“ಸದ್ದಿನ ವಿಶ್ವವೊಂದು ಹೋಳಾಗುತಿರುವಾಗ..”

“ಸದ್ದಿನ ವಿಶ್ವವೊಂದು ಒಳಗೇ

ಸದ್ದಿಲ್ಲದೆ ಹೋಳಾಗುತಿರುವಾಗ

ಒಳ ಅಂಚಿನಲ್ಲಿ ತುದಿಗಾಲಿನಲಿ ನಿಂತು

ಇನಿತೂ ಹೊರಜಾರದಂತೆ ಅದರ

ನಿರಾಕಾರ ಚೂರುಗಳ ಹಿಡಿದಿಟ್ಟುಕೊಳ್ಳುವುದು”

                                                                                          – ’ವಾಕ್ ಮನ್’, ಜಯಂತ ಕಾಯ್ಕಿಣಿ                     

1

ಈಗ ಈ ಕವಿತೆಯ ಸಾಲುಗಳು ವಾಕ್ಮನ್ನಿಗೆ ಬದಲಾಗಿ ನಮ್ಮ ಲೇಟೆಸ್ಟ್ ’ಸಂಗೀತ ಸಾಧನ’ಗಳಾಗಿರುವ ಐಪಾಡ್ ಮತ್ತು ಮೊಬೈಲುಗಳಿಗೆ ಹೆಚ್ಚು ಅನ್ವಯಿಸಬಹುದು ಅಂದುಕೊಳ್ಳುತ್ತೇನೆ. ನನ್ನ ಪಾಲಿಗೆ ಮಾತ್ರ ಈ ಮೇಲಿನ ಸಾಲುಗಳು ಬಲು ಅಚ್ಚುಮೆಚ್ಚಿನವು. ತುಮಕೂರು-ಬೆಂಗಳೂರುಗಳ ನಡುವೆ ಕಳೆದ ಐದು ವರ್ಷಗಳಿಂದ ಓಡಾಡುತ್ತಿದ್ದ ನನಗೆ ನನ್ನ ಮೊಬೈಲ್ ಮತ್ತು ಹೆಡ್ ಫೋನುಗಳೇ ಸಂಗಾತಿಗಳಾಗಿದ್ದಿದ್ದು. ನನ್ನ ಮೆಚ್ಚಿನ ಸಂಗೀತ ಕೇಳುತ್ತ ಕಿಟಕಿಸೀಟಿನ ವಿಶೇಷ ಆನಂದವನ್ನು ಅನುಭವಿಸುತ್ತ ಮೌನವಾಗಿ ಪಯಣಿಸುವುದೇ ಒಂದು ರೀತಿಯ ಲಕ್ಷುರಿ. ಮನೆಯಿಂದಲೇ ಫ್ರೀಲ್ಯಾನ್ಸ್ ಕೆಲಸ ಮಾಡಿಕೊಂಡು ವಿರುದ್ಧ ಧ್ರುವಗಳೆಂಬಂತೆ ಭಾಸವಾಗುತ್ತಿದ್ದ ಬೆಂಗಳೂರು ಮತ್ತು ತುಮಕೂರ ಮನೆಗಳ ನಡುವೆ ಎಲ್ಲಿಯೂ ಸಂತುಲನ ತಪ್ಪದಂತೆ ತಕ್ಕಡಿ ತೂಗಿಸುವ ವೇಳೆಗೆ ಹೈರಾಣಾಗಿಬಿಡುತ್ತಿದ್ದೆ. ಇಂಥದರಲ್ಲಿ ಎರಡೂ ಧ್ರುವಗಳ ನಡುವಿನ ಸಂಚಾರ ಮತ್ತು ಆ ಹೊತ್ತಿಗಿನ ಸಂಗೀತವೇ ನನ್ನನ್ನು ಎಲ್ಲೋ ಸ್ಥಿಮಿತದಲ್ಲಿಟ್ಟಿತೆನ್ನಬಹುದು.

ಪ್ರಯಾಣದ ಸಮಯದಲ್ಲಿ ಯಾರೊಂದಿಗೂ ಮಾತನಾಡದಿರುವುದು ಬಹಳ ಹಳೆಯ ಅಭ್ಯಾಸ. ಇದಕ್ಕೆ ಎಲ್ಲೋ ಒಂದುಕಡೆ ನನ್ನ ಬಸ್ಸುಗಳ ಬಗೆಗಿನ ಅಲರ್ಜಿಯೇ ಕಾರಣ. ”ಪ್ರಯಾಣವನ್ನು ಬಲು ಇಷ್ಟ ಪಡುವ ಆದರೆ ಪ್ರಮುಖ ಸಂಚಾರಸಾಧನಗಳಾದ ಟ್ರೇನುಬಸ್ಸುಕಾರುಜೀಪು ಇತ್ಯಾದಿಗಳಲ್ಲಿ ಪ್ರಯಾಣಿಸುವುದನ್ನು ದ್ವೇಷಿಸುವ ಜೀವಿ’ ಎಂಬಂತಹ ವ್ಯಾಖ್ಯಾನವೇನಾದರೂ ಇದ್ದಲ್ಲಿ ಅದಕ್ಕೆ ಸುನಿಶ್ಚಿತವಾಗಿ ನನ್ನನ್ನು ಮಾತ್ರ ಉದಾಹರಣೆಯಾಗಿ ನೀಡಲಾಗುವುದೆಂದು ನಾನು ಹೇಳಬಲ್ಲೆ. ಚಿಕ್ಕವಳಿದ್ದಾಗ ಊರಿಂದ ಹೆಚ್ಚೂಕಡಿಮೆ ಎಂಟು ಕಿಲೋಮೀಟರು ದೂರವಿದ್ದ ಕಾಫೀ ರಿಸರ್ಚ್ ಸ್ಟೇಶನ್ನಿಗೆ ಹೋಗುವಷ್ಟರಲ್ಲಿ ಹೊಟ್ಟೆಯಲ್ಲಿದ್ದುನೆಲ್ಲ ಬಂದ ದಾರಿಯಿಂದಲೇ ಆಚೆ ಕಳಿಸಿ ಸುಸ್ತಾಗಿಬಿಡುತ್ತಿದ್ದೆ. ಡೀಸೆಲ್ ವಾಸನೆ ಬಂದರೇನೇ ಸಾವು ಹತ್ತಿರ ಬಂದಂತೆನಿಸಿ ಹೊಟ್ಟೆಯಲ್ಲಿ ಚಳಿ ಏಳುತ್ತಿತ್ತು. ನನ್ನ ಈ ಬೇನೆಯಿಂದ ಮಾತಾಶ್ರೀ ಪಿತಾಶ್ರೀಗಳು ಅನುಭವಿಸಿದ ವೇದನೆಗಳನ್ನು ಹೇಳಹೊರಟರೆ ಅದು ಇನ್ನೊಂದು ಪುರಾಣವೇ ಆದೀತು.

ಪಾಯಿಂಟಿಗೆ ಬರುತ್ತೇನೆ. ನನ್ನ ಥರದ ಟ್ರಾವೆಲ್ ಸಿಕ್ನೆಸ್ ಇರುವವರಿಗೆ ಹಲವಾರು ಪೇಚಾಟಗಳಿರುವವು. ನಮ್ಮಗಳಿಗೆ ಪ್ರಯಾಣದ ಸಮಯದಲ್ಲಿ ಓದಲಾಗುವುದಿಲ್ಲ. ಹೀಗಾಗಿ ಇತರರು ಬಣ್ಣಬಣ್ಣದ ಮ್ಯಾಗಜೀನುಗಳನ್ನು, ಬಿಸಿಬಿಸಿ ಸುದ್ದಿ ತುಂಬಿಕೊಂಡ ದಿನಪತ್ರಿಕೆಗಳನ್ನು ಓದುವುದ ನೋಡಿಯೂ ನೋಡದಂತೆ ಹೊಟ್ಟೆಯುರಿಸಿಕೊಂಡು ಇರಬೇಕಾಗುವುದು. ಅಕಸ್ಮಾತ್ ಆಸೆ ತಡೆಯಲಾರದೆ ಬಸ್ಟ್ಯಾಂಡಿನಲ್ಲಿ ಪುಸ್ತಕವೊಂದರೊಳಗೆ ಇಣುಕಿದರೂ ಡ್ರೈವರು ಬಂದು ಹಾರ್ನು ಹೊಡೆದತಕ್ಷಣ ಹಾರಿಬಿದ್ದು ಪುಸ್ತಕಮುಚ್ಚಿಬಿಡಬೇಕು. ಇನ್ನು ಬರೆಯುವುದಂತೂ ದೂರದ ಮಾತಾಯಿತು. ಎರಡಕ್ಷರ ಬರೆವಷ್ಟರಲ್ಲಿ ತಲೆಗೂ, ತಿರುಗುವ ಬಸ್ಸಿನ ಚಕ್ರಕ್ಕೂ ವ್ಯತ್ಯಾಸವೇ ಇರುವುದಿಲ್ಲ! ಪ್ರಯಾಣಿಸಿಕೊಂಡು ಬರೆಯಬಲ್ಲವರು ’ಸೂಪರ್ ಪವರ್’ ಹೊಂದಿರುವಂಥವರು ಎಂದು ನಾನು ದೃಢನಂಬಿಕೆ ಹೊಂದಿದ್ದೇನೆ. ಲೇಖಕ ವಸುಧೇಂದ್ರ ತಮ್ಮ ಪುಸ್ತಕವೊಂದನ್ನು ಬೆಂಗಳೂರ ಟ್ರ್ಯಾಫಿಕ್ಕಿಗೆ ಅರ್ಪಿಸಿರುವುದು ಬಹಳಷ್ಟು ಜನರಿಗೆ ತಿಳಿದಿರುವ ಸಂಗತಿಯೇ. ಕಿಟಕಿಗಳೆಲ್ಲವನ್ನೂ ಮುಚ್ಚಿಕೊಂಡು ಏ.ಸಿ. ಗಾಳಿಯನ್ನುಸಿರಾಡಿಕೊಂಡು ಇರುವಾಗ ಕಾರಿನೊಳಗೆ ವಸುಧೇಂದ್ರರ ಬದಲು ನಾನೇನಾದರೂ ಇದ್ದಿದ್ದರೆ ಡ್ರೈವರ್ ನನ್ನ ಸ್ಥಿತಿಯನ್ನು ಕಂಡು ಭಯಭೀತನಾಗಿ ಟ್ರ್ಯಾಫಿಕ್ ನಡುವೆಯೇ ನನ್ನನ್ನು ಬಿಟ್ಟು ಪರಾರಿಯಾಗುತ್ತಿದ್ದನೆನ್ನುವುದರಲ್ಲಿ ಸಂಶಯವಿಲ್ಲ.

ವಸುಧೇಂದ್ರರ ರೆಫರೆನ್ಸು ನನ್ನನ್ನು ಎರಡನೇ ಪಾಯಿಂಟಿಗೆ ಕೊಂಡೊಯ್ಯುತ್ತದೆ. ನಮ್ಮ ಥರದವರಿಗೆ ಪ್ರಯಾಣಿಸುವಾಗ ಮುಖದ ಮೇಲೆ ತಾಜಾ ಗಾಳಿ ಆಡುತ್ತ ಇರಬೇಕು. ಬಸ್ಸುಗಳಲ್ಲಿ ಕಿಟಕಿಸೀಟಿಗಾಗಿ ಎಷ್ಟೆಲ್ಲ ನಾಟಕ ಆಡಬೇಕಾಗುತ್ತದೆ. ಎಲ್ಲರೂ ಬಸ್ಸಿನಲ್ಲಿ ಸೀಟು ಸಿಕ್ಕರೆ ಸಾಕು ಎಂದು ಹತ್ತುತ್ತಿದ್ದರೆ ನಾನು ಬಸ್ಸಿನಲ್ಲಿ ಕಿಟಕಿಸೀಟು ಇದ್ದಲ್ಲಿ ಮಾತ್ರ ಹತ್ತುತ್ತೇನೆ. ಇದಕ್ಕಾಗಿ ನಾನು ಗಂಟೆಗಟ್ಟಲೆ ಕಾಯಲೂ ಸಿದ್ಧ. ಕಾರಿನೊಳಗೆ ಕೂತು ಇಗ್ನಿಷನ್ ಕೀ ತಿರುಗಿಸುವ ಮೊದಲೇ ನಾನು ಕಿಟಕಿ ತೆರೆಯಲು ವಿಲವಿಲ ಒದ್ದಾಡುವುದು ನನ್ನ ಮನೆಯವರಿಗೆ ಮಾಮೂಲಿ ವಿಷಯ. ’ಒಂದೇ ನಿಮಿಷ ಸುಮ್ಮನಿರು ಮಾರಾಯಿತಿ!’ ಎಂದು ವಿನಂತಿಸಿದರೂ ಕೇಳುವದಿಲ್ಲ. ಕಳೆದ ರಜೆಯಲ್ಲಿ ಜಾಮನಗರದಿಂದ ಅಹಮದಾಬಾದಿಗೆ ಆರು ಗಂಟೆಗಳ ಕಾಲ ವೋಲ್ವೋ ಬಸ್ಸಿನಲ್ಲಿ ಕಳೆಯಬೇಕಾಗಿ ಬಂದಾಗ ಡ್ರೈವರನು ನನಗಾಗಿ ಒಂದೈದು ಎಕ್ಸ್ ಟ್ರಾ ಸ್ಟಾಪುಗಳನ್ನು ನೀಡಬೇಕಾಗಿ ಬಂದು ಮನೆಯ ಸದಸ್ಯರೆಲ್ಲ ನಾಚಿಕೆಪಡುವಂತೆ ಆದರೂ ಬಾಕಿಯವರೆಲ್ಲ ’ಪರವಾಗಿಲ್ಲ ಬಿಡಿ, ಬಸ್ಸಿನೊಳಗೇ ಅವರು ಕಕ್ಕಿ ನಾವೆಲ್ಲ ಒದ್ದಾಡುವುದಕ್ಕಿಂತ ಆಚೆಯೇ ಬೆಟರು. ನಮಗೂ ಫ್ರೆಶ್ ಗಾಳಿ ಸಿಗುತ್ತೆ’ ಎಂದು ಮನೆಯವರನ್ನು ಸಮಾಧಾನಿಸಿದರು.

ಟ್ರೇನ್ ಪ್ರಯಾಣ ಎಂದರೆ ಅತ್ಯಂತ ಆರಾಮದಾಯಕ ಪ್ರಯಾಣ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಎಂತಹ ಟ್ರ್ಯಾವೆಲ್ ಸಿಕ್ನೆಸ್ ಇರುವವರೂ ಟ್ರೇನುಗಳಲ್ಲಿ ಬೇಕಾದ್ದು ತಿಂದುಂಡುಕೊಂಡು ನಿಶ್ಚಿಂತರಾಗಿರುತ್ತಾರೆ. ಆದರೆ ನಾನು ಆ ರೆಕಾರ್ಡನ್ನೂ ಮುರಿದಿದ್ದೇನೆ ಎಂದು ಹೇಳಿಕೊಳ್ಳಬಯಸುತ್ತೇನೆ. ಟ್ರೇನುಗಳು ಯಾವ ದಿಕ್ಕಿನೆಡೆಗೆ ಧಾವಿಸುತ್ತವೋ ನನಗೆ ಅದೇ ದಿಕ್ಕಿಗೇ ಮುಖ ಮಾಡಿ ಕುಳಿತುಕೊಳ್ಳಬೇಕು. ವಿರುದ್ಧದಿಕ್ಕಿನ ಸೀಟಿನಲ್ಲಿ ಕುಳಿತೆನೋ, ಮುಗಿಯಿತು. ಹೊಟ್ಟೆಯೊಳಗಿರುವ, ಇಲ್ಲದಿರುವ ಪದಾರ್ಥಗಳೆಲ್ಲ ಡರ್ಬಿರೇಸಿನ ಕುದುರೆಗಳ ಹಾಗೆ ಸುತ್ತ ರೇಸುಹಾಕತೊಡಗುತ್ತವೆ. ಹುಬ್ಬಳ್ಳಿಯಿಂದ ವಾಪಾಸು ಬರುತ್ತಿರುವಾಗ ಒಮ್ಮೆ ಇಂಥದ್ದೊಂದು ಸೀಟಿನಲ್ಲಿಯೇ ವಿಧಿಯಿಲ್ಲದೆ ಕುಕ್ಕರಿಸಬೇಕಾಗಿ ಬಂದಿತು. ಕೆಲವೇ ಕ್ಷಣಗಳಲ್ಲಿ ನನ್ನ ಚಹರೆ ವಿಧವಿಧವಾಗಿ ಬದಲಾಗತೊಡಗಿದ್ದನ್ನು ಮಗಳು ಗಮನಿಸಿದಳು. ನನ್ನ ಮಾವನವರು ತನ್ನ ಎಲಡಿಕೆ ಸಂಚಿಯಿಂದ ನಾಲಕ್ಕು ಅಡಿಕೆತುಂಡುಗಳನ್ನು ಕೈಗೆ ಹಾಕಿ “ಅಗಿಯಮ್ಮ, ದವಡೆ ಕಚ್ಚಿ ಹಿಡಿದುಕೊ. ಸ್ವಲ್ಪ ಆರಾಮಾಗಬಹುದು.” ಅಂದರು. ಹಾಗೇ ಮಾಡಿದೆ. ಒಂದು ನಿಮಿಷ ತಲೆ ’ಗಿಮ್’ ಅಂದರೂ ಆಮೇಲೆ ನಿಜವಾಗಿಯೂ ಆರಾಮವೆನಿಸಿತು!! ಅಷ್ಟಕ್ಕೆ ಸುಮ್ಮನಿದ್ದರಾಗುತ್ತಿತ್ತು. “ಇನ್ನೊಂದ್ಸಲ್ಪ ಕೊಡ್ರಪ್ಪಾಜಿ!!” ಎಂದು ಗಲಾಟೆ ಮಾಡಿ ಇಸಿದುಕೊಂಡೆ. ಪಾವಗಡದ ಬಣ್ಣ ಏರಿಸಿದ ಗೋಟಡಿಕೆ ತುಂಡುಗಳು. ಕೊಂಚಕಾಲದಲ್ಲಿಯೇ ಮುಖವೆಲ್ಲ ಬಿಸಿಯಾಗತೊಡಗಿ ಬೆವೆತುಕೊಳ್ಳಲು ಶುರುಹಚ್ಚಿತು. ಕಿವಿಗಳು ಉಗಿಬಂಡಿಯ ಹೊಗೆಕೊಳವೆಗಳಾಗಿ ಪರಿವರ್ತನೆ ಹೊಂದಿದವು. ಕೈಕಾಲಲ್ಲಿ ಸಂಚರಿಸುವ ರಕ್ತವೆಲ್ಲ ಗುರುತ್ವವನ್ನೇ ಮರೆತು ಮುಖಕ್ಕೆ ನುಗ್ಗಿದಂತೆ ಭಾಸವಾಯಿತು. ನನ್ನವರು ಗಾಬರಿಯಾಗಿ ನನ್ನನೆಳೆದುಕೊಂಡು ಹೋಗಿ ಕೈಗೊಂದು ಪ್ಲಾಸ್ಟಿಕ್ ಕವರು ಕೊಟ್ಟು ಟಾಯ್ಲೆಟಿಗೆ ದಬ್ಬಿ ಬಾಗಿಲೆಳೆದುಕೊಂಡರು. ವಾಪಾಸು ಬರುವ ವೇಳೆಗೆ ನನಗೆ ಬೇಕಾದ ರೀತಿಯ ಆಸನ ಸಿದ್ಧವಾಗಿತ್ತು.

ಕವಿ ಕಾಯ್ಕಿಣಿಯವರು ತಮ್ಮ ’ವಾಕ್ ಮನ್’ ಕವಿತೆಯಲ್ಲಿ ಕಿವಿಗೆ ಹೆಡ್ ಫೋನ್ ಧರಿಸಿ ಸಂಗೀತ ಕೇಳುವವನನ್ನು ಕುರಿತು ತನ್ನ ಸ್ವರ ಸ್ವರ್ಗದ ಸೀಮೆಗಳನ್ನು/ಪರರಿಗೆ ಸೋಕದ ಹಾಗೆ/ತನ್ನೊಳಗೇ ಲೂಟಿ ಮಾಡಿಕೊಳ್ಳುತ್ತಿರುವ ಈತ/ಎಷ್ಟು ಸ್ವಾರ್ಥಿ/ಎಷ್ಟು ನಿರ್ಲಜ್ಜ” ಎನ್ನುತ್ತಾರೆ. ಅಷ್ಟೇ ಅಲ್ಲ, ಆತನನ್ನು ’ಮುಖಹೀನ ವಿಗ್ರಹದಂತೆ’ ಎಂದು ಬಣ್ಣಿಸುತ್ತಾರೆ. ಬಹುಶಃ ಅವರು ಈ ಕವಿತೆ ಬರೆಯುವ ಮುನ್ನ ನನ್ನನ್ನು ಭೇಟಿಯಾಗಿದ್ದಿದ್ದರೆ ಅದನ್ನು ಬೇರೆಯ ಥರವೇ ಬರೆಯುತ್ತಿದ್ದರು ಎಂದು ನನಗೆ ಖಾತ್ರಿಯಿದೆ. ಬೆಂಗಳೂರಿನಿಂದ ತುಮಕೂರಿಗೆ ನಿಯಮಿತವಾಗಿ ಓಡಾಡಬೇಕಾಗಿ ಬಂದಾಗ ನನ್ನ ತೊಂದರೆಯನ್ನು ಶೇಕಡಾ ತೊಂಭತ್ತರಷ್ಟಾದರೂ ನೀಗಿಸಿದ್ದು ನನ್ನ ’ಮೊಬೈಲ್’ ಸಂಗೀತವೇ. ಎಷ್ಟೆಷ್ಟೋ ಬೇನೆಗಳಿಗೆ ಸಂಗೀತ ಆರಾಮ ಕೊಡುತ್ತದೆ ಎಂದು ಓದಿದ್ದೇನೆ. ನನ್ನ ತೊಂದರೆಯಿದ್ದವರಿಗೆ ಸಂಗೀತ ಸಹಾಯಕವಾದದ್ದರ ಬಗ್ಗೆ ಯಾರಿಗಾದರೂ ಸಂಶೋಧನೆ ಮಾಡುವ ಆಸಕ್ತಿಯಿದ್ದಲ್ಲಿ ಅವರಿಗೆ ನಾನು ಸವಿವರ(!?!) ಮಾಹಿತಿ ನೀಡಬಲ್ಲೆ. ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಾರೆಂದು ನನಗೇನೂ ಬೇಸರವಿಲ್ಲ. ಇದೇ ಖಾಯಿಲೆ ನನ್ನ ಅಮ್ಮನಿಗೂ ನನ್ನ ಅಜ್ಜಿಗೂ ಇರುವುದು ಎಂಬಂಥ ಸೀಕ್ರೆಟನ್ನು ಇತ್ತೀಚೆಗೆ ತಿಳಿದನಂತರ ನನ್ನಲ್ಲಿ ಅಪಾರ ಆತ್ಮವಿಶ್ವಾಸ ಮೂಡಿದೆ. ವಂಶಪರಂಪರೆಯನ್ನು ಮುಂದುವರೆಸುವುದೇನೂ ಸಾಮಾನ್ಯವಾದ ಜವಾಬ್ದಾರಿಯಲ್ಲ ನೋಡಿ.

ಒಂದು ಕವಿತೆ – ಆರು ಜೊತೆ ಕಣ್ಣು.

ನಾನು ಆಕ್ಟೇವಿಯೋ ಪಾಜನ ಈ ಕವಿತೆಯ ಅನುವಾದಕ್ಕೆ ನಿಮ್ಮ  ವಿಶ್ಲೇಷಣೆ ಕೇಳಿಯಾಗಿ ಸುಮಾರು ಒಂದು ತಿಂಗಳೇ ಕಳೆದುಹೋಯಿತು, ಹೆಚ್ಚಲ್ಲದಿದ್ದರು ಐದಾರು ಜನ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ. ಸರಳವಾದ ಅವರ ಮಾತುಗಳಿಂದ ಕವಿತೆಯ ಬಗ್ಗೆ ಕೆಲವಾರು ಹೊಸ ವಿಷಯಗಳು ನನಗು ತಿಳಿದವು. ಕವಿತೆ ಅರ್ಥವಾಗುವದಿಲ್ಲ ಅನ್ನುವದಕಿಂತ  ಓದಿ ಪ್ರಯತ್ನಿಸುವುದು ಮುಖ್ಯ ಅನ್ನಿಸ್ತದೆ ನನಗೆ. ಈ ಪ್ರಯತ್ನ ಮಾಡಿದ ಸ್ನೇಹಿತರಾದ ಶಿವು, ನಿರಂಜನ ಕಗ್ಗೆರೆ,  ವಸುಂಧರಾ, ಚಂದಿನ, ದಿಲೀಪ ಇವರಿಗೆ ಧನ್ಯವಾದ. ಮತ್ತೆ ವಸುಂಧರಾ ಅವರಿಗೆ ನಾನು ಕವಿತೆಯನ್ನ ಕಂಡ ಬಗ್ಗೆ ತಿಳಿದುಕೊಳ್ಳಬೇಕು ಅನ್ನಿಸಿದೆ. ಅದನ್ನೂ ಎಲ್ಲರ ಮಾತುಗಳ ನಂತರ ಬರೆದಿದೇನೆ, ಹೆಚ್ಚಿಲ್ಲದಿದ್ದರೂನೂ.

ಶಿವು. ಕೆ. ಹೇಳಿದ್ದು

ಓದುತ್ತಿದ್ದಂತೆ ಒಂದು ಕಲ್ಪನಾ ಲೋಕಕ್ಕೆ ಇಳಿದಂತೆ, ಅನೇಕ ಸ್ಥಿರ ಚಿತ್ರಗಳು ಒಂದರ ನಂತರ ಕಣ್ಣ ಮುಂದೆ ಹಾದು ಹೋದಂತೆ ಅನ್ನಿಸಿತು. “ನಿದ್ರೆಯೊಳಗೆ ನೀನು ರಾತ್ರಿ ಮೀರಿ ಬೆಳೆದಿರುವೆ ” ಈ ಪದಪ್ರಯೋಗದ ಸಾಲುಗಳು ನನಗೆ ತುಂಬಾ ಇಷ್ಟವಾಯಿತು…ಅದರೆ ಇದರ ಚಿತ್ರವನ್ನು ಕಲ್ಪಿಸಿಕೊಳ್ಳಲು ಆಗಲಿಲ್ಲ..ಒಂದು ರೀತಿಯ ಭಾವನೆ ಮಾತ್ರವೇ ಮನದಲ್ಲಿ ಹರಿದಂತಾಯಿತು….

ನಿರಂಜನ ಕಗ್ಗೆರೆ ಹೇಳಿದ್ದು –

ಮಂಗಳಗಂಗೋತ್ರಿಯ ಪ್ರಶಾಂತ ಪರಿಸರದಲ್ಲಿ, ಭೋಜನೋತ್ತರ ಸಮಯದ ಪೀರಿಯಡ್ಡುಗಳಲ್ಲಿ ಒತ್ತಿಸಿಕೊಂಡು ಬರುವ ತೂಕಡಿಕೆಯ ನಡು,ನಡುವೆಯೇ ಪಾಜನ ಪದ್ಯಗಳ ಬಗೆಗಿನ ಚರ್ಚೆಯ ನೆನಪಾಗುತ್ತದೆ. ದೂರದ ಮೆಕ್ಸಿಕೋದಲ್ಲಿಯೇ ಕುಳಿತು, ಅಮೇರಿಕಾದ ಹಾಥೋರ್ನನ ಗದ್ಯ, ಯುರೋಪಿನ Yeats’ ಕಾವ್ಯ, ಭಾರತದ ವಿಶಾಖದತ್ತನ ಕಾವ್ಯ, ಪೌರಾತ್ಯ ಜಪಾನಿನ ನೋಹ್ ರಂಗಭೂಮಿ ಹೀಗೆ ಜಗತ್ತಿನ ಹತ್ತು ಹಲವು ಕಾವ್ಯಗಳ ರಸಾಯನವನ್ನ ತನ್ನ ಪದ್ಯವೊಂದರಲ್ಲೇ ಹುದುಗಿಸಿಡುತ್ತಿದ್ದ ಮಹಾನುಭಾವ ಈ ಎಡಪಂಥೀಯ. ನೆನಪಿಸಿದ್ದಕ್ಕೆ ಧನ್ಯವಾದಗಳು.

ವಸುಂಧರಾ ಹೇಳಿದ್ದು –

ಕವನಗಳ ವಿಶ್ಲೇಷಣೆಗೂ ನನಗೂ ಅಷ್ಟಕ್ಕಷ್ಟೆ, ಆದರೆ ಈ ಕವನವನ್ನು ಓದಿದಾಗ ಅದರ ಬಗ್ಗೆ ಯೋಚಿಸದೇ ಇರಲು ಸಾಧ್ಯವಾಗಲಿಲ್ಲ. ನನಗನ್ನಿಸಿದ್ದು ಹೀಗೆ:

ಈ ಕವನದಲ್ಲಿ ನನಗೆ ಕಾಣುವುದು ನಿರಾಸೆ ಹಾಗು ವಿಷಾದ. ಅವನು ನಿದ್ದೆಮಾಡುತ್ತಿರುವ ಅವಳನ್ನು ದಿಟ್ಟಿಸುತ್ತಿದ್ದಾನೆ. ಅವಳಲ್ಲಿ ಪ್ರೀತಿಯಿದ್ದರೂ ಏನೋ ಅಸಮಾಧಾನ ಅವನನ್ನು ಕಾಡುತ್ತಿದೆ. ತನಗೆ ಅವಳ ಮೇಲಿನ ಪ್ರೀತಿ ಇಂಗಿ ಹೋಗುತ್ತಿರುವಂತೆ ಅನ್ನಿಸುತ್ತಿದೆ, ಆದರೆ ಅದನ್ನೊಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ತಾವಿಬ್ಬರೂ ಮೊದಲು ಜೊತೆಯಾದಾಗ ಏನೆಲ್ಲ ಕನಸು ಕಟ್ಟಿದ್ದೆವು ಎಂದು ನೆನೆಸಿಕೊಳ್ಳುತ್ತಾನೆ. ಯಾವಾಗಲೋ ಅವರಿಬ್ಬರ ಕನಸುಗಳು ಬೇರೆಯಾಗಿ ಹೋಗಿ, ಅವರ ನಡುವೆ ಒಡಕು ಮೂಡಿದೆ. ತಿರುವುಮುರುವಾಗಿಯೇ ಹರಿಯುವ ನದಿಯ ಹಾಗೆ, ಅವನ ಮನಸ್ಸು ಅವರಿಬ್ಬರ ಹಿಂದಿನ ಒಮ್ಮತವಿಲ್ಲದ ದಿನಗಳ ಕಡೆಗೇ ಹೋಗುತ್ತಿದೆ. ಹೊರೆಯಾಗಿರುವ ನೆನಪುಗಳು ಅವರಿಬ್ಬರ ನಾಳೆಯ ಬಗ್ಗೆ ಆಶಾಭಾವನೆ ಹೊಂದಲು ಬಿಡುತ್ತಿಲ್ಲ.

ನಿದ್ದೆಯೊಳಗೆ ನೀನು ರಾತ್ರಿಯ ಮೀರಿ ಬೆಳೆದಿರುವೆ
ಆದರು ನಿನ್ನ ಕನಸು ಕೋಣೆಯ ಮೇರೆ ದಾಟದು

ಈ ಸಾಲುಗಳನ್ನು ಹೇಗೆ ಅರ್ಥೈಸಬೇಕೆಂದು ಗೊತ್ತಾಗುತ್ತಿಲ್ಲ. ಅವಳಲ್ಲಿ ಅವನಿಗೇನೋ ಅಸಮಾಧಾನವಿದೆ ಎಂದಷ್ಟೇ ಹೇಳಬಲ್ಲೆ.

ಸುಂದರವಾದ ಕವನವನ್ನು ಅನುವಾದಿಸಿ, ಅದರ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದಕ್ಕೆ ಥ್ಯಾಂಕ್ಸ್. ನಿಮಗೆ ಈ ಕವನ ಓದಿ ಏನನ್ನಿಸಿತು ಹೇಳಿ, ತಿಳಿಯಲು ಕುತೂಹಲವಾಗುತ್ತಿದೆ.

ಚಂದಿನ ಹೇಳಿದ್ದು –

ಹಲವು ಚಿತ್ರಗಳನ್ನು ಒಮ್ಮೆಗೇ ಎದುರು ನಿಲ್ಲಿಸುವ ಸಾಮರ್ಥ್ಯವೊಂದಿದೆ.
ಹತಾಶೆ, ಸಾವು, ನೋವು, ಜಿಗುಪ್ಸೆ ಹೀಗೆ ಹತ್ತು ಹಲವು
ಮುಖಗಳನ್ನು ತೆರೆದಿಡುತ್ತದೆ.
ಕಲ್ಪನಾಲೋಕದಿಂದೊಮ್ಮೆಗೇ ವಾಸ್ತವಕ್ಕೆ ಜಿಗಿಸುತ್ತದೆ,
ಒಮ್ಮೆ ಆತ್ಮಗಳ ಮುಖಾಮುಖಿಯೆನ್ನಿಸುತ್ತದೆ,
ನಶ್ವರ ಬದುಕಿನ ರೂಪಕದಂತೆ ತೋರುತ್ತದೆ,
ಅತಿಮಾನಸ, ಅತಿಮಾನುಷದಂತೆ ಭಾಸವಾಗುತ್ತದೆ.

ಒಟ್ಟಾರೆ ತೀವ್ರವಾಗಿ ಓದಿಸಿಕೊಂಡು ಬಗೆ ಬಗೆಯ
ಗೊಂದಲಗಳನ್ನು ಸೃಷ್ಟಿಸುತ್ತದೆ.

ಇಂಥಹ ಕ್ಲಿಷ್ಟಕರ ಪದ್ಯ ಮುಂದಿಟ್ಟ ನಿಮ್ಮ ಮೇಲೆ
ಕೋಪದೊಂದಿಗೆ, ಖುಷಿಯಾಗುತ್ತಿದೆ.

ದಿಲೀಪ್ ಹೇಳಿದ್ದು –

ಚಿಕ್ಕವರಿರುವಾಗಿನ ಮುಗ್ದತೆ, ಕೈಗೆಟುಕೋ ಚಿಕ್ಕ ಚಿಕ್ಕ ವಸ್ತುಗಳೇ ಕೊಡುವ ಕ್ವಿಂಟಾಲ್ ಗಟ್ಟಲೇ ಸಂತೋಷ ದೊಡ್ಡವರಾಗಿ ಎಶ್ಟು ಸಾಧನೆ ಮಾಡಿದರೂ, ಎಷ್ಟು ಸಂಪತ್ತು-ಹೆಸರು ಗಳಿಸಿದರೂ ಸಿಗದು… ಪ್ರತಿ ಗಳಿಗೆಗೂ ಹತಾಶೆ, ವಿಷಾದ, ಅತೃಪ್ತಿ ಕಾಡಿ ಕಂಗಾಲಾಗಿಸುತ್ತದೆ… ನಾವುಗಳು ಮತ್ತದೇ ತಿರುವು ಮುರುವು, ಮತ್ತದೇ ಭಯಾನಕ ಸತ್ಯಗಳು ನಾಳೆಯೂ ಎದುರಾಗಬಹುದೇ ಎಂದು ಇವತ್ತು ಮುಗಿಯುವ ಮೊದಲೇ ಚಿನ್ತೆಗಿಳಿದುಬಿಡುತ್ತೇವೆ…. ನಮ್ಮವರ ಮೇಲೆ ಅದೆಷ್ಟು ಪ್ರೀತಿಯಿದ್ದರೂ ನಮ್ಮಲ್ಲಿನ ಅಹಮ್ಮಿನ ಭೂತ ಆ ಪ್ರೀತಿಯನ್ನು ಪ್ರೀತಿಪಾತ್ರರ ಎದುರಿಗೆ ತೋರಗೊಡಲು ಬಿಡುವುದೇ ಇಲ್ಲ…. ನನಗನಿಸಿದ್ದು ಇಷ್ಟು… ಚೆನ್ನಾಗಿದೆ.. ತುಂಬಾ ಇಷ್ಟವಾಯ್ತು…

ನಾನು ಹೇಳುವುದು –

ಈ ಕವಿತೆ ನನಗೆ ಇಷ್ಟವಾಗಿದ್ದು ಅದರ ಗಟ್ಟಿಯಾಗಿ ಎದ್ದು ಕಾಣುವ ಚಿತ್ರದಂತಹ ಇಮೇಜುಗಳ ಮೂಲಕ. ಮಲಗಿರುವ ಪ್ರೇಯಸಿ, ಆಕೆಯ ನೀಳಕೂದಲು, ಇನ್ನೇನು ಬೆಳಗಾಗುವಾಗ ಅಗಲಲಿರುವ ಆಕೆಯನ್ನ ಕಣ್ಣ ಮೂಲಕ ತುಂಬಿಕೊಳ್ಳಲು ಯತ್ನಿಸುತ್ತ ಇರುವ ಪ್ರಿಯಕರ, ಅವನ ವಿಷಾದವನ್ನ ಸೂಚಿಸುವ ಮಾತುಗಳು (ನಾಳೆಯೆಂಬುದು ಬರೆ ಇನ್ನೊಂದು ದಿನವಾಗುವುದೆ?) ಮತ್ತು ಸಮಯದ ಹರಿವನ್ನ ಸೂಚಿಸುವ ರಾತ್ರಿ,ನದಿ, ಟ್ಯಾಕ್ಸಿ, ನಾಳೆ – ಇವೆಲ್ಲ ಒಟ್ಟುಸೇರಿಕೊಂಡು ಒಂದು ಅಗಲಿಕೆಯ ಚಿತ್ರ ಮೂಡಿಸುತ್ತವೆ. ಬಹುಶಃ ಇಬ್ಬರೂ ಈ ಕೊನೆಯ ಭೇಟಿಯ ನಂತರ ಬೇರಾಗಲು ನಿರ್ಧರಿಸಿದ್ದಾರೆ. ಮೊದಲೊಮ್ಮೆ ಇದ್ದ ಮುಗ್ಧ , ನಿಷ್ಕಲ್ಮಶ ಪ್ರೇಮ ಈಗ ಅವರಲ್ಲಿ ಉಳಿದಿಲ್ಲ (ಎಷ್ಟು ಸಣ್ಣಗಿದ್ದವರು ನಾವು. ಹೇಗಾಗಿಹೋದೆವು?). ಈ ಸಾಲನ್ನು ನಾವು ಅವರಿಬ್ಬರೂ ಪ್ರೇಮದಲ್ಲಿ ಎತ್ತರಕ್ಕೇರಿದ ಪರಿಯನ್ನು ಸೂಚಿಸಿದೆ ಎಂದೂ ಅರ್ಥಯಿಸಿಕೊಳ್ಳಬಹುದು – ಹೀಗೆಂದು ಗೆಳೆಯನೊಬ್ಬ ಹೇಳಿದ್ದು ನೆನಪಿದೆ. ಈ ರಾತ್ರಿಯ ನಂತರ ಈ ತರಹದ ಇನ್ನೊಂದು ಭೇಟಿ ಇರಲಾರದೆಂಬ ನಿಜ ಪ್ರಿಯಕರನ ನಿದ್ದೆಗೆಡಿಸಿದೆ. ತನ್ನ ಕಾಲನ್ನು ಸ್ಪರ್ಶಿಸುತ್ತ ಕಾಲುಚಾಚಿ ಮಲಗಿರುವ ಪ್ರೇಯಸಿ ಆತನಿಗೆ ಎಲ್ಲಕಿಂತ ಮಿಗಿಲಾಗಿ ಬೆಳೆದುನಿಂತಂತೆ ಕಾಣಿಸುತ್ತ ಇದ್ದಾಳೆ, ಅಂದರೆ ಈ ಹೊತ್ತಿಗೆ ಆತನಿಗೆ ಆಕೆಗಿಂತ ದೊಡ್ಡದಾಗಿ ಏನೂ ಕಾಣುತ್ತಿಲ್ಲ, ರಾತ್ರಿಯನ್ನೂ ಒಳಗೊಂಡಂತೆ. ಆದರೆ ಆಕೆ ಮಾತ್ರ ಈ ಕೋಣೆಯ ನಾಲಕ್ಕು ಗೋಡೆಗಳ ಮೀರಿ ಯೋಚಿಸಲಾರಳು, ಕನಸಲಾರಳು ಎಂಬ ಹತಾಶಭಾವ ಆತನ ಕಾಡುತ್ತಿದೆ. ಈ ತರಹದ ಹಂಬಲದಿಂದಲೆ ಆತನ ದುಃಖ ತೀವ್ರವಾಗಿದೆ. ಭೂತಗಳ ಹೊರೆ ಹೊತ್ತು ಸಾಗುವ ಟ್ಯಾಕ್ಸಿ ನಗರದ ಯಾಂತ್ರಿಕತೆ ಮತ್ತು ಪ್ರಿಯಕರನ ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಯಾವಾಗಲು ತಿರುವುಮುರುವಾಗಿಯೆ ಪ್ರವಹಿಸುವ ನದಿ ಎಂದೂ ತನ್ನ ಹರಿವನ್ನು ಬದಲಾಯಿಸದು ಎನ್ನುವಲ್ಲಿ, ನಾಳೆಯೆಂಬುದು ಬರೆ ಮತ್ತೊಂದು ದಿನವಾಗಿ ಉಳಿದುಹೋಗುವುದೆ ಎಂಬ ಪ್ರಶ್ನೆಯಲ್ಲಿ ಪ್ರಿಯಕರನ ವಿಷಾದ, ಭವಿಷ್ಯದ ಬಗೆಗಿನ ಆತಂಕಗಳು ವ್ಯಕ್ತವಾಗಿವೆ. ಒಟ್ಟಿನಲ್ಲಿ ಈ ಕವಿತೆಯಲ್ಲಿ ಅನೇಕ ವೈರುಧ್ಯಗಳು (ಪ್ರೇಮ-ಅಗಲಿಕೆ, ರಾತ್ರಿ-ಮುಂಜಾವ, ಕನಸು-ನಿಜ, ಭೂತ-ಭವಿಷ್ಯ, ನಿದ್ರೆ-ಎಚ್ಚರ ಹೀಗೆಲ್ಲ..) ಸೇರಿಕೊಂಡಿವೆ.- ಇದು ಒಂದು ನೋಟಕ್ಕೆ, ಈ ಹೊತ್ತಿಗೆ ನನಗೆ ಅನಿಸಿದ್ದು.

ಮಾರ್ಚ್ ಎಂಟನ್ನು ಮೀರಿ ನಿಂತ ಹೆಂಗಸರು

1155-15372african-life-i-posters1

ಇವತ್ತು ಮಾರ್ಚ್ ಎಂಟು. ಬೆಳಗ್ಗಿನಿಂದ ಸುಮಾರು ಸ್ನೇಹಿತರು ಎಸ್ಸೆಮ್ಮೆಸ್, ಫೋನು, ಇ-ಮೇಲ್ ಮಾಡಿ ‘ಹ್ಯಾಪಿ ವಿಮೆನ್ಸ್ ಡೇ!!’ ವಿಶ್ ಮಾಡಿದ್ದಾರೆ. ಯುನಿವರ್ಸಿಟಿಯಲ್ಲಿರುವಾಗ ‘ಟಾಂಬಾಯ್’ ಇಮೇಜು ಇದ್ದ ನಾನು ಇದೇ ದಿನ ಸೀರೆಯುಟ್ಟುಕೊಂಡು ಹೋಗಿ ಎಲ್ಲರಿಗೆ ಶಾಕ್ ನೀಡಿದ್ದು ನೆನಪಾಗುತ್ತಿದೆ. ಅವತ್ತು ಡಿಪಾರ್ಟ್ಮೆಂಟಿನಲ್ಲಿ ಟೀನಾ, ಇವತ್ತು ನೀನೂ ‘ವುಮನ್’ ಅಂತ ತಿಳಿಯಿತು!’  ’ಲೇಡಿಬಾಂಡ್ ಇನ್ ಎ ಸ್ಯಾರಿ!’ ಎಂದೆಲ್ಲ ಗೆಳೆಯರು ತಮಾಷೆ ಮಾಡಿ ನಗಾಡಿದ್ದರು. ಗೆಳತಿ ಗೀತಾ ಮಾತ್ರ ನಾನು ವಿಶ್ ಮಾಡಿದಾಗ ಹೆಣ್ಣಾಗಿ ಹುಟ್ಟಿದ್ದನ್ನ ಪ್ರತೀದಿನ ರಿಗ್ರೆಟ್ ಮಾಡ್ತೀನಿ ಕಣೆ! ನೋ ಹ್ಯಾಪಿ ವಿಮೆನ್ಸ್ ಡೇ ಫಾರ್ ಮಿ ಅಂದಿದ್ದು ಮರೆಯಲಾಗುತ್ತಲೇ ಇಲ್ಲ. ಐರನಿ ಅಂದರೆ ಅವಳೂ ಇವತ್ತು ನಮ್ಮ ನಡುವೆ ಇಲ್ಲ. ಎಷ್ಟು ಹೆಣ್ಣುಮಕ್ಕಳು ಇವತ್ತು ತಾವು ಹೆಣ್ಣಾಗಿ ಹುಟ್ಟಿದ್ದನ್ನು ಹಳಿದುಕೊಂಡು ಬದುಕುತ್ತಿದ್ದಾರೋ? ನನ್ನ ಪ್ರೀತಿಯ ಮೂವರು ಹೆಂಗೆಳೆಯರು ಮಾತ್ರ ಸಾವಿರ ಅಡ್ಡಿತಡೆಗಳಿದ್ದರೂ ಸೆಲ್ಫ್ ಪಿಟಿಯಲ್ಲಿ ಮುಳುಗದೆ ತಮ್ಮದೇ ರೀತಿಯಲ್ಲಿ ಬದುಕುತ್ತ ಇದ್ದಾರೆ… * * * *

ತೆಹಮಿನಾ ಮದುವೆಯಾಗಿದ್ದು ಪಾಕಿಸ್ತಾನದ ರಾಜಕೀಯ ನಾಯಕನೊಬ್ಬನನ್ನು. ಮದುವೆಯಾದಂದಿನಿಂದ ಆಕೆ ಪ್ರತಿದಿನವೂ ತನ್ನ ಹೆಣ್ಣುಜನ್ಮದ ಅಸಹಾಯಕತೆಯನ್ನು ಹಳಿದುಕೊಂಡೇ ಕಳೆದಳು ಎನ್ನಬಹುದು. ಪ್ರಪಂಚದ ಕಣ್ಣಿಗೆ ಆಕೆಯ ಗಂಡ ಪ್ರಸಿದ್ಧ ಜನನಾಯಕ. ತೆಹಮಿನಾಳಿಗೆ ಮಾತ್ರ ಆತನ ನಿಜರೂಪ ತಿಳಿದಿತ್ತು. ಅತನೊಬ್ಬ ವಿಕೃತಕಾಮಿ. ತನ್ನ ಮಾತನ್ನು ಪಾಲಿಸದೆ ಹೋದರೆ ತೆಹಮಿನಾಳನ್ನು ಮೈಯೆಲ್ಲ ಬಾಸುಂಡೆ ಬರುವಂತೆ ಹೊಡೆಯುವ ರಾಕ್ಷಸ. ಆಕೆಯೆದುರೇ ಆಕೆಯ ತಂಗಿಯೊಡನೆ ಅಫೇರ್ ಇಟ್ಟುಕೊಂಡು ಈಕೆಯನ್ನು ಮೂಲೆಯಲ್ಲಿಟ್ಟವ. ಈಕೆ ಸುಮ್ಮನಿರಲಿಲ್ಲ. ತನಗಾದ ಪ್ರತಿಯೊಂದು ಅನ್ಯಾಯವನ್ನೂ ಎದುರಿಸಿ ನಿಂತಳು. ಕೊನೆಗೆ ತಾಳಲಾಗದಾಗ ಗಂಡನೆನಿಸಿಕೊಂಡವನನ್ನು ಬಿಟ್ಟು ಬಂದಳು. ತನ್ನ ಸ್ವಾತಂತ್ರ್ಯದ ಸಂಕೇತವನ್ನು ತೋರಲು ಆತನಿಗೆ ಬಹಳ ಪ್ರಿಯವಾಗಿದ್ದ ತನ್ನ ನೀಳಗೂದಲನ್ನು ಕತ್ತರಿಸಿ ಎಸೆದಳು. ಆತನ ಒಂದೊಂದು ದೌರ್ಜನ್ಯವನ್ನೂ ‘ಮೈ ಫ್ಯೂಡಲ್ ಲಾರ್ಡ್’ ಎಂಬ ಪುಸ್ತಕ ಬರೆದು ಜಗತ್ತಿಗೇ ಸಾರಿದಳು. ಎದುರಾದ ಯಾವ ಬೆದರಿಕೆಗಳಿಗೂ ಜಗ್ಗದ ತೆಹಮಿನಾ ದುರಾನಿ ಇಂದಿಗೂ ಪಾಕಿಸ್ತಾನದ ಹೆಣ್ಣುಮಕ್ಕಳ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಶೋಷಣೆಯ ಬಗ್ಗೆ ‘ಬ್ಲಾಸ್ಫೆಮಿ’ಯಂತಹ ಅಪರೂಪದ ಪುಸ್ತಕಗಳನ್ನು ಬರೆಯುತ್ತ, ತನ್ನಂತೆ ದೌರ್ಜನ್ಯಕ್ಕೊಳಗಾದ ಅನೇಕ ಹೆಣ್ಣುಮಕ್ಕಳಿಗೆ ಸಹಾಯಹಸ್ತ ನೀಡುತ್ತಾ ಇದ್ದಾಳೆ.

* * * *

ವಾಂಗರಿ ಮಥಾಯಿ 2004ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಾಗ ಆಕೆಯನ್ನು ಬಲ್ಲವರಿಗೇನೂ ಅಚ್ಚರಿಯಾಗಲಿಲ್ಲ. ಅಮೆರಿಕ, ಜರ್ಮನಿಗಳಲ್ಲಿ ಓದು ಮುಗಿಸಿದ ಆಕೆ ಅಲ್ಲಿಯೇ ಆರಾಮವಾಗಿರಬಹುದಾಗಿತ್ತು. ತನ್ನ ನೆಲ ಕೀನ್ಯಾದ ಸೆಳೆತ ಬಲವಾಗಿತ್ತು. ತನ್ನ ದೇಶ ಮರಗಳ್ಳರ, ಪ್ರಾಣಿಹಂತಕರ ಹಾವಳಿಗೆ ತುತ್ತಾಗಿ ಬಡವಾಗುತ್ತಿರುವುದನ್ನು ನೋಡಿ ನೋವಾಯಿತು. ಆಕೆ ಆರಂಭಿಸಿದ ‘ಗ್ರೀನ್ ಬೆಲ್ಟ್ ಚಳುವಳಿ’ಯ ಮೂಲಕ ಕೀನ್ಯಾದಾದ್ಯಂತ ಮೂವತ್ತು ಮಿಲಿಯನ್ ಗಿಡಮರಗಳನ್ನು ನೆಡಲಾಯ್ತು. ಜನರು ಆಕೆಯನ್ನು ಪ್ರೀತಿಯಿಂದ ‘ಟ್ರೀ ವುಮನ್’ ಎಂದು ಕರೆದರು. ಗಂಡ ‘ಈಕೆಯಷ್ಟು ಗಟ್ಟಿ ಮನಸ್ಸಿನ ಹೆಂಗಸಿನ ಜತೆ ಬದುಕಲಾಗದು’ ಎಂಬ ಕಾರಣ ನೀಡಿ ಆಕೆಗೆ ಡೈವೋರ್ಸ್ ನೀಡಿದ. ತನ್ನ ನಿಲುವು, ಸಿದ್ಧಾಂತಗಳ ದೆಸೆಯಿಂದ ಹಲವಾರು ಬಾರಿ ಮಾರಣಾಂತಿಕ ಹಲ್ಲೆಗೊಳಗಾಗಿರುವ ವಾಂಗರಿ ಸುಮಾರು ಬಾರಿ ಜೈಲಿಗೂ ಹೋಗಿಬಂದದ್ದುಂಟು. ಕೀನ್ಯಾದ ರಾಜಕೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಾಂಗರಿಯ ಪ್ರಕಾರ ಪ್ರಕೃತಿಯ ಬಗ್ಗೆ ಹೆಣ್ಣಿಗಿರುವ ಕಾಳಜಿ ಬೇರಾರಿಗೂ ಇಲ್ಲ.

* * * *

ಎಂಭತ್ತರ ಗೌರಜ್ಜಿಯ ಮನೆಗೆ ಮಧ್ಯರಾತ್ರಿ ಒಂದು ಗಂಟೆಗೆ ಹೋಗಿಳಿದರೂ ಬಿಸಿಬಿಸಿ ಊಟ ಬಡಿಸಿಯಾರು. ಬೇಡವೆಂದರೆ ಬಾಯಿಗೆ ಬಂದ ಬೈಗುಳ ತಿನ್ನಲು ತಯಾರಾಗಿರಬೇಕು. ಅವರ ಮನೆಯಲ್ಲಿ ಅನ್ನ ಬಡಿಸಲು ಸೌಟು ಉಪಯೋಗಿಸುವುದಿಲ್ಲ – ಕೈಯಲ್ಲಿ ಭರ್ತಿ ಅನ್ನ ಪಾತ್ರೆಯಿಂದ ತಟ್ಟೆಗೆ ತಳ್ಳುತ್ತಾರೆ!! ಕೋಳಿ ಕೆದಕಿದ ಹಾಗೆ ತಿನ್ನುವ ನನ್ನಂಥವರು ಅವರ ಮನೆಯ ಊಟಕ್ಕೆ ಡಿಸ್ಕ್ವಾಲಿಫೈಡ್!! ಯಾರದೇ ಮದುವೆ, ಮುಂಜಿ, ನಾಮಕರಣ ಏನೇ ಇರಲಿ, ಮೈಸೂರ ಒಕ್ಕಲಗೇರಿಯ ಆಕೆಯ ಪುಟ್ಟಮನೆಗೆ ಕರೆ ಹೋಗುತ್ತದೆ. ಗೌರಜ್ಜಿ ಗಲಾಟೆ ಮಾಡುತ್ತಲೆ ತಪ್ಪದೆ ಹಾಜರಾಗುತ್ತಾರೆ. ಕೇರಿಯ ತುಂಬಾ ಗೌರಜ್ಜಿ ಹೆರಿಗೆಮಾಡಿಸಿ, ನೀರುಹಾಕಿ, ತುತ್ತುಣಿಸಿ ಬೆಳೆಸಿಕೊಟ್ಟವರೇ ಇರುವುದು. ಪ್ರತಿ ಹಬ್ಬದಲ್ಲಿಯೂ ತಿಳಿದವರನ್ನೆಲ್ಲ ಕರೆದು ಊಟ ಹಾಕುತ್ತಾರೆ. ಯಾವುದೇ ಇನ್ಕಮ್ ಇಲ್ಲದ ಗೌರಜ್ಜಿ ಇದನ್ನೆಲ್ಲ ಹೇಗೆ ಮಾಡಬಹುದೆಂದು ಒಮ್ಮೊಮ್ಮೆ ಯೋಚನೆ ಬರುತ್ತದೆ. ಹೃದಯದ ಕಾಯಿಲೆಯಿಟ್ಟುಕೊಂಡೂ ಹೃದಯವಂತರಾಗಿರುವ ಗೌರಜ್ಜಿಯಂಥವರು ಎಷ್ಟಿದ್ದಾರು?

* * * *

ಹೀಗೆ ನನ್ನ ಪ್ರೀತಿಯ ಮಹಿಳೆಯರನ್ನೆಲ್ಲ ಧ್ಯಾನಿಸಿಕೊಂಡು ಕೂತಿದ್ದೇನೆ. ಮಗಳು ಗಂಧದಕಡ್ಡಿ ಹಿಡಿದುಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದಾಳೆ. ಮನೆತುಂಬ ಸಿಹಿಸಿಹಿ ಪರಿಮಳ. ಅವಳಿಗೆ ಆಟ. ಅವಳನ್ನು ಕರೆದು ತಬ್ಬಿಕೊಂಡು ‘ಹ್ಯಾಪಿ ವಿಮೆನ್ಸ್ ಡೇ ಶೋನೂ!!’ ಅಂದೆ. ಅರ್ಥವಾಗದಿದ್ದರೂ ‘ಥ್ಯಾಂಕ್ಯೂ ಮಮ್ಮಿ!!’ ಅಂದು ಕೆನ್ನೆಗೊಂದು ಮುತ್ತು ಕೊಟ್ಟಳು.

ಸ್ಪೆಶಲ್ ನೋಟ್: ಅಂದಹಾಗೆ ಇದು ನನ್ನ ನೂರನೆ ಪೋಸ್ಟು. ನನಗೇ ಆಶ್ಚರ್ಯವಾಗುವ ಹಾಗೆ ಬರೆಸುತ್ತ ಹೋದ ನಿಮಗೆಲ್ಲ ಸಾವಿರ ಧನ್ಯವಾದ.

ಇವಾಗಷ್ಟೆ ಗೆಳತಿ ಶಮ ನಂದಿಬೆಟ್ಟ ಆಹ್ವಾನಿಸಿದ್ದ ಬಸವೇಶ್ವರನಗರದಲ್ಲೆ ನಡೆಯುತ್ತಿರುವ ‘ಮಾತೃ ಉತ್ಸವ’ಕ್ಕೆ ಹೋಗಿ ಬಂದೆ. ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಚೆಕಪ್, ಸಲಹೆ ಮತ್ತು ಔಷಧ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗಾಸನ ಪ್ರದರ್ಶನ, ರಂಗೋಲಿ ಸ್ಪರ್ಧೆ.. ಒಂದೇ ಎರಡೆ? ಬಿಸಿಲು ಲೆಕ್ಕಿಸದೆ ಜನರೂ ಕಿಕ್ಕಿರಿದು ನೆರೆದಿದ್ದರು. ದಂಗಾಗುವಂತೆ ಆಯಿತು. ಪ್ರತಿ ವರುಷವೂ ಇಂತಹದೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸುವ ‘ಪುನಂ’ ಪರಿವಾರಕ್ಕೆ ಶುಭಹಾರಯಿಕೆಗಳು. ಅವರಂಥವರ ಸಂತತಿ ಹೆಚ್ಚಲಿ.

ಚಿತ್ರಕೃಪೆ: ಒಂದು ಸೌಥ್ ಆಫ್ರಿಕನ್ ಗ್ರೀಟಿಂಗ್ ಕಾರ್ಡು.

ಯಾರು ಕೊಟ್ಟರು ಅವರಿಗೆ ಹಕ್ಕು?

ನೆನ್ನೆ ಗಣರಾಜ್ಯೋತ್ಸವದ ದಿನ ಮಂಗಳೂರಲ್ಲಿ ಕೆಲವು ಗಂಡಸರು(ಹೆಹ್!) ಒಂದು ರಾಜಕೀಯ ಸಂಘಟನೆಯ ಹೆಸರಿನಡಿ ನಡೆಸಿದ ‘ಸ್ಟಿಂಗ್ ಆಪರೇಷನ್’ನ ಫೂಟೇಜುಗಳನ್ನು ನೋಡುತ್ತ ಇದ್ದರೆ ಮೈ ಉರಿದುಹೋಗತೊಡಗಿತು. ಅಲ್ಲಿರುವವರು ಹೆಣ್ಣುಮಕ್ಕಳಿಗೆ ಸಹಾಯಹಸ್ತ ಚಾಚುವ ಬದಲು ತಮ್ಮಕ್ಯಾಮೆರಾಗಳ ಜತೆ ಬಿಜೀಯಾಗಿದ್ದಿದ್ದು ಇನ್ನೂ ರೇಜಿಗೆ ಹುಟ್ಟಿಸಿತು. ಹಲ್ಲೆ ನಡೆಸಿದವರ ಗಂಡಸುತನ ಕೇವಲ ಹೆಣ್ಣುಹುಡುಗಿಯರ ಮೇಲೆ ಮಾತ್ರ ಹೆಚ್ಚಾಗಿ ವಿಜೃಂಭಿಸಿದ್ದು. ಅವರ ತಲೆಗೂದಲಿಗೆ ಕೈಹಾಕಿ ಎಳೆಯುವಾಗ, ಅವರ ತಲೆಗಳಿಗೆ ಹೊಡೆದು ಓಡುವಾಗ, ಅವರನ್ನು ಕೆಳಗೆ ಹೊಡೆದು ಬೀಳಿಸುವಾಗ, ಅಶ್ಲೀಲ ಪದಗಳನ್ನುಪಯೋಗಿಸಿ ನಿಂದಿಸುವಾಗ ಇವರು ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದರೊ, ಅಥವ ತಮ್ಮ ಮಾನಗೆಟ್ಟ ಸಂಸ್ಕೃತಿಹೀನತೆಯ ಪ್ರದರ್ಶನ ಮಾಡುತ್ತಿದ್ದರೊ ಅರ್ಥವಾಗಲೆ ಇಲ್ಲ ನನಗೆ. ಅಲ್ಲ, ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಪುಂಡಾಟ ನಡೆಸುವ ಇಂತಹ ಮುಖೇಡಿಗಳಿಗೆ ಹೆಣ್ಣುಮಕ್ಕಳೆ ಯಾವಾಗಲು ಸಿಗುವುದು ದುರಂತ. ಯಾವ ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದಾರೆ ಇವರು? ನಮ್ಮ ಶಹರಗಳಲ್ಲಿ ಒಂದು ದೊಡ್ಡ ಮಾಫಿಯಾದಂತೆ ಹರಡಿರುವ ವೇಶ್ಯಾವಾಟಿಕೆ, ಮಾದಕವಸ್ತು ಹಾಗೂ ನೀಲಿಪರದೆಯ ಧಂಧೆಯವರನ್ನ ನೇರವಾಗಿ ಎದುರಿಸುವ ತಾಕತ್ತಿದೆಯೆ ಇವರಿಗೆ? ಇವರಿಗೂ ಅಫಘಾನಿಸ್ತಾನದಲ್ಲಿ ಬುರುಖಾ ಹಾಕದಿರುವ, ಶಾಲಾಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳನ್ನು ಆಸಿಡ್ ಎರಚಿ ಶಿಕ್ಷಿಸುತ್ತೇವೆಂದು ಹೊರಟಿರುವ ತಾಲಿಬಾನ್ ಉಗ್ರರಿಗೂ ಏನು ವ್ಯತ್ಯಾಸ?

ಯಾರು ಕೊಟ್ಟರು ಹಕ್ಕು ಅವರಿಗೆ ಹೆಣ್ಣುಮಕ್ಕಳನ್ನು ಮುಟ್ಟಲು? ಹೇಗೆ ಹೇರಬಲ್ಲರು ಅವರು ನಮ್ಮ ಮೇಲೆ ಅವರ ಬಲವಂತದ ಸೋಕಾಲ್ಡ್ ‘ಸಂಸ್ಕೃತಿ’ಯ ಐಡಿಯಾವನ್ನ? ಹಾಗಿದ್ದರೆ ಯಾಕೆ ಧರಿಸುವುದಿಲ್ಲ ಅವರೆಲ್ಲ ಕೆಲಸಕ್ಕೆ ನಮ್ಮ ಸಂಸ್ಕೃತಿಯ ಪ್ರತೀಕವಾದ ಪಂಚೆ, ಶರಟು, ಟವೆಲುಗಳನ್ನ? ಅವರಿಗೆ ಮಾತ್ರ ಲೇಟೆಸ್ಟ್ ಫ್ಯಾಶನ್ನಿನ ಪ್ಯಾಂಟುಶರಟು, ಸೂಟುಬೂಟು. ಡ್ರೆಸ್ ಕೋಡ್ ಅಂತಿರೋದು ಬರೀ ಹೆಣ್ಮಕ್ಕಳಿಗೆ ಮಾತ್ರಾನೆ? ಇದನ್ನೆಲ್ಲ ಮಾಡುವುದು ಮಾತ್ರ ಸಂಸ್ಕೃತಿ ಅನ್ನೋದಾದರೆ ನನಗೆ ಆ ಸಂಸ್ಕೃತಿಗೆ ನಾನು ಸೇರಿದವಳಲ್ಲ ಅನ್ನುವುದಕ್ಕೆ ಹೆಮ್ಮೆಯಾಗುತ್ತದೆ. ನಾನು ಏನು ಉಟ್ಟುಕೊಳ್ಳಬೇಕು, ನಾನು ಎಲ್ಲಿ ಹೋಗಬೇಕು, ಹೇಗಿರಬೇಕು ಎಂದು ನಿರ್ಧರಿಸುವದು ಸಂಪೂರ್ಣವಾಗಿ ನನ್ನ ಹಕ್ಕು. ಅದನ್ನು ಯಾವನೋ ಮೂರನೆಯವ ಎಲ್ಲಿಯೋ ಕೂತು ನಿರ್ಧರಿಸಲು ಸಾಧ್ಯವಿಲ್ಲ. ನಮ್ಮದು ಇನ್ನೂ ಗಣತಂತ್ರ ಇರುವ ರಾಷ್ಟ್ರವಾಗಿರುವುದು ನಮ್ಮ ಪುಣ್ಯ. ಏಕೆಂದರೆ ಈ ಘಟನೆಯ ಹಿಂದಿರುವವರಿಗೆ ಯಾವುದೇ ರಾಜಕೀಯ ಆಕಾಂಕ್ಷೆಗಳು ಇದ್ದಿದ್ದಾದರೆ ಅದನ್ನು ಅವರು ಇನ್ನು ಮುಂದೆ ಮರೆಯುವುದೊಳ್ಳೆಯದು. ತಮ್ಮ ಕಾಲ ಮೇಲೆ ಕೊಡಲಿಯೇಟು ಹಾಕಿಕೊಳ್ಳುವ ಕೆಲಸವನ್ನೇ ಮಾಡಿರುವುದು ಅವರು.

ಸಂಸ್ಕೃತಿಯೆನ್ನುವುದು ನಿಂತು ನಾರುವ ಕೊಳಚೆಯಲ್ಲ, ಅದು ಹರಿವ ನದಿ. ಕೆಲವರು ಇನ್ನೂ ಅಪ್ಪ ಹಾಕಿದ ಆಲದ ಮರಕ್ಕೇ ನೇತುಹಾಕಿಕೊಳ್ಳುತ್ತೇನೆ ಎಂದು ಹೊರಡುವದನ್ನು ನೋಡಿದರೆ ಬೇಸರವಾಗುತ್ತದೆ. ಶತಮಾನಗಳಿಂದಲೂ ಅದೇ ದರಿದ್ರ ಬೆದರಿಕೆಗಳು, ಮೂಲೆಗುಂಪು ಮಾಡುವ ಸ್ಟೀರಿಯೋಟೈಪುಗಳು. ನೆನ್ನೆ ರಾತ್ರಿ ಉದಯ ಚ್ಯಾನೆಲ್ಲಿನಲ್ಲಿ ಈ ವಿಷಯವಾಗಿ ನಡೆದ ಚರ್ಚೆಯೊಂದರಲ್ಲಿ, ಹಲ್ಲೆಯನ್ನು ಡಿಫೆಂಡ್ ಮಾಡುವ ಭರದಲ್ಲಿ ಸೇನೆಯ ಪ್ರತಿನಿಧಿಯೊಬ್ಬರು ‘ನೀವು ಹೆಣ್ಮಕ್ಕಳು ಸೀತಾಮಾತೆಯ ಹಾಗಿರಿ, ನಾವು ನಿಮ್ಮ ಕಾಲು ತೊಳೆದು ಅದೇ ನೀರು ಕುಡೀತೇವೆ. ಸೀತೆಯನ್ನು ಪೂಜಿಸಿದ ಲಕ್ಷ್ಮಣ ಶೂರ್ಪನಖಿಯ ಮೂಗೂ ಕೊಯ್ದ ಅನ್ನೊದು ನೆನಪಿಡಿ!’ ಎಂದು ಸೂಕ್ಷ್ಮ ಬೆದರಿಕೆಯನ್ನು ಕೂಡ ಒಡ್ಡಿದರು. ಅದರ ಜತೆಗೇ ಸುಪ್ರೀಂ ಕೋರ್ಟು ಹೆಣ್ಣುಮಕ್ಕಳು ಬಾರು ಪಬ್ಬುಗಳಲ್ಲಿ ಕೆಲಸ ಮಾಡುವುದು ಅವರ ಹಕ್ಕು ಎಂದು ಹೊರಡಿಸಿರುವ ಸಂವಿಧಾನಾತ್ಮಕ ಆದೇಶದ ವಿರುದ್ಧ ಗಣರಾಜ್ಯ್ಯೋತ್ಸವದ ದಿವಸವೇ ಕೆಂಡಕಾರಿದರು! ಸೀತಾಮಾತೆಯ ಹಾಗೆ ಇರಬೇಕು ಅನ್ನುವ ಡಯಲಾಗು ಹಳೆಯದಾಯಿತು, ಅದನ್ನು ನಾವು ಮರೆತೂ ಬಿಟ್ಟಿದೇವೆ, ಯಾಕೆಂದರೆ ನಾವು ಹಾಗಿರಲು ಇಂದು ಸಾಧ್ಯವಿಲ್ಲ.

ಎಲ್ಲರೂ ಖಡಕ್ಕಾಗಿ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ರಾಜಕೀಯ ನಾಯಕರು ಈ ವಿಷಯಕ್ಕೆ ಅನಗತ್ಯ ಪಬ್ಲಿಸಿಟಿ ನೀಡಲಾಗುತ್ತದೆ ಎಂದು ಬೇಸರಿಸಿಕೊಂಡಿದ್ದಾರೆ. ಒಬ್ಬ ರಾಜಕೀಯ ನಾಯಕನ ಮಗಳು ಅಥವಾ ಮಗನಿಗೆ ಎಷ್ಟು ಅಗತ್ಯ ಹಾಗೂ ಅನಗತ್ಯ ಪಬ್ಲಿಸಿಟಿ ನೀಡಲಾಗುತ್ತದೆ ಎಂದು ನಮಗೆ ಮಹಾನ್ ರಾಹುಲ್ ಮಹಾಜನನ ಕೇಸಿನಿಂದಲೆ ತಿಳಿದುಬಂದಾಗಿದೆ!! ಮತ್ತೆ ಕಾನೂನನ್ನು ಯಾರೊ ಗೂಂಡಾಗಳು ಕೈಗೆತ್ತಿಕೊಂಡ ಇಂತಹ ಘಟನೆಗಳಿಗೆ ಪಬ್ಲಿಸಿಟಿ ನೀಡದಿದ್ದರೆ ಇನ್ನಾವುದಕ್ಕೆ ನೀಡಬೇಕು? ಚುರುಕು ಮುಟ್ಟಲಿ ನಮ್ಮ ರಾಜಕೀಯ ನಾಯಕ, ನಾಯಕಿಯರಿಗೆ. ಮಂಗಳೂರು ಘಟನೆಯ ಪ್ರಚಾರಕ್ಕಾಗಿ ನಮ್ಮ ಮೀಡಿಯಾದವರಿಗೆ ಸಾವಿರ ಧನ್ಯವಾದ ಹೇಳಬೇಕು. ಈ ವಿಷಯವಾಗಿ ಹಲ್ಲೆ ಮಾಡಿದವರಿಗೆ ಏನು ಶಿಕ್ಷೆ ನೀಡಲಾಗುತ್ತದೆ ಎಂದು ನಾವೆಲ್ಲ ಕಾದುನೋಡುತ್ತಿದ್ದೇವೆ. ಪಬ್ಬಿನಲ್ಲಿ ಹೆಣ್ಣುಮಕ್ಕಳು ಕೂರುವದು ತಪ್ಪು ಅನ್ನುವವರು ಬೀದಿಬೀದಿಗಳಲ್ಲಿ ಕುಡಿದು ವಾಲಾಡುವ, ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರತಿದಿನವೂ ನರಕ ತೋರಿಸುವ ಗಂಡಸರನ್ನು ಹಿಡಿದು ಏಕೆ ಬುದ್ಧಿ ಕಲಿಸಲು ಮುಂದಾಗಬಾರದು? ಸಂಸ್ಕೃತಿಯನ್ನು ಬೆಳೆಸಬಯಸುವವರು ಮಾಡಬಹುದಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಸಂಸ್ಕೃತಿ ಬಲವಂತದ ಹೇರುವಿಕೆಯಿಂದ ಉಳಿಯುವುದಿಲ್ಲ, ಬೆಳೆಯುವುದರಿಂದ, ಬದಲಾಗುವುದರಿಂದ ಉಳಿಯುತ್ತದೆ.

ಧೃತಿಗೆಟ್ಟ ಪದಗಳ ಮೂಲಕ ಪ್ರತಿಭಟಿಸುತ್ತಿದ್ದೇನೆ.

26india4-6001

ಈ ಬುಧವಾರ, ಗುರುವಾರ ಮತ್ತು ಶುಕ್ರವಾರ ನಮ್ಮ ಭಾರತೀಯ ಇತಿಹಾಸದಲ್ಲೆ ಅತ್ಯಂತ ಕರಾಳ ದಿನಗಳು ಅನ್ನಿಸಿಕೊಂಡವು. ನಿನ್ನೆ ಗುರುವಾರದ ಸುದ್ದಿ ಚ್ಯಾನೆಲುಗಳಲ್ಲಿ ಮುಂಬಯಿಯ ಹೆಮ್ಮೆಗಳಲ್ಲೊಂದಾದ ತಾಜ್ ಹೊತ್ತಿ ಉರಿಯುವುದನ್ನು, ಛತ್ರಪತಿ ಶಿವಾಜಿ ಟರ್ಮಿನಸ್ಸಿನಲ್ಲಿ ನಮ್ಮ ಮಕ್ಕಳ ರಕ್ತ ನೀರಿನ ಹಾಗೆ ಹರಿದಿರುವುದನ್ನು, ಲಿಯೋಪಾಲ್ಡ್ ಕೆಫೆಯ ಗೋಡೆಗಳಲ್ಲಿ ತತ್ತರಬಿತ್ತರ ಹರಡಿದ ಗುಂಡಿನ ಗುರುತುಗಳನ್ನು, ನರಿಮನ್ ಹೌಸಿನ ಕಿಟಕಿಗಳ ಮುರಿದ ಗಾಜುಗಳ ಹಿಂದಿನ ಆತಂಕವನ್ನು, ಒಬೆರಾಯ್ ಟ್ರಿಡೆಂಟಿನ ಗಾಂಭೀರ್ಯ ಭೀತಿಗೆಡೆಮಾಡಿಕೊಟ್ಟಿರುವುದನ್ನು ನನ್ನ ಕರ್ಮವೆಂಬ ಹಾಗೆ ನೋಡುತ್ತ ಕುಳಿತಿದ್ದೆ. ಮಧ್ಯಕ್ಕೆ ಸಿಲ್ಲೀ ಪ್ರಶ್ನೆಗಳನ್ನು ಕೇಳುತ್ತ ಅಸಂಬದ್ಧ ಕಮೆಂಟರಿ ಉದುರಿಸುತ್ತಿದ್ದ ಟಿವಿ ವರದಿಗಾರರ ಮೇಲೂ ಸಿಟ್ಟು ಬರದಷ್ಟು ಮೆದುಳಿಗೆ ಗರಬಡಿದಂತಾಗಿತ್ತು. ಆದರೆ ಈವತ್ತು ಬೆಳಗ್ಗೆ..

ಜನರ ಮೇಲೆ ಬುಲೆಟು ಸಿಡಿಸುವಾಗ, ಗ್ರೆನೇಡು ಎಸೆಯುವಾಗ ನಗುತ್ತಿದ್ದ, ಬೈಗುಳ ಸುರಿಸುತ್ತಿದ್ದ, ಮಕ್ಕಳು, ಹೆಂಗಸರು, ಕೊನೆಗೆ ನಾಯಿಗಳನ್ನೂ ಬಿಡದ, ಯಾವುದಾದರು ಕಾಲೇಜಿಗೆ ಹೋಗುವ ಹುಡುಗನ ಥರದ ಈ ಕೋಲ್ಡ್ ಬ್ಲಡೆಡ್ ಆತಂಕವಾದದ ಹೊಸ ಚಹರೆ ನನ್ನಲ್ಲಿ ನಡುಕ, ಕೋಪ ಎರಡನ್ನೂ ಹುಟ್ಟಿಸಿತು. ಭೊರೆಂದು ಬಿಕ್ಕಿಬಿಕ್ಕಿಅ ಳುತ್ತಲೆ ಇಡ್ಡೇನೆ.. ಏನಾಗುತ್ತ ಇದೆ ಇದೆಲ್ಲ? ಇಷ್ಟು ಸುಲಭವಾಗಿ ಹೇಗೆ ನುಗ್ಗಿಬಂದರು ಅವರು? ಅನ್ಯಾಯವಾಗಿ ಬಲಿಯಾದ ಪೊಲೀಸು ಪಡೆಯ ಸಮರ್ಥ  ಆಫೀಸರುಗಳ ಕೊರತೆಯನ್ನು ದೇಶಕ್ಕೆ, ಅವರ ಕುಟುಂಬಗಳಿಗೆ ಯಾರು ತುಂಬಿಕೊಡುತ್ತಾರೆ? ಸತ್ತ ಕಂದಮ್ಮಗಳು, ಮಕ್ಕಳು  ಏನು ಅನ್ಯಾಯ ಮಾಡಿದ್ದವು? ಎಷ್ಟು ಮನೆಗಳ ದೀಪಗಳು ಆರಿದವೊ? ಏನು ಮಾಡಬೇಕು ನಾವು? ಯಾಕೆ ಹೀಗಾಯಿತು ಮಾರಣಹೋಮ? ಮತ್ತೆ ಇದನ್ನು ರಾಜಕಾರಣಿಗಳು ತಮ್ಮ ವೋಟುಬ್ಯಾಂಕ್ ತುಂಬಲು ಬಳಸುತ್ತಾರೆ. ಒಂದಿಷ್ಟು ಸೈಕೊಪಾತಿಕ್ ಕೊಲೆಗಾರರಿಂದ ಒಂದಿಡೀ ಕೋಮಿನ ಜನ ಪ್ರತಿದಿನವೂ ಭೀತಿಯಲ್ಲಿ ಜೀವನ ಸಾಗಿಸಬೇಕಾಗಿ ಬರುತ್ತದೆ. ಸುಮ್ಮನೆ ಹಿಂಸೆ ಬೆಳೆಯುತ್ತದೆ. ಭಯೋತ್ಪಾದನೆ ಅಟ್ಟಹಾಸದಲ್ಲಿ ಜೀವನಕ್ಕೆ ಬೆಲೆಯೇ ಇಲ್ಲದಾಗುತ್ತದೆ..

ನನ್ನ ಪದಗಳು ಧೃತಿಗೆಟ್ಟು ಕೂತಿವೆ. ಕೊಂಚಕೊಂಚವಾಗಿ ಎಲ್ಲವನ್ನೂ ಬಾಚಿ ಒಟ್ಟುಮಾಡಿಕೊಂಡು ಪ್ರತಿಭಟಿಸುತ್ತಿದ್ದೇನೆ. ಇದು ನಮಗೆ ಬೇಡ. ಇನ್ನು ಹೆಚ್ಚಿಗೆ ನೋಡಲಾಗದು. ಇದು ಕೂಡದು.

ಚಿತ್ರಕೃಪೆ: www.graphics8.nytimes.com