು. ಅವಳು ಸ್ವೆಟರು ಹಾಕಿಸಿಕೊಂಡಳು. ನಾನು ಮೊನ್ನೆ ಮೈಸೂರಿಗೆ ಸ್ವೆಟರಿಲ್ಲದೆ ಹೋಗಿ ಯಾವುದೊ ದುಃಖಕ್ಕೆ ಸಿಲುಕಿ ಮತ್ತೂ ಚಳಿ ಕೊರೆವ ವೊಲ್ವೋ ಬಸ್ಸಿಗೆ ಹತ್ತಿ ಬಂದಿದ್ದು ನೆನಪಾಯಿತು. ಆವತ್ತು ಕೂತು ನಾಲಕ್ಕು ಸಾಲು ಬರೆದಿದ್ದೆ…

ಮೈಸೂರಿಗೆ ಡಿಸೆಂಬರ್ ಕಾಲಿಟ್ಟಿದೆ..

…ಸಂಜೆಯ ಘಳಿಗೆ
ತೆಳುಮಂಜಿನ ಪರದೆ
ಬೀದಿದೀಪಗಳಿಗೂ
ಹೊತ್ತಿಕೊಳ್ಳಲು ನಾಚಿಕೆ
ಟೆಂಟುಗಳೊಳಗಿನ ಮಕ್ಕಳಿಗೆ
ಅಲ್ಲಾಡಲೂ ಬೇಸರ..
ಹರಕು ಕಂಬಳಿಯೊಳಗೆ
ಚಳಿ ನುಗ್ಗಿಬಿಟ್ಟರೆ!
***

ಸೆಟೆದುನಿಂತ
ನೀಲಗಿರಿ ಮರಗಳ ಪಕ್ಕ
ವಾಕಿಂಗ್ ಶೋಕಿಯ ಜನ
ಹರೆಯದ ಬಿಸಿನೋಟದ
ಹುಡುಗ ಹುಡುಗಿಯರು
ಸಂಧ್ಯಾರಾಗ ಹಾಡುವ
ಅಜ್ಜಿ ತಾತಂದಿರು
ಕೊಬ್ಬು ಕರಗಿಸಲು ಪಾಡು ಪಡುವ
ಆಫೀಸು ಹೆಂಗೆಳೆಯರು..
***

ನೋಡುತ್ತ
ಮನೆಯಲಿರುವ ಮಗಳ
ಸುರುಳಿಗೂದಲ ನೆನೆಯುತ್ತ
ಲಹರಿಯಲ್ಲಿ
ನಡೆಯುತ್ತೇನೆ.

ಮೈಸೂರಿಗೆ
ಡಿಸೆಂಬರ್
ಕಾಲಿಟ್ಟಿದೆ.

ಚಿತ್ರಕೃಪೆ: www.upstateartists.com

Comments (20)