ಒಂದು ಕ್ರಿಸ್ಮಸ್ ಮರ.

ಕ್ರಿಸ್ಮಸ್ ಎಂದರೆ ಏನೋ ಸಡಗರ. ತುಂಬ ನಕ್ಷತ್ರಗಳು ಒಟ್ಟಿಗೇ ನಮ್ಮ ಸುತ್ತಮುತ್ತ ಮಿನುಗಿದ ಹಾಗೆ.. ಸಿಹಿ ಪರಿಮಳಗಳನ್ನು ಆಘ್ರಾಣಿಸುತ್ತ ನಾವು ಪಡೆಯುವ ಆನಂದದ ಹಾಗೆ..ಆಹ್ಲಾದಕರ ಸಂಗೀತವನ್ನು ಕೇಳುತ್ತ ಎಲ್ಲ ಮರೆತು ಮೈದೂಗಿದ ಹಾಗೆ.. ಸುಮಾರು ಹತ್ತು ವರುಷಗಳಿಂದ ನಾನು ಒಂದು ಮಧ್ಯರಾತ್ರಿಯ ಮಾಸ್ ಅನ್ನೂ ತಪ್ಪಿಸಿಕೊಂಡಿದ್ದೇ ಇಲ್ಲ. ದೇವರ ಬಗೆಗಿನ ನನ್ನ ಖಾಸಗೀ ನಂಬಿಕೆಗಳನ್ನೆಲ್ಲ ಮೀರಿ ನಿಲ್ಲುವ ರಾತ್ರಿಯದು.

 

     ಕ್ರಿಸ್ಮಸ್ ಅಂದಾಕ್ಷಣ ನನಗೆ ನೆನಪಾಗುವದು ಸಿಸ್ಟರ್ ಅನಾ ಮಾರ್ಥಾ ಮತ್ತು ಕ್ರಿಸ್ಮಸ್ ಮರಗಳು. ಸಿಸ್ಟರ್ ಮಾರ್ಥಾ ನನ್ನ ಮದುವೆಯ ಮೂಲಕ ನನ್ನ ಸಂಬಂಧಿ – ಒಂದು ಲೆಕ್ಕದಲ್ಲಿ ನನ್ನ ಅತ್ತೆ. ಈವತ್ತಿಗೆ ನನ್ನೊಳಗೆ ಆಧ್ಯಾತ್ಮಿಕ ಯೋಚನೆಗಳ  ಸುಳಿವೇನಾದರೂ(!?) ಇದ್ದರೆ ಅದರ ಹಿಂದಿನ ಮುಖ್ಯ ಪ್ರಭಾವ ಆಕೆಯದು. ಆಕೆ ತನ್ನ ಜೀವಮಾನದುದ್ದಕ್ಕೂ ತೀವ್ರಮಟ್ಟದ ಬ್ರಾಂಕೈಟಿಸ್ ಖಾಯಿಲೆಯಿಂದ ನರಳುತ್ತಲೇ ಇದ್ದರು. ಸಾಮಾನ್ಯ ಜನರು ತಡೆದುಕೊಳ್ಳಲು ಸಾಧ್ಯವಾಗದಂತಹ ದೈಹಿಕ ನೋವುಗಳನ್ನು ಆಕೆ ಪ್ರಾರ್ಥಿಸುತ್ತಲೇ ಮೌನವಾಗಿ ನುಂಗಿಬಿಡುತ್ತ ಇದ್ದರು. ಆಕೆ ಎಲ್ಲೇ ಇದ್ದರು ಪ್ರತಿವರ್ಷ ಆಕೆಯ ಕ್ರಿಸ್ಮಸ್ ಶುಭಾಶಯಪತ್ರ ನನ್ನ ಕೈಸೇರುವುದು. ತನ್ನ ಹತ್ತನೇ ತರಗತಿಯ ಶಿಕ್ಷಣ ಮುಗಿದಕೂಡಲೆ ಯಾವ ಪ್ರತಿರೋಧಗಳನ್ನೂ ಲೆಕ್ಕಿಸದೆ ಎಲ್ಲವನ್ನೂ ತ್ಯಜಿಸಿ ಆಶ್ರಮ ಸೇರಿದ ಆಕೆಯ ಬಗ್ಗೆ ನನಗೆ ಸದಾ ಕುತೂಹಲ. ಅವರಿಗೆ ನೂರೆಂಟು ಪ್ರಶ್ನೆ ಕೇಳಿ ಪಿರಿಪಿರಿ ಮಾಡುತ್ತಿದ್ದರು ಒಂದು ದಿನವೂ ಸಿಡುಕದೆ ಎಲ್ಲದಕ್ಕೂ ಉತ್ತರಿಸುವರು. ಕೆಲವೊಮ್ಮೆ ದಿನಗಟ್ಟಲೆ ಮೌನವಾಗಿಬಿಡುವರು. ಇಂಥವರಿಗೆ ಗಿಡಗಳೆಂದರೆ ವಿಚಿತ್ರವಾದ, ತೀರ ಲೌಕಿಕ ಅನ್ನಿಸಬಹುದಾದಂಥ ಮೋಹ. ಆಕೆಯ ಹಸಿರಿನ ಗೀಳು ಮಾತ್ರ ಯಾರಿಗೂ ಅರ್ಥವಾಗುತ್ತ ಇರಲಿಲ್ಲ. ಕೊಂಚ ಆರೋಗ್ಯವಾಗಿದ್ದರೂ ಆಶ್ರಮದ ಹೂದೋಟದಲ್ಲಿ ಕಾಲ ಕಳೆಯುವರು. ನನ್ನ ತೋಟದ ಗಿಡಗಳ ಬಗ್ಗೆ ಯಾವಾಗಲೂ ಮುತುವರ್ಜಿ ವಹಿಸಿ ಕೇಳುವ ಅವರು ನಾನು ಆಶ್ರಮಕ್ಕೆ ಭೇಟಿನೀಡಿದಾಗಲೆಲ್ಲ ಹೂಗಿಡವೊಂದರ ಕಟಿಂಗ್ ಅನ್ನು ನನ್ನ ತೋಟಕ್ಕಾಗಿ ಕೊಡುತ್ತ ಇದ್ದರು. “ಗಿಡಗಳ ಹತ್ತಿರ ಸೊಲ್ಪ ಸಮಯ ತೆಕ್ಕೊಂಡು ದಿನಾ ಕೂತುಕೊಂಡು ಮಾತನಾಡು. ನಿನ್ ಕಷ್ಟಸುಖ ಹೇಳ್ಕೋ. ಯು ವಿಲ್ ಆಲ್ವೇಸ್ ಹ್ಯಾವ್ ಅ ಬಂಚ್ ಆಫ್ ಫ್ರೆಂಡ್ಸ್ ಅರೌಂಡ್!” ಅನ್ನುವರು. ಆಗಾಗ, “ನಿನ್ ಹತ್ತಿರ ಒಂದು ಕ್ರಿಸ್ಮಸ್ ಮರ ಇಲ್ಲವಲ್ಲ!” ಎಂದು ಪೇಚಾಡಿಕೊಳ್ಳುವರು. ಆಗ ಮೈಸೂರ ಪುಟ್ಟ ಬಾಡಿಗೆಮನೆಯಲ್ಲಿದ್ದ ನಾನು ನಕ್ಕುಬಿಡುವೆ.

ಹಾಗೂ ಹೀಗೂ ನನ್ನ ಸ್ವಂತ ಮನೆಯಲ್ಲಿ ವಾಸ ಆರಂಭಿಸಿದಾಗ ಮೊದಲು ಅನ್ನಿಸಿದ್ದು – ಒಂದು ಚೆಂದದ ತೋಟ ಮಾಡಬೇಕು. ಹಿಂದೆ ಮನೆಯಲ್ಲಿ ಬಾಡಿಗೆಗಿದ್ದವರೋ, ಮನೆಯನ್ನು ದುರವಸ್ಥೆಯಲ್ಲಿ ಬಿಟ್ಟುಹೋಗಿದ್ದರು. ಎಲ್ಲ ಸರಿಪಡಿಸುವಲ್ಲಿ ಆರು ತಿಂಗಳುಗಳೇ ಕಳೆದವು. ಅದೇ ಹೊತ್ತಿಗೆ ಸಿಸ್ಟರ್ ಮಾರ್ಥಾರ ಆರೋಗ್ಯ ಕ್ಷೀಣಿಸಿತು. ಕೊನೆಯ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಅವರನ್ನು ನೋಡಲು ಹೋದಾಗ ಅವರ ಮುಖ ಅನಾರೋಗ್ಯದಿಂದ ಊದಿಕೊಂಡು ಆಕೆ ಚೆನ್ನಾಗಿದ್ದಾರೆಂಬ ಹುಸಿಭರವಸೆ ಹುಟ್ಟಿಸುತ್ತಿತ್ತು. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಸಿಸ್ಟರ್ ಮಾರ್ಥಾ ಹೇಳಿದರು – “ಈ ಸಾರಿ ಕ್ರಿಸ್ಮಸ್ ಕಾರ್ಡು ಕಳಿಸೋಕೆ ನಾನಿರಲ್ಲ ಬಿಡು”. ನನಗೂ ಪ್ರಾಯಶಃ ಹಾಗೇ ಅನ್ನಿಸಿತು. ಮೆತ್ತಗೆ ಅವರ ಕೈ ಮುಟ್ಟಿ,  “ಮನೇಲಿ ತೋಟ ಮಾಡ್ತಿದೀವಿ. ತುಂಬ ಜಾಗ ಇದೆ. ಎಲ್ಲ ನೆಟ್ಟಾದ ಮೇಲೆ ನೀವು ಒಂದು ಸಲ ಬಂದು ನೋಡಿ” ಎಂದೆ. ಅವರ ಕಣ್ಣು ಅರಳಿದವು. “ಹಾಗಿದ್ರೆ ಒಂದು ಕ್ರಿಸ್ಮಸ್ ಗಿಡ ನೆಟ್ಟುಬಿಡು, ಆಯ್ತಾ? ನಿಂಗೆ ಬಹಳ ಮರೆವು. ಕೋಪಿಷ್ಠ ಹುಡುಗಿ. ಆ ಮರದಿಂದಾನಾದರೂ ಕ್ರಿಸ್ಮಸ್‌ನ ಒಳ್ಳೇತನ ಮತ್ತೆ ನನ್ನ ಬುದ್ಧಿವಾದಗಳನ್ನ ನೆನಪಿಟ್ಟುಕೋತೀಯೇನೋ!” ಎಂದು ಕ್ಷೀಣವಾಗಿ ನಕ್ಕರು. ನಮ್ಮ ಕೆಟ್ಟ ಬುದ್ಧಿಗಳಿಂದಾಗಿಯಾದರು ನಾವು ಎಷ್ಟು ಜನರ ಹತ್ತಿರವಾಗುತ್ತೇವೆ, ಅಲ್ಲ?

      ಆಮೇಲೆ ಕೆಲವೇ ದಿನಗಳಲ್ಲಿ ತಾನು ಭವಿಷ್ಯ ನುಡಿದ ಹಾಗೆಯೇ ಸಿಸ್ಟರ್ ಮಾರ್ಥಾ ಹೊರಟುಹೋದರು. ನನ್ನ ಕುಟುಂಬ ದುಃಖತಪ್ತವಾಗಿತ್ತು. ಎಲ್ಲಕಿಂತ ಹೆಚ್ಚಾಗಿ ಅವರಿಂದಲೇ ಬಾಲ್ಯದ ತೊದಲುಹಾಡುಗಳನ್ನು, ಗಿಡಗಳ ಬಗೆಗಿನ ಪ್ರೀತಿಯನ್ನು ಕಲಿತಿದ್ದ ನನ್ನ ಪುಟ್ಟ ಮಗಳು ಮೊಟ್ಟಮೊದಲ ಬಾರಿಗೆ ಸಾವೊಂದನ್ನು ಕಂಡಿದ್ದು ಮತ್ತು ಇನ್ನಿಲ್ಲದಂತೆ ಅತ್ತಿದ್ದನ್ನು ಮರೆಯಲಾಗುವದೇ ಇಲ್ಲ. ಭಾರತದೆಲ್ಲೆಡೆಯಿಂದ ಅವರ ಶಿಷ್ಯೆಯರು ಬಂದು ಅವರ ಮರಣಯಾತ್ರೆಗೆ ತಾವೇ ಹೆಗಲುಕೊಟ್ಟರು. ಅದೊಂದು ಅಪರೂಪದ ಸನ್ನಿವೇಶ. ಸಿಸ್ಟರ್ ಮಾರ್ಥಾ ಪ್ರತಿಯೊಬ್ಬರನ್ನೂ ತಮ್ಮದೇ ಆದ ರೀತಿಯಲ್ಲಿ ಮುಟ್ಟಿದ್ದರು. ಅವರಿಗೆ ವಿದಾಯ ಹೇಳಿ ವಾಪಾಸು ಬಂದ ಮರುದಿನವೇ ಹೋಗಿ ಒಂದು ಪುಟ್ಟ ಕ್ರಿಸ್ಮಸ್ ಗಿಡವನ್ನು ಖರೀದಿಸಿ ತಂದು ತೋಟದ ನಟ್ಟನಡುವಿನಲ್ಲಿ ನೆಟ್ಟದ್ದಾಯಿತು.

 

ಒಂದೆರಡು ತಿಂಗಳು ಕಳೆದು ಕ್ರಿಸ್ಮಸ್ ಹಿಂದಿನ ದಿನ ಬಂದಿತು..ತನ್ನ ಎಂದಿನ ಆಕರ್ಷಣೆಯೊಂದಿಗೆ.. ಮಾಮೂಲಿನಂತೆ ಕ್ರಿಸ್ಮಸ್ ಕಾರ್ಡುಗಳನ್ನು ಅಂಚೆಯವ ನೀಡಿಹೋದ. ಈ ಬಾರಿ ಎಲ್ಲರ ಹೆಸರಿಗೂ ಒಂದೇ ಕೈಬರಹದ ಲಕೋಟೆಗಳಿದ್ದವು. ಯಾರಿರಬಹುದೆಂದು ಬಿಚ್ಚಿನೋಡಿದರೆ ಅಲ್ಲಿ ಸಿಸ್ಟರ್ ಮಾರ್ಥಾರ ಸಹಿಯಿತ್ತು!! ತಾನು ತೆರಳುವ ಮೊದಲೇ ಸಿಸ್ಟರ್ ಮಾರ್ಥಾ ತನ್ನ ಸಹವರ್ತಿಯೊಬ್ಬರ ಕೈಯಲ್ಲಿ ನಮ್ಮೆಲ್ಲರಿಗಾಗಿ ಶುಭಾಶಯ ಪತ್ರಗಳನ್ನು ನೀಡಿ ಸರಿಯಾದ ಸಮಯಕ್ಕೆ ಅಂಚೆಗೆ ಹಾಕುವಂತೆ ತಿಳಿಸಿದ್ದರು. ಅಂದಿನ ಕ್ರಿಸ್ಮಸ್ ನಮ್ಮೆಲ್ಲರಿಗೆ ಬಹಳ ವಿಶೇಷವಾಗಿತ್ತು. ಅಂದು ಸಿಸ್ಟರ್ ಮಾರ್ಥಾ ನಮ್ಮೊಂದಿಗಿದ್ದರು.

 

ಅವರ ನೆನಪಿನಲ್ಲಿ ನೆಟ್ಟ ಕ್ರಿಸ್ಮಸ್ ಗಿಡ ಇವತ್ತು ದೊಡ್ಡ ಮರವಾಗಿದೆ. ಬಹಳ ವರ್ಷಗಳ ನಂತರ ಅದರಡಿಯಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಾಗುತ್ತಿದ್ದೇವೆ. ನನ್ನ ತೋಟ ನೋಡಿಕೊಳ್ಳುವ ವೆಂಕಟಮ್ಮ ಅದರ ಬಗ್ಗೆ ವಿಶೇಷ ನಿಗಾ ವಹಿಸುತ್ತಾರೆ. ಮಕ್ಕಳು ಅದರ ನೆರಳಿನಲ್ಲಿ ಆಡಿಕೊಳ್ಳುತ್ತಾರೆ. ಆಗಾಗ ಒಂದಷ್ಟು ಪಕ್ಷಿಗಳು ಬಂದು ಅದರ ಗೆಲ್ಲುಗಳ ಸುರಕ್ಷೆಯಲ್ಲಿ ಗೂಡುಕಟ್ಟಿ ಮರಿಮಾಡಿ ಹಾರಿಯೂ ಹೋಗುತ್ತವೆ.  ಕ್ರಿಸ್ಮಸ್ ಮರ ತನ್ನಪಾಡಿಗೆ ತಾನು ಆನಂದವಾಗಿ ಬೆಳೆದುಕೊಂಡಿದೆ.

    ನಾನಂದುಕೊಳ್ಳುತ್ತೇನೆ, ಸಿಸ್ಟರ್ ಮಾರ್ಥಾ ಅದರ ಜತೆ ಮಾತನಾಡುತ್ತಿರಬಹುದು.

 

ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು.

 

ಚಿತ್ರಕೃಪೆ: http://www.digitalblasphemy.com

ಪಡಖಾನೆಯ ಹುಡುಗಿ – ಇರುಳ ನಂತರದ ಸಮಯ

ಇರುಳು ಸಂದಿತು, ಇನ್ನೇನು

ನಸುಕು ಕಳ್ಳಿಯ ರೀತಿ ಉಸಿರು ಬಿಗಿಹಿಡಿದು

ಒಳಬರುವಳು

ನನ್ನ ಕಾಲ ಬಳಿ ರಾತ್ರಿ ಉಂಡೆಸೆದ

ರೊಟ್ಟಿ ಮಾಂಸಗಳ ತುಣುಕುಗಳನ್ನಾಯುವ ಹುಡುಗ

ಕೆಟ್ಟ ಬೈಗುಳದ ಕೊಳಕು ಹಾಡು ಹಾಡುತ್ತ ಸಿಕ್ಕ

ಎಲ್ಲವನೂ ಕಣ್ಣಿಂದಲೇ ಕೊರೆಯುತ್ತ ಸಾಗುವನು

ಪರದೆಗಳ ಮೇಲಿನ ಕಲೆಗಳು

ಗೋಡೆಯ ಹಳೆ ಬಣ್ಣ

ಗಾಜಿನ ಮೇಲೆ ಕೂತ ಎಣ್ಣೆಪಸೆ

ನಿಚ್ಚಳವಾಗತೊಡಗುವವು

ಮೇಜವಾನಿಯ ಕುರ್ಚಿಗಳೂ ಯಾಕೊ

ಸೋತುಹೋದ ಮುದುಕರ ನೆನಪಿಸುವವು

ನೆನ್ನೆ ತನ್ನ ಪ್ರೇಯಸಿಯ ಧಿಕ್ಕರಿಸುವ

ಹಾಡುಗಳನುದುರಿಸುತಿದ್ದ ಕವಿಪುಂಗವನೀಗ

ತನ್ನ ಪದಗಳ ಭಾರಕ್ಕೆ ಸಿಲುಕಿ

ಮೂಗನಂತೆ ಮೈಚೆಲ್ಲಿರುವನು

ಅವನ ಮಗಳು ಬರಬಹುದು, ಹೊತ್ತೇರಿದ ಮೇಲೆ

ಹಿಂಜರಿಯುತ್ತ.. ಎಲ್ಲವನೂ ಶಪಿಸುತ್ತ..

ಮಬ್ಬಿನಲಿ ನೆನೆದ ಪಡಖಾನೆಯ

ಫಲಕವೂ ಬೀದಿಯ ಜನರಿಗೆ ಜೀರ್ಣವಾಗದು

ಇರುಳಿನ ಥಳುಕೂ ಮರೆತುಹೋಗುವುದು

ಮಿಲನದ ನಂತರ ಬರುವ ನಿದ್ದೆಯ ಹಾಗೆ.

ನಾನೊ, ಚಿಲಮಿನ ಹೊಗೆಯಂತೆ

ದಕ್ಕಿದ ಕಿಂಡಿಯಲಿ ಪಾರಾಗಿ

ಯಾವಳೊ ಛಿನಾಲಿಯ ಕತ್ತಿಗೆ

ಇಂಬಳದ ಹಾಗೆ

ನೇತುಹಾಕಿಕೊಂಡಿರಬಹುದಾದ

ಪಾಪಿಯನೆ ತಣ್ಣಗಿನ ರೋಷದೊಂದಿಗೆ ಕಾಯುವೆನು.

ಚಿತ್ರಕೃಪೆ: http://www.robertkruh.com

ದಿಲ್ ಹೂಮ್ ಹೂಮ್ ಕರೇ…

 
Life is real!  Life is earnest!
And the grave is not its goal;
Dust thou art, to dust returnest,
 Was not spoken of the soul.
(ಎಚ್. ಡಬ್ಲ್ಯು.ಲಾಂಗ್ ಫೆಲೋ,  A Psalm of Life)

“ಬ್ರಹ್ಮಪುತ್ರದ ಪ್ರೀತಿಯ ಮಗ” ಎನ್ನಿಸಿಕೊಂಡಿದ್ದ, ಭೂಪೆನ್ ಹಜಾರಿಕಾರ ನಿಧನದ ಸುದ್ದಿ ಕೇಳುತ್ತಿದ್ದಂತೆ ಅಸ್ಸಾಮಿನ ಗುವಾಹಟಿಯ ಅತ್ಯಂತ ಟ್ರೆಂಡೀ ಸ್ಥಳಗಳಲ್ಲೊಂದಾದ ಕೆಫೆ ಹೆಂಡ್ರಿಕ್ಸ್ ಈ ಮೇಲೆ ನೀಡಲಾಗಿರುವ ಕವಿತೆಯ ಕೊನೆಯೆರಡು ಸಾಲುಗಳನ್ನು ಉದ್ಧರಿಸುತ್ತ ನವೆಂಬರ್ 7ರಿಂದ 9ರವರೆಗೆ ತಾನು ಶೋಕಾಚರಣೆ ಮಾಡುತ್ತಿರುವುದಾಗಿ ಘೋಷಣೆ ಮಾಡಿತು. ಪಶ್ಚಿಮದ ಅತ್ಯಂತ ವಿವಾದಾಸ್ಪದ ಹಾಡುಗಾರನಾಗಿದ್ದು ಅಷ್ಟೇ ವಿವಾದಾಸ್ಪದವಾಗಿ ಸತ್ತುಹೋದ ಸುಪ್ರಸಿದ್ಧ ಜಿಮಿ ಹೆಂಡ್ರಿಕ್ಸನ ಹೆಸರಿಟ್ಟುಕೊಂಡ, ಯುವಪೀಳಿಗೆ ಮತ್ತು ಪಾಶ್ಚಾತ್ಯ ಸಂಗೀತವನ್ನೇ ಜೀವಾಳವಾಗಿಸಿಕೊಂಡಿರುವ ಈ ಕೆಫೆಯೆಲ್ಲಿ? ಎಂದೂ ಯಾವುದೇ ವಿವಾದಕ್ಕೆ ಗುರಿಯಾಗದೇ, ಈಶಾನ್ಯರಾಜ್ಯಗಳಿಂದ ಬಂದವರೆಂಬ ಲೇಬಲ್ಲಿಗೆ ಸಿಕ್ಕಿಹಾಕಿಕೊಳ್ಳದೆ, ತನ್ನ ನೆಲದ ಸಂಗೀತವನ್ನೇ ಉಸಿರಾಡಿಕೊಂಡು, ಶಾಂತ ನದಿಯೊಂದರಂತೆ ಪ್ರವಹಿಸುತ್ತಿದ್ದ, ಸಂತನಂತೆ ಕಾಣುತ್ತಿದ್ದ,  ಹಿರಿಯರಾದ ನಮ್ಮ ’ಭೂಪೆನ್ ದಾ’ ಎಲ್ಲಿ?

ಕವಿ, ಸಂಗೀತಕಾರ, ಹಾಡುಗಾರ, ನಿರ್ದೇಶಕ, ನಟ, ಪತ್ರಕರ್ತ, ಲೇಖಕ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾಗಿದ್ದ ಡಾ. ಭೂಪೆನ್ ಹಜಾರಿಕಾರ ಮೋಡಿಯೇ ಅಂತಹದು. ಅದರಿಂದ ಬಚಾವಾಗಲು ಯಾರಿಗೂ ಸಾಧ್ಯವೇ ಇಲ್ಲ. ಈಶಾನ್ಯ ಭಾರತದ ಸಾಂಸ್ಕೃತಿಕ ರಂಗದ ಅನಭಿಷಿಕ್ತ ರಾಜನೆಂದು ಅವರನ್ನು ಕರೆಯಲಾಗುತ್ತಿತ್ತು. ಭಾರತದ ಸಾಂಸ್ಕೃತಿಕ ಮುಖ್ಯವಾಹಿನಿಯಲ್ಲಿ ಎಂದೂ ಪ್ರಮುಖವಾಗಿ ಕಾಣಬರದಿದ್ದ ಅಸ್ಸಾಮಿನ ಹೆಸರು ಮತ್ತು ಅದರ ಅಮೂಲ್ಯವಾದ ಮಣ್ಣಿನ ಸೊಗಡನ್ನು ಎಲ್ಲರೂ ಸವಿಯುವಂತೆ ಮಾಡಿದವರೇ ಭೂಪೆನ್ ದಾ.

1926ರ ಸೆಪ್ಟೆಂಬರ್ ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಸಣ್ಣ ಊರಾದ ಶೊಡಿಯಾದಲ್ಲಿ ಜನಿಸಿದ ಭೂಪೆನ್ ಹಜಾರಿಕಾ ಗುವಾಹಟಿಯಲ್ಲಿ ಇಂಟರ್ ತನಕ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಪೊಲಿಟಿಕಲ್ ಸೈನ್ಸ್ ಪದವಿಯನ್ನು 1946ರಲ್ಲಿ ಪಡೆದರು. ಇವರ ಹುಟ್ಟಿದೂರಾದ ಶೊಡಿಯಾವು ಅಲ್ಲಿ ಮಾತ್ರ ಹುಟ್ಟಿ ಅರಳುವ ಸೊತ್ಫುಲ್ ಎಂಬ ಮಲ್ಲಿಗೆಯ ತರಹದ ಸುವಾಸಿತ ಪುಷ್ಪಕ್ಕೆ ಹೆಸರುವಾಸಿ. ಸೊತ್ಫುಲ್ ಎಂದರೆ ’ಆಶೀರ್ವಾದ’ ಅಥವಾ ’ಮರುಭೂಮಿಯ ಹೂವು’ ಎಂಬ ಅರ್ಥವಿದೆ. ಭೂಪೆನ್ ಹಜಾರಿಕಾ ಕೂಡ ತನ್ನೂರಿನ ಸೊತ್ಫುಲ್ ಹೂವಿನ ರೀತಿಯೇ ತನ್ನ ನೆಲದ ಪರಿಮಳವನ್ನು ಪ್ರಪಂಚದ ಉದ್ದಗಲಕ್ಕೂ ಹರಡಿದರು. ಮರುಭೂಮಿಯಲ್ಲಿ ಅರಳುವ ಹೂವಿನಷ್ಟೇ ಅಪರೂಪದ ಮನುಷ್ಯರಾಗಿ ಬೆಳೆದರು.

”ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲಕ ಭೂಪೆನ್ ಸದಾ ಸಂಗೀತ, ಹಾಡುಗಳಲ್ಲಿ ಅಪಾರ ಆಸಕ್ತಿ ತೋರುತ್ತಿದ್ದ. ತನ್ನ ಮೊತ್ತಮೊದಲನೆಯ ಹಾಡನ್ನು ಕೇವಲ 10 ವಯಸ್ಸಿನ ಬಾಲಕನಾಗಿದ್ದಾಗ ಸ್ವತಃ ರಚಿಸಿ ಹಾಡಿದ ಈ ಅದ್ಭುತ ಪ್ರತಿಭೆ ತನ್ನ ಭವಿಷ್ಯದ ಸಾಧನೆಗಳ ಝಲಕ್ ಒಂದನ್ನು ಆಗಲೇ ನೀಡಿದ್ದ. ಇಷ್ಟೇ ಅಲ್ಲದೆ, ಅಸ್ಸಾಮಿನ ಎರಡನೇ ಟಾಕೀ ಚಲನಚಿತ್ರವಾದ 1939ರ ”ಇಂದ್ರಮಾಲತಿ’ಯಲ್ಲಿ ಬಾಲನಟನಾಗಿ ನಟಿಸಿ ಹಿನ್ನೆಲೆಗಾಯನವನ್ನೂ ಮಾಡಿದ್ದ ಭೂಪೆನ್ ಅಲ್ಲಿಂದಲೇ ಚಲನಚಿತ್ರಮಾಧ್ಯಮದ ಬಗ್ಗೆ ಒಲವು ಬೆಳೆಸಿಕೊಂಡದ್ದು. ನಂತರದ ದಶಕಗಳಲ್ಲಿ ಹಲವಾರು ಅಸ್ಸಾಮೀ ಚಲನಚಿತ್ರಗಳನ್ನು ನಿರ್ದೇಶಿಸಿದ ಭೂಪೆನ್ ದಾ  1977ರಲ್ಲಿ ಅರುಣಾಚಲ ಪ್ರದೇಶದ ಮೊತ್ತಮೊದಲ ಹಿಂದೀ ಚಲನಚಿತ್ರ ’ಮೇರಾ ಧರಮ್ ಮೇರೀ ಮಾ’ನ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತನಿರ್ದೇಶಕರಾಗಿ ಕೆಲಸ ಮಾಡಿದ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

ಸುಪ್ರಸಿದ್ಧ ಮಹಿಳಾ ನಿರ್ದೇಶಕಿ ಕಲ್ಪನಾ ಲಾಜ್ಮಿಯವರ ಮೇಲೆ ಭೂಪೆನ್ ದಾರ ಸಂಗೀತ ಮೋಡಿ ಮಾಡಿತ್ತು. ಅವರನ್ನು ಹಿಂದೀ ಸಿನೆಮಾರಂಗಕ್ಕೆ ಕರೆದುಕೊಂಡು ಬಂದ ಶ್ರೇಯ ಕಲ್ಪನಾರಿಗೇ ಸಲ್ಲಬೇಕು. 1986ರಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ಅಂತರ್ರಾಷ್ಟ್ರೀಯ ಖ್ಯಾತಿ ಗಳಿಸಿದ ಕಲ್ಪನಾ ಲಾಜ್ಮಿಯವರ ಚಲನಚಿತ್ರವಾದ ’ಎಕ್ ಪಲ್’ಗೆ ಭೂಪೆನ್ ನಿರ್ಮಾಪಕ ಮತ್ತು ಸಂಗೀತನಿರ್ದೇಶಕರಾಗಿ ಕೆಲಸ ಮಾಡಿದರು. ಈ ಚಲನಚಿತ್ರದಲ್ಲಿ ಶಬನಾ ಆಜ್ಮಿ, ನಸೀರುದ್ದೀನ್ ಶಾಹ್ ಮತ್ತು ಫರೂಕ್ ಶೇಖ್ ನಟಿಸಿದ್ದರು. ಅಲ್ಲಿಂದಾಚೆಗೆ ಕಲ್ಪನಾರವರ ಜತೆ ಅವರ ಸಿನೆಮಾ ಒಡನಾಟವೂ ಬೆಳೆಯತೊಡಗಿತು. ಭೂಪೆನ್ ಹಜಾರಿಕಾರ ಹೆಸರನ್ನು ಮನೆಮಾತಾಗಿ ಮಾಡಿದ್ದು ಕಲ್ಪನಾ ಲಾಜ್ಮಿಯವರೇ 1993ರಲ್ಲಿ ನಿರ್ದೇಶಿಸಿದ ಮಹಾಶ್ವೇತಾದೇವಿಯವರ ಸಣ್ಣಕಥೆಯನ್ನಾಧರಿಸಿದ ಚಲನಚಿತ್ರ ’ರೂಡಾಲಿ’. ಡಿಂಪಲ್ ಕಪಾಡಿಯಾ, ರಾಜ್ ಬಬ್ಬರ್, ಅಮ್ಜದ್ ಖಾನ್ ಮತ್ತು ರಾಖೀ ಮುಂತಾದವರು ತಾರಾಗಣದಲ್ಲಿದ್ದ ಈ ಚಲನಚಿತ್ರದ ಸಂಗೀತನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು ಭೂಪೆನ್ ದಾ.

’ದಿಲ್ ಹೂಮ್ ಹೂಮ್ ಕರೇ, ಘಬರಾಯೇ

ಘನ್ ಧಮ್ ಧಮ್ ಕರೇ, ಡರ್ ಜಾಯೇ

ಇಕ್ ಬೂಂದ್ ಕಭೀ ಪಾನೀ ಕೀ ಮೋರಿ ಅಖಿಯೋಂಸೇ ಬರ್ಸಾಯೇ’

ಈ ಸಾಲುಗಳನ್ನು ಭಾರತೀಯ ಸಿನೆಮಾದ ಯಾವ ಅಭಿಮಾನಿಯೂ ಮರೆಯಲು ಸಾಧ್ಯವೇ ಇಲ್ಲ. ಈ ಹಾಡನ್ನು ಲತಾ ಮತ್ತು ಭೂಪೆನ್ ಇಬ್ಬರೂ ಬೇರೆಬೇರೆಯಾಗಿ ಹಾಡಿದ್ದಾರೆ. ಲತಾ ಪ್ರೇಮಕ್ಕೆ ಸಿಲುಕಿದ ಹೆಣ್ಣಿನ ಸ್ನಿಗ್ಧ, ನವಿರು ಭಾವಗಳನ್ನು ತಮ್ಮ ಅಲೌಕಿಕ ದನಿಯಲ್ಲಿ ಅದ್ಭುತವಾಗಿ ವ್ಯಕ್ತಪಡಿಸಿದ್ದರೆ ಮರಳುಗಾಡಿನ ರಾತ್ರಿಗಳ ಅಂಕುಡೊಂಕುಗಳುದ್ದಕ್ಕೂ ನಿರಾಯಾಸವಾಗಿ ಸಾಗುತ್ತಿರುವಂತೆ ಭಾಸವಾಗುವ ಭೂಪೆನ್ ದಾರವರ ಕಂಚಿನಂತಹ ದನಿ ವ್ಯಕ್ತಪಡಿಸುವ ಆರ್ದ್ರತೆ ಲತಾರನ್ನೂ ನಾಚಿಸುವಂತಿದೆ. ತಮ್ಮ ಹಾಡು, ಕವಿತೆಗಳಲ್ಲಿ ಅಸ್ಸಾಮಿನ ಜಾನಪದಲೋಕದ ಹಲವಾರು ರೆಫರೆನ್ಸುಗಳನ್ನು ಬಳಸುತ್ತಿದ್ದ ಭೂಪೆನ್ ಅದರಲ್ಲಿನ ಎರಾಟಿಕ್ ಉಲ್ಲೇಖಗಳಿಂದ ಹಿಡಿದು ಪ್ರಚಲಿತ ಸಾಮಾಜಿಕ ಸಮಸ್ಯೆಗಳವರೆಗೆ ಎಲ್ಲವನ್ನೂ ಒಳಗೊಳ್ಳುವುದರಲ್ಲಿ ನಿಷ್ಣಾತರಾಗಿದ್ದರು. ಅವರ ಅತ್ಯಂತ ಪ್ರಸಿದ್ಧವಾದ ಸಂಗೀತರಚನೆಗಳಲ್ಲಿ ಐವತ್ತರ ದಶಕದ ನಿಕಟವರ್ತಿಯಾಗಿದ್ದ ಅಮೆರಿಕನ್ ನಟ, ಸಂಗೀತಗಾರ ಮತ್ತು ಸಿವಿಲ್ ರೈಟ್ಸ್ ಕಾರ್ಯಕರ್ತ ಪಾಲ್ ರೋಬ್ಸನ್ ಪರಿಚಯಿಸಿದ ಕಪ್ಪು ಅಮೆರಿಕನ್ ಆಧ್ಯಾತ್ಮಿಕವಾದದ ಸುಳುಹು ಕಾಣಸಿಗುತ್ತದೆ ಎನ್ನಲಾಗಿದೆ. ತಮ್ಮ ಜೀವನಕಾಲದುದ್ದಕ್ಕೂ ಭಾರತೀಯ ಸಿನೆಮಾಗೆ ಸಂಬಂಧಿಸಿದ ಅನೇಕ ಪ್ರತಿಷ್ಠಿತ ಹುದ್ದೆಗಳನ್ನಲಂಕರಿಸಿದ ಅವರಿಗೆ 1977ರಲ್ಲಿ ಅಸ್ಸಾಮೀ ಚಲನಚಿತ್ರ ’ಚಮೇಲಿ ಮೇಮ್ ಸಾಬ್’ಗಾಗಿ ಅತ್ಯುತ್ತಮ ಸಂಗೀತ ರಚನಾಕಾರರಿಗೆ ದೊರಕುವ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಕಳೆದ ನಲುವತ್ತು ವರ್ಷಗಳಲ್ಲಿ ಹೊರಬಂದ ಅಸ್ಸಾಮೀ ಚಲನಚಿತ್ರಗಳ ಪೈಕಿ ಅತಿಹೆಚ್ಚಿನ ಸಂಖ್ಯೆಯ ಫಿಲ್ಮುಗಳಿಗೆ ಸಂಗೀತರಚನೆ ಮಾಡಿ ಹಾಡುಹಾಡಿದ ಕೀರ್ತಿ ಭೂಪೆನ್ ದಾರವರದು.

ಹಿಂದೀ ಚಲನಚಿತ್ರಗಳಿಗೆ ಬರುವುದಾದಲ್ಲಿ ಸಾಯಿ ಪರಾಂಜಪೆಯವರ ’ಸಾಜ್’, ಕಲ್ಪನಾ ಲಾಜ್ಮಿಯವರ ’ದರ್ಮಿಯಾನ್’,”ದಮನ್’ ಮತ್ತು ’ಕ್ಯೋಂ’, ಎಮ್. ಎಫ್ ಹುಸೇನರ ’ಗಜಗಾಮಿನಿ’ ಮೊದಲಾದ ಚಲನಚಿತ್ರಗಳಿಗೆ ಸಂಗೀತರಚನೆ/ನಿರ್ದೇಶನಗಳನ್ನು ಒದಗಿಸಿದ್ದಾರೆ. 2011ರಲ್ಲಿ ಬಿಡುಗಡೆಯಾದ ಚಲನಚಿತ್ರ ’ಗಾಂಧೀ ಟು ಹಿಟ್ಲರ್’ನಲ್ಲಿಯೂ ಕೂಡ ಹಿನ್ನೆಲೆಗಾಯನ ಮಾಡಿದ್ದ ಭೂಪೆನ್ ಹಜಾರಿಕಾರಿಗೆ ತಮ್ಮ ಜೀವನಕಾಲದಲ್ಲಿ ದೊರಕಿದ ಪ್ರಶಸ್ತಿಗಳು, ಗೌರವ ಮನ್ನಣೆಗಳು ಲೆಕ್ಕವಿಲ್ಲದಷ್ಟು. ಇವುಗಳ ಪೈಕಿ ಪ್ರಮುಖವಾದುವೆಂದರೆ – ಪದ್ಮಶ್ರೀ, ಪದ್ಮಭೂಷಣ, ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ ಮತ್ತು ದಾದಾಸಾಹೇಬ ಫಾಲ್ಕೆ ಪ್ರಶಸ್ತಿಗಳು. ಮಾಸ್ ಕಮ್ಯುನಿಕೇಶನ್ನಿನಲ್ಲಿ ಪಿಎಚ್ ಡಿ ಪದವಿಯನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಸ್ವಂತ ಶ್ರಮದಿಂದ ಗಳಿಸಿದ್ದ ಅವರು ಆ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ್ದರು. ಭೂಪೆನ್ ದಾ ಹಲವು ಕಾಲ ರಾಜಕೀಯ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದರು. ಒಬ್ಬ ಮನುಷ್ಯ ಇಷ್ಟೆಲ್ಲ ಸಾಧನೆಗಳನ್ನು ಒಂದೇ ಜೀವಿತಕಾಲದಲ್ಲಿ ಮಾಡಿರುವುದು ಮತ್ತು ಒಂದಿನಿತೂ ಹಮ್ಮಿಲ್ಲದೆ ಅಜಾತಶತ್ರುವಾಗಿ ಬಾಳಿದ್ದುದು ಎಂಥವರಲ್ಲಿಯೂ ವಿಸ್ಮಯ ಹುಟ್ಟಿಸುವಂಥದು. ಶ್ರೇಷ್ಠ ಜನರು ಸದಾ ವಿನಮ್ರರಾಗಿರುವರೆಂಬ ಲೋಕಾರೂಢಿಯ ಮಾತಿಗೆ ನಮ್ಮ ಭೂಪೆನ್ ದಾ ಅತ್ಯುತ್ತಮ ಉದಾಹರಣೆ.

ಇಂಥ ಅಪ್ರತಿಮ ಭಾರತೀಯ ನಮ್ಮನ್ನಗಲಿ ಹೋಗಿದ್ದಾರೆ. ಆದರೇನಂತೆ? ತನ್ನ ಅಪರೂಪದ ಸಂಗೀತದ ಮೂಲಕ ಅವರ ಆತ್ಮವು ಸದಾ ನಮ್ಮ ನಡುವೆ ನೆಲೆಸಿರುತ್ತದೆ. ಲಾಂಗ್ ಫೆಲೋ ತನ್ನ ಕವಿತೆಯಲ್ಲಿ “ಧೂಳು ನೀನು, ಧೂಳಿಗೇ ಮರಳಬೇಕು, ಆದರೆ ಆತ್ಮದ ಬಗ್ಗೆ ಯಾರೂ ಹೀಗೆ ಹೇಳರು “ ಎಂದಿರುವುದು ಎಷ್ಟು ಅರ್ಥಬದ್ಧ ಎನ್ನಿಸುತ್ತದೆ!

ಮಳೆಯ ಆಹ್ಲಾದ ತುಂಬಿಕೊಂಡ ಹಾಡುಗಳು

ಮೊದಲ ಮಳೆ ಸುರಿದಾಗ

ಮನೆಯ ನುಣ್ಣನಂಗಳಕೆಲ್ಲ

ಪರಿಮಳದ ಮಾತು….

…ತೋಯ್ದು ತೊಟ್ಟಿಕ್ಕುತ್ತ ತೂಗುವ

ಬೇಸಿಗೆಯ ಚಪ್ಪರದಲ್ಲಿ

ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ                                                                                                                                                                                      

–      ಜಯಂತ ಕಾಯ್ಕಿಣಿ, ಮೂರನೇಯತ್ತೆಯ ಮೊದಲ ಮಳೆ, ರಂಗದೊಂದಿಷ್ಟು ದೂರ

ಆಗಸದಿಂದ ನಾಲ್ಕು ಹನಿ ಮಳೆ ಸುರಿಯಿತೊ ಇಲ್ಲವೊ, ಎಂದೂ ಕಣ್ಣೆತ್ತಿ ಕವಿತೆಗಳನ್ನೇ ಓದಿರದಂಥವರಿಗೂ ಕವಿಮನಸ್ಸು ಬಂದುಬಿಡುತ್ತದೆ. ಬೇಸಿಗೆಯ ತಾಪಕ್ಕೆ ಸಿಲುಕಿ ಸಣ್ಣಪುಟ್ಟದಕ್ಕೂ ಸಿಡುಕಿ ಗೊಣಗಾಡುತ್ತಿದ್ದವರೂ ಏಕ್‍ದಮ್ ’ಚಿಲ್’ ಆಗಿ ಓಡಾಡತೊಡಗುತ್ತಾರೆ. ಮಕ್ಕಳು ಅಮ್ಮಂದಿರ ಬೆಚ್ಚನೆ ಸ್ವೆಟರುಗಳ ಪ್ರೀತಿಗೆ ಒಡ್ಡಿಕೊಂಡು ಎಂದಿಗಿಂತ ಮೊದಲೇ ಕಂಬಳಿಗಳೊಳಗೆ ಸೇರಿಕೊಂಡರೆ, ಹರೆಯದ ಹುಡುಗಹುಡುಗಿಯರು ಮಳೆಯಲ್ಲಿ ಮಿಂದು ನೆಂದು ಬೆಚ್ಚಗಾಗುವ ನೆಪಗಳನ್ನೆ ಹುಡುಕತೊಡಗುತ್ತಾರೆ. ಮಳೆಯ ಟಪಟಪ ಸದ್ದು ಕೇಳುತ್ತ ನಿದ್ದೆಹೋಗುವ ನಿಶ್ಚಿಂತೆಗಿಂತ ಮಿಗಿಲಾದದ್ದೇನಿದೆ? ’ಮಳೆ’ ಎಂದ ತಕ್ಷಣ ನಮ್ಮಲ್ಲಿ ಮೂಡುವ ಭಾವಗಳ ಬಣ್ಣವೇ ಬೇರೆ. ಮಳೆಗೆ ಕರಗದ ಜೀವವೇ ಇಲ್ಲ!

ಜನಸಾಮಾನ್ಯರ ಮಳೆಯ ಬಗೆಗಿನ ಪ್ರೇಮವನ್ನು ಸಿನೆಮಾರಂಗವೂ ಚೆನ್ನಾಗಿ ಉಪಯೋಗಿಸಿಕೊಂಡಿದೆ. ಹಿಂದೀ ಸಿನೆಮಾಗಳಲ್ಲಂತೂ ಮಳೆಯನ್ನು ಹಲವಾರು ರೀತಿಗಳಲ್ಲಿ ಬಳಸಿಕೊಳ್ಳಲಾಗಿದೆ. ಹೆಚ್ಚಿಗಿನ ಹಿಂದೀ ಸಿನೆಮಾಗಳಲ್ಲಿ ಮಳೆಯನ್ನು ಬಳಸಿಕೊಂಡಿರುವುದು ನಾಯಕ-ನಾಯಕಿಯರ ನಡುವಿನ ಪ್ರೇಮವನ್ನು ತೋರ್ಪಡಿಸುವದಕ್ಕಾಗಿಯೋ ಇಲ್ಲವೆ ಹೀರೋಯಿನ್ನಳ ದೇಹಸಿರಿಯ ಪ್ರದರ್ಶನಕ್ಕಾಗಿಯೋ. ಹೆಚ್ಚಿನಪಾಲು ಈ ರೀತಿಯ ಮಳೆಸೀಕ್ವೆನ್ಸುಗಳು ಹಾಡುಗಳ ರೂಪ ಪಡೆದುಕೊಂಡಿರುವುದು ಸಾಮಾನ್ಯವಾಗಿ ಕಂಡುಬರುವಂಥದು. ಕೆಲವೊಮ್ಮೆ ಈ ’ರೈನ್ ಸಾಂಗ್’ಗಳು ಬಹಳ ಸುಂದರವಾಗಿ ಚಿತ್ರೀಕರಿಸಲ್ಪಟ್ಟು, ಉತ್ತಮ ಸಾಹಿತ್ಯ, ಸಂಗೀತ, ಹಾಡುಗಾರಿಕೆಗಳ ಮೂಲಕ ’ಕ್ಲಾಸಿಕ್’ ಸ್ಥಾನವನ್ನು ಪಡೆದುಕೊಂಡಿವೆ, ಕೆಲವು ’ಸ್ಲೀಜೀ’ ಲೆವೆಲ್ಲಿನ ಹಾಡುಗಳು ಪಡ್ಡೆಹುಡುಗರಿಗೆ ಕಚಗುಳಿಯಿಡುವಂತೆ ಮಾಡುತ್ತಲೇ ಎಲ್ಲರೂ ಗುನುಗುನಿಸುವಂತಿರುತ್ತವೆ, ಇನ್ನು ಕೆಲವು ವಿಪರೀತ ಆಘಾತಕಾರೀ ಮಟ್ಟದಲ್ಲಿದ್ದು ’ಮುಗಿದರೆ ಸಾಕು!’ ಎಂದುಕೊಳ್ಳುವಂಥ ಮುಜುಗರ ಹುಟ್ಟಿಸುತ್ತವೆ. ಹಿಂದೀ ಸಿನೆಮಾದ ಐವತ್ತರ ದಶಕದಿಂದೀಚೆಗಿನ ಕೆಲವು ಅತ್ಯುತ್ತಮ ಮಳೆಹಾಡುಗಳು ಇದೋ ನಿಮಗಾಗಿ.

೧. ಪ್ಯಾರ್ ಹುವಾ ಇಕ್‍ರಾರ್ ಹುವಾ ಹೈ: (ಸಾಹಿತ್ಯ: ಶೈಲೇಂದ್ರ, ದನಿ: ಮನ್ನಾ ಡೇ, ಲತಾ ಮಂಗೇಶ್ಕರ್, ಸಂಗೀತ: ಶಂಕರ್ ಜೈಕಿಶನ್)

ಮಳೆಹಾಡುಗಳ ಬಗ್ಗೆ ಮಾತನಾಡುವಾಗ  ’ಶ್ರೀ 420’ಯ ಈ ಸುಪ್ರಸಿದ್ಧ ಹಾಡನ್ನು ಹೆಸರಿಸದಿದ್ದರೆ ಅಪರಾಧ ಮಾಡಿದಂತೆಯೇ ಸರಿ!! 1955ರ ಈ ಚಲನಚಿತ್ರದ ಹಾಡು ಅಂದಿನ ಯುವಜನಾಂಗವನ್ನು ಹುಚ್ಚೆಬ್ಬಿಸಿದ್ದೇ ಅಲ್ಲ, ಪ್ರೇಮದ ಪರಿಭಾಷೆಯನ್ನೇ ಬದಲಿಸಿತೆಂದರೆ ತಪ್ಪಾಗದು. ಜನಪ್ರಿಯ ರಾಜ್ ಕಪೂರ್-ನರ್ಗೀಸ್ ಜೋಡಿ ಮಳೆಯಲ್ಲಿ ನಾವು ’ಅಜ್ಜನಕೊಡೆ’ ಎಂದು ಕರೆವಂಥ ದೊಡ್ಡಗಾತ್ರದ ಛತ್ರಿಯಡಿ ಪರಸ್ಪರ ದಿಟ್ಟಿಸುತ್ತ ನಡೆದುಕೊಂಡು ಹೋಗುವ ಸೀನ್ ಪ್ರೇಕ್ಷಕರ ಮನದಲ್ಲಿ ಅಳಿಸಲಾಗದ ಅಚ್ಚೊತ್ತಿತು. ಇಲ್ಲಿ ಮಳೆ ನಾಯಕ-ನಾಯಕಿಯರನ್ನು ಬೆಸೆಯುವ ಬಂಧವಾಗಿ ಕೆಲಸ ಮಾಡಿದೆ. ಜತೆಗೇ ಹಾಡಿನಲ್ಲಿ ಕಂಡುಬರುವ ಮಳೆಯಲ್ಲಿ ನೆನೆಯುತ್ತ ತನ್ನ ಚಾದುಕಾನಿನಲ್ಲಿ ತಾನೇ ಚಾ ಹೀರುತ್ತ ಕುಳಿತಿರುವ ಚಾಯ್‌ವಾಲಾ, ಮಳೆಯಲ್ಲಿ ರೇನ್‍ಕೋಟ್ ಧರಿಸಿ ಕೈಕೈಹಿಡಿದು ನಡೆದುಕೊಂಡು ಹೋಗುವ ಮಕ್ಕಳು, ಇವೆಲ್ಲ ಹಾಡಿಗೆ ವಿಶೇಷ ಮೆರುಗು ನೀಡಿದವು. ಮತ್ತೂ ಒಂದು ವಿಶೇಷವೆಂದರೆ ಇಲ್ಲಿ ಕಾಣಿಸಿಕೊಳ್ಳುವ ಮೂರೂ ಮಕ್ಕಳು ರಾಜ್‌ಕಪೂರರ ಮಕ್ಕಳು!!

೨. ಓ ಸಜ್‍ನಾ, ಬರ್‌ಖಾ ಬಹಾರ್ ಆಯಿ: (ಸಾಹಿತ್ಯ: ಶೈಲೇಂದ್ರ, ದನಿ: ಲತಾ ಮಂಗೇಶ್ಕರ್, ಸಂಗೀತ: ಸಲಿಲ್ ಚೌಧರಿ)

’ಪರಖ್’ ಚಲನಚಿತ್ರದ ಈ ಸುಮಧುರ ಗೀತೆ ಲತಾ ಮಂಗೇಶ್ಕರರ ಅತ್ಯುತ್ತಮ ಹಾಡುಗಳಲ್ಲೊಂದು ಮತ್ತು ಅವರ ಫೇವರಿಟ್ ಕೂಡಾ. 1960ರ ಬಿಮಲ್ ರಾಯ್ ನಿರ್ದೇಶನದ ಈ ಉತ್ತಮ ಚಲನಚಿತ್ರ  ಫಿಲ್ಮ್‍ಫೇರ್ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಅದರ ಜತೆಗೇ ಈ ಹಾಡು ಕೂಡಾ ಅಜರಾಮರವಾಯಿತು. ಮಳೆಗಾಲದಲ್ಲಿ ನಮ್ಮ ಕಣ್ಣಿಗೆ ಕಾಣಬರುವ ಪ್ರಕೃತಿಯ ಬಹುತೇಕ ಅಂಶಗಳನ್ನೂ ಸುಂದರವಾಗಿ ಚಿತ್ರೀಕರಿಸಿರುವ ಈ ಹಾಡಿನಲ್ಲಿ ನಟಿ ಸಾಧನಾ ಭಾರತೀಯ ಮಹಿಳೆಯ ಸ್ನಿಗ್ಧ ಸೌಂದರ್ಯದ ಪ್ರತಿರೂಪವಾಗಿ, ಮಳೆಯಲ್ಲಿ ವಿರಹದಿಂದ ಬೇಯುವ ಪ್ರತಿಯೊಬ್ಬ ಯುವತಿಯ ಪ್ರತೀಕವಾಗಿ ಕಂಡುಬರುತ್ತಾರೆ. ಇಲ್ಲಿ ಆಕೆ ಮಳೆಯಲ್ಲಿ ನೆನೆಯುವದಿಲ್ಲ. ಮಳೆಗಾಲದ ಸೌಂದರ್ಯವನ್ನು ತನ್ನಷ್ಟಕ್ಕೆ ತಾನೇ ಆಸ್ವಾದಿಸುತ್ತ ಪ್ರೇಮಪರವಶಳಾಗುವ ಹೆಣ್ಣಿನ ಪಾತ್ರವನ್ನು ಸಾಧನಾ ಅದ್ಭುತವಾಗಿ, ಮಿತವಾಗಿ ಅಭಿನಯಿಸಿದ್ದಾರೆ.

೩. ರಿಮ್‍ಝಿಮ್ ಗಿರೆ ಸಾವನ್: (ಸಾಹಿತ್ಯ: ಯೋಗೇಶ್, ದನಿ: ಲತಾ ಮಂಗೇಶ್ಕರ್, ಸಂಗೀತ: ಆರ್.ಡಿ. ಬರ್ಮನ್)

ಅಮಿತಾಭ್, ಮೌಶುಮೀ ಚಟರ್ಜಿ ಅಭಿನಯಿಸಿರುವ ಬಾಸು ಚಟರ್ಜಿ ನಿರ್ದೇಶನದ ”ಮನ್‌‍ಜಿಲ್’(1979) ಚಲನಚಿತ್ರದಲ್ಲಿ  ಈ ಹಾಡಿನ ಎರಡು ವರ್ಶನ್‌ಗಳಿವೆ. ಒಂದನ್ನು ನಾಯಕ ಅಮಿತಾಭ್ ಸಂಗೀತದ ಮೆಹಫಿಲ್‌ನಲ್ಲಿ ಹಾಡಿದ್ದರೆ, ಇನ್ನೊಮ್ಮೆ ನಾಯಕಿ ನಾಯಕನೊಂದಿಗೆ ಮಳೆಯಲ್ಲಿ ನೆನೆಯುತ್ತಿರುವಾಗ ಹಿನ್ನೆಲೆಯಲ್ಲಿ ಅಕೆಯ ನಿವೇದನೆಯಂತೆ ಕೇಳಿಬರುತ್ತದೆ. ಇವೆರಡರಲ್ಲಿ ನನ್ನ ಮೆಚ್ಚಿನದು ಲತಾ ಹಾಡಿರುವ ಹಾಡು. ಇದರಲ್ಲಿ ನಾಯಕ, ನಾಯಕಿ ಮುಂಬಯಿಯ ಮಳೆಯಲ್ಲಿ ಪ್ರಪಂಚದ ಪರಿವೆಯೇ ಇಲ್ಲದಂತೆ ಆರಾಮವಾಗಿ ನೆನೆಯುತ್ತ ಆನಂದಿಸುತ್ತಿದ್ದಾರೆ. ಪ್ರಪಂಚವಿಡೀ ಮಳೆಗೆ ಕೊಡೆ ಹಿಡಿದುಕೊಂಡಿದ್ದರೆ ಇವರಿಬ್ಬರಿಗೆ ಮಾತ್ರ ಮಳೆಯ ಜತೆಯೇ ಹಿತವಾಗಿದೆ. ಇಲ್ಲಿ ಮಳೆಯು ನಾಯಕನ ಬಳಿಯಿರುವ ತನ್ನೊಳಗೆ ಹೊತ್ತಿಸುತ್ತಿರುವ ಬೆಂಕಿಯ ಬಗ್ಗೆ ನಾಯಕಿ ತೋಡಿಕೊಳ್ಳುತ್ತಿದ್ದಾಳೆ. ಮಳೆ, ಬೆಂಕಿ, ಗಾಳಿಗಳ ಈ ಹೊಸರೀತಿಯ ಬೆಸುಗೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸುವ ಈ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣ ಎರಡೂ ಅತ್ಯುತ್ತಮವಾಗಿದೆ.

೪. ರಿಮ್‍ಝಿಮ್ ರಿಮ್‍ಝಿಮ್: (ಸಾಹಿತ್ಯ: ಜಾವೇದ್ ಅಖ್ತರ್, ದನಿ: ಕುಮಾರ್ ಸಾನು ಮತ್ತು ಕವಿತ ಕೃಷ್ಣಮೂರ್ತಿ, ಸಂಗೀತ: ಆರ್.ಡಿ. ಬರ್ಮನ್)

ವಿಧು ವಿನೋದ್ ಚೋಪ್ರಾ ನಿರ್ದೇಶನದ ’1942 ಎ ಲವ್ ಸ್ಟೋರಿ’ ಚಲನಚಿತ್ರದ ಈ ಹಾಡು ಭಾರತೀಯ ಚಲನಚಿತ್ರರಂಗದ ಲೆಜೆಂಡರಿ ಸಂಗೀತನಿರ್ದೇಶಕ ಆರ್. ಡಿ. ಬರ್ಮನ್‌ರ ಕೊನೆಯ ಹಾಡು ಕೂಡಾ. ಈ ಹಾಡು ಪ್ರೇಕ್ಷಕರಿಗೆ ಮೆಚ್ಚಿಗೆಯಾಗಿದ್ದು ಮುಗ್ಧಮುಖದ ನಾಯಕಿ ಮನಿಶಾ ಕೊಯಿರಾಲಾ ಮತ್ತು ನಾಯಕ ಅನಿಲ್ ಕಪೂರರ ನಡುವಿನ ಬೆಳ್ಳಿತೆರೆಯ ರೊಮ್ಯಾನ್ಸ್‍ನಿಂದಾಗಿ. ತನ್ನ ಪ್ರೇಮಿಕೆಯ ಜತೆಗಿರಬೇಕೆಂಬ ನಾಯಕನ ಕನಸು ನಿಜವಾಗಿದೆ. ಅದಕ್ಕೆ ಜತೆಯಾಗಿ ಮಳೆಯೂ ಸುರಿಯುತ್ತಿದೆ. ಇನ್ನೇನು ಬೇಕು ನಾಯಕನಿಗೆ? ತೊಂಭತ್ತರ ದಶಕದಲ್ಲಿ ಬಹಳ ಜನಪ್ರಿಯವಾದ ಹಾಡುಗಳಲ್ಲೊಂದು ಇದು. ಜಾವೇದ್ ಅಖ್ತರರ ಸಾಹಿತ್ಯ ಸರಳವೂ, ಆಪ್ತವೂ, ಕಾವ್ಯಮಯವೂ ಆಗಿದ್ದು ಬಹಳ ಪ್ರಶಂಸೆಗೊಳಗಾಯಿತು.

೫. ಭಾಗೇ ರೆ ಮನ್ ಕಹೀಂ: (ಸಾಹಿತ್ಯ: ಇರ್ಶಾದ್ ಕಾಮಿಲ್, ದನಿ: ಸುನಿಧಿ ಚೌಹಾನ್, ಸಂಗೀತ: ಸಂದೇಶ್ ಶಾಂಡಿಲ್ಯ)

ಸುಧೀರ್ ಮಿಶ್ರಾ ನಿರ್ದೇಶಿಸಿರುವ ’ಚಮೇಲಿ’ ಚಲನಚಿತ್ರದಲ್ಲಿ ಮಳೆಯದೇ ಮುಖ್ಯಪಾತ್ರ. ಮುಂಬಯಿಯ ಧಾರಾಕಾರ ಮಳೆಯ ಸಂಜೆಯೊಂದು ನಾಯಕ ಅಮನ್ ಕಪೂರ್(ರಾಹುಲ್ ಬೋಸ್) ಮತ್ತು ಕಾಮಾಟಿಪುರದ ವೇಶ್ಯೆ ಚಮೇಲಿ(ಕರೀನಾ ಕಪೂರ್)ಯರನ್ನು ಒಂದೇ ಸೂರಿನಡಿ ತಂದುನಿಲ್ಲಿಸುತ್ತದೆ. ಆಕೆಯನ್ನು ಕಂಡು ಮೊದಮೊದಲು ಅಸಹ್ಯಪಡುವ ಅಮನ್ ಆಕೆಯ ಮಾತು ಕೇಳುತ್ತ ಆಕೆಯ ಕಪ್ಪು ಪ್ರಪಂಚವನ್ನು ಕಾಣುತ್ತ ಬೆರಗಾಗತೊಡಗುತ್ತಾನೆ. ಹೀಗಿರುವಾಗ ಸುರಿವ ಮಳೆಯಲ್ಲಿ ಇದ್ದಕ್ಕಿದ್ದಹಾಗೆ ಒಂದು ಚೆಂದದ ಕನಸಿನಂತೆ ಹಾಡುತ್ತ ಸಂತಸಪಡುವ ಚಮೇಲಿ, ಆಕೆಯನ್ನು ಅಚ್ಚರಿಯಿಂದ ನೋಡುತ್ತ ಮುಗುಳ್ನಗುವ ಅಮನ್, ಮಳೆಗೆ ಸಿಲುಕಿ ಚೆಲ್ಲಾಚೆದರಾಗುವ ಜನರು, ಚಮೇಲಿಯ ಢಾಳಾಗಿ ಕಣ್ಣುಕುಕ್ಕುವ ನೀಲಿ-ಕೆಂಪು ದಿರಿಸು ಇವೆಲ್ಲವೂ ಬೆಳ್ಳಿತೆರೆಯನ್ನೇ ತೋಯಿಸಿಬಿಡುವಂತೆ ಭಾಸವಾಗುತ್ತದೆ. ಹಾಡು ಕಿವಿಗೆ ಹಿತವಾಗಿ ಮಾನ್ಸೂನಿನ ಮಳೆಯಂತೆಯೇ ಆವರಿಸಿಕೊಳ್ಳುತ್ತದೆ.

೬. ಗೀಲಾ ಗೀಲಾ ಪಾನಿ: (ಸಾಹಿತ್ಯ: ಗುಲ್ಜಾರ್, ದನಿ: ಲತಾ ಮಂಗೇಶ್ಕರ್, ಸಂಗೀತ: ವಿಶಾಲ್ ಭಾರದ್ವಾಜ್)

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ’ಸತ್ಯಾ’ ಚಲನಚಿತ್ರದ ಈ ಹಾಡು ನನ್ನ ಪ್ರಕಾರ ಅತ್ಯಂತ ಸುಂದರವಾಗಿ ಚಿತ್ರೀಕರಿಸಲ್ಪಟ್ಟ ಮಳೆಹಾಡುಗಳಲ್ಲೊಂದು.  ನಾಯಕಿ ಊರ್ಮಿಳಾ ಮಾತೊಂಡ್ಕರ್ ಇದರಲ್ಲಿ ತಾನು ಪಕ್ಕಾ ನಾನ್-ಗ್ಲ್ಯಾಮರಸ್ ಅವತಾರದಲ್ಲಿಯೂ ಸೆನ್‍ಶ್ಯೂವಸ್ ಆಗಿ ಕಾಣಬಲ್ಲೆ ಎಂದು ತೋರಿಸಿಕೊಟ್ಟರು. ನಾಯಕಿಯ ಮೈಯನ್ನಪ್ಪುವ ಭಾರತೀಯ ಉಡುಗೆಯಾದ ಸೀರೆ ನಿಜವಾಗಿ ಎಷ್ಟು ಸುಂದರ ಎನ್ನುವದು ಈ ಹಾಡನ್ನು ನೋಡಿದರೆ ಮನವರಿಕೆಯಾದೀತು. ಮಳೆಯಲ್ಲಿ ತನ್ಮಯಳಾಗಿ ಹಾಡುವ ನಾಯಕಿ, ಮತ್ತು ಆಕೆಯನ್ನು ಕೇಳುತ್ತ ಕೂತ ಕೋಣೆಯಿಂದ ಹೊರದಿಟ್ಟಿಸುವ ನಾಯಕ – ಇವರಿಬ್ಬರ ಪ್ರಪಂಚಗಳ ನಡುವಿನ ವ್ಯತ್ಯಾಸಗಳನ್ನು ಈ ಸರಳ, ಸುಂದರ ಹಾಡಿನ ಮೂಲಕ ಕಂಡೂ ಕಾಣದಂತೆ ವ್ಯಕ್ತಪಡಿಸಲಾಗಿದೆ.

೭. ಟಿಪ್ ಟಿಪ್ ಬರ್‌ಸಾ ಪಾನೀ: (ಸಾಹಿತ್ಯ: ಆನಂದ್ ಬಕ್ಷಿ, ದನಿ: ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್, ಸಂಗೀತ: ವಿಜು ಶಾಹ್)

ಮೊಹ್ರಾ ಚಲನಚಿತ್ರದ ಈ ಹಾಡು ಇಂದಿಗೂ ಬಾಲಿವುಡ್‌ನ ಅತ್ಯಂತ ಸೆಕ್ಸೀ ಹಾಡುಗಳ ಲಿಸ್ಟಿನಲ್ಲಿ ಮುಂಚೂಣಿಯಲ್ಲಿದೆ. ಫಾರ್ ಎ ಛೇಂಜ್, ಈ ಮಳೆಯ ಸೀಕ್ವೆನ್ಸಿನಲ್ಲಿ ನಾಯಕಿ ನಾಯಕನನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವದನ್ನು ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಿರುವದನ್ನು ಕಾಣಿಸಲಾಗಿದೆ. ನಾಯಕನೇನೋ ನೂರಾರು ಗೂಂಡಾಗಳನ್ನು ಸದೆಬಡಿಯುವವನಿರಬಹುದು. ಆದರೆ ಮಳೆ ಮತ್ತು ಹೀರೋಯಿನ್ನಿನ ಡೆಡ್ಲೀ ಕಾಂಬಿನೇಶನ್ ಅನ್ನು ನಾಯಕ ಎದುರಿಸಲು ಸಾಧ್ಯವೆ? ನಾಯಕಿ ರವೀನಾ ಮತ್ತು ನಾಯಕ ಅಕ್ಷಯ್ ಕುಮಾರರ ನಡುವಿನ ’ಕೆಮಿಸ್ಟ್ರಿ’ ಈ ಹಾಡಿನಲ್ಲಿ ಸುವ್ಯಕ್ತವಾಗಿದೆ.

೮. ಕೋಯೀ ಲಡ್‍ಕೀ ಹೈ: (ಸಾಹಿತ್ಯ: ಆನಂದ್ ಬಕ್ಷಿ, ದನಿ: ಉದಿತ್ ನಾರಾಯಣ್ ಮತ್ತು ಲತಾ ಮಂಗೇಶ್ಕರ್, ಸಂಗೀತ: ಉತ್ತಮ್ ಸಿಂಗ್)

ಸುಪರ್ ಹಿಟ್ ಸಂಗೀತಮಯ ಚಲನಚಿತ್ರವಾದ ’ದಿಲ್ ತೋ ಪಾಗಲ್ ಹೈ’ ತನ್ನ ಸಮಯದಲ್ಲಿ ಗಲ್ಲಾಪೆಟ್ಟಿಗೆಯ ಹಲವು ರೆಕಾರ್ಡುಗಳನ್ನು ಮುರಿಯಿತು. ಇದರ ಎಲ್ಲ ಹಾಡುಗಳೂ ಜನಜನಿತವಾದವು. ಮಳೆಯಲ್ಲಿ ಕುಣಿಯುವ ಮಕ್ಕಳ ಜತೆಗೇ ಕುಣಿವ ನಾಯಕ ನಾಯಕಿ ಒಬ್ಬರನ್ನೊಬ್ಬರು ಛೇಡಿಸುತ್ತಲೇ ಹತ್ತಿರವಾಗುವ ಸಂದರ್ಭ. ಇದಲ್ಲದೆ ಪಾದಕ್ಕೆ ಏಟುಮಾಡಿಕೊಂಡು ಆಸ್ಪತ್ರೆ ಸೇರಿಕೊಂಡು ದುಃಖಿತಳಾಗಿರುವ ನಾಯಕನ ಗೆಳತಿಯಲ್ಲಿ ಉತ್ಸಾಹ ತುಂಬುವ ಪ್ರಯತ್ನವೂ ಇಲ್ಲಿ ನಡೆಯುತ್ತದೆ. ಇದೆಲ್ಲವಕ್ಕೂ ಹಿನ್ನೆಲೆಯಾಗಿ ಮಳೆ. ಈ ಹಾಡಿನಲ್ಲಿ ಮಕ್ಕಳ ಮುಗ್ಧತೆ, ಪ್ರೇಮದ ಆರಂಭ ಮತ್ತು ಸ್ನೇಹದ ಬಾಂಧವ್ಯಗಳೆಲ್ಲವೂ ಒಟ್ಟಾಗಿ ಹೊಸದೊಂದು ವಾತಾವರಣವನ್ನೇ ನೇಯ್ದಿವೆ.

೯. ಬರ್‌ಸೋ ರೆ : (ಸಾಹಿತ್ಯ: ಗುಲ್ಜಾರ್, ದನಿ: ಶ್ರೇಯಾ ಘೋಷಾಲ್ ಮತ್ತು ಕೀರ್ತಿ, ಸಂಗೀತ: ಎ.ಆರ್.ರೆಹಮಾನ್)

“ಗುರು”ವನ್ನು ಮಣಿರತ್ನಂರ ಅತ್ಯುತ್ತಮ ಚಲನಚಿತ್ರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. “ಬರ್‌ಸೋ ರೆ” ಯಲ್ಲಿ ಗುಲ್ಜಾರರ ಮಳೆಯ ಬಗೆಗಿನ ಮಗುವಿನಂತಹ ಸೆಳೆತ, ಐಶ್ವರ್ಯಾ ರೈಯ ಅಂತರ್ನಿಹಿತ ಚೆಲುವು, ಮೇಲುಕೋಟೆಯಂತಹ ಅಪರೂಪದ ಲೊಕೇಶನ್ನುಗಳ ನಿಗೂಢ ಸೌಂದರ್ಯ, ರೆಹಮಾನರ ಅಲೌಕಿಕ ಸಂಗೀತದ ಮೋಡಿ, ಮತ್ತು ಎಲ್ಲದಕಿಂತ ಹೆಚ್ಚಾಗಿ ಮಳೆಯ ಸದ್ದುಗದ್ದಲ ಎಲ್ಲವೂ ಕರಾರುವಾಕ್ಕಾಗಿ ಮೇಳೈಸಿವೆ. ಮಳೆಯಲ್ಲಿ ಕುಣಿದು ಕುಪ್ಪಳಿಸುವ ತುಂಟ ಗುಜರಾತೀ ಹುಡುಗಿಯ ಪಾತ್ರದಲ್ಲಿ ಐಶ್ವರ್ಯಾ ಈ ಹಾಡಿನ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಲ್ಪಡುತ್ತಾರೆ. ನರ್ತಿಸುವ ನಾಯಕಿಗೂ, ಸುರಿವ ಮಳೆಗೂ ಇಲ್ಲಿ ಹೆಚ್ಚಿನ ವ್ಯತ್ಯಾಸವೇ ಕಾಣಬರದು. ಮಳೆಯ ಮತ್ತು ಹೆಣ್ಣಿನ ಲಾಸ್ಯ, ಚಂಚಲತೆ, ಸೌಂದರ್ಯಗಳ ನಡುವಿನ ಸಾಮ್ಯತೆಗಳನ್ನು ಈ ಹಾಡು ಕಾಣಿಸುತ್ತದೆ.

೧೦. ದೇಖೋ ನಾ: (ಸಾಹಿತ್ಯ: ಪ್ರಸೂನ್ ಜೋಶಿ, ದನಿ: ಸೋನು ನಿಗಮ್ ಮತ್ತು ಸುನಿಧಿ ಚೌಹಾನ್, ಸಂಗೀತ: ಜತಿನ್-ಲಲಿತ್)

“ಫನಾ” ಚಲನಚಿತ್ರದ ಈ ಹಾಡಿನಲ್ಲಿ ಮತ್ತೆ ಹಳೆಯ ಫಾರ್ಮುಲಾ  – ಮಳೆಯಲ್ಲಿ ನಾಯಕ ನಾಯಕಿಯರ ಮಿಲನ. ಇದರಲ್ಲಿ ಹೊಸದೇನಿದೆ ಎಂದು ನೀವು ಹುಬ್ಬೇರಿಸಬಹುದು. ಈ ಹಾಡಿನಲ್ಲಿ ಖ್ಯಾತ ಸಿನೆಮಾ ಛಾಯಾಗ್ರಾಹಕ ರವಿಚಂದ್ರನ್‍ರ ಮ್ಯಾಜಿಕ್ ಕೆಲಸ ಮಾಡಿದೆ. ಇಲ್ಲಿ ನಾಯಕಿ ಕಾಜೋಲಳ ಮೇಲೆ ಬೀಳುವ ಪ್ರತಿಯೊಂದು ಮಳೆಹನಿಯೂ ಪೋಣಿಸದ ಮುತ್ತಿನಂತೆ ಕಂಡುಬರುತ್ತದೆ. ನಾಯಕನ ಹಂಬಲ ಮತ್ತು ನಾಯಕಿಯ ಕಾತರ, ಭಯಗಳೊಂದಿಗೆ ಆರಂಭವಾಗುವ ಈ ಹಾಡು ಮುಗಿವುದರೊಳಗೆ ನಾಯಕನ ಮೋಡಿಗೆ ಸಿಲುಕಿದ ನಾಯಕಿ ತನ್ನ ಕಾಮನೆಗಳನ್ನು ಅಭಿವ್ಯಕ್ತಗೊಳಿಸುತ್ತಾಳೆ. ಈ ಹಾಡಿನ ಸಾಹಿತ್ಯ ಉತ್ಕೃಷ್ಟ ಮಟ್ಟದ್ದಾಗಿದ್ದು ಅಮೀರ್ ಖಾನ್ ಮತ್ತು ಕಾಜೋಲ್‌ರ ನಟನೆಯ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ!!

ನಿಮ್ಮ ನೆನಪಿನ, ನಿಮ್ಮ ಮೆಚ್ಚಿನ ಮಳೆಹಾಡುಗಳಿದ್ದಲ್ಲಿ ಹಂಚಿಕೊಳ್ಳಿರಲ್ಲ!!

ಸಾಹಿತ್ಯಕ್ಕೊಂದಿಷ್ಟು ಪಿಂಕ್ ಶೇಡ್..

‘ಸಾಹಿತ್ಯ’ ಅಂದಕೂಡಲೆ ‘ನಾವೇನೂ ಓದಲ್ಲಪ್ಪಾ, ಟೈಮೆಲ್ಲಿದೆ?’ ಎಂದು ನುಣುಚಿಕೊಳ್ಳುವ ಹೆಣ್ಣುಮಕ್ಕಳೆ ಜಾಸ್ತಿ. ಹೆಚ್ಚಿನ ಹೆಣ್ಣುಮಕ್ಕಳು ಓದಿಕೊಳ್ಳುವುದು ಅಡಿಗೆ, ಮೇಕಪ್, ಕೂದಲ ಆರೈಕೆ, ಆರೋಗ್ಯ, ಫ್ಯಾಶನ್ ಇತ್ಯಾದಿಗಳ ಬಗ್ಗೆ. ಈಗಂತೂ ಟೀವಿಯಲ್ಲೆ ಈ ಎಲ್ಲದಕ್ಕು ಪರಿಹಾರ ದೊರಕಿಬಿಡುವುದರಿಂದ ಈ ರೀತಿಯ ಓದುವಿಕೆಯೂ ಕಡಿಮೆಯಾಗುತ್ತಿದೆ. ಕೆಲವು ದಶಕಗಳ ಹಿಂದೆ ಹೆಣ್ಣುಮಕ್ಕಳ ಓದುಗವರ್ಗ ಎಷ್ಟು ದೊಡ್ಡದಾಗಿತ್ತೆಂದರೆ ಅವರಿಗಾಗಿಯೆ ಬರೆಯುವ ಲೇಖಕಿಯರ ವರ್ಗವೂ ಹುಟ್ಟಿಕೊಂಡಿತ್ತು. ಸೂಕ್ಷ್ಮವಾಗಿ ಅವಲೋಕಿಸಿದರೆ  ಎಪ್ಪತ್ತರ ದಶಕದ ಸ್ತ್ರೀವಾದದ ಕನ್ನಡೀಕೃತ ರೂಪವನ್ನು ನಾವು ಈ ಸಾಹಿತ್ಯದಲ್ಲಿ ಕಾಣಬಹುದು. ಸಾಯಿಸುತೆ, ಸಿ.ಎನ್.ಮುಕ್ತಾರಿಂದ ಹಿಡಿದು ತ್ರಿವೇಣಿ, ಅನುಪಮಾ ನಿರಂಜನರವರೆಗೆ ಸಾಕಷ್ಟು ಕಾದಂಬರಿಗಳ ಬಗ್ಗೆ ಹೆಂಗೆಳೆಯರು ಒಂದು ಕಡೆ ಸೇರಿದಾಗ ತಮ್ಮದೇ ಧಾಟಿಯಲ್ಲಿ ಚರ್ಚೆ ಮಾಡುತ್ತಿದ್ದರು. ಮಹಿಳಾಕೇಂದ್ರಿತ ಸಾಹಿತ್ಯ ಅಷ್ಟು ಜನಪ್ರಿಯವಾಗಿದ್ದದ್ದು ಇದ್ದಕ್ಕಿದ್ದಂತೆಯೆ ದಿಢೀರನೆ ಕಣ್ಮರೆಯಾಗಲು ಕಾರಣಗಳೇನು?
ಬಹುಶಃ ಆ ಒಂದು ಪೀಳಿಗೆಯ ಲೇಖಕಿಯರು ಕಣ್ಮರೆಯಾಗುತ್ತಿದ್ದಂತೆ ಅವರ ಅಭಿಮಾನಿವರ್ಗ ಬೇರೆ ಸಾಹಿತ್ಯದೆಡೆಗೆ ಮುಖ ಮಾಡಿತೇನೋ. ಮಹಿಳಾವರ್ಗದ ಹೊಸಪ್ರಜ್ಞೆಗೆ  ‘ಕೇಟರ್’ ಮಾಡುವಂತಹ ಹೊಸ ಪೀಳಿಗೆಯ ಲೇಖಕಿಯರ ಸಂಖ್ಯೆ ಕಡಿಮೆಯಿರುವದು, ಕಂಪ್ಯೂಟರ್ ಕ್ರಾಂತಿ, ಇಂಟರ್ನೆಟ್ ಸಂಭ್ರಮ, ಜಾಗತೀಕರಣದ ಆಗಮನದೊಂದಿಗೆ ಬದಲಾದ ವಿದ್ಯಾವಂತ ಹೆಣ್ಣಿನ ಪಾತ್ರಗಳು, ದೂರದರ್ಶನದ ಧಾರಾವಾಹಿಗಳು..ಹೀಗೆ ಕಾರಣ ಹುಡುಕುತ್ತ ಹೋದರೆ ಯಾವ ಕೋನದಿಂದಾದರೂ ನೋಡಬಹುದು. ಆದರೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವಲಯಗಳ ಮಹಿಳಾ ಸಾಹಿತ್ಯಗಳ ಕಡೆ ಮುಖ ಮಾಡಿದರೆ ಹೊಸತೊಂದು ಬೆಳವಣಿಗೆ ಆರಂಭವಾಗಿರುವುದಷ್ಟೇ ಅಲ್ಲ, ಅಚ್ಚರಿಪಡಿಸುವ ವೇಗದಲ್ಲಿ ಬೆಳೆಯುತ್ತಿರುವುದನ್ನು ಕಾಣಬಹುದು.
ಚಿಕ್‌ಲಿಟ್.
ಏನಿದು ಚಿಕ್‌ಲಿಟ್? ಹೆಸರೇ ತಮಾಷೆಯಾಗಿದೆಯಲ್ಲ? ಅನ್ನಬಹುದು ನೀವು. ಇದರ ಹೆಸರಿನಷ್ಟೇ ಸ್ವಾರಸ್ಯಕರವಾಗಿದೆ ಇದರ ಇತಿಹಾಸ.
ಅಮೆರಿಕನ್ ಆಡುಮಾತಿನಲ್ಲಿ ಚಿಕ್ ಎಂದರೆ ಯುವತಿ ಎಂದರ್ಥ. ಲಿಟ್ ಎನ್ನುವುದು ಲಿಟರೇಚರ್ ಎಂಬ ಪದದ ಮೊಂಡುರೂಪ. ಎರಡೂ ಸೇರಿದರೆ ಚಿಕ್‌ಲಿಟ್. ಬರೆ ಬಲಿಪಶುವಾಗಿ ಮಾತ್ರ ಮಹಿಳೆಯನ್ನು ಚಿತ್ರಿಸದೆ ಆಕೆಯ ಜೀವನದ ವಿಭಿನ್ನ ಆಯಾಮಗಳನ್ನು, ಅನುಭವಗಳನ್ನು ಆಕೆಯದೆ ಭಾಷೆಯಲ್ಲಿ ದಾಖಲಿಸುವ ಸಾಹಿತ್ಯವನ್ನು ‘ಚಿಕ್‌ಲಿಟ್’ ಎಂದು ಕರೆಯಲಾಗುತ್ತದೆ. 1995ರಲ್ಲಿ ಕ್ರಿಸ್ ಮಾಜಾ ಮತ್ತು ಜೆಫ್ರೀ ಡಿಶೆಲ್ ಸಂಪಾದಿಸಿದ ‘ಚಿಕ್‌ಲಿಟ್ – ಪೋಸ್ಟ್ ಫೆಮಿನಿಸ್ಟ್ ಫಿಕ್ಷನ್’ ಎಂಬ ಸಂಕಲನದಲ್ಲಿ ಈ ಪದವನ್ನು ವಿಡಂಬನಾತ್ಮಕವಾಗಿ ಬಳಸಲಾಯಿತು. ಹೆಚ್ಚಿನ ಸ್ತ್ರೀವಾದಿಗಳು ಚಿಕ್‌ಲಿಟ್ ಬಗ್ಗೆ ಮೂಗು ಮುರಿಯುತ್ತಾರಾದರೂ ಇದು ಆಧುನಿಕ, ನಗರವಾಸಿ ಮಹಿಳೆಯ ಜೀವನವನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುವ ಪ್ರಯತ್ನವಾಗಿದೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಸ್ತ್ರೀವಾದದ ಎಲ್ಲ ಸ್ವರೂಪಗಳಿಗೂ ಸರಿಯಾಗಿ ಹೊಂದಿಬರದ ಈ ಸಾಹಿತ್ಯಪ್ರಕಾರವನ್ನು ‘ಸ್ತ್ರೀವಾದೀ ಸಾಹಿತ್ಯದ ಎರಡನೆ ಅಲೆ’ ಎಂದು ಪರಿಗಣಿಸಲಾಗುತ್ತದೆ. ವರ್ಜೀನಿಯಾ ವುಲ್ಫಳ ‘ಎ ರೂಮ್ ಆಫ್ ಒನ್ಸ್ ಓನ್’ (ತನ್ನದೇ ಆದ ಒಂದು ಕೋಣೆ) ಎಂಬ ಕಲ್ಪನೆ ಇಲ್ಲಿ ಬೇರೊಂದು ಆಯಾಮದಲ್ಲಿ ಮಾತು ಪಡೆದುಕೊಂಡಿದೆ. ಚಿಕ್‌ಲಿಟ್‌ನ ಮೂಲ ಜೇನ್ ಆಸ್ಟಿನ್ ಕಾದಂಬರಿಗಳು ಎಂದು ಈ ಲೇಖಕಿಯರೆ ಒಪ್ಪಿಕೊಳ್ಳುತ್ತಾರೆ. ಕೆಲ ಶತಮಾನಗಳ ಹಿಂದಿನ ಹೆಣ್ಣಿನ ಸಾಮಾಜಿಕ ಜೀವನ, ಸಂಬಂಧಗಳು, ಪ್ರೇಮ, ತೊಳಲಾಟಗಳೇ ಮೊದಲಾದ ವಿಷಯಗಳ ಬಗ್ಗೆ ಸಮರ್ಥವಾಗಿ ಬರೆದ ಜೇನ್ ಆಸ್ಟಿನ್‌ಳ ಕಾದಂಬರಿಗಳನ್ನು ಓದದವರು ಕಡಿಮೆ. ಚಿಕ್‌ಲಿಟ್‌ ಇದೇ ಪರಂಪರೆಯ ಮುಂದುವರೆಯುತ್ತಿರುವ ಭಾಗವೆಂದು ವ್ಯಾಖ್ಯಾನಿಸಲಾಗುತ್ತದೆ.
ಚಿಕ್‌ಲಿಟ್‌ನ ಪ್ರಮುಖ ‘ಲಕ್ಷಣ’ಗಳು ಇಂತಿವೆ:
1. ನಾಯಕಿ ಯಾವಾಗಲೂ ಸಂಬಂಧಗಳ ನಡುವೆ ಇರುತ್ತಾಳೆ, ಪ್ರೇಮಕ್ಕಾಗಿ ಕಾತರಿಸುತ್ತಿರುತ್ತಾಳೆ, ತನ್ನ ಕನಸಿನ ಪುರುಷನನ್ನು ಭೇಟಿಯಾಗುತ್ತಾಳೆ ಅಥವಾ ಒಂದು ಕೆಟ್ಟ ಕನಸಿನಂತಹ ಪ್ರೇಮಸಂಬಂಧದಿಂದ ಹೊರಬಂದಿರುತ್ತಾಳೆ.
2. ಈ ಕಥೆಗಳು ರೊಮ್ಯಾಂಟಿಕ್ ಆಗಿರಲೇಬೇಕೆಂದೇನಿಲ್ಲ. ಇಲ್ಲಿನ ನಾಯಕಿಯ ಪ್ರೇಮ, ಲೈಂಗಿಕ ಸಂಬಂಧಗಳ ಜತೆಗೇ ಸ್ನೇಹ, ಕೌಟುಂಬಿಕ ಸಂಬಂಧಗಳು, ವೃತ್ತಿಜೀವನಗಳೂ ಅಷ್ಟೇ ಪ್ರಾಮುಖ್ಯತೆ ಹೊಂದಿರುತ್ತವೆ, ಕೆಲವೊಮ್ಮೆ ನಾಯಕಿಯ ಸಾಕುನಾಯಿ ಅಥವಾ ಬೆಕ್ಕು ಕೂಡಾ!!
3. ಸಾಧಾರಣವಾಗಿ ಆಕೆ ಸುಂದರಿಯಾಗಿರುತ್ತಾಳೆ ಮತ್ತು ಪಬ್ಲಿಕ್ ರಿಲೇಶನ್ಸ್, ಫ್ಯಾಶನ್ ಮ್ಯಾಗಜೀನ್, ಅಥವಾ ಅಡ್ವರ್ಟೈಸಿಂಗ್‌ಗೆ ಸಂಬಂಧಿಸಿದ ಕೆಲಸ ಮಾಡುತ್ತಿರುತ್ತಾಳೆ. ಅಕಸ್ಮಾತ್ ಆಕೆ ಸಾಮಾನ್ಯ ರೂಪದವಳಾಗಿದ್ದರೂ ಆಕೆಯಲ್ಲಿ ಏನೋ ಒಂದು ವೈಶಿಷ್ಟ್ಯತೆಯಿರುತ್ತದೆ.
4. ಕಥೆಯನ್ನು ಸಾಮಾನ್ಯವಾಗಿ ತಿಳಿಯಾದ, ಹಾಸ್ಯಪೂರಿತ ಶೈಲಿಯಲ್ಲಿ ನಿರೂಪಿಸಲಾಗುತ್ತದೆ. ಆಡುಭಾಷೆಯ ಬಳಕೆ ಹೆಚ್ಚು. ಕಥೆಯನ್ನು ನಾಯಕಿಯೇ ನಿರೂಪಿಸುತ್ತಾಳೆ.
5. ಕಥೆಯ ಕೊನೆಯ ಭಾಗದಲ್ಲಿ ನಾಯಕಿಯ ಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ, ಇಲ್ಲವೇ ಆಕೆ ಜೀವನದ ಮುಖ್ಯ ಪಾಠಗಳನ್ನು ಕಲಿತುಕೊಳ್ಳುತ್ತಾಳೆ.
ಆಂಗ್ಲಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ಚಿಕ್‌ಲಿಟ್‌ ಪುಸ್ತಕಗಳೆಂದರೆ ಹೆಲೆನ್ ಫೀಲ್ಡಿಂಗ್‌ಳ ‘ಬ್ರಿಜೆಟ್ ಜೋನ್ಸ್’ ಡೈರಿ’ ಮತ್ತು ಕ್ಯಾಂಡೇಸ್ ಬುಶ್ನೆಲ್‌ಳ ‘ಸೆಕ್ಸ್ ಎಂಡ್ ದ ಸಿಟಿ’ ಹಾಗೂ ಲಾರೆನ್ ವೀಸ್‌ಬರ್ಜರ್‌ಳ  ‘ದ ಡೆವಿಲ್ ವೇರ್ಸ್ ಪ್ರಾಡಾ’. ಈ ಮೂರೂ ಸಿನೆಮಾರೂಪಕ್ಕೆ ತರಲ್ಪಟ್ಟು ಬಹಳ ಯಶಸ್ಸು ಗಳಿಸಿವೆ. ‘ಸೆಕ್ಸ್ ಎಂಡ್ ದ ಸಿಟಿ’ ಸಿನೆಮಾರೂಪಕ್ಕೆ ಬರುವುದಕ್ಕೆ ಮುನ್ನ ಟಿವಿ ಧಾರಾವಾಹಿಯ ರೂಪದಲ್ಲಿ ಅತಿ ಹೆಚ್ಚು ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿತ್ತು. ನ್ಯೂಯಾರ್ಕ್‌ನಲ್ಲಿ ವಾಸಿಸುವ ಅಂಕಣಕಾರ್ತಿ ಕ್ಯಾರೀ ಬ್ರ್ಯಾಡ್‍ಶಾಳ ಜೀವನವನ್ನು ಆಕೆಯದೆ ಅಂಕಣಬರಹಗಳ ಮೂಲಕ ಈ ಪುಸ್ತಕವು ನಿರೂಪಿಸುತ್ತದೆ. ‘ಬ್ರಿಜೆಟ್ ಜೋನ್ಸ್ಸ್ ಡೈರಿ’ಯ ಬ್ರಿಜೆಟ್ ಲಂಡನ್‌ನಲ್ಲಿ ವಾಸಿಸುತ್ತಿದ್ದು ಆಕೆ ತನ್ನ ಪ್ರೀತಿ ಪ್ರೇಮ ಪ್ರಣಯಗಳ ಬಗ್ಗೆ ತನ್ನ ಡೈರಿಯಲ್ಲಿ ಬರೆದುಕೊಳ್ಳುತ್ತಿರುತ್ತಾಳೆ. ‘ದ ಡೆವಿಲ್ ವೇರ್ಸ್ ಪ್ರಾಡಾ’ದ ನಾಯಕಿ ಆಂಡ್ರಿಯಾ ಸ್ಯಾಕ್ಸ್ ಸಣ್ಣ ನಗರವೊಂದರಿಂದ ಬಂದವಳಾಗಿದ್ದು ನ್ಯೂಯಾರ್ಕಿನ ನ ಅತ್ಯುತ್ತಮ ಫ್ಯಾಶನ್ ಮ್ಯಾಗಜೀನ್ ‘ರನ್‌ವೇ ‘ನ ಸಂಪಾದಕಿಯಾದ ಮಿರಾಂಡಾ ಪ್ರೀಸ್ಟ್‌ಲಿಯ  ಸಹಾಯಕಿಯಾಗಿ ಕೆಲಸ ಮಾಡುತ್ತ ಆಕೆಯ ಎಲ್ಲ ಬಾಸಿಸಮ್‌ಗಳನ್ನು ಸಹಿಸಿಕೊಂಡು ತನ್ನ ಆಕಾಂಕ್ಷೆ ಮತ್ತು ವೃತ್ತಿಜೀವನಗಳ ನಡುವೆ ಹೆಣಗಾಡುತ್ತಿರುತ್ತಾಳೆ.

ಈ ಪ್ರಕಾರದಲ್ಲಿ ಜನಪ್ರಿಯವಾಗಿರುವ ಇತರ ಕೆಲವು ಪುಸ್ತಕಗಳೆಂದರೆ ಸೋಫೀ ಕಿನ್ಸೆಲ್ಲಾರ ‘ಕನ್ಫೆಶನ್ಸ್ ಆಫ್ ಎ ಶೋಪಹಾಲಿಕ್, ಸಿಸಿಲಿಯಾ ಅಹೆರ್ನ್‌ರ ‘ಪಿ.ಎಸ್. ಐ ಲವ್ ಯು’, ನಿಕೋಲಾ ಕ್ರಾಸ್ ಮತ್ತು ಎಮ್ಮಾ ಮೆಕ್‌ಲಾಲಿನ್‌ರ  ‘ದ ನ್ಯಾನೀ ಡೈರೀಸ್’ ಹಾಗೂ ಜೇನ್ ಗ್ರೀನ್‌ರ ‘ಜೆಮಿಮಾ ಜೆ’. ಚೆಂದದ ಕವರ್‌ಪೇಜುಗಳನ್ನು ಹೊಂದಿರುವ ಈ ಪುಸ್ತಕಗಳು ಕಣ್ಣಿಗೆ ಹಬ್ಬ. ಹೆಣ್ಣುಮಕ್ಕಳಿಗೆ ಸಾಧಾರಣವಾಗಿ ಇಷ್ಟವಾಗುವ ಬಣ್ಣಗಳು, ಹೂವಿನ ಚಿತ್ರಗಳು, ಫ್ಯಾಶನಬಲ್ ಹೆಂಗಸರ ಚಿತ್ರಗಳು ಕಣ್ಸೆಳೆಯುವಂತಿರುತ್ತವೆ.

ಭಾರತೀಯ ಚಿಕ್‌ಲಿಟ್ ಕಳೆದ ದಶಕದಲ್ಲಿ ಅಚ್ಚರಿ ಹುಟ್ಟಿಸುವಷ್ಟು ಬೆಳವಣಿಗೆಗಳನ್ನು ಕಂಡಿದೆ. ಚಿಕ್‌ಲಿಟ್‌ನ ಈ ಉಪಪ್ರಕಾರವು ನಗರವಾಸಿ ಓದುಗವರ್ಗವನ್ನು ಹಿಂದೆಂದೂ ಇಲ್ಲದಂತೆ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿವೆ. ಭಾರತೀಯ ಚಿಕ್‌ಲಿಟ್‌ನ ನಾಯಕಿಯರು ಇಪ್ಪತ್ತರ ಇಲ್ಲವೇ ಮೂವತ್ತರ ಹರೆಯದಲ್ಲಿದ್ದು ಕಾಸ್ಮೋಪಾಲಿಟನ್ ಸಂಸ್ಕೃತಿಯಲ್ಲಿ ಬೆಳೆದುಬಂದಿರುವ ಹೆಣ್ಣುಮಕ್ಕಳಾಗಿರುತ್ತಾರೆ. ಇವರ ವೃತ್ತಿಪರ ಜೀವನ ಮತ್ತು ಪ್ರೇಮ-ಕಾಮಗಳು ಈ ಪುಸ್ತಕಗಳ ಪ್ರಮುಖ ಥೀಮುಗಳಾಗಿವೆ. ಎಲ್ಲಾ ಪುಸ್ತಕಮನೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಒಂದು ಚಿಕ್‌ಲಿಟ್ ಪುಸ್ತಕವಾದರೂ ಇದ್ದೇ ಇರುತ್ತದೆ.

ಮುಂಬೈನ ಫಿಲ್ಮೋದ್ಯಮದಲ್ಲಿ ಕೆಲಸಮಾಡುತ್ತಿದ್ದು ಎಂಟಿವಿಯ ಸುಪ್ರಸಿದ್ಧ ‘ಫಿಲ್ಮೀ ಫಂಡಾ’ ಕಾರ್ಯಕ್ರಮದ ತಂಡದಲ್ಲಿದ್ದ ಬರಹಗಾರ್ತಿ ರಾಜಶ್ರೀಯವರ ‘ಟ್ರಸ್ಟ್ ಮಿ’ ಇಲ್ಲಿಯವರೆಗೆ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗಿರುವ ಚಿಕ್‌ಲಿಟ್ ಪುಸ್ತಕ. ಇದರ ನಾಯಕಿ ಪಾರ್ವತಿ ಗಂಡಸುಜಾತಿಯಿಂದಲೇ ಬೇಸತ್ತುಹೋಗಿ ಯಾರನ್ನೂ ಪ್ರೇಮಿಸಬಾರದೆಂಬ ತೀರ್ಮಾನಕ್ಕೆ ಬಂದಿರುವಾಕೆ. ಇದಕ್ಕೆ ಬೆಂಬಲ ನೀಡಲು ಆಕೆಯ ಗೆಳತಿಯರಿದ್ದಾರೆ. ತಂದೆಯ ಸಮಾನವೆಂದು ಭಾವಿಸಿದ್ದ ಆಕೆಯ ಬಾಸ್ ಆದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಆಕೆ ಕೆಲಸ ಬಿಟ್ಟು ಟಿಪಿಕಲ್ ಬಾಲಿವುಡ್ ನಿರ್ದೇಶಕ ಜಾಂಬುವಂತನ ಸಹಾಯಕಿಯಾಗಿ ಕೆಲಸಕ್ಕೆ ಸೇರುತ್ತಾಳೆ. ತನ್ನ ಹಿಂದಿನ ಅನುಭವಗಳಿಂದ ತಾನು ಪಕ್ವವಾಗಿದ್ದೇನೆ, ಇನ್ನು ಮೋಸಹೋಗಲಾರೆನೆಂದು ಭಾವಿಸುವ ಪಾರ್ವತಿಯ ಜೀವನ ಚಿತ್ರನಟ ರಾಹುಲನನ್ನು ಭೇಟಿಯಾದಮೇಲೆ ಅಲ್ಲೋಲಕಲ್ಲೋಲಗಳಿಗೆ ಒಳಗಾಗುತ್ತದೆ.

ಸ್ವಾತಿ ಕೌಶಲ್‌ರ ‘ಪೀಸ್ ಆಫ್ ಕೇಕ್’ನ ನಾಯಕಿ 29 ವಯಸ್ಸಿನ ಮೀನಲ್ ಶರ್ಮಾ ಕಾರ್ಪೊರೇಟ್ ಪ್ರಪಂಚದ ಉನ್ನತ ಹುದ್ದೆಯಲ್ಲಿರುವಾಕೆ. ಆಕೆಗೆ ಒಳ್ಳೆಯ ಗಂಡನನ್ನು ಹುಡುಕಿಕೊಳ್ಳಬೇಕೆಂದು ತಾಯಿಯಿಂದ ಪ್ರತಿದಿನವೂ ಒತ್ತಡ. ಇದರ ಜತೆಗೇ ಕೆಲಸದ ಒತ್ತಡ. ಆಕೆಯ ತಾಯಿ ದಿನಪತ್ರಿಕೆಯೊಂದಲ್ಲಿ ತನ್ನ ಬಗ್ಗೆ ಜಾಹೀರಾತುಗಳನ್ನು ನೀಡಿದಾಗಲಂತೂ ಮೀನಲ್ ನಾಚಿಕೆಯಿಂದ ಕುಗ್ಗಿಹೋಗುತ್ತಾಳೆ. ಆಕೆ ಕ್ಲಬ್ಬಿಗೆ ಹೋಗುತ್ತಾಳೆ, ಕುಡಿಯುತ್ತಾಳೆ. ಹೆಣ್ಣಿನ ಆಧುನಿಕ ‘ಸಮಾನತೆ’ಯ ಪ್ರತೀಕವಾಗಿದ್ದಾಳೆ. ಆದರೂ ಭಾರತೀಯ ಸಮಾಜದಲ್ಲಿನ ಮದುವೆಗೆ ಸಂಬಂಧಿಸಿದ ನಿಗದಿತ ವಯೋಮಾನವನ್ನು ದಾಟಿರುವ ಬಗ್ಗೆ ಹೆಚ್ಚೂಕಡಿಮೆ ಪ್ರತಿದಿನವೂ ತಾಯಿಯ ಗೋಳಾಟವನ್ನು ಕೇಳಿಕೊಂಡಿರಬೇಕಾಗುತ್ತದೆ.. ಆಧುನಿಕತೆ ಸಾಂಪ್ರದಾಯಿಕತೆಯ ಎದುರಿಗೆ ತಲೆ ಬಗ್ಗಿಸತೊಡಗುತ್ತದೆ.. ಒಟ್ಟಿನಲ್ಲಿ ಭಾರತೀಯ ಮದುವೆ ಮಾರುಕಟ್ಟೆಯನ್ನು ಒಬ್ಬ ಹೆಣ್ಣಿನ ದೃಷ್ಟಿಯಿಂದ ನೋಡಿರುವ ಪುಸ್ತಕವಿದು.

ಅನುಜಾ ಚೌಹಾನ್‌ರ ‘ ದ ಜೋಯಾ ಫ್ಯಾಕ್ಟರ್’ ಇತ್ತೀಚೆಗೆ ದೊಡ್ಡ ಯಶಸ್ಸು ಗಳಿಸಿದ ಚಿಕ್‌ಲಿಟ್ ಕಾದಂಬರಿ. ಇದರ ನಾಯಕಿ ಜೋಯಾ ಸೋಲಂಕಿ ಜಾಹೀರಾತು ಏಜೆನ್ಸಿಯೊಂದರ ಗ್ರಾಹಕ ಸೇವಾ ವಿಭಾಗದ ಅಧಿಕಾರಿ. ಶಾರುಖ್ ಖಾನನ ತಂಪುಪಾನೀಯವೊಂದರ ಶೂಟಿಂಗ್ ಅನ್ನು ಬಿಟ್ಟು ಢಾಕಾಗೆ ಭಾರತೀಯ ಕ್ರಿಕೆಟ್ ಟೀಮಿನ ಚಿತ್ರಗಳನ್ನು ತೆಗೆಯಲು ಹೋಗಬೇಕಾಗಿ ಬಂದಾಗ ಆಕೆ ಸಿಡಿಮಿಡಿಗೊಂಡರೂ ವಿಧಿಯಿಲ್ಲದೆ ತೆರಳುತ್ತಾಳೆ. ಭಾರತೀಯ ಕ್ರಿಕೆಟ್ ಟೀಮ್ ವಿಶ್ವಕಪ್ ಅನ್ನು ಗೆದ್ದ ಕ್ಷಣದಲ್ಲಿಯೇ ಜೋಯಾ ಹುಟ್ಟಿದ್ದು ಎಂದು ತಿಳಿದುಬಂದಾಗ ಕ್ರಿಕೆಟ್ ಟೀಮಿನ ಆಟಗಾರರು ಅಚ್ಚರಿಗೊಳ್ಳುತ್ತಾರೆ. ಆಕೆಯೊಂದಿಗೆ ಬೆಳಗಿನ ಉಪಹಾರ ಮಾಡಿ ಆಡಿದರೆ ಜಯ ಖಚಿತವೆಂದು ಅವರೆಲ್ಲ ನಂಬತೊಡಗುತ್ತಾರೆ. ಆದರೆ ಟೀಮಿನ ನಾಯಕನಿಗೆ ಈಕೆಯ ಬಗ್ಗೆ ಅತಿಯಾದ ಅಸಡ್ಡೆ. ಇತರ ಆಟಗಾರರ ನಂಬಿಕೆ ನಿಜವಾಗುತ್ತಿದ್ದಂತೆಯೆ ಜೋಯಾ ಪ್ರಸಿದ್ಧಿ ಪಡೆದುಬಿಡುತ್ತಾಳೆ. ವಿಶ್ವಕಪ್ ಸಮಯದಲ್ಲಿ ಭಾರತೀಯ ತಂಡದ ಜತೆ ಆಕೆಯನ್ನೂ ಕರೆದೊಯ್ಯಲಾಗುತ್ತದೆ. ಎಲ್ಲರೂ ಆಕೆಯನ್ನು ತಮ್ಮ ಜಾಹೀರಾತುಗಳಲ್ಲಿ ಪ್ರದರ್ಶಿಸಲು ಹಾತೊರೆಯಲು ಆರಂಭಿಸತೊಡಗುತ್ತಾರೆ.
ಅದ್ವೈತ ಕಲಾರವರ ‘ಆಲ್ಮೋಸ್ಟ್ ಸಿಂಗಲ್’ನ 29 ವರ್ಷದ ಆಯಿಶಾ ಭಾಟಿಯಾಗೆ ತನ್ನ ಬಾಸ್ ಬಗ್ಗೆ ಗಾಸಿಪ್ ಮಾಡುವುದೆಂದರೆ ಬಲು ಇಷ್ಟ. ದಪ್ಪಗಿನ ದೇಹದ ಆಯಿಶಾಳಿಗೆ ತನ್ನ ಆಫೀಸಿನ ಸುರಸುಂದರ ಕರಣ್ ವರ್ಮಾನ ಬಗ್ಗೆ ಅತೀವ ಆಸಕ್ತಿ. ಅರೇಂಜ್ಡ್ ಮದುವೆ ಆಕೆಗಿಷ್ಟವಿಲ್ಲ. ತನಗಿಷ್ಟವಿಲ್ಲದಿದ್ದವನನ್ನು ಒಪ್ಪಿಕೊಳ್ಳುವುದು ಆಯಿಶಾಳಿಂದ ಸಾಧ್ಯವಿಲ್ಲ. ನ್ಯೂಯಾರ್ಕಿನಿಂದ ತನಗೆ ತಕ್ಕ ಗಂಡನನ್ನು ಹುಡುಕುವ ಸಲುವಾಗಿ ಬಂದ ಅನಿತಾ ಜೈನ್ ತನ್ನ ಅನುಭವಗಳನ್ನು ‘ಮ್ಯಾರೀಯಿಂಗ್ ಅನಿತಾ’ದ ಮೂಲಕ ಹಂಚಿಕೊಂಡಿದ್ದಾರೆ. ತನ್ನ ಕುಟುಂಬದ ಹಿರಿಯ ಹೆಂಗಸರ ಮೂಲಕ ಮದುವೆಯ ಪ್ರಸ್ತಾವನೆಗಳನ್ನು ಹುಡುಕುವುದು ಎಂದುಕೊಂಡಿದ್ದ ಅನಿತಾ ಭೇಟಿಯಾಗುವ ಹೆಚ್ಚಿನ ಯುವಕಯುವತಿಯರು ‘ರಾಕ್‌ಬ್ಯಾಂಡ್ ಪ್ರಿಯರೂ, ದಿನನಿತ್ಯವೂ ಬಾರ್/ಪಬ್‌ಗಳಿಗೆ ಭೇಟಿನೀಡುವವರೂ, ಲೈಂಗಿಕ ಜೀವನದಲ್ಲಿ ಯಾವುದೇ ನಿಷ್ಟೆಯನ್ನು ಹೊಂದಿಲ್ಲದವರೂ’ ಆಗಿರುವುದನ್ನು ಕಂಡು ಅಚ್ಚರಿಯಾಗುತ್ತದೆ.

ಹೀಗೆ ಮಹಿಳೆಯರಿಂದ ಮಹಿಳೆಯರಿಗಾಗಿಯೇ ಹುಟ್ಟಿದ ಚಿಕ್‌ಲಿಟ್ ತನ್ನ ಕಾಲಮಾನದ ಆಧುನಿಕ ಜೀವನದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಕನ್ನಡದಲ್ಲಿ ಈ ಸಾಹಿತ್ಯಪ್ರಕಾರಕ್ಕೆ ಸಂಪೂರ್ಣವಾಗಿ ಹೊಂದುವ ರಚನೆಗಳು ಬಂದಿಲ್ಲವಾದರೂ, ಮಹಿಳೆಯರಿಂದ ಮಹಿಳೆಯರಿಗಾಗಿಯೆ ಬರೆಯಲಾದ ತಿಳಿಸಾಹಿತ್ಯ ನಮ್ಮಲ್ಲಾಗಲೇ ಬಂದುಹೋಗಿಯಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು! ಇತ್ತೀಚೆಗೆ ಬ್ಲಾಗ್ ಮೂಲಕ ಕನ್ನಡದಲ್ಲಿ ಮತ್ತು ಕಂಗ್ಲೀಷಿನಲ್ಲಿ ಬರೆಯುವ ಹಲವು ಬರಹಗಾರ್ತಿಯರು ಪ್ರಜ್ಞಾಪೂರ್ವಕವಾಗಲ್ಲದಿದ್ದರೂ ಚಿಕ್‌ಲಿಟ್ ಎನ್ನಬಹುದಾದಂತಹ ಬರಹಗಳನ್ನು ಹೊರತರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿರಿಯವರ ‘ಮಲ್ನಾಡ್ ಹುಡ್ಗಿ’, ಸೀಮಾ ಹೆಗಡೆಯವರ ‘ಐ ಆಮ್ ಥಿಂಕಿಂಗ್ ಅಲೌಡ್’, ಚಿತ್ರಾ ಕರ್ಕೇರ ಅವರ ‘ಶರಧಿ’, ಲಕ್ಷ್ಮೀಯವರ ‘ಜಿಂದಗೀ ಕಾಲಿಂಗ್’, ಶಾಂತಲಾ ಭಂಡಿಯವರ ‘ನೆನಪು ಕನಸುಗಳ ನಡುವೆ’, ಶ್ರೀಮಾತಾ ರಮಾನಂದರ ‘ಇರುವುದೆಲ್ಲವ ಬಿಟ್ಟು..’ ಮುಂತಾದವುಗಳನ್ನು ಪರಿಗಣಿಸಬಹುದು.
ಇತ್ತೀಚೆಗೆ ಬಿಡುಗಡೆಯಾದ ಚೇತನಾ ತೀರ್ಥಹಳ್ಳಿಯವರ ‘ಭಾಮಿನಿ ಷಟ್ಪದಿ’ಯನ್ನು ಚಿಕ್‌ಲಿಟ್ ಸಾಲಿಗೆ ಸೇರಿಸಬಹುದಾದರೂ ಕೆಲವೊಂದು ಬರಹಗಳು ಬಹಳ ಗಂಭೀರವಾಯಿತು ಅನ್ನಿಸುವುದೂ ನಿಜ. ತಿಳಿಹಾಸ್ಯ ಚಿಕ್‌ಲಿಟ್ ಸಾಹಿತ್ಯದ ಪ್ರಮುಖ ಲಕ್ಷಣವಾಗಿರುವುದೂ ಇದಕ್ಕೆ ಕಾರಣ. ಈ ಪುಸ್ತಕದ ಬರಹಗಳಲ್ಲಿ ಮಾತನಾಡುವ ಹಲವು ನಾಯಕಿಯರು ತಮ್ಮ ಜೀವನ, ಮದುವೆ, ಸಂಬಂಧ ಇತ್ಯಾದಿಗಳ ಬಗ್ಗೆ ಕೆಲವೊಮ್ಮೆ ತೀಕ್ಷ್ಣವಾಗಿ, ಕೆಲವೊಮ್ಮೆ ವಿಷಾದದಿಂದ, ಕೆಲವೊಮ್ಮೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಸಿರಿಯವರ ಹಲವು ಕಥೆಗಳು, ಬರಹಗಳು ಹೆಚ್ಚು ‘ಚಿಕ್‌ಲಿಟ್’ ಅನ್ನಿಸುವಂಥವು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ನಿಮ್ಮಿ ಕಾಲಂ’ ಬರಹಗಳು ಚಿಕ್‌ಲಿಟ್ ಕ್ಯಾಟಗರಿಗೆ ಹೆಚ್ಚು ಹೊಂದಿಕೊಳ್ಳುವಂಥವು. ಇದೇ ಸಮಯದಲ್ಲಿ ವೀಣಾ ಶಾಂತೇಶ್ವರರ ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು!’ ಕೂಡ ನೆನಪಾಗದೆ ಇರದು. ಇವನ್ನೆಲ್ಲ ಬಿಟ್ಟು ಚಿಕ್‌ಲಿಟ್ ಹೆಣ್ಣನ್ನು ಅರಸಲು ಹೋದರೆ ಆಕೆಯನ್ನು ಬಹಳ ಚೆನ್ನಾಗಿ ಪ್ರತಿನಿಧಿಸುವುದು ಪೂರ್ಣಚಂದ್ರ ತೇಜಸ್ವಿಯವರು ನಳಿನೀ ದೇಶಪಾಂಡೆ ಎಂಬ ಹೆಸರಿನಿಂದ ಬರೆದ ‘ಲ್ಯಾಂಬ್ರಟಾ ವೆಸ್ಪಾ’ದ ಹುಡುಗಿಯೇ.
ಒಟ್ಟಿನಲ್ಲಿ ಹೇಳುವುದಾದರೆ ಚಿಕ್‌ಲಿಟ್ ಪ್ರಕಾರದಲ್ಲಿ ಕನ್ನಡದಲ್ಲಿನ ಸಾಧ್ಯತೆಗಳು ಸಾಕಷ್ಟಿವೆ. ಮಹಿಳಾ ಓದುಗವರ್ಗವೂ ಈ ರೀತಿಯ ಪುಸ್ತಕಗಳನ್ನು ಸಂತಸದಿಂದ ಬರಮಾಡಿಕೊಳ್ಳುವ ಚಾನ್ಸೂ ಜಾಸ್ತಿಯಿದೆ.
ಬರೆಯುವವರು ಬೇಕಷ್ಟೆ!!