ಚಿತ್ರಪಟ…ಚಿತ್ತಪುಟ

album-black-and-white-photo-photography-vintage-Favim.com-419756

 

ನನ್ನ ಮನೆಯಲ್ಲೊಂದು ಬಹಳ ಹಳೆಯ ಫೋಟೋ ಆಲ್ಬಮ್ ಇದ್ದಿತ್ತು. ಕಪ್ಪು ಬಣ್ಣದ್ದು. ಅದರ ಪುಟಗಳು ಕೂಡ ಕಪ್ಪಗೆ ಬಟ್ಟೆ ಸುತ್ತಿದ ಹಾಗೆ ದಪ್ಪಗೆ. ಪ್ರತಿ ಪುಟಗಳ ನಡುವೆಯೂ ಫೋಟೋಗಳನ್ನು ರಕ್ಷಿಸಲು ಬಟರ್ ಪೇಪರ್ ತರಹದ ಅರೆಪಾರದರ್ಶಕ ಹಾಳೆಗಳು. ಪ್ರತೀ ಪುಟದಲ್ಲೂ ಫೆವಿಕಾಲ್ ಹಾಕಿ ಅಂಟಿಸಿದ ಕಪ್ಪು-ಬಿಳುಪು ಛಾಯಾಚಿತ್ರಗಳು. ಯಾರಾದರು ನೆಂಟರಿಷ್ಟರು ಬಂದಾಗ ಅದನ್ನು ಬೀರುವಿನಿಂದ ಹೊರತೆಗೆದು ಪ್ರದರ್ಶನಕ್ಕಿಡಲಾಗುತ್ತಿತ್ತು. ಸದರಿ ನೆಂಟರು ಫೋಟೋಗಳನ್ನು ನೋಡುತ್ತ ’ಆಹಾ!’ ’ಓಹೋ!’ ಎಂದೆಲ್ಲ ಉದ್ಗರಿಸುತ್ತ ಬೇಕಾದ ಮಾಹಿತಿಗಳನ್ನೆಲ್ಲ ಪಡೆದುಕೊಳ್ಳುತ್ತ ಇರುವುದನ್ನು ನಾವು ಕೆಟ್ಟಮಕ್ಕಳು ಒಂದು ಮೂಲೆಯಲ್ಲಿ ಯಾರ ಗಮನಕ್ಕೂ ಹೆಚ್ಚು ಸಿಗದ ಹಾಗೆ ದಿಟ್ಟಿಸುತ್ತ ಕೂತಿರುತ್ತಿದ್ದೆವು. ಏಕೆಂದರೆ ಸುಮಾರು ಕೌಟುಂಬಿಕ ಸೀಕ್ರೆಟುಗಳು, ಕಥೆಗಳು ಇತ್ಯಾದಿ ಇಂಥ ಸಮಯದಲ್ಲೇ ಹೊರಬರುತ್ತಿದ್ದುದು. ನಾವಾಗೇ ಆ ಆಲ್ಬಮನ್ನು ಮುಟ್ಟಲು ಅಥವ ನೋಡಲು ಅನುಮತಿ ಇರಲಿಲ್ಲ. ಛಾಯಾಚಿತ್ರಗಳು ಆವಾಗ ಒಂದು ರೀತಿಯ ’ಫ್ಯಾಮಿಲಿ ರೆಕಾರ್ಡು’ಗಳಾಗಿದ್ದು ಅದರ ಪುಟಗಳ ನಡುವೆ ಯಾವಾಗಲೋ ತೀರಿಹೋಗಿದ್ದ ಅಥವ ದೂರದೂರುಗಳಲ್ಲಿ ಕಳೆದುಹೋಗಿದ್ದ ಹಿರೀಕರು, ಸಂಬಂಧಿಗಳು ಪರ್ಮನೆಂಟಾಗಿ ಕೈದಾಗಿದ್ದರು. ನಮ್ಮ ಕ್ರಿಮಿನಲ್ ಬುದ್ಧಿಯನ್ನೆಲ್ಲ ಉಪಯೋಗಿಸಿ ಅದನ್ನು ಹಾರಿಸಲು ಪ್ರಯತ್ನಿಸಿದಾಗಲೆಲ್ಲ ಅದುಹೇಗೋ ಅಮ್ಮನಿಗೆ ಸುಳಿವು ಹತ್ತಿ “ಆಲ್ಬಮ್ ಮುಟ್ಟಿದ್ರೆ ಹುಷಾರ್!” ಎಂದು ಕಿರುಚಿಕೊಂಡುಬಿಡುತ್ತಿದ್ದರು. ಅದನ್ನು ನೋಡಬೇಕೆಂದರೆ ಅಮ್ಮ ನಮ್ಮ ಜೊತೆಗಿರಲೇಬೇಕಿತ್ತು. ಅವರು ಪುಟಗಳನ್ನು ಹುಷಾರಾಗಿ ತಿರುಗಿಸುತ್ತಿದ್ದರೆ ನಾವು ಪ್ರತಿಸಾರಿಯೂ ಹೊಸದು ಅನ್ನುವ ಹಾಗೆ ’ಬ್ಯಾ’ ಎಂದು ಬಾಯಿಬಿಟ್ಟುಕೊಂಡು ಆಲ್ಬಮನ್ನು ತಿಂದುಹಾಕುವ ಹಾಗೆ ಕಣ್ಣೊಳಗೆ ಇಳಿಸಿಕೊಳ್ಳುತ್ತಿದ್ದೆವು. ಹಾಗೆ ನೋಡುತ್ತ ಇರುವಂತೆಯೆ ನಾನು ’ಇವರು ಯಾರು? ಎಲ್ಲಿದಾರೆ? ಏನು? ಎತ್ಲಗೆ?” ಮುಂತಾಗಿ ಸಾವಿರ ಪ್ರಶ್ನೆಗಳನ್ನು ಕೇಳುತ್ತಿದ್ದುದುಂಟು. ಕೆಲವಕ್ಕೆ ಅಮ್ಮ ಉತ್ತರಿಸುವರು, ಕೆಲವು ಪ್ರಶ್ನೆಗಳು ಉತ್ತರ ಸಿಗದೆಯೆ ಸುಮ್ಮನಾಗುವವು.

ಇಂಥ ಆಲ್ಬಮಿನ ಮೂರನೇ ಪುಟದಲ್ಲಿ ಇದ್ದ ಎರಡು ಚಿತ್ರಗಳು ನನಗೆ ಬಹಳ ಅಚ್ಚುಮೆಚ್ಚು. ಮೊದಲನೆಯದು ನಾನು ಐದಾರು ತಿಂಗಳ ಮಗುವಾಗಿರುವಾಗ ಸ್ಟುಡಿಯೋ ಒಂದರ ಕುರ್ಚಿಯ ಮೇಲೆ ನನ್ನನ್ನು ಕೂರಿಸಿ ತೆಗೆದಿರುವುದು. ಕಣ್ಣಿಗೆ ಢಾಳಾಗಿ ಕಣ್ಕಪ್ಪು ಹಾಕಿಸಿಕೊಂಡು ಕಾಟನ್ ಫ್ರಾಕಿನಲ್ಲಿ ಬಹುಶಃ ಕ್ಯಾಮೆರದ ಪಕ್ಕದಲ್ಲಿಯೇ ನಿಂತಿದ್ದ ಅಮ್ಮನ ಕಡೆಗೆ ದೊಡ್ಡಕಣ್ಣು ಬಿಟ್ಟುಕೊಂಡು ನಗುತ್ತಿರುವ ಗುಂಗುರುಕೂದಲಿನ ನಾನು. ಮತ್ತೊಂದರಲ್ಲಿ ಎರಡೇ ದಿನ ವಯಸ್ಸಿನ ನನ್ನ ತಂಗಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡಿರುವ ನನ್ನಮ್ಮ ಮತ್ತು ನಾನು. ಇದನ್ನು ನನ್ನ ಅಪ್ಪ ತೆಗೆದದ್ದು. ಆ ಚಿತ್ರದಲ್ಲಿ ಕುರ್ಚಿಯ ಮೇಲೆ ಕುಳಿತ ಅಮ್ಮನ ಹಿಂದೆ ಇಬ್ಬರು ಹೆಂಗಸರು. ಒಬ್ಬಾಕೆ ಯುವತಿ, ಒಬ್ಬಾಕೆ ನಡುವಯಸ್ಸು ದಾಟಿದ ಹಿರಿಯ ಮಹಿಳೆ. ಯಾವಾಗಲೂ ಆ ಚಿತ್ರ ತೋರಿಸುವಾಗೆಲ್ಲ ಅಮ್ಮ ಆ ಹಿರಿಯ ಹೆಂಗಸಿನ ಕಡೆ ಬೊಟ್ಟು ಮಾಡಿ “ಇವರೇನೆ ನೀನು ಹುಟ್ಟಿದಾಗ ನನ್ನ ಬಾಣಂತನ ಮಾಡಿದವರು. ಅದಕ್ಕೇ ನೀನು ಈ ಥರ ಮಾತಿನಮಲ್ಲಿ!” ಅಂದು ನಗುತ್ತಿದ್ದರು. ಅದಕ್ಕೆ ಕಾರಣವಿಲ್ಲದೇ ಇಲ್ಲ.

ಆಕೆಯದು ನಮ್ಮ ಬೀದಿಯ ಕೊನೆಯ ಪುಟ್ಟ ಹುಲ್ಲುಮಾಡಿನ ಮನೆ. ಮನೆಯ ಸುತ್ತಲೂ ರಾಶಿ ಹೂವಿನ ಗಿಡಗಳು. ಆ ಮನೆಯ ಬೇಲಿಗೇ ತಾಕಿಕೊಂಡಂತೆ ಹಲವಾರು ಕಾಫಿತೋಟಗಳು. ಆಕೆಗೆ ಒಂದಾರು ಮಕ್ಕಳು. ಬೇಕಾದಾಗ ಮಾತ್ರ ಪುಡಿಕಾಸು ಸಂಪಾದಿಸುವ ಗಂಡ. ಯಾರ ಮನೆಯಲ್ಲಿ ಹುಟ್ಟು, ಸಾವು, ಮದುವೆ, ಮುಂಜಿ ಏನೇ ಇರಲಿ, ಆಕೆ ಎಲ್ಲದಕ್ಕೂ ಹಾಜರು. ಹಾಗೆಂದೇ ಆಕೆಗೆ ಎಲ್ಲ ಮನೆಗಳ ಎಲ್ಲ ರಹಸ್ಯಗಳೂ ತಿಳಿದಿರುತ್ತಿದ್ದವು. ಆಕೆಯ ಒಂದು ಕಾಲು ವಕ್ರವಾಗಿದ್ದು ವೇಗವಾಗಿ ನಡೆಯಲು ಸಾಧ್ಯವಿರಲಿಲ್ಲ. ಆಕೆಯ ಮುಂದಿನ ಹಲ್ಲುಗಳೆಲ್ಲ ಉದ್ದುದ್ದವಾಗಿ ಬೆಳೆದುಕೊಂಡು ಯಾವಾಗಲೂ ತುಟಿಗಳೆಡೆಯಿಂದ ಹೊರಗೇ ಕಾಣುತ್ತಿರುತ್ತಿದ್ದವು. ಐದನೇ ಕ್ಲಾಸಿಗೆ ಬರುವ ವೇಳೆಗೆ ನಾನೇ ಆಕೆಗಿಂತ ಎತ್ತರವಿದ್ದೆ. ಬಹುಶಃ ಸಣ್ಣದರಿಂದ ನೋಡಿದ್ದರಿಂದಲೋ ಏನೋ ನನಗೆ ಆಕೆ ಎಂದಿಗೂ ಕುರೂಪಿಯೆನ್ನಿಸಿದ್ದೇ ಇಲ್ಲ. ಬೇರೆ ಹೆಂಗಸರು ಆಕೆಯನ್ನು ಥರಾವರಿಯಾಗಿ ಗೇಲಿ ಮಾಡಿಕೊಳ್ಳುವುದನ್ನು ಕೇಳಿದಾಗೆಲ್ಲ ನನಗೆ ಆಶ್ಚರ್ಯವೇ ಆಗುತ್ತಿದ್ದಿದ್ದು. ನಾನು ಎದುರಿಗೆ ಸಿಕ್ಕಿದಾಗೆಲ್ಲ ಆ ಕುಳ್ಳನೆಯ ಮುದುಕಿ ನನ್ನ ಮುಖವನ್ನು ಬೊಗಸೆಯಲ್ಲಿ ಹಿಡಿದು ಒಮ್ಮೆ ದೀರ್ಘವಾಗಿ ನನ್ನನ್ನು ದಿಟ್ಟಿಸುತ್ತಿತ್ತು. ಆಮೇಲೆ ನನ್ನ ಮೂಗನ್ನು ಪ್ರೀತಿಯಿಂದ ಹಿಂಡಿ ತನ್ನ ಗೊಗ್ಗರುದನಿಯಲ್ಲಿ, “ಇಂಥ ಚೆಂದುಳ್ಳಿ ಮೂಗು ನಿನ್ನ ನಸೀಬಿನಲ್ಲಿ ಬಂದಿದ್ದು ನಾನು ಮಾಡಿದ ಮಾಲೀಶಿನಿಂದಲೇ ಅಂತ ನೆನಪಿಟ್ಕೋ!” ಎಂದು ಆಜ್ಞಾಪಿಸುತ್ತಿತ್ತು. ನಾನು ಆಕೆಯ ಕಣ್ಣಿಂದ ಸೂಸುತ್ತಿದ್ದ ಅಕ್ಕರೆಯ ಭಾರದಿಂದ ಕುಗ್ಗಿಹೋಗುತ್ತಿದ್ದೆ. ಬಹಳ ಪ್ರೀತಿ ಉಕ್ಕಿದರೆ ಆಕೆಯ ತೋಟದಿಂದ ಒಂದು ಚೆಂದದ ಡಾಲಿಯಾ ಹೂವೋ, ಗುಲಾಬಿಹೂವೋ ನನ್ನ ಕೈಗೆ ಬರುತ್ತಿತ್ತು.

“ನೆನಪುಗಳಾಗುವ ಆಶಯದಲ್ಲಿಯೇ ನಾವು ಬದುಕುವುದು” ಎಂದು ಇಟಾಲಿಯನ್ ಕವಿ ಆಂಟೋನಿಯೋ ಪೋರ್ಶಿಯಾ ಹೇಳುತ್ತಾನೆ. ನಾವು ಬೆಳೆಯುತ್ತ ಹೋದಹಾಗೆ ಹಲವಾರು ಜನರನ್ನು ನಾವು ನಮ್ಮ ಸ್ಮೃತಿಯಿಂದ ದೂರಮಾಡಿಕೊಳ್ಳುತ್ತ ಹೋಗುತ್ತೇವೆ. ನಮ್ಮ ವರ್ತಮಾನವನ್ನು ಹೆಚ್ಚು ಶ್ಲಾಘಿಸುವುದಕ್ಕಾಗಿ, ಆಸ್ವಾದಿಸುವುದಕ್ಕಾಗಿ ಮತ್ತು ಭವಿಷ್ಯವನ್ನು ಎದುರಿಸಲು ನಮ್ಮ ಕಣ್ಣುಗಳನ್ನು ತೆರೆಯುವ ಸಲುವಾಗಿಯಾದರೂ ನಾವು ನಮ್ಮ ನೆನಪುಗಳನ್ನು ಹಸಿರಾಗಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಕೆಲ ವರ್ಷದ ಕೆಳಗೆ ನಮ್ಮ ಆಲ್ಬಮ್ ತೇವಕ್ಕೆ ಸಿಕ್ಕಿ ಜೀರ್ಣವಾಗುವ ಪರಿಸ್ಥಿತಿಯಲ್ಲಿದೆ ಎಂದು ಅಮ್ಮ ತಿಳಿಸಿದರು. ನಾನು ಅದರಲ್ಲಿ ಸಾಕಷ್ಟು ಉಳಿದುಕೊಂದಿರುವ ಛಾಯಾಚಿತ್ರಗಳನ್ನೆಲ್ಲ ಸ್ಕ್ಯಾನ್ ಮಾಡಿಸಿ ಉಳಿಸಲು ಸಲಹೆ ನೀಡಿದೆ. ಆದಾಗಿ ಕೆಲದಿನಗಳ ನಂತರ ಅಮ್ಮ ನಮ್ಮ ಎಲ್ಲ ಹಳೆಯ ಚಿತ್ರಗಳನ್ನು ಸ್ಕ್ಯಾನ್ ಮಾಡಿಸಿ ಡಿವಿಡಿ ಕಳುಹಿಸಿದರು. ಮತ್ತವೇ ಚಿತ್ರಗಳು ನನ್ನ ಲ್ಯಾಪ್ ಟಾಪಿನ ಸ್ಕ್ರೀನಿನ ಮೇಲೆ ಮೂಡುವಾಗ ಉಂಟಾದ ಸಂತಸವನ್ನು ವರ್ಣಿಸಲು ಶಬ್ದಗಳೇ ಇಲ್ಲ. ಕಳೆದ ತಿಂಗಳು ನನ್ನ ಜೀವನದ ಮೊದಲ ಕೆಲ ತಿಂಗಳುಗಳಲ್ಲಿ ನನ್ನನ್ನು ಲಾಲಿಸಿ ಪಾಲಿಸಿ ನನ್ನ ಮೂಗನ್ನು ವಿಶೇಷವಾಗಿ ಮಾಲೀಶು ಮಾಡಿದ್ದ ಆ ಪುಟ್ಟ ಮುದುಕಿ ತೀರಿಕೊಂಡಿತು. ಕೊನೆಯ ದಿನಗಳನ್ನು ಆಕೆ ಮಂಗಳೂರಿನ ತನ್ನ ಮಗಳ ಮನೆಯಲ್ಲಿ ಬಹಳ ನೆಮ್ಮದಿಯಿಂದ ಕಳೆದರು ಎಂದು ಅಮ್ಮ ಹೇಳಿದರು.

 

ಚಿತ್ರಕೃಪೆ: s3.favim.com

ಒಂದು ಕ್ರಿಸ್ಮಸ್ ಮರ.

ಕ್ರಿಸ್ಮಸ್ ಎಂದರೆ ಏನೋ ಸಡಗರ. ತುಂಬ ನಕ್ಷತ್ರಗಳು ಒಟ್ಟಿಗೇ ನಮ್ಮ ಸುತ್ತಮುತ್ತ ಮಿನುಗಿದ ಹಾಗೆ.. ಸಿಹಿ ಪರಿಮಳಗಳನ್ನು ಆಘ್ರಾಣಿಸುತ್ತ ನಾವು ಪಡೆಯುವ ಆನಂದದ ಹಾಗೆ..ಆಹ್ಲಾದಕರ ಸಂಗೀತವನ್ನು ಕೇಳುತ್ತ ಎಲ್ಲ ಮರೆತು ಮೈದೂಗಿದ ಹಾಗೆ.. ಸುಮಾರು ಹತ್ತು ವರುಷಗಳಿಂದ ನಾನು ಒಂದು ಮಧ್ಯರಾತ್ರಿಯ ಮಾಸ್ ಅನ್ನೂ ತಪ್ಪಿಸಿಕೊಂಡಿದ್ದೇ ಇಲ್ಲ. ದೇವರ ಬಗೆಗಿನ ನನ್ನ ಖಾಸಗೀ ನಂಬಿಕೆಗಳನ್ನೆಲ್ಲ ಮೀರಿ ನಿಲ್ಲುವ ರಾತ್ರಿಯದು.

 

     ಕ್ರಿಸ್ಮಸ್ ಅಂದಾಕ್ಷಣ ನನಗೆ ನೆನಪಾಗುವದು ಸಿಸ್ಟರ್ ಅನಾ ಮಾರ್ಥಾ ಮತ್ತು ಕ್ರಿಸ್ಮಸ್ ಮರಗಳು. ಸಿಸ್ಟರ್ ಮಾರ್ಥಾ ನನ್ನ ಮದುವೆಯ ಮೂಲಕ ನನ್ನ ಸಂಬಂಧಿ – ಒಂದು ಲೆಕ್ಕದಲ್ಲಿ ನನ್ನ ಅತ್ತೆ. ಈವತ್ತಿಗೆ ನನ್ನೊಳಗೆ ಆಧ್ಯಾತ್ಮಿಕ ಯೋಚನೆಗಳ  ಸುಳಿವೇನಾದರೂ(!?) ಇದ್ದರೆ ಅದರ ಹಿಂದಿನ ಮುಖ್ಯ ಪ್ರಭಾವ ಆಕೆಯದು. ಆಕೆ ತನ್ನ ಜೀವಮಾನದುದ್ದಕ್ಕೂ ತೀವ್ರಮಟ್ಟದ ಬ್ರಾಂಕೈಟಿಸ್ ಖಾಯಿಲೆಯಿಂದ ನರಳುತ್ತಲೇ ಇದ್ದರು. ಸಾಮಾನ್ಯ ಜನರು ತಡೆದುಕೊಳ್ಳಲು ಸಾಧ್ಯವಾಗದಂತಹ ದೈಹಿಕ ನೋವುಗಳನ್ನು ಆಕೆ ಪ್ರಾರ್ಥಿಸುತ್ತಲೇ ಮೌನವಾಗಿ ನುಂಗಿಬಿಡುತ್ತ ಇದ್ದರು. ಆಕೆ ಎಲ್ಲೇ ಇದ್ದರು ಪ್ರತಿವರ್ಷ ಆಕೆಯ ಕ್ರಿಸ್ಮಸ್ ಶುಭಾಶಯಪತ್ರ ನನ್ನ ಕೈಸೇರುವುದು. ತನ್ನ ಹತ್ತನೇ ತರಗತಿಯ ಶಿಕ್ಷಣ ಮುಗಿದಕೂಡಲೆ ಯಾವ ಪ್ರತಿರೋಧಗಳನ್ನೂ ಲೆಕ್ಕಿಸದೆ ಎಲ್ಲವನ್ನೂ ತ್ಯಜಿಸಿ ಆಶ್ರಮ ಸೇರಿದ ಆಕೆಯ ಬಗ್ಗೆ ನನಗೆ ಸದಾ ಕುತೂಹಲ. ಅವರಿಗೆ ನೂರೆಂಟು ಪ್ರಶ್ನೆ ಕೇಳಿ ಪಿರಿಪಿರಿ ಮಾಡುತ್ತಿದ್ದರು ಒಂದು ದಿನವೂ ಸಿಡುಕದೆ ಎಲ್ಲದಕ್ಕೂ ಉತ್ತರಿಸುವರು. ಕೆಲವೊಮ್ಮೆ ದಿನಗಟ್ಟಲೆ ಮೌನವಾಗಿಬಿಡುವರು. ಇಂಥವರಿಗೆ ಗಿಡಗಳೆಂದರೆ ವಿಚಿತ್ರವಾದ, ತೀರ ಲೌಕಿಕ ಅನ್ನಿಸಬಹುದಾದಂಥ ಮೋಹ. ಆಕೆಯ ಹಸಿರಿನ ಗೀಳು ಮಾತ್ರ ಯಾರಿಗೂ ಅರ್ಥವಾಗುತ್ತ ಇರಲಿಲ್ಲ. ಕೊಂಚ ಆರೋಗ್ಯವಾಗಿದ್ದರೂ ಆಶ್ರಮದ ಹೂದೋಟದಲ್ಲಿ ಕಾಲ ಕಳೆಯುವರು. ನನ್ನ ತೋಟದ ಗಿಡಗಳ ಬಗ್ಗೆ ಯಾವಾಗಲೂ ಮುತುವರ್ಜಿ ವಹಿಸಿ ಕೇಳುವ ಅವರು ನಾನು ಆಶ್ರಮಕ್ಕೆ ಭೇಟಿನೀಡಿದಾಗಲೆಲ್ಲ ಹೂಗಿಡವೊಂದರ ಕಟಿಂಗ್ ಅನ್ನು ನನ್ನ ತೋಟಕ್ಕಾಗಿ ಕೊಡುತ್ತ ಇದ್ದರು. “ಗಿಡಗಳ ಹತ್ತಿರ ಸೊಲ್ಪ ಸಮಯ ತೆಕ್ಕೊಂಡು ದಿನಾ ಕೂತುಕೊಂಡು ಮಾತನಾಡು. ನಿನ್ ಕಷ್ಟಸುಖ ಹೇಳ್ಕೋ. ಯು ವಿಲ್ ಆಲ್ವೇಸ್ ಹ್ಯಾವ್ ಅ ಬಂಚ್ ಆಫ್ ಫ್ರೆಂಡ್ಸ್ ಅರೌಂಡ್!” ಅನ್ನುವರು. ಆಗಾಗ, “ನಿನ್ ಹತ್ತಿರ ಒಂದು ಕ್ರಿಸ್ಮಸ್ ಮರ ಇಲ್ಲವಲ್ಲ!” ಎಂದು ಪೇಚಾಡಿಕೊಳ್ಳುವರು. ಆಗ ಮೈಸೂರ ಪುಟ್ಟ ಬಾಡಿಗೆಮನೆಯಲ್ಲಿದ್ದ ನಾನು ನಕ್ಕುಬಿಡುವೆ.

ಹಾಗೂ ಹೀಗೂ ನನ್ನ ಸ್ವಂತ ಮನೆಯಲ್ಲಿ ವಾಸ ಆರಂಭಿಸಿದಾಗ ಮೊದಲು ಅನ್ನಿಸಿದ್ದು – ಒಂದು ಚೆಂದದ ತೋಟ ಮಾಡಬೇಕು. ಹಿಂದೆ ಮನೆಯಲ್ಲಿ ಬಾಡಿಗೆಗಿದ್ದವರೋ, ಮನೆಯನ್ನು ದುರವಸ್ಥೆಯಲ್ಲಿ ಬಿಟ್ಟುಹೋಗಿದ್ದರು. ಎಲ್ಲ ಸರಿಪಡಿಸುವಲ್ಲಿ ಆರು ತಿಂಗಳುಗಳೇ ಕಳೆದವು. ಅದೇ ಹೊತ್ತಿಗೆ ಸಿಸ್ಟರ್ ಮಾರ್ಥಾರ ಆರೋಗ್ಯ ಕ್ಷೀಣಿಸಿತು. ಕೊನೆಯ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಅವರನ್ನು ನೋಡಲು ಹೋದಾಗ ಅವರ ಮುಖ ಅನಾರೋಗ್ಯದಿಂದ ಊದಿಕೊಂಡು ಆಕೆ ಚೆನ್ನಾಗಿದ್ದಾರೆಂಬ ಹುಸಿಭರವಸೆ ಹುಟ್ಟಿಸುತ್ತಿತ್ತು. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಸಿಸ್ಟರ್ ಮಾರ್ಥಾ ಹೇಳಿದರು – “ಈ ಸಾರಿ ಕ್ರಿಸ್ಮಸ್ ಕಾರ್ಡು ಕಳಿಸೋಕೆ ನಾನಿರಲ್ಲ ಬಿಡು”. ನನಗೂ ಪ್ರಾಯಶಃ ಹಾಗೇ ಅನ್ನಿಸಿತು. ಮೆತ್ತಗೆ ಅವರ ಕೈ ಮುಟ್ಟಿ,  “ಮನೇಲಿ ತೋಟ ಮಾಡ್ತಿದೀವಿ. ತುಂಬ ಜಾಗ ಇದೆ. ಎಲ್ಲ ನೆಟ್ಟಾದ ಮೇಲೆ ನೀವು ಒಂದು ಸಲ ಬಂದು ನೋಡಿ” ಎಂದೆ. ಅವರ ಕಣ್ಣು ಅರಳಿದವು. “ಹಾಗಿದ್ರೆ ಒಂದು ಕ್ರಿಸ್ಮಸ್ ಗಿಡ ನೆಟ್ಟುಬಿಡು, ಆಯ್ತಾ? ನಿಂಗೆ ಬಹಳ ಮರೆವು. ಕೋಪಿಷ್ಠ ಹುಡುಗಿ. ಆ ಮರದಿಂದಾನಾದರೂ ಕ್ರಿಸ್ಮಸ್‌ನ ಒಳ್ಳೇತನ ಮತ್ತೆ ನನ್ನ ಬುದ್ಧಿವಾದಗಳನ್ನ ನೆನಪಿಟ್ಟುಕೋತೀಯೇನೋ!” ಎಂದು ಕ್ಷೀಣವಾಗಿ ನಕ್ಕರು. ನಮ್ಮ ಕೆಟ್ಟ ಬುದ್ಧಿಗಳಿಂದಾಗಿಯಾದರು ನಾವು ಎಷ್ಟು ಜನರ ಹತ್ತಿರವಾಗುತ್ತೇವೆ, ಅಲ್ಲ?

      ಆಮೇಲೆ ಕೆಲವೇ ದಿನಗಳಲ್ಲಿ ತಾನು ಭವಿಷ್ಯ ನುಡಿದ ಹಾಗೆಯೇ ಸಿಸ್ಟರ್ ಮಾರ್ಥಾ ಹೊರಟುಹೋದರು. ನನ್ನ ಕುಟುಂಬ ದುಃಖತಪ್ತವಾಗಿತ್ತು. ಎಲ್ಲಕಿಂತ ಹೆಚ್ಚಾಗಿ ಅವರಿಂದಲೇ ಬಾಲ್ಯದ ತೊದಲುಹಾಡುಗಳನ್ನು, ಗಿಡಗಳ ಬಗೆಗಿನ ಪ್ರೀತಿಯನ್ನು ಕಲಿತಿದ್ದ ನನ್ನ ಪುಟ್ಟ ಮಗಳು ಮೊಟ್ಟಮೊದಲ ಬಾರಿಗೆ ಸಾವೊಂದನ್ನು ಕಂಡಿದ್ದು ಮತ್ತು ಇನ್ನಿಲ್ಲದಂತೆ ಅತ್ತಿದ್ದನ್ನು ಮರೆಯಲಾಗುವದೇ ಇಲ್ಲ. ಭಾರತದೆಲ್ಲೆಡೆಯಿಂದ ಅವರ ಶಿಷ್ಯೆಯರು ಬಂದು ಅವರ ಮರಣಯಾತ್ರೆಗೆ ತಾವೇ ಹೆಗಲುಕೊಟ್ಟರು. ಅದೊಂದು ಅಪರೂಪದ ಸನ್ನಿವೇಶ. ಸಿಸ್ಟರ್ ಮಾರ್ಥಾ ಪ್ರತಿಯೊಬ್ಬರನ್ನೂ ತಮ್ಮದೇ ಆದ ರೀತಿಯಲ್ಲಿ ಮುಟ್ಟಿದ್ದರು. ಅವರಿಗೆ ವಿದಾಯ ಹೇಳಿ ವಾಪಾಸು ಬಂದ ಮರುದಿನವೇ ಹೋಗಿ ಒಂದು ಪುಟ್ಟ ಕ್ರಿಸ್ಮಸ್ ಗಿಡವನ್ನು ಖರೀದಿಸಿ ತಂದು ತೋಟದ ನಟ್ಟನಡುವಿನಲ್ಲಿ ನೆಟ್ಟದ್ದಾಯಿತು.

 

ಒಂದೆರಡು ತಿಂಗಳು ಕಳೆದು ಕ್ರಿಸ್ಮಸ್ ಹಿಂದಿನ ದಿನ ಬಂದಿತು..ತನ್ನ ಎಂದಿನ ಆಕರ್ಷಣೆಯೊಂದಿಗೆ.. ಮಾಮೂಲಿನಂತೆ ಕ್ರಿಸ್ಮಸ್ ಕಾರ್ಡುಗಳನ್ನು ಅಂಚೆಯವ ನೀಡಿಹೋದ. ಈ ಬಾರಿ ಎಲ್ಲರ ಹೆಸರಿಗೂ ಒಂದೇ ಕೈಬರಹದ ಲಕೋಟೆಗಳಿದ್ದವು. ಯಾರಿರಬಹುದೆಂದು ಬಿಚ್ಚಿನೋಡಿದರೆ ಅಲ್ಲಿ ಸಿಸ್ಟರ್ ಮಾರ್ಥಾರ ಸಹಿಯಿತ್ತು!! ತಾನು ತೆರಳುವ ಮೊದಲೇ ಸಿಸ್ಟರ್ ಮಾರ್ಥಾ ತನ್ನ ಸಹವರ್ತಿಯೊಬ್ಬರ ಕೈಯಲ್ಲಿ ನಮ್ಮೆಲ್ಲರಿಗಾಗಿ ಶುಭಾಶಯ ಪತ್ರಗಳನ್ನು ನೀಡಿ ಸರಿಯಾದ ಸಮಯಕ್ಕೆ ಅಂಚೆಗೆ ಹಾಕುವಂತೆ ತಿಳಿಸಿದ್ದರು. ಅಂದಿನ ಕ್ರಿಸ್ಮಸ್ ನಮ್ಮೆಲ್ಲರಿಗೆ ಬಹಳ ವಿಶೇಷವಾಗಿತ್ತು. ಅಂದು ಸಿಸ್ಟರ್ ಮಾರ್ಥಾ ನಮ್ಮೊಂದಿಗಿದ್ದರು.

 

ಅವರ ನೆನಪಿನಲ್ಲಿ ನೆಟ್ಟ ಕ್ರಿಸ್ಮಸ್ ಗಿಡ ಇವತ್ತು ದೊಡ್ಡ ಮರವಾಗಿದೆ. ಬಹಳ ವರ್ಷಗಳ ನಂತರ ಅದರಡಿಯಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಾಗುತ್ತಿದ್ದೇವೆ. ನನ್ನ ತೋಟ ನೋಡಿಕೊಳ್ಳುವ ವೆಂಕಟಮ್ಮ ಅದರ ಬಗ್ಗೆ ವಿಶೇಷ ನಿಗಾ ವಹಿಸುತ್ತಾರೆ. ಮಕ್ಕಳು ಅದರ ನೆರಳಿನಲ್ಲಿ ಆಡಿಕೊಳ್ಳುತ್ತಾರೆ. ಆಗಾಗ ಒಂದಷ್ಟು ಪಕ್ಷಿಗಳು ಬಂದು ಅದರ ಗೆಲ್ಲುಗಳ ಸುರಕ್ಷೆಯಲ್ಲಿ ಗೂಡುಕಟ್ಟಿ ಮರಿಮಾಡಿ ಹಾರಿಯೂ ಹೋಗುತ್ತವೆ.  ಕ್ರಿಸ್ಮಸ್ ಮರ ತನ್ನಪಾಡಿಗೆ ತಾನು ಆನಂದವಾಗಿ ಬೆಳೆದುಕೊಂಡಿದೆ.

    ನಾನಂದುಕೊಳ್ಳುತ್ತೇನೆ, ಸಿಸ್ಟರ್ ಮಾರ್ಥಾ ಅದರ ಜತೆ ಮಾತನಾಡುತ್ತಿರಬಹುದು.

 

ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು.

 

ಚಿತ್ರಕೃಪೆ: http://www.digitalblasphemy.com

ಒಂದು ದನಿ.

apparitionii1

ನನ್ನ ಗೆಳತಿಯೊಬ್ಬಳು ಸುಮ್ಮನೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಅದಾದ ಎಂಟು ವಾರಕ್ಕೆ ಸರಿಯಾಗಿ ಇದು ಯಾರಿಂದಲೊ ನನಗೆ ತಿಳಿಯಿತು. ಕೆಲಕಾಲದ ಹಿಂದೆ ಸಂತಸದಿಂದ ಫೋನು ಮಾಡಿದ್ದ ಆಕೆಗೆ ಏನಾಯಿತೆಂದು ನನಗೆ ಅರ್ಥವೇ ಆಗಲಿಲ್ಲ. ಎಲ್ಲಕಿಂತ ಹೆಚ್ಚಾಗಿ ನನ್ನ ಕಾಡಿದ ವಿಷಯವೆಂದರೆ ಆಕೆ ಹುಟ್ಟಿನಲ್ಲಿ ನನಗಿಂತ ಕೇವಲ ಮೂರು ದಿನ ಸಣ್ಣವಳಾಗಿದ್ದಿದ್ದು. ನಮ್ಮ ಯೋಚನೆಗಳು, ಆಕಾಂಕ್ಷೆಗಳು, ಬೇಸರಗಳು, ಅಭ್ಯಾಸಗಳು, ಹವ್ಯಾಸಗಳು, ಎಲ್ಲವೂ ಒಂದೇ ರೀತಿ ಇದ್ದಿದ್ದು. ಬಾಕಿ ಗೆಳತಿಯರು ಮಲಗಿ ಗೊರಕೆ ಹೊಡೆಯುತ್ತಿದ್ದರೆ ನಾವು ರಾತ್ರಿಗಟ್ಟಲೆ ಹಾಸ್ಟೆಲಿನ ಬೆಂಚುಗಳನ್ನು ಸವೆಸುತ್ತ ನಾಳೆಯಿಲ್ಲವೆಂಬ ಹಾಗೆ ಹರಟುತ್ತಿದ್ದೆವು. ಆಕೆ ಚೆಂದವಾಗಿ ಹಾಡುತ್ತಿದ್ದಳು. ‘ಜಾನೆ ಕ್ಯೋಂ ಲೋಗ್ ಮುಹಬ್ಬತ್ ಕಿಯಾ ಕರ್ತೇ ಹೈಂ..’, ‘ಮನಸೆ ಓ ಮನಸೇ..’, ‘ಶೀಶಾ ಹೋ ಯಾ ದಿಲ್ ಹೋ’.. ಎಂದು ಮುಂತಾಗಿ ಆಕೆ ಹಾಡುತ್ತಿದ್ದರೆ ಹಾಸ್ಟೆಲು ಸ್ತಬ್ಧವಾಗಿಬಿಡುವುದು. ನಮ್ಮ ಕೆಟ್ಟ ಸೆನ್ಸ್ ಆಫ್ ಹ್ಯೂಮರ್ ಯಾರನ್ನೂ ಬಿಡುತ್ತ ಇರಲಿಲ್ಲ. ನಮ್ಮ ಬೇಸರಗಳು ಕೂಡ ನಮ್ಮ ನಗುವಿನೊಡನೆ ಸೇರಿ ಚೆಲ್ಲಾಪಿಲ್ಲಿಯಾಗಿಬಿಡುತ್ತಿದ್ದವು. ರಜೆಗಳಲ್ಲಿ ಆಕೆಯಷ್ಟೆ ಉರುಟಾದ ಅಕ್ಷರದ ಪತ್ರಗಳು ನನ್ನ ಕೈಸೇರುತ್ತ ಇದ್ದವು.
ಯಾರ ಸಾವೂ ನನ್ನನ್ನು ಇಷ್ಟು ಕಾಡಿರಲಿಲ್ಲ. ಭಯ ಹುಟ್ಟಿಸುವಷ್ಟು.. ಆಕೆಯೊಡನೆ ಆಕೆ ಇನ್ನೂ ಇದ್ದಾಳೆಂಬಂತೆ ಭಾವಿಸಿ ಮಾತಾಡುವಷ್ಟು… ಆಕೆಯ ಇಷ್ಟದ ಹಾಡುಗಳನ್ನು ಕೇಳಿದಾಕ್ಷಣ ಕಿವಿಮುಚ್ಚಿಕೊಳ್ಳುವಷ್ಟು… ಆಮೇಲಿಂದ ಬರೆಯಲೇ ಹಿಂಸೆ ಅನಿಸುವಷ್ಟು…ನನ್ನ ಫೋನಿನಲ್ಲಿ ಇನ್ನೂ ಅವಳ ಮೆಸೇಜಿದೆ. ಕಿವಿಯಲ್ಲಿ ಆಕೆ ಹೇಳಿದ ಕೊನೆಯ ಮಾತುಗಳು ಇನ್ನೂ ರಿಂಗಣಿಸುತ್ತಿವೆ – ’ನೀನು ಖುಶಿಯಾಗಿದೀಯ ತಾನೆ? ನಂಗಷ್ಟೆ ಸಾಕು. ಒಂದ್ಸಾರಿ ಸಿಗು. ಏನೇನೋ ಸಖತ್ ಹೇಳೋದಿದೆ..’. ಒಮ್ಮೆ ಬಂದು ಮಾತನಾಡಿಬಿಡೆ ಎಂದು ಆಕೆಯನ್ನು ಕರೆಯುತ್ತಲೆ ಇರುತ್ತೇನೆ. ಆಕೆ ಬರಲಾರಳು ಅನ್ನುವ ಹತಾಶೆ ಕೊರೆದು ತಿನ್ನುತ್ತದೆ. ನೋವಿಗೆ ಮಾತು ಬಂದರೆ ಕಡಿಮೆಯಾಗುವದಂತೆ. ನನ್ನ ಪಾಲಿಗೆ ಪದಗಳೇ ಮಾತು. ಕೆಳಗಿನ ಥಾಮಸ್ ಹಾರ್ಡಿಯ ಕವಿತೆ ‘ದ ವಾಯ್ಸ್’ ಅನ್ನು ಅವಳಿಗಾಗಿ ಈಗ ಕೂತು ಅನುವಾದಿಸಿದ್ದೇನೆ. ಗೀತಿ, ಇದು ನಿನಗೇನೆ.

ಒಂದು ದನಿ
ನೆನಪಾಗುವ ಹೆಣ್ಣೆ, ಹೇಗೆಲ್ಲ ನನ್ನ ಕರೆವೆ, ಕರೆವೆ ನನ್ನನೇ
ಹೇಳುವೆ, ಆಗಿನಂತೆ ನೀನಿಲ್ಲ ಇಂದು
ನನ್ನ ಸರ್ವಸ್ವವಾಗಿದ್ದಾಗ ಬದಲಾದ ಹಾಗಿರದೆ
ಮೊದಲು, ನಮ್ಮ ಹಗಲು ಚೆಲುವಿದ್ದಾಗ ಇದ್ದಂತಿರುವಿಯೆಂದು

ನನಗೆ ಕೇಳುವುದು ನಿನ್ನ ದನಿಯೆ? ಹಾಗಿದ್ದರೊಮ್ಮೆ ಕಾಣಿಸಿಕೊ
ನಾ ನಿನ್ನ ಕಾಣಲೆಂದು ಶಹರದ ಬಳಿ ಬಂದಾಗ
ನನಗಾಗಿ ಕಾಯುತ್ತಿದ್ದ ನಿನ್ನಂತೆ, ಹೌದು, ನನಗೆ ಗೊತ್ತಿದ್ದ ನಿನ್ನಂತೆ.
ಅದೇ ಅಸಲೀ ನೀಲಿಹವೆಯಂತಹ ದಿರಿಸಿನಲಿ!!

ಅಥವಾ ಇದು ನೀನು ಶಾಶ್ವತವಾಗಿ ಹತ್ತಿರವೋ ದೂರವೋ
ಕೇಳಬರದಂತೆ ಅಸ್ತಿತ್ವ ಕಳೆದುಕೊಂಡ ಬಳಿಕ
ಬರೆ ಒದ್ದೆ ಹುಲ್ಲುಗಾವಲುಗಳೆಡೆಯಿಂದ ನನ್ನೆಡೆ
ಆಲಸಿಯಂತೆ ಹಾದುಬರುವ ತಿಳಿಗಾಳಿ ಮಾತ್ರವೆ?

ಹಾಗಾಗಿ ನಾನಿಲ್ಲಿ ಸುತ್ತ ಬೀಳುವ ಎಲೆಗಳ
ನಡುವೆ ಸಂದೇಹಿಸುತ್ತ ಮುನ್ನಡೆಯುತಿರುವೆ,
ಉತ್ತರದಿಕ್ಕಿನ ಹವೆ ಮುಳ್ಳಿರಿದೆಡೆ ಕೊಂಚ ಒಸರುವುದು
ಮತ್ತು ಹೆಣ್ಣೊಬ್ಬಳೆನ್ನ ಕರೆಯುತಿರುವಳು

ಚಿತ್ರಕೃಪೆ: ’Apparition’ by www.streetmorrisart.com

ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ ಕ್ಯಾಂಟೀನಿನಲ್ಲಿ ಟೀ ಕುಡಿದುಕೊಂಡು ಮಶ್ಕಿರಿ ಮಾಡಿಕೊಂಡು ಕಾಲಕಳೆಯುವ ಗೆಳೆಯರ ಗುಂಪುಗಳು, ಮೈದಾನದಲ್ಲಿ ಆಡುವವರ ಕೇಕೆ, ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂತು ಹರಟೆ ಕೊಚ್ಚುವವರು, ಇಬ್ಬಿಬ್ಬರೆ ಅಲ್ಲಿಇಲ್ಲಿ ಓಡಾಡಿಕೊಂಡು ತಾವು ಪ್ರೇಮಿಗಳೆಂದು ಸಾರುವ ಜೋಡಿಗಳು..ಹಾಗೂ ಇದನ್ನೆಲ್ಲ ಮೌನವಾಗಿ ನಿಂತು ನೋಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು.

ನಾವು ಹೊಸತಾಗಿ ಕ್ಯಾಂಪಸ್ಸಿಗೆ ಬಂದಾಗ ಅಲ್ಲಿನ ಇತರ ಎಲ್ಲ ಕಟ್ಟಡ, ಜನರು ಹಾಗೂ ಮರಗಿಡಗಳ ಜತೆಗೇ ಕುವೆಂಪುರವರೂ ನಿಗೂಢವಾಗಿ ಕಂಡಿದ್ದರು. ಅವರಿರುವ ದೊಡ್ಡ ಕಲ್ಲುಕಟ್ಟೆ ಸೀನಿಯರುಗಳ ಸ್ವತ್ತಾಗಿದ್ದಿದ್ದೂ ಒಂದು ಬಲವಾದ ಕಾರಣ. ಸಂಜೆಗಳಲ್ಲಿ ಆರಾಮವಾಗಿ ಕುವೆಂಪುರವರ ಕಾಲಬುಡದಲ್ಲಿ ಕೂತುಕೊಂಡು ಅವರು ನಡೆಸುವ ಮಾತುಕತೆಗಳ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಆದರೆ ನಾವೇನಾದರೂ ಅಪ್ಪಿತಪ್ಪಿ ಆ ಕಟ್ಟೆಯ ಮೆಟ್ಟಿಲು ಹತ್ತಿದರೂ ಸೀನಿಯರುಗಳ ಕೆಂಗಣ್ಣಿಗೆ ಗುರಿಯಾಗುವ ಭಯ. ನಾವುಗಳು ಸ್ವಲ್ಪ ನಿರ್ಭಿಡೆಯಿಂದ ನಡೆದುಕೊಂಡರೆ ನಮ್ಮ ವಿಭಾಗಗಳಲ್ಲಿ ಹೊಸಬರಿಗೆ ನೀಡಲಾಗುವ ‘ವೆಲ್ಕಂ’ ಸಮಯದಲ್ಲಿ ತೊಂದರೆಯಾಗಬಹುದು ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಹಿರಿಯ ವಿದ್ಯಾರ್ಥಿಗಳೂ ಕೂಡ (ಮೊದಲ ಕೆಲವು ದಿನಗಳವರೆಗೆ..)ನಾವು ಕಂಡರೂ ಕಾಣದಂತೆ ವರ್ತಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಹೀಗಾಯಿತು. ನಾನು ಕವಿತೆ ಬರೆಯುತ್ತೇನೆ ಎಂದು ನಮ್ಮ ವಿಭಾಗದ ಒಬ್ಬ ಸೀನಿಯರ್ ವಿದ್ಯಾರ್ಥಿಗೆ ತಿಳಿದುಬಂತು. ಅವ ಹೌದೆ ಎಂದು ಕೇಳಿದ. ನಾನು ಹೂಂ ಎಂದೆ. ಆತನೂ ಚೆನ್ನಾಗಿ ಬರೆಯುತ್ತಾನೆಂದು ಹೆಸರಿದ್ದುದರಿಂದ ನಾನು ನನ್ನ ಬರಹದ ಕೆಲವು ಸ್ಯಾಂಪಲ್ಲುಗಳನ್ನು ಆತನಿಗೆ ತೋರಿಸುವುದೆಂದು ತೀಮರ್ಮಾನವಾಯಿತು. ಸಂಜೆ ನನ್ನ ಒಂದೆರಡು ಕವನಗಳನ್ನು ಆತನಿಗೆ ಲೈಬ್ರರಿಯಲ್ಲಿ ಕೊಟ್ಟೆ. ಆತ ಅವನ್ನು ಓದಿ, ‘ನಾನು ನಿನ್ನ ಕವನಗಳ ಬಗ್ಗೆ ಒಂದೆರಡು ಮಾತು ಹೇಳಬೇಕಿದೆ.’ ಎಂದ. ಸರಿ ಎಂದು ಮಾತನಾಡುತ್ತ ಲೈಬ್ರರಿಯಿಂದ ಹೊರಗೆ ಬಂದು ಕುಳಿತೆವು. ಕವಿತೆಗಳ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ. ಚರ್ಚೆ ಮುಗಿಯಿತು. ನಾವು ಅಲ್ಲಿಯತನಕ ಕೂತದ್ದು ಕುವೆಂಪು ಕಟ್ಟೆಯ ಮೇಲೆ ಎಂದು ಆಗ ನನಗೆ ಅರಿವಾಯಿತು. ಸುಮಾರುಜನ ಹಿರಿಯ ಹಾಗು ನನ್ನ ಬ್ಯಾಚಿನ ವಿದ್ಯಾರ್ಥಿಗಳು ನನ್ನನ್ನು ವಿಚಿತ್ರವಾಗಿ ನೋಡುತ್ತ ಇದ್ದರು. ನಾನು ಒಳೊಳಗೆ ಸಣ್ಣ ಆತಂಕವಿದ್ದರೂ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಹಾಸ್ಟೆಲ್ಲಿಗೆ ಹೋದೆ.

ರಾತ್ರಿ ಊಟದ ವೇಳೆ ಸುಮಾರು ಗೆಳತಿಯರು ಬಂದು ನನ್ನ ಧೈರ್ಯವನ್ನು ಅಭಿನಂದಿಸಿದರು. ಕೆಲವರು ನಾನು ಅಲ್ಲಿ ಕೂತದ್ದು, ಅದೂ ಒಬ್ಬ ಸೀನಿಯರ್ ಹುಡುಗನೊಡನೆ –  ಸರಿಯಲ್ಲವೆಂದೂ, ನನ್ನ ಇಮೇಜಿಗೆ ತೊಂದರೆಯಾಗಬಹುದೆಂದೂ ಮಾತನಾಡಿದರು. ನನ್ನದೊಂದು ‘ಇಮೇಜು’ ಕೂಡ ಇತ್ತು ಹಾಗೂ ಅದು ಸಂಜೆಯ ನಂತರ ಬದಲಾಯಿತು ಎಂದು ನನಗೆ ತಿಳಿಯಿತು. ಕೆಲವು ಹಿರಿಯ ಹುಡುಗಿಯರು ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು ನನ್ನ ಕಿವಿಗೆ ಬಿತ್ತು.

ನಾನು ಮಾರನೆಯ ದಿನ ಸಂಜೆ ಒಂದು ಕೆಲಸ ಮಾಡಿದೆ. ನನ್ನ ಶಿವಮೊಗ್ಗೆಯಿಂದ ಬರುವ ಕೆಲವು ಸ್ನೇಹಿತೆಯರೊಡನೆ ಬೇಕೆಂದೆ ಕಟ್ಟೆಯ ಮೇಲೆ ಕುಳಿತು ಅವರ ಬಸ್ಸು ಬರುವ ತನಕ ಹರಟೆ ಹೊಡೆದೆ. ಅವರು ನನ್ನ ತರಲೆಯನ್ನೆಲ್ಲ ಖುಶಿಯಾಗಿ ಆನಂದಿಸಿ ಹೋದರು. ಮಾರನೆಯ ದಿನ ನನ್ನ ಕ್ಲಾಸಿನ ಸ್ನೇಹಿತೆಯರನ್ನು ಎಳೆದುಕೊಂಡು ಹೋದೆ. ಬಹಳ ಗಾಬರಿಯಾದರೂ ಅವರಿಗೂ ಒಂದು ಬಗೆಯ ಥ್ರಿಲ್ಲೆನಿಸಿತು. ಆಮೇಲೆ ನಾವು ಯಾರ ಪರಿವೆಯೂ ಇಲ್ಲದೆ ಕುವೆಂಪುರವರ ಬಳಿ ಕೂರಲಾರಂಭಿಸಿದೆವು. ಮೆಲ್ಲಮೆಲ್ಲನೆ ಇತರ ಗೆಳೆಯರೂ ಶಾಮೀಲಾದರು. ಆಮೇಲೆ ನಮ್ಮ ಮಾಸ್ಟರ್ಸ್ ಕೋರ್ಸು ಮುಗಿಯುವವರೆಗೂ ನಮ್ಮ ಸಂಜೆಗಳ ಕವಿತಾವಾಚನಗಳಲ್ಲಿ, ಚರ್ಚೆ, ಗುದ್ದಾಟ, ಹರಟೆ, ಸಂಭ್ರಮಗಳಲ್ಲಿ ಕುವೆಂಪುರವರ ದಿವ್ಯಮೌನ ಇದ್ದೇ ಇರುತ್ತಿತ್ತು. ಏನೆ ಇರಲಿ, ನಾನು ಅಂದು ಮೊದಲ ಬಾರಿಗೆ ಆ ಕಟ್ಟೆಯ ಮೇಲೆ ಪರಿವೆಯಿಲ್ಲದೆ ಅಚಾನಕ್ಕಾಗಿ ಕೂತದ್ದು, ಆ ಮೂಲಕ ಒಂದು ಸಣ್ಣ ನಿಯಮವನ್ನು ಮುರಿದದ್ದು ನನ್ನ ‘ಇಮೇಜ’ನ್ನು ಬದಲಾಯಿಸಿದ್ದಂತೂ ಸತ್ಯ.

ಚಿತ್ರಕೃಪೆ: www1.istockphotos.com
 

ಹೀಗೆ ಪ್ರತಿಸಾರಿ ಕಾಡುವ ಅವಳು

‘ಹಯ್ಯೊ, ಅವಳು ಬಂದಳೆಂದು ಕಾಣುತ್ತೆ. ನೀನೆ ಹೋಗು ಮಗಳೆ!’
‘ಉಹುಂ. ನಾನು ಯಾಕೆ ಆ ಹೆಂಗಸಿನ ಹತ್ತಿರ ಮಾತಾಡಬೇಕು? ನೀವೆ ಹೋಗ್ರಮ್ಮ!!’
‘ನಂಗೆ ತಲೆನೋವು ಅಂದುಬಿಡು. ಪ್ಲೀಸ್ ಕಣೆ. ನಂಗಾಗಲ್ಲ ಮಾರಾಯ್ತಿ ಆ ಪುರಾಣ ಕೇಳೋಕೆ!’
‘ಪ್ರತಿ ಸಾರಿ ಹಬ್ಬಕ್ಕೆ ಮನೆಗೆ ಬರೋದು ಈ ಹಿಂಸೆಗಾ? ಸರಿ. ನೀವು ಒಳಗಿರಿ. ಮಿನಿಮಂ ಒಂದು ಗಂಟೆ ಅಂತೂ ಆಗತ್ತೆ.’

ನಾನು ಮುಸಿಮುಸಿ ನಗುತ್ತ ಹಿತ್ತಲ ಬಾಗಿಲು ತೆರೆಯುತ್ತಿದ್ದೆ. ಅಲ್ಲಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಆಕೆ ನಿಂತಿರುತ್ತ ಇದ್ದಳು – ಶೋಕದ ಪ್ರತೀಕವೆ ತಾನೆಂಬಂತೆ. ಅವಳು ಎಂದರೆ ಒಂದು ರೀತಿಯ ಸರಿಯಾಗಿ ಒಣಗಿರದ ಸೀರೆಗಳ ಚುಂಗು ವಾಸನೆಯೆ ಇವತ್ತಿಗು ನನ್ನ ಮನಸ್ಸಿಗೆ ಬರುವುದು. ಆಕೆ ಸದಾ ರವಿಕೆಯಂತೆ ಇರುವ ತಾನೆ ಕೈಯಾರ ಹೆಣೆದ ವುಲನಿನ ರವಿಕೆಯನ್ನೆ ಉಡುತ್ತಿದ್ದುದು. ತಲೆಯ ಸೆರಗೊಳಗಿಂದ ಅಸ್ತವ್ಯಸ್ತವಾಗಿ ಇಣುಕುತ್ತಿದ್ದ ಕೂದಲುಗಳು ವಾರದಿಂದ ಬಾಚಣಿಕೆಯ ಪ್ರಯೋಗಕ್ಕೆ ಒಳಪಡದಿರುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದವು. ಇನ್ನು ಆಗೀಗ ಇಣುಕುತ್ತಿದ್ದ ಹೇನುಗಳ ವಿಚಾರವನ್ನು ನಾನು ಮಾತನಾಡದಿದ್ದರೇನೆ ಒಳಿತು. ಹಾಗೆ ಬೇಕಾದರೆ ಆಕೆಯ ಮಾಮೂಲು ಉಡುಗೆಯನ್ನು ಬದಲಾಯಿಸಿ ರೇಷ್ಮೆಸೀರೆ ಉಡಿಸಿ ತಲೆಗೂದಲನ್ನು ಒಪ್ಪವಾಗಿ ಬಾಚಿ ಒಂದೆರಡು ಆಭರಣಾದಿಗಳನ್ನು ತೊಡಿಸಿದರೆ ಆಕೆಗೆ ರಾಜಕುಮಾರಿ ಗಾಯತ್ರೀದೇವಿಯವರಿಗೆ ದೊರಕುವಷ್ಟೆ ಗೌರವ ಆರಾಮವಾಗಿ ದೊರಕಿಬಿಡುತ್ತಿತ್ತು. ಆಂಥಾ ಗತ್ತು ಆಕೆಯ ಮುಖದ ಮೇಲೆ ಲಾಸ್ಯವಾಡುತ್ತಿತ್ತು. ನನ್ನ ಮುಖದ ಮೇಲಿನ ಸ್ವಾಗತದ ನಗುವನ್ನೂ ಆಕೆ ಅಸಹ್ಯವೆಂಬಂತೆ ನೋಡಿ ಮನೆಯೊಳಗೆ ಠೀವಿಯಿಂದ ಕಾಲಿಡುತ್ತಿದ್ದಳು ಮತ್ತು ನಮ್ಮ ಅಡುಗೆ ಒಲೆಗೂ ರುಬ್ಬುಗಲ್ಲಿಗೂ ನಡುವೆ ಇರಿಸಲಾಗಿರುತ್ತಿದ್ದ ಕುಳ್ಳನೆಯ ಸ್ಟೂಲೊಂದರ ಮೇಲೆ ತಣ್ಣಗೆ ಆಸೀನಳಾಗುತ್ತಿದ್ದಳು.

ಆಮೇಲೆ ಆಕೆಯ ಸೊಂಟಕ್ಕೆ ಸಿಗಿಸಲಾಗಿದ್ದ ಅಡಿಕೆಪುಡಿಯ ಪಾಕೆಟು, ಸುಮಾರು ಮಲೆನಾಡಿನ ಹೆಂಗಸರು ಇಟ್ಟುಕೊಳ್ಳುವಂಥದು – ಈಚೆ ಬರುತ್ತಿತ್ತು. ಆಕೆ ಮೆಲ್ಲಗೆ ಸುಮಾರು ಹಳೆಯದಾಗಿ ಒಣಗಿಹೋಗಿದ್ದ ವೀಳೆಯದೆಲೆಯನ್ನೂ, ನಾಲಕ್ಕಯಿದು ಅಡಿಕೆಯ ತುಂಡುಗಳನ್ನೂ, ಸುಣ್ಣದ ಹೊಳೆಯುವ ಡಬ್ಬಿಯೊಂದನ್ನೂ ತನ್ನ ತೊಡೆಯ ಮೇಲೆ ಇಡುತ್ತಿದ್ದಳು. ಎಲೆಯ ತೊಟ್ಟು ಮುರಿವ ಶಾಸ್ತ್ರವಾದ ಮೇಲೆ ತನ್ನ ಬಲಗೈಯ ನಡುಬೆರಳಿಂದ ಸುಣ್ಣವನ್ನು ಎಲೆಗೆ ಬಳಿದು ಅಡಿಕೆಯ ತುಂಡುಗಳನ್ನು ಎಲೆಗೆ ಸುರಿದು ಹುಷಾರಾಗಿ ಕಟ್ಟಿ ಅದನ್ನು ತನ್ನ ಬಾಯಿಯ ಒಂದು ಮೂಲೆಗೆ ಭದ್ರವಾಗಿ ಸೇರಿಸುವ ಕ್ರಿಯೆ ನಡೆಯುವುದು. ಆ ಇಡೀ ಪ್ರಕ್ರಿಯೆ ನನ್ನಲ್ಲಿ ಒಂದು ಬಗೆಯ ಕಚಗುಳಿ ಹುಟ್ಟಿಸಿ ನನ್ನ ಬಾಯಲ್ಲಿಯೂ ಎಲಡಿಕೆ ತಿನ್ನಲೇಬೇಕೆಂಬ ತುರಿಕೆಯನ್ನು ಹುಟ್ಟಿಸುತ್ತಿತ್ತು. ಆಕೆಗೂ ಇದು ತಿಳಿದಿತ್ತು ಎಂದು ನನಗೆ ಗುಮಾನಿ. ಆಕೆ ನನ್ನನ್ನು ಹದ್ದಿನಂಥ ಕಣ್ಣುಗಳಿಂದ ನೋಡುತ್ತ ಇರುತ್ತಿದ್ದಿದ್ದು ಇದಕ್ಕೆ ಕಾರಣ. ನಾನು ಅಪ್ಪಿತಪ್ಪಿ ತಲೆಕೆಟ್ಟು ಆಕೆಯಿಂದ ಒಂದು ತುಂಡು ಅಡಿಕೆ ಕೇಳಿದ್ದಿದ್ದರೆ ನನಗೆ ಒದಗಬಹುದಾದ ಪರಿಸ್ಥಿತಿಯ ಬಗ್ಗೆ ನನಗೆ ಒಳ್ಳೆಯ ಅಂದಾಜು ಇದ್ದುದರಿಂದ ನಾನು ನನ್ನ ಆಸೆಯನ್ನು ಬಲವಾಗಿ ದವಡೆಗಳೆಡೆಯಲ್ಲಿ ಅದುಮಿ ಹಿಡಿದು ಆಕೆಗೆ ಕಾಫಿ ನೀಡಲು ಹೊರಡುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಆಕೆ ನನ್ನ ತಾಯಿಯವರಿಗೆ ಪ್ರತೀ ಸಾರಿಯಂತೆ ಆಕೆ ಬಂದಾಗಲೆ ಬರುವ ತಲೆನೋವು ಹೊಟ್ಟೆಬೇನೆ ಏನಾದರು ಬಂದಿದೆಯೆ ಎಂದು ವಿಚಾರಿಸುವಳು. ನಾನು ಹೌದೆನ್ನುತ್ತ ಆಕೆಯ ಕೈಗೆ ಕಾಫಿಯ ದೊಡ್ಡ ಲೋಟವನ್ನು ಥಮಾಯಿಸಿ ಸುಮ್ಮನಾಗುವೆ. ಆಕೆ ಎಲ್ಲ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ಅಲೌಕಿಕ ಆನಂದದಿಂದ ಕಾಫಿ ಕುಡಿಯತೊಡಗುವಳು.

ಆಮೇಲೆ ಆಕೆಯ ಬಾಯಿ ತೆರೆಯುತ್ತಿತ್ತು. ಕೇವಲ ನಲವತ್ತೈದು ನಿಮಿಷಗಳ ಕಾಲ ಆಕೆಯ ಕೆಲಸಕ್ಕೆ ಬಾರದ ಗಂಡುಮಕ್ಕಳು, ಪಿತೂರಿ ಮಾಡುವ ಸೊಸೆಯಂದಿರು, ತನಗೆ ಬರಬೇಕಾದ ಆಸ್ತಿಪಾಲನ್ನು ಇಪ್ಪತ್ತೈದು ವರ್ಷಗಳಿಂದಲೂ ಕೊಡದಿರುವ ನಾದಿನಿ ಮೈದುನಂದಿರು, ತನ್ನ ಬಗ್ಗೆ ಹಿಂದಿನಿಂದ ಹೀಯಾಳಿಸುವ ಜನರು ತನಗೆ ಒಳ್ಳೆಯದು ಮಾಡದ ಜನರು ಯಾವರೀತಿ ನರಕದ ಬೆಂಕಿಯಲ್ಲಿ ಬೇಯುವರು ಎಂದು ಆಕೆ ಸಚಿತ್ರವಾಗಿ ವರ್ಣಿಸುತ್ತಿದ್ದಳು. ಕೇವಲ ಒಂದು ಬಡಪಾಯಿ ಕಾಲೇಜುಹುಡುಗಿಯಾಗಿದ್ದ ನಾನು ಭೀತಿಯನ್ನು ಪ್ರಕಟಿಸುತ್ತ ಗಡಗಡ ನಡುಗುತ್ತ ಕೂತಿರುತ್ತಿದ್ದೆ. ಆಮೇಲೆ ಆಕೆ ನಾನು ಕಾಲೇಜಿಗೆ ಹೋಗಿ ದೊಡ್ಡ ತಪ್ಪು ಮಾಡುತ್ತಿರುವೆನೆಂದೂ, ನನ್ನ ತಂದೆತಾಯಂದಿರಿಗೆ ತಲೆಕೆಟ್ಟಿದೆಯೆಂದೂ, ನನಗೆ ಮದುವೆಯಾಗಿದ್ದರೆ ಈಗಾಗಲೆ ಸುಮಾರು ಮಕ್ಕಳನ್ನು ಹಡೆದು ಫಾರಿನ್ನಿನಲ್ಲಿ ನನ್ನ ಗಂಡನೊಡನೆ ಹಾಯಾಗಿದ್ದಿರಬಹುದಿತ್ತೆಂದೂ ಹೇಳಿ ಏನಿದ್ದರು ಏನೆ ಓದಿದರು ನೀನು ನಾಳೆ ಒಲೆಯ ಬೂದಿ ಕೆದಕುವುದು ತಪ್ಪುತ್ತದೆಯೆ? ಯಾರಿಗಾದರು ತಪ್ಪಿದೆಯೆ? ಎಂದು ಹೇಳಿ ನನ್ನ ಮುಖವನ್ನೆ ದುರದುರನೆ ನೋಡುತ್ತಿದ್ದಳು. ನಾನು ಹೆಚ್ಚಿಗೆ ತಡೆದುಕೊಳ್ಳಲಾಗದೆ ಆಕೆಗೆಂದೆ ತೆಗೆದಿಡಿಟ್ಟಿದ್ದ ಕಾಟನ್ ಸೀರೆ ಹಾಗು ನೂರು ರೂಪಾಯಿಗಳನ್ನು ಹೆಚ್ಚೂಕಡಿಮೆ ಅವಳ ಕೈಯಿಗೆ ತುರುಕುತ್ತಿದ್ದೆ. ಆಕೆ ಆದನ್ನು ತೆಗೆದುಕೊಳ್ಳುವುದು ನಮಗೆ ಮಾಡುವ ಮಹದುಪಕಾರ ಎಂಬಂತೆ ನನ್ನೆಡೆಗೆ ನೋಡುತ್ತಿದ್ದಳು. ಏನಿದ್ದರು ನಿನ್ನ ಅಮ್ಮ ತಪ್ಪಿಸಿಕೊಂಡುಬಿಟ್ಟಳು ನೋಡು ಈ ಸಾರಿ. ಭಾರಿ ಹುಶಾರಿ ಅವಳು ಎಂದು ಸಟ್ಟನೆದ್ದು ಹೊರಗೆ ಹೋಗಿಬಿಡುತ್ತಿದ್ದಳು. ನಾನು ಒಳಗೆ ಹೋಗಿ ಅಮ್ಮನಿಗೆ ಸಿಗ್ನಲ್ಲು ಕೊಡುವೆ. ಇಬ್ಬರೂ ಬಿದ್ದೂ ಬಿದ್ದೂ ನಗುವುದು. ಪ್ರತಿ ವರುಷವೂ ಹೀಗೇ. ತಪ್ಪದೆ ನಡೆಯುವುದು.

ಆಗಾಗ ನಾನು ತಪ್ಪಿಸದೆ ಹೋಗಲೆಬೇಕಾಗುವ ಕೆಲವು ಮದುವೆಗಳಲ್ಲಿ ಈಕೆಯ ನೆರಳು ಕಂಡುಬರುತ್ತಿದ್ದುದುಂಟು. ಅಲ್ಲೆಲ್ಲ ಈಕೆ ಒಬ್ಬಳೆ ಯಾರನ್ನೂ ಅಂಟಿಸಿಕೊಳ್ಳದಂತೆ ತಿರುಗಾಡುತ್ತಿದ್ದಳು. ಆಕೆಯ ತಲೆ ಕೊಂಚ ಒಪ್ಪವಾಗಿ ಮೈಮೇಲೆ ಸುಮಾರುಮಟ್ಟಿಗಿನ ಸೀರೆ ರವಿಕೆಗಳು ಕಂಡುಬರುತ್ತಿದ್ದವು. ಆಕೆಯನ್ನು ಯಾರೂ ಏನು ಕೆಲಸಕ್ಕೂ ಕರೆಯರು. ಆಕೆ ಯಾರಿಗೂ ಬೇಡವಾದಾಕೆ. ಆದರೆ ಈ ಇಮೇಜನ್ನು ಆಕೆಯೆ ಕಟ್ಟಿಟ್ಟುಕೊಂಡಿದ್ದೆಂದು ನನಗೆ ಬಲವಾದ ನಂಬಿಕೆಯಿತ್ತು. ಸಾವಿನ ಮನೆಗಳಿಗೆ ಮಾತ್ರ ಆಕೆ ತಪ್ಪದೆ ಹಾಜರಾಗಿ ಎರಡು ನಿಮಿಷ ಸುಮ್ಮನೆ ಕುಳಿತು ಎದ್ದುಹೋಗುವಳು. ಆಕೆ ಹೋದಮೇಲೆ ಎಷ್ಟೊ ಹೊತ್ತಿನವರೆಗು ಆಕೆಯ ಕಮಟುವಾಸನೆ ಹೋಗಲೊಲ್ಲದೆ ಅಲ್ಲಿಯೆ ಸುಳಿದಾಡುತ್ತಿರುವುದು. ಆಕೆ ನಮ್ಮೆಲ್ಲರನ್ನೂ ಬೇಕಂತೆ ಮೂರ್ಖರನ್ನಾಗಿ ಮಾಡಿ ಸೀಕ್ರೆಟಾಗಿ ನಗುತ್ತಿರುವಳೆಂದೇ ನನಗೆ ಸದಾ ಅನ್ನಿಸುವುದು.

ಚಿತ್ರಕೃಪೆ: http://www.mattwrigley.com