Life is real! Life is earnest! And the grave is not its goal; Dust thou art, to dust returnest, Was not spoken of the soul. (ಎಚ್. ಡಬ್ಲ್ಯು.ಲಾಂಗ್ ಫೆಲೋ, A Psalm of Life)
“ಬ್ರಹ್ಮಪುತ್ರದ ಪ್ರೀತಿಯ ಮಗ” ಎನ್ನಿಸಿಕೊಂಡಿದ್ದ, ಭೂಪೆನ್ ಹಜಾರಿಕಾರ ನಿಧನದ ಸುದ್ದಿ ಕೇಳುತ್ತಿದ್ದಂತೆ ಅಸ್ಸಾಮಿನ ಗುವಾಹಟಿಯ ಅತ್ಯಂತ ಟ್ರೆಂಡೀ ಸ್ಥಳಗಳಲ್ಲೊಂದಾದ ಕೆಫೆ ಹೆಂಡ್ರಿಕ್ಸ್ ಈ ಮೇಲೆ ನೀಡಲಾಗಿರುವ ಕವಿತೆಯ ಕೊನೆಯೆರಡು ಸಾಲುಗಳನ್ನು ಉದ್ಧರಿಸುತ್ತ ನವೆಂಬರ್ 7ರಿಂದ 9ರವರೆಗೆ ತಾನು ಶೋಕಾಚರಣೆ ಮಾಡುತ್ತಿರುವುದಾಗಿ ಘೋಷಣೆ ಮಾಡಿತು. ಪಶ್ಚಿಮದ ಅತ್ಯಂತ ವಿವಾದಾಸ್ಪದ ಹಾಡುಗಾರನಾಗಿದ್ದು ಅಷ್ಟೇ ವಿವಾದಾಸ್ಪದವಾಗಿ ಸತ್ತುಹೋದ ಸುಪ್ರಸಿದ್ಧ ಜಿಮಿ ಹೆಂಡ್ರಿಕ್ಸನ ಹೆಸರಿಟ್ಟುಕೊಂಡ, ಯುವಪೀಳಿಗೆ ಮತ್ತು ಪಾಶ್ಚಾತ್ಯ ಸಂಗೀತವನ್ನೇ ಜೀವಾಳವಾಗಿಸಿಕೊಂಡಿರುವ ಈ ಕೆಫೆಯೆಲ್ಲಿ? ಎಂದೂ ಯಾವುದೇ ವಿವಾದಕ್ಕೆ ಗುರಿಯಾಗದೇ, ಈಶಾನ್ಯರಾಜ್ಯಗಳಿಂದ ಬಂದವರೆಂಬ ಲೇಬಲ್ಲಿಗೆ ಸಿಕ್ಕಿಹಾಕಿಕೊಳ್ಳದೆ, ತನ್ನ ನೆಲದ ಸಂಗೀತವನ್ನೇ ಉಸಿರಾಡಿಕೊಂಡು, ಶಾಂತ ನದಿಯೊಂದರಂತೆ ಪ್ರವಹಿಸುತ್ತಿದ್ದ, ಸಂತನಂತೆ ಕಾಣುತ್ತಿದ್ದ, ಹಿರಿಯರಾದ ನಮ್ಮ ’ಭೂಪೆನ್ ದಾ’ ಎಲ್ಲಿ?
ಕವಿ, ಸಂಗೀತಕಾರ, ಹಾಡುಗಾರ, ನಿರ್ದೇಶಕ, ನಟ, ಪತ್ರಕರ್ತ, ಲೇಖಕ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾಗಿದ್ದ ಡಾ. ಭೂಪೆನ್ ಹಜಾರಿಕಾರ ಮೋಡಿಯೇ ಅಂತಹದು. ಅದರಿಂದ ಬಚಾವಾಗಲು ಯಾರಿಗೂ ಸಾಧ್ಯವೇ ಇಲ್ಲ. ಈಶಾನ್ಯ ಭಾರತದ ಸಾಂಸ್ಕೃತಿಕ ರಂಗದ ಅನಭಿಷಿಕ್ತ ರಾಜನೆಂದು ಅವರನ್ನು ಕರೆಯಲಾಗುತ್ತಿತ್ತು. ಭಾರತದ ಸಾಂಸ್ಕೃತಿಕ ಮುಖ್ಯವಾಹಿನಿಯಲ್ಲಿ ಎಂದೂ ಪ್ರಮುಖವಾಗಿ ಕಾಣಬರದಿದ್ದ ಅಸ್ಸಾಮಿನ ಹೆಸರು ಮತ್ತು ಅದರ ಅಮೂಲ್ಯವಾದ ಮಣ್ಣಿನ ಸೊಗಡನ್ನು ಎಲ್ಲರೂ ಸವಿಯುವಂತೆ ಮಾಡಿದವರೇ ಭೂಪೆನ್ ದಾ.
1926ರ ಸೆಪ್ಟೆಂಬರ್ ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಸಣ್ಣ ಊರಾದ ಶೊಡಿಯಾದಲ್ಲಿ ಜನಿಸಿದ ಭೂಪೆನ್ ಹಜಾರಿಕಾ ಗುವಾಹಟಿಯಲ್ಲಿ ಇಂಟರ್ ತನಕ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಪೊಲಿಟಿಕಲ್ ಸೈನ್ಸ್ ಪದವಿಯನ್ನು 1946ರಲ್ಲಿ ಪಡೆದರು. ಇವರ ಹುಟ್ಟಿದೂರಾದ ಶೊಡಿಯಾವು ಅಲ್ಲಿ ಮಾತ್ರ ಹುಟ್ಟಿ ಅರಳುವ ಸೊತ್ಫುಲ್ ಎಂಬ ಮಲ್ಲಿಗೆಯ ತರಹದ ಸುವಾಸಿತ ಪುಷ್ಪಕ್ಕೆ ಹೆಸರುವಾಸಿ. ಸೊತ್ಫುಲ್ ಎಂದರೆ ’ಆಶೀರ್ವಾದ’ ಅಥವಾ ’ಮರುಭೂಮಿಯ ಹೂವು’ ಎಂಬ ಅರ್ಥವಿದೆ. ಭೂಪೆನ್ ಹಜಾರಿಕಾ ಕೂಡ ತನ್ನೂರಿನ ಸೊತ್ಫುಲ್ ಹೂವಿನ ರೀತಿಯೇ ತನ್ನ ನೆಲದ ಪರಿಮಳವನ್ನು ಪ್ರಪಂಚದ ಉದ್ದಗಲಕ್ಕೂ ಹರಡಿದರು. ಮರುಭೂಮಿಯಲ್ಲಿ ಅರಳುವ ಹೂವಿನಷ್ಟೇ ಅಪರೂಪದ ಮನುಷ್ಯರಾಗಿ ಬೆಳೆದರು.
”ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲಕ ಭೂಪೆನ್ ಸದಾ ಸಂಗೀತ, ಹಾಡುಗಳಲ್ಲಿ ಅಪಾರ ಆಸಕ್ತಿ ತೋರುತ್ತಿದ್ದ. ತನ್ನ ಮೊತ್ತಮೊದಲನೆಯ ಹಾಡನ್ನು ಕೇವಲ 10 ವಯಸ್ಸಿನ ಬಾಲಕನಾಗಿದ್ದಾಗ ಸ್ವತಃ ರಚಿಸಿ ಹಾಡಿದ ಈ ಅದ್ಭುತ ಪ್ರತಿಭೆ ತನ್ನ ಭವಿಷ್ಯದ ಸಾಧನೆಗಳ ಝಲಕ್ ಒಂದನ್ನು ಆಗಲೇ ನೀಡಿದ್ದ. ಇಷ್ಟೇ ಅಲ್ಲದೆ, ಅಸ್ಸಾಮಿನ ಎರಡನೇ ಟಾಕೀ ಚಲನಚಿತ್ರವಾದ 1939ರ ”ಇಂದ್ರಮಾಲತಿ’ಯಲ್ಲಿ ಬಾಲನಟನಾಗಿ ನಟಿಸಿ ಹಿನ್ನೆಲೆಗಾಯನವನ್ನೂ ಮಾಡಿದ್ದ ಭೂಪೆನ್ ಅಲ್ಲಿಂದಲೇ ಚಲನಚಿತ್ರಮಾಧ್ಯಮದ ಬಗ್ಗೆ ಒಲವು ಬೆಳೆಸಿಕೊಂಡದ್ದು. ನಂತರದ ದಶಕಗಳಲ್ಲಿ ಹಲವಾರು ಅಸ್ಸಾಮೀ ಚಲನಚಿತ್ರಗಳನ್ನು ನಿರ್ದೇಶಿಸಿದ ಭೂಪೆನ್ ದಾ 1977ರಲ್ಲಿ ಅರುಣಾಚಲ ಪ್ರದೇಶದ ಮೊತ್ತಮೊದಲ ಹಿಂದೀ ಚಲನಚಿತ್ರ ’ಮೇರಾ ಧರಮ್ ಮೇರೀ ಮಾ’ನ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತನಿರ್ದೇಶಕರಾಗಿ ಕೆಲಸ ಮಾಡಿದ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.
ಸುಪ್ರಸಿದ್ಧ ಮಹಿಳಾ ನಿರ್ದೇಶಕಿ ಕಲ್ಪನಾ ಲಾಜ್ಮಿಯವರ ಮೇಲೆ ಭೂಪೆನ್ ದಾರ ಸಂಗೀತ ಮೋಡಿ ಮಾಡಿತ್ತು. ಅವರನ್ನು ಹಿಂದೀ ಸಿನೆಮಾರಂಗಕ್ಕೆ ಕರೆದುಕೊಂಡು ಬಂದ ಶ್ರೇಯ ಕಲ್ಪನಾರಿಗೇ ಸಲ್ಲಬೇಕು. 1986ರಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ಅಂತರ್ರಾಷ್ಟ್ರೀಯ ಖ್ಯಾತಿ ಗಳಿಸಿದ ಕಲ್ಪನಾ ಲಾಜ್ಮಿಯವರ ಚಲನಚಿತ್ರವಾದ ’ಎಕ್ ಪಲ್’ಗೆ ಭೂಪೆನ್ ನಿರ್ಮಾಪಕ ಮತ್ತು ಸಂಗೀತನಿರ್ದೇಶಕರಾಗಿ ಕೆಲಸ ಮಾಡಿದರು. ಈ ಚಲನಚಿತ್ರದಲ್ಲಿ ಶಬನಾ ಆಜ್ಮಿ, ನಸೀರುದ್ದೀನ್ ಶಾಹ್ ಮತ್ತು ಫರೂಕ್ ಶೇಖ್ ನಟಿಸಿದ್ದರು. ಅಲ್ಲಿಂದಾಚೆಗೆ ಕಲ್ಪನಾರವರ ಜತೆ ಅವರ ಸಿನೆಮಾ ಒಡನಾಟವೂ ಬೆಳೆಯತೊಡಗಿತು. ಭೂಪೆನ್ ಹಜಾರಿಕಾರ ಹೆಸರನ್ನು ಮನೆಮಾತಾಗಿ ಮಾಡಿದ್ದು ಕಲ್ಪನಾ ಲಾಜ್ಮಿಯವರೇ 1993ರಲ್ಲಿ ನಿರ್ದೇಶಿಸಿದ ಮಹಾಶ್ವೇತಾದೇವಿಯವರ ಸಣ್ಣಕಥೆಯನ್ನಾಧರಿಸಿದ ಚಲನಚಿತ್ರ ’ರೂಡಾಲಿ’. ಡಿಂಪಲ್ ಕಪಾಡಿಯಾ, ರಾಜ್ ಬಬ್ಬರ್, ಅಮ್ಜದ್ ಖಾನ್ ಮತ್ತು ರಾಖೀ ಮುಂತಾದವರು ತಾರಾಗಣದಲ್ಲಿದ್ದ ಈ ಚಲನಚಿತ್ರದ ಸಂಗೀತನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು ಭೂಪೆನ್ ದಾ.
’ದಿಲ್ ಹೂಮ್ ಹೂಮ್ ಕರೇ, ಘಬರಾಯೇ
ಘನ್ ಧಮ್ ಧಮ್ ಕರೇ, ಡರ್ ಜಾಯೇ
ಇಕ್ ಬೂಂದ್ ಕಭೀ ಪಾನೀ ಕೀ ಮೋರಿ ಅಖಿಯೋಂಸೇ ಬರ್ಸಾಯೇ’
ಈ ಸಾಲುಗಳನ್ನು ಭಾರತೀಯ ಸಿನೆಮಾದ ಯಾವ ಅಭಿಮಾನಿಯೂ ಮರೆಯಲು ಸಾಧ್ಯವೇ ಇಲ್ಲ. ಈ ಹಾಡನ್ನು ಲತಾ ಮತ್ತು ಭೂಪೆನ್ ಇಬ್ಬರೂ ಬೇರೆಬೇರೆಯಾಗಿ ಹಾಡಿದ್ದಾರೆ. ಲತಾ ಪ್ರೇಮಕ್ಕೆ ಸಿಲುಕಿದ ಹೆಣ್ಣಿನ ಸ್ನಿಗ್ಧ, ನವಿರು ಭಾವಗಳನ್ನು ತಮ್ಮ ಅಲೌಕಿಕ ದನಿಯಲ್ಲಿ ಅದ್ಭುತವಾಗಿ ವ್ಯಕ್ತಪಡಿಸಿದ್ದರೆ ಮರಳುಗಾಡಿನ ರಾತ್ರಿಗಳ ಅಂಕುಡೊಂಕುಗಳುದ್ದಕ್ಕೂ ನಿರಾಯಾಸವಾಗಿ ಸಾಗುತ್ತಿರುವಂತೆ ಭಾಸವಾಗುವ ಭೂಪೆನ್ ದಾರವರ ಕಂಚಿನಂತಹ ದನಿ ವ್ಯಕ್ತಪಡಿಸುವ ಆರ್ದ್ರತೆ ಲತಾರನ್ನೂ ನಾಚಿಸುವಂತಿದೆ. ತಮ್ಮ ಹಾಡು, ಕವಿತೆಗಳಲ್ಲಿ ಅಸ್ಸಾಮಿನ ಜಾನಪದಲೋಕದ ಹಲವಾರು ರೆಫರೆನ್ಸುಗಳನ್ನು ಬಳಸುತ್ತಿದ್ದ ಭೂಪೆನ್ ಅದರಲ್ಲಿನ ಎರಾಟಿಕ್ ಉಲ್ಲೇಖಗಳಿಂದ ಹಿಡಿದು ಪ್ರಚಲಿತ ಸಾಮಾಜಿಕ ಸಮಸ್ಯೆಗಳವರೆಗೆ ಎಲ್ಲವನ್ನೂ ಒಳಗೊಳ್ಳುವುದರಲ್ಲಿ ನಿಷ್ಣಾತರಾಗಿದ್ದರು. ಅವರ ಅತ್ಯಂತ ಪ್ರಸಿದ್ಧವಾದ ಸಂಗೀತರಚನೆಗಳಲ್ಲಿ ಐವತ್ತರ ದಶಕದ ನಿಕಟವರ್ತಿಯಾಗಿದ್ದ ಅಮೆರಿಕನ್ ನಟ, ಸಂಗೀತಗಾರ ಮತ್ತು ಸಿವಿಲ್ ರೈಟ್ಸ್ ಕಾರ್ಯಕರ್ತ ಪಾಲ್ ರೋಬ್ಸನ್ ಪರಿಚಯಿಸಿದ ಕಪ್ಪು ಅಮೆರಿಕನ್ ಆಧ್ಯಾತ್ಮಿಕವಾದದ ಸುಳುಹು ಕಾಣಸಿಗುತ್ತದೆ ಎನ್ನಲಾಗಿದೆ. ತಮ್ಮ ಜೀವನಕಾಲದುದ್ದಕ್ಕೂ ಭಾರತೀಯ ಸಿನೆಮಾಗೆ ಸಂಬಂಧಿಸಿದ ಅನೇಕ ಪ್ರತಿಷ್ಠಿತ ಹುದ್ದೆಗಳನ್ನಲಂಕರಿಸಿದ ಅವರಿಗೆ 1977ರಲ್ಲಿ ಅಸ್ಸಾಮೀ ಚಲನಚಿತ್ರ ’ಚಮೇಲಿ ಮೇಮ್ ಸಾಬ್’ಗಾಗಿ ಅತ್ಯುತ್ತಮ ಸಂಗೀತ ರಚನಾಕಾರರಿಗೆ ದೊರಕುವ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಕಳೆದ ನಲುವತ್ತು ವರ್ಷಗಳಲ್ಲಿ ಹೊರಬಂದ ಅಸ್ಸಾಮೀ ಚಲನಚಿತ್ರಗಳ ಪೈಕಿ ಅತಿಹೆಚ್ಚಿನ ಸಂಖ್ಯೆಯ ಫಿಲ್ಮುಗಳಿಗೆ ಸಂಗೀತರಚನೆ ಮಾಡಿ ಹಾಡುಹಾಡಿದ ಕೀರ್ತಿ ಭೂಪೆನ್ ದಾರವರದು.
ಹಿಂದೀ ಚಲನಚಿತ್ರಗಳಿಗೆ ಬರುವುದಾದಲ್ಲಿ ಸಾಯಿ ಪರಾಂಜಪೆಯವರ ’ಸಾಜ್’, ಕಲ್ಪನಾ ಲಾಜ್ಮಿಯವರ ’ದರ್ಮಿಯಾನ್’,”ದಮನ್’ ಮತ್ತು ’ಕ್ಯೋಂ’, ಎಮ್. ಎಫ್ ಹುಸೇನರ ’ಗಜಗಾಮಿನಿ’ ಮೊದಲಾದ ಚಲನಚಿತ್ರಗಳಿಗೆ ಸಂಗೀತರಚನೆ/ನಿರ್ದೇಶನಗಳನ್ನು ಒದಗಿಸಿದ್ದಾರೆ. 2011ರಲ್ಲಿ ಬಿಡುಗಡೆಯಾದ ಚಲನಚಿತ್ರ ’ಗಾಂಧೀ ಟು ಹಿಟ್ಲರ್’ನಲ್ಲಿಯೂ ಕೂಡ ಹಿನ್ನೆಲೆಗಾಯನ ಮಾಡಿದ್ದ ಭೂಪೆನ್ ಹಜಾರಿಕಾರಿಗೆ ತಮ್ಮ ಜೀವನಕಾಲದಲ್ಲಿ ದೊರಕಿದ ಪ್ರಶಸ್ತಿಗಳು, ಗೌರವ ಮನ್ನಣೆಗಳು ಲೆಕ್ಕವಿಲ್ಲದಷ್ಟು. ಇವುಗಳ ಪೈಕಿ ಪ್ರಮುಖವಾದುವೆಂದರೆ – ಪದ್ಮಶ್ರೀ, ಪದ್ಮಭೂಷಣ, ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ ಮತ್ತು ದಾದಾಸಾಹೇಬ ಫಾಲ್ಕೆ ಪ್ರಶಸ್ತಿಗಳು. ಮಾಸ್ ಕಮ್ಯುನಿಕೇಶನ್ನಿನಲ್ಲಿ ಪಿಎಚ್ ಡಿ ಪದವಿಯನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಸ್ವಂತ ಶ್ರಮದಿಂದ ಗಳಿಸಿದ್ದ ಅವರು ಆ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ್ದರು. ಭೂಪೆನ್ ದಾ ಹಲವು ಕಾಲ ರಾಜಕೀಯ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದರು. ಒಬ್ಬ ಮನುಷ್ಯ ಇಷ್ಟೆಲ್ಲ ಸಾಧನೆಗಳನ್ನು ಒಂದೇ ಜೀವಿತಕಾಲದಲ್ಲಿ ಮಾಡಿರುವುದು ಮತ್ತು ಒಂದಿನಿತೂ ಹಮ್ಮಿಲ್ಲದೆ ಅಜಾತಶತ್ರುವಾಗಿ ಬಾಳಿದ್ದುದು ಎಂಥವರಲ್ಲಿಯೂ ವಿಸ್ಮಯ ಹುಟ್ಟಿಸುವಂಥದು. ಶ್ರೇಷ್ಠ ಜನರು ಸದಾ ವಿನಮ್ರರಾಗಿರುವರೆಂಬ ಲೋಕಾರೂಢಿಯ ಮಾತಿಗೆ ನಮ್ಮ ಭೂಪೆನ್ ದಾ ಅತ್ಯುತ್ತಮ ಉದಾಹರಣೆ.
ಇಂಥ ಅಪ್ರತಿಮ ಭಾರತೀಯ ನಮ್ಮನ್ನಗಲಿ ಹೋಗಿದ್ದಾರೆ. ಆದರೇನಂತೆ? ತನ್ನ ಅಪರೂಪದ ಸಂಗೀತದ ಮೂಲಕ ಅವರ ಆತ್ಮವು ಸದಾ ನಮ್ಮ ನಡುವೆ ನೆಲೆಸಿರುತ್ತದೆ. ಲಾಂಗ್ ಫೆಲೋ ತನ್ನ ಕವಿತೆಯಲ್ಲಿ “ಧೂಳು ನೀನು, ಧೂಳಿಗೇ ಮರಳಬೇಕು, ಆದರೆ ಆತ್ಮದ ಬಗ್ಗೆ ಯಾರೂ ಹೀಗೆ ಹೇಳರು “ ಎಂದಿರುವುದು ಎಷ್ಟು ಅರ್ಥಬದ್ಧ ಎನ್ನಿಸುತ್ತದೆ!
Brilliant, as usual. What bothers me is the glorious ignorance of the north east among main stream Indians (if there were any).