ನಮ್ಮ ಟೈಲರುಗಳಿಗೊಂದು ಪುಟ್ಟ ವಂದನೆ.

tailor_tools

ಮೊನ್ನೆ ಮೊನ್ನೆ ಗೆಳತಿಯೊಬ್ಬಳು ಒಂದು ಟೈಲರ್ ಜೋಕು ಹೇಳಿದಳು. ಒಂದೂರಿನಲ್ಲಿ ಒಬ್ಬನೇ ಒಬ್ಬ ಟೈಲರನಿದ್ದನಂತೆ. ಆತನ ಬಳಿ ಒಂದು ಮೀಟರು ಬಟ್ಟೆ ಕೊಟ್ಟರೆ ವಾಪಾಸು ಬರುತ್ತಾ ಇದ್ದಿದ್ದು ಅರ್ಧ ಮೀಟರು ಬಟ್ಟೆಯೇ. ಆತನ ಸಂಸಾರ ಬೆಳೆಯುತ್ತ ಹೋದಹಾಗೆ ಅದು ಕಾಲು ಮೀಟರಿಗೆ ಬಂದು ನಿಂತಿತು. ಜನ ರೋಸಿಹೋದರು. ಇನ್ನಾವುದೋ ಊರಿನಿಂದ ಇನ್ನೊಬ್ಬ ಟೈಲರನನ್ನು ಕರೆದು ಊರಿನಲ್ಲಿ ಸೆಟಲ್ ಮಾಡಿಸಿದರು. ಆತ ಒಂದು ಮೀಟರು ಬಟ್ಟೆ ಇಸಿದುಕೊಂಡು ಮುಕ್ಕಾಲು ಮೀಟರು ಬಟ್ಟೆ ಕೊಟ್ಟ. ಊರ ಜನ ಸೇರಿಕೊಂಡು ಜಗಳ ಮಾಡಿದರು. ಅವ ಜೋರಾಗಿ, ’ಹಯ್ಯೋ, ಅದಕ್ಯಾಕೆ ಬಡ್ಕೋತೀರಿ? ನನ್ ಮನೇಲಿ ಒಂದೇ ಕೂಸಿರೋದು. ಆ ಟೈಲರನ್ಮನೇಲಿ ಮೂರಿದಾವೆ ಗೊತ್ತಾ?’ ಅಂತನ್ನಬೇಕೆ?

ಜೋಕುಗಳು ಹಾಗಿರಲಿ, ಟೈಲರುಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಅಂತನ್ನಬಹುದು. ಕೆಲವು ಹೆಣ್ಣುಮಕ್ಕಳಿಗೆ ರೆಡಿಮೇಡ್ ಬಟ್ಟೆ ಕೊಳ್ಳುವ ಅಭ್ಯಾಸ ಇದ್ದರೆ ಇನ್ನು ಕೆಲವರಿಗೆ ಕಂಪಲ್ಸರಿಯಾಗಿ ಕ್ಲಾಥ್ ಪೀಸುಗಳನ್ನು ಕೊಂಡುಕೊಂಡೇ ಸಲ್ವಾರ್ ಕಮೀಜ್, ಮಕ್ಕಳಿಗೆ ಫ್ರಾಕು ಇತ್ಯಾದಿ ಹೊಲಿಸುವ ಅಭ್ಯಾಸ. ಸೀರೆಯುಡುವ ಹೆಣ್ಣುಮಕ್ಕಳು ರವಿಕೆ ಹೊಲಿಸಲೇಬೇಕು. ಹೇಗಾದರೂ ಟೈಲರು ಯಾವುದೇ ರೂಪದಲ್ಲಾದರು ನಮಗೆ ಬೇಕೇಬೇಕು. ಟೈಲರ್ ಎಂದರೆ ನನಗೆ ಥಟ್ಟನೆ ನೆನಪಿಗೆ ಬರುವದು ಇಬ್ಬರು ಹೆಂಗಸರು. ನಾನು ಪುಟ್ಟ ಹುಡುಗಿಯಾಗಿದ್ದಾಗಲಿಂದ ನನಗೆ ಥರಾವರಿ ಬಟ್ಟೆ ಹೊಲಿದುಕೊಡುತ್ತಿದ್ದ ನಮ್ಮ ಬೀದಿಯ ‘ಟೇಲರಾಂಟಿ’ ಒಬ್ಬರಾದರೆ, ತನಗೆ ಗೊತ್ತಿದ್ದ ಹೊಲಿಗೆಯ ಕಾಯಕವನ್ನ ನೂರಾರು ಹೆಣ್ಣುಮಕ್ಕಳಿಗೆ ದಿನಾಲೂನೂ ಹೇಳಿಕೊಟ್ಟು ಅವರೆಲ್ಲರ ಪುಡಿಕಾಸು ಸಂಪಾದನೆಗೆ ದಾರಿಯಾಗುತ್ತಿದ್ದ ಕೆಳಗಿನ ಬೀದಿಯ ನನ್ನ ಫ್ರೆಂಡು ದೀಪಾಳ ಅಮ್ಮ. ಅದು ಬಿಟ್ಟರೆ ಶಾಲೆಯ ಯೂನಿಫಾರ್ಮ್ ಹೊಲಿಸಲಿಕ್ಕಾಗಿಯೆ ವರ್ಷಕ್ಕೊಂದಾವರ್ತಿ ನೆನಪಾಗುತ್ತಿದ್ದ ಟೈಲರಾಗಿದ್ದ ನನ್ನ ತಂಗಿಯ ಫ್ರೆಂಡು ರೇಣುವಿನ ಅಪ್ಪ. ಈ ಮೂವರಲ್ಲಿ ಅರ್ಜೆಂಟಾಗಿ ಹೊಲಿಸಬೇಕಿದ್ದ, ರಿಪೇರಿಯಾಗಬೇಕಿದ್ದ ಬಟ್ಟೆಗಳು ಟೇಲರಾಂಟಿಯ ಬಳಿ ಹೋದರೆ, ಹೊಸಾ ಡಿಸೈನು ಅವಶ್ಯವಿದ್ದ ಬಟ್ಟೆಗಳು ತಿಂಗಳ ಮೊದಲೇ ದೀಪಾಳ ಅಮ್ಮನ ಮನೆ ಸೇರುವವು. ಬಟ್ಟೆ ಕೊಡುವ, ಕೇಳುವ ನೆವದಲ್ಲಿ ನಾವು ಇವರುಗಳ ಮನೆಗಳಿಗೆ ಆಗಾಗ ಭೇಟಿನೀಡಿ ಅಲ್ಲಿ ಹೇರಳವಾಗಿ ಕಾಣಬರುತ್ತಿದ್ದ ಮಕ್ಕಳ ಜತೆ ಆಟೋಟ ಮುಗಿಸಿ ಮನೆಗೆ ಮರಳುವ ವೇಳೆಗೆ ಬೈಯಿಸಿಕೊಳ್ಳಲು ರೆಡಿಯಾಗುತ್ತಿದ್ದುದು.

ಎಲ್ಲ ಟೈಲರುಗಳೂ ನಾವು ಹೆಣ್ಣುಮಕ್ಕಳಿಗೆ ಹೊಂದಿಕೆಯಾಗುವದಿಲ್ಲ. ನಾಲಕ್ಕೈದು ಮಂದಿಯೊಡನೆ ‘ಟ್ರಯಲ್ ಎಂಡ್ ಎರರ್ ’ ನಡೆದ ನಂತರವೇನೆ ಯಾರಾದರೊಬ್ಬರು ಮನಸ್ಸಿಗೆ ಹೊಂದುವದು. ಒಂದು ಥರಾ ವಧುವರಾನ್ವೇಷಣೆ ಮಾಡಿದ ಹಾಗೇನೆ ಇದೂನೂ!! ಶಿವಮೊಗ್ಗೆಯಲ್ಲಿ ನಾನು ಓದುತ್ತಿರುವಾಗ ನಾವಿದ್ದ ಜಯನಗರದಲ್ಲಿ ಒಬ್ಬ ಟೈಲರ್ ಬಹಳ ಹೆಸರುವಾಸಿಯಾಗಿದ್ದ. ಹೆಚ್ಚಿನ ಒಳ್ಳೆಯ ಟೈಲರುಗಳೆಲ್ಲ ಗಂಡಸರೇ ಆಗಿರುವುದೊಂದು ವಿಶೇಷ ಅನ್ನಿಸತ್ತೆ ನನಗೆ. ಈತನ ಬಳಿ ಒಮ್ಮೆ ಒಬ್ಬ ಹೆಂಗಸು ಅಳತೆ ಕೊಟ್ಟು ಬಟ್ಟೆ ಹೊಲಿಸಿಕೊಂಡಳೆಂದರೆ ಮುಗಿಯಿತು, ಆತನಿಗೆ ಪುನಹ ಅಳತೆ ಕೊಡುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಆ ಹೆಣ್ಣುಮಗಳು ದಪ್ಪಗಾದರೂ ತೆಳ್ಳಗಾದರೂ ಅಂದಾಜು ಮಾಡಿಯೇ ಈತ ಬಟ್ಟೆ ಹೊಲಿದುಕೊಡುವನು ಮತ್ತು ಅದು ಕರಾರುವಾಕ್ಕಾಗಿರುತ್ತ ಇತ್ತು!! ಜತೆಗೆ ಅತನ ಮಾತಿನ ಶೈಲಿ ಅತ್ಯಾಕರ್ಷಕ. ಒಮ್ಮೆ ಆತನ ಅಂಗಡಿಗೆ ಭೇಟಿನೀಡಿದ ಹೆಣ್ಣುಮಕ್ಕಳು ಬೇರೆಲ್ಲೂ ಹೋಗುತ್ತಿರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕೆ? ಆತನ ಒಂದೇ ಒಂದು ಕೊರತೆ ಎಂದರೆ ಕಾಯಿಸುವದು. ಎಂದೂ ಹೇಳಿದ ತಾರೀಖಿಗೆ ಆತ ಬಟ್ಟೆ ಕೊಟ್ಟ ಉದಾಹರಣೆಯೇ ಇಲ್ಲ. ಯಾವಾಗ ಆತನ ಅಂಗಡಿಗೆ ಹೋದರು ಅಲ್ಲಿ ಆತನನ್ನ ಬೈದಾಡುವ ಹೆಂಗಸೊಬ್ಬಳೂ, ಅಕೆಗೆ ನಗುಮುಖದಿಂದ ಸಮಾಧಾನ ಹೇಳುವ ಟೈಲರನೂ ಕಂಡುಬರುವರು. ನಾಲಕ್ಕೈದು ಬಾರಿ ಹೋಗಿಬಂದು ಬೇಸತ್ತು ಕೆಟ್ಟದಾಗಿ ಬೈದುಕೊಂಡರೂ ಮುಂದಿನ ಸಾರೆ ಆತನ ಬಳಿಯೇ ಹೋಗುವದು ಮಾಮೂಲು.

ಮೈಸೂರಿನ ನಾವಿದ್ದ ಲಷ್ಕರ್ ಮೊಹಲ್ಲಾ ಮನೆ ಬಳಿಯ ರಫೀಕನೂ ಬಹಳ ಒಳ್ಳೆಯ ಟೈಲರನೇ. ಅದರೆ ಅವನ ಬಳಿ ಡಿಸಿಪ್ಲಿನಿನ ಕೊರತೆಯಿತ್ತು. ಒಮ್ಮೊಮ್ಮೆ ಬೆಳಗ್ಗೆ ಕೊಟ್ಟ ಬಟ್ಟೆ ಸಂಜೆಗೇ ಹೊಲಿದುಕೊಟ್ಟರೆ ಇನ್ನೊಮ್ಮೆ ಬಟ್ಟೆಯನ್ನೇ ಒಟ್ಟಿದ ರಾಶಿಯ ನಡುವೆ ಕಳೆದುಹಾಕಿ ನಮಗೇ ಹುಡುಕಲು ಹೇಳುತ್ತಿದ್ದ. ಯಾವುದೋ ಡಿಸೈನು ಹೇಳಿಹೋದರೆ ಇನ್ಯಾವುದೋ ಡಿಸೈನು ನಮ್ಮ ಕೈಗೆ ಬರುವುದು. ‘ಇದೂ ಚನ್ನಾಗಿದೆ ಬಿಡಿ ದೀದಿ’ ಎಂದು ಆತ ಹಲ್ಲು ಕಿರಿಯುವಾಗ ಆತನ ಅಂಗಡಿಗೆ ಕಲ್ಲು ಹೊಡೆಯುವಷ್ಟು ಕೋಪ ಬರುವುದು. ನನ್ನ ಮದುವೆಯ ಎಲ್ಲ ಬಟ್ಟೆಗಳನ್ನ ಮಾತ್ರ ಆತ ಶ್ರದ್ಧೆಯಿಂದ ಹೇಳಿದ ಸಮಯದೊಳಗೆ ಸುಂದರವಾಗಿ ಹೊಲಿದುಕೊಟ್ಟಿದ್ದು, ನನ್ನ ಮಗುವಿಗೆ ತಾನೇ ಡಿಸೈನು ಮಾಡಿ ಮುದ್ದಾದ ಫ್ರಾಕು, ಜಂಪರುಗಳನ್ನು ಹೊಲಿದದ್ದು ನೆನೆಸಿ ಸುಮ್ಮನಾಗುವೆ. ಆತನ ಹೊಲಿಗೆಯ ಜತೆಗೇ ಆತನ ಕುಟುಂಬದ ಕಷ್ಟಸುಖಗಳೂ ನಮ್ಮ ಮನೆ ತಲುಪುತ್ತಿದ್ದರಿಂದ ಆತನಿಗೆ ಮಾರ್ಜಿನ್.

ಲೇಡೀಸ್ ಟೈಲರಾಗಿರುವದು ಸುಲಭದ ಕೆಲಸವೇನಲ್ಲ. ಆತನ ಬಳಿ ಮೂರು ತರಹದ ಕ್ಲೈಂಟುಗಳು ಬರುತ್ತಾರೆ. ಮೊದಲನೆಯವರು ತೀರ ಟ್ರೆಡಿಶನಲ್ ಶೈಲಿಯ ಬಟ್ಟೆ ಬಯಸುವವರು. ಇವರನ್ನು ಸಂಭಾಳಿಸುವದು ನುರಿತ ಟೈಲರನಿಗೆ ಆರಾಮು ಕೆಲಸ. ಎರಡನೆಯ ವರ್ಗದವರು ಟೈಲರನ ಮರ್ಜಿ ಕೇಳುವವರು. ಅವರಿಗೆ ತಮಗೆ ಯಾವ ರೀತಿಯ ಬಟ್ಟೆ ಹೊಂದುತ್ತದೆ ಅಂತಲೇ ಗೊತ್ತಿರುವದಿಲ್ಲ. ಟೈಲರು ಸಜೆಸ್ಟ್ ಮಾಡಿದ್ದನ್ನೆ ತಕರಾರು ಮಾಡದೆ ಒಪ್ಪಿಕೊಂಡುಬಿಡುತ್ತಾರೆ. ಇವರು ಟೈಲರನಿಗೆ ಬಲು ಪ್ರಿಯವಾದ ಕ್ಯಾಟಗರಿ. ಇವರ ಬಳಿ ಟೈಲರನಿಗೆ ತನ್ನ  ವೃತ್ತಿನೈಪುಣ್ಯವನ್ನ ಆರಾಮವಾಗಿ ಪ್ರಯೋಗಿಸುವ ಅವಕಾಶ ದೊರೆಯುತ್ತದೆ. ಮೂರನೆಯ ವರ್ಗದವರು ಬಯಸುವದು ಟ್ರೆಂಡೀ, ಫ್ಯಾಶನಬಲ್ ಬಟ್ಟೆಗಳನ್ನ. ಯಾವುದೋ ಸೀರಿಯಲ್ಲಿನಲ್ಲೋ, ಮೂವೀಯಲ್ಲೋ ನೋಡಿದ ಯಾವುದೋ ರವಿಕೆ, ಸಲ್ವಾರು, ಕುರ್ತಾ ಇವರಿಗೆ ಹಿಡಿಸಿಬಿಟ್ಟಿರುತ್ತದೆ. ಅದೇ ಡಿಜೈನು ಟೈಲರನಿಂದಲೂ ಬಯಸುತ್ತಾರೆ. ಆತನೂ ಅದೇ ಸೀರಿಯಲ್, ಸಿನೆಮಾ ನೋಡಿದ್ದರೆ ಪರವಾಯಿಲ್ಲ. ಸಾಧಾರಣವಾಗಿ ಈ ವರ್ಗದವರಿಂದ ಟೈಲರ್ ಪರದಾಡುವ ಅವಕಾಶಗಳು ಹೆಚ್ಚು. ಹೊಸ ಫ್ಯಾಶನೊಂದು ಮಾರ್ಕೆಟಿನಲ್ಲಿ ಜನಪ್ರಿಯವಾಗುತ್ತಿದ್ದಂತೆಯೆ ಟೈಲರುಗಳು ಅಪ್ಡೇಟ್, ಅಪ್ ಗ್ರೇಡ್ ಆಗದೆ ಹೋದರೆ ಔಟ್ಡೇಟೆಡ್ ಆಗುವ ಅಪಾಯಗಳೆ ಜಾಸ್ತಿ.

ಈಗೀಗ ನಗರಗಳಲ್ಲಿ ಹೆಚ್ಚಾಗಿ ಕಾಣಬರುತ್ತಿರುವ ‘ಬೂಟಿಕ್’ಗಳು ಈ ದಿಸೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಹೊಸದಾದ ಯಾವುದೇ ಟ್ರೆಂಡಿನ ಬಟ್ಟೆ ಹೊಲಿಸಬೇಕೆ? ಬೂಟಿಕ್ಗೆ ಹೋಗಿ.’ಟೈಲರನಿಗೆ ಕೊಡುವ ಮಾಮೂಲಿ ಚಾರ್ಜಿಗಿಂತ ಮೂರರಷ್ಟು ಕೊಟ್ಟರೂ ಪರವಾಯಿಲ್ಲ, ಫ್ಯಾಶನಬಲ್ ಕಟ್ ಇರುವುದಿಲ್ಲವೆ? ನಾವು ಚೆನ್ನಾಗಿ ಕಾಣುವದಕ್ಕೆ ಬೆಲೆ ಕಟ್ಟಲಿಕ್ಕಾಗುತ್ತದೆಯೆ? ’ ಅನ್ನುತ್ತಾಳೆ ಗೆಳತಿ ಉಮಾ. ಅವಳ ಜೊತೆ ರಾಜಾಜಿನಗರದ ಹೆಸರಾಂತ ಬೂಟಿಕ್ ಒಂದಕ್ಕೆ ಭೇಟಿ ನೀಡಿದೆ. ಅದರ ಒಡತಿ ಉಮಾ ತಂದ ಬಟ್ಟೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದರ ಕ್ವಾಲಿಟಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದಳು. ಇನ್ಯಾರೋ ಆಗತಾನೆ ಕೊಟ್ಟುಹೋಗಿದ್ದ ಬಟ್ಟೆಯೊಂದನ್ನ ಎತ್ತಿ ತೋರಿಸಿ ”ಇದು ನೋಡಿ ಉಮಾ, ಇಂಥ ಕಚಡಾ ಕ್ವಾಲಿಟಿ ಬಟ್ಟೆ ಎಲ್ಲ ತಂದುಕೊಟ್ಟು ಚೆನ್ನಾಗಿ ಹೊಲೀರಿ ಅಂತಾರೆ, ಇವ್ರು ಫ್ಯಾಶನ್ ಅಂದ್ರೆ ಏನಂದುಕೋಬಿಟ್ಟಿರ್ತಾರೋ? ನಿಮ್ಥರಾ ಸೆನ್ಸ್ ಆಫ್ ಫ್ಯಾಶನ್ ಇರೋರು ಕಡಿಮೆ ಬಿಡಿ” ಎಂದು ಹೊಗಳಿದಾಗ ಉಮಾ ಉಬ್ಬಿಹೋದಳು! “ಫೈವ್ ಯಿಯರ್ಸಿಂದ ಉಮಾ ನಮ್ ಹತ್ರಾನೇ ಬರ್ತಿದಾರ” ಎಂದು ಆಕೆ ನನ್ನ ಬಳಿ ಹೇಳಿದಾಗಲಂತು ಉಮಾ ಇನ್ನೈದು ವರುಷ ಅಲ್ಲಿಗೇ ಹೋಗುವದು ಖಾತ್ರಿಯಾಗಿಹೋಯಿತು. ಉಮಾ ಯಾವುದೋ ಒಂದು ಡಿಸೈನು ಸೆಲೆಕ್ಟ್ ಮಾಡಿದಾಗ ಅದನ್ನು ಬೂಟಿಕಮ್ಮ ಖಡಾಖಂಡಿತವಾಗಿ ನಿರಾಕರಿಸಿ “ಇದು ನಿಮಗೊಪ್ಪೊಲ್ಲ ಬಿಡಿ ಉಮಾ. ಹೊಲಿಯೋಳು ನಾನು, ಐ ನೋ ದ ಫ್ಯಾಬ್ರಿಕ್, ನಾನು ಹೇಳ್ತೀನಿ, ನಿಮ್ಮ ಪರ್ಸನಾಲಿಟೀಗೆ ಇದೇ ಡಿಸೈನ್ ಹೊಂದೋದು” ಎಂದು ಫರ್ಮಾನು ಹೊರಡಿಸಿದ ರೀತಿಗೇ ಉಮಾ ಮರುಳಾಗಿ ಬೆಕ್ಕಿನಂತೆ ಮುದುರಿ ಹೂಂಗುಟ್ಟಿದಳು. ಹೊರಗೆ ಬಂದಮೇಲೆ “ಎಂಥ ಅಮೇಜಿಂಗ್ ಡಿಸೈನರ್ ಗೊತ್ತಾ ಅವಳು!” ಎಂದು ಉಮಾ ಹೇಳುತ್ತಿದ್ದರೆ ನನಗೆ ನಗು ಉಕ್ಕಿಬರುತ್ತಿತ್ತು. ಬೂಟಿಕಮ್ಮ ಏನೇ ಹೇಳಲಿ, ಆಕೆ ನೀಡಿದ ಬಟ್ಟೆಗಳನ್ನು ಹೊಲಿಯುವಾತನೂ ಟೈಲರನೇ. ನಮ್ಮ ಇಡೀ ಫ್ಯಾಶನ್ ಉದ್ಯಮವೇ ಇಂತಹ ಸಾವಿರಾರು ನಿಷ್ಣಾತ ಟೈಲರುಗಳನ್ನು ಅವಲಂಬಿಸಿರುವಂತಹದು.

ಇನ್ನು ಟೈಲರುಗಳ ಬಗ್ಗೆ ಸಾಹಿತ್ಯಿಕ ಉಲ್ಲೇಖಗಳೂ ಅನೇಕವಿವೆ. ಜರ್ಮನಿಯ ಪ್ರಸಿದ್ಧ ಕಥೆಯಾದ ‘ದ ಫಾಲ್ಸ್ ಪ್ರಿನ್ಸ್’ ಬಹಳ ಮಹತ್ವಾಕಾಂಕ್ಷಿಯಾದ ಯುವಟೈಲರ್ ಲಬಾಕಾನನ ಕಥೆಯಾಗಿದೆ. ತನ್ನ ಒಡೆಯನ ಮನೆಯಿಂದ ಬಹಳ ಬೆಲೆಬಾಳುವ ಬಟ್ಟೆ ಕದ್ದು ಪಲಾಯನ ಮಾಡುವ ಲಬಾಕಾನನಿಗೆ ರಾಜಕುಮಾರ ಓಮರನ ಸಖ್ಯ ದೊರೆಯುತ್ತದೆ. ತನ್ನ ತಂದೆತಾಯಂದರಿಂದ ಬಹುಕಾಲ ದೂರವಿದ್ದ ಓಮರನಿಂದ ಆತನೇ ರಾಜಕುಮಾರನೆಂದು ತೋರ್ಪಡಿಸುವ ಎಲ್ಲ ದಾಖಲೆಗಳನ್ನು ಕದ್ದುಕೊಳ್ಳುವ ಲಬಾಕಾನ ರಾಜನ ಬಳಿ ಹೊಗುತ್ತಾನೆ. ನಿಜವಾದ ಓಮರ್ ಅಲ್ಲಿ ಬಂದಾಗ ಗೊಂದಲವಾಗಿ ಇಬ್ಬರ ಮಧ್ಯೆ ನಿಜವಾದ ರಾಜಕುಮಾರ ಯಾರೆಂದು ತಿಳಿಯಲು ಸ್ಪರ್ಧೆ ಏರ್ಪಡುತ್ತದೆ. ರಾಣಿ ನಿಜವಾದ ರಾಜಕುಮಾರನಿಗೆ ಒಂದು ಪೋಷಾಕು ತಯಾರಿಸಲು ಹೇಳಿದಾಗ ಲಬಾಕಾನ ವಿಜಯಿಯಾಗುವನು. ಕೊನೆಗೆ ದೇವತೆಯೊಬ್ಬಳು ಇಬ್ಬರೆದುರಿಗೂ ಎರಡು ಪೆಟ್ಟಿಗಳನ್ನಿಟ್ಟು ಒಂದನ್ನು ಆಯ್ದುಕೊಳ್ಳಲು ಹೇಳುತ್ತಾಳೆ ಆಗ ರಾಜಕುಮಾರ ಓಮರ್ ಕೀರ್ತಿ ಮತ್ತು  ವೈಭವದ ಪೆಟ್ಟಿಗೆಯನ್ನು ಆಯ್ದುಕೊಂಡರೆ, ಲಬಾಕಾನ ಐಶ್ವರ್ಯ ಮತ್ತು ಸಂತಸದ ಪೆಟ್ಟಿಗೆಯನ್ನು ತೆಗೆದುಕೊಳ್ಳುತ್ತಾನೆ. ಓಮರನ ಪೆಟ್ಟಿಗೆಯಲ್ಲಿ ಕಿರೀಟವಿದ್ದರೆ ಲಬಾಕಾನನಿಗೆ ಲಭಿಸುವದು ಸೂಜಿ ಮತ್ತು ದಾರ. ಓಮರನ ಕ್ಷಮೆಯಿಂದ ಮನೆಗೆ ಮರಳುವ ಲಬಾಕಾನ ತನ್ನ ಒಡೆಯನ ಬಟ್ಟೆ ಕದ್ದಿದ್ದಕ್ಕೆ ಶಿಕ್ಷೆ ಅನುಭವಿಸುತ್ತಾನೆ. ಮತ್ತೊಂದು ಊರಿಗೆ ಹೋಗಿ ತನ್ನ ಶ್ರಮದಿಂದ ದುಡಿದು ಗಳಿಸಲು ಆರಂಭಿಸುತ್ತಾನೆ. ಅತನ ಪೆಟ್ಟಿಗೆಯಲ್ಲಿದ್ದ ಸೂಜಿ ದಾರಗಳು ಆತನಿಗೆ ಬಟ್ಟೆ ಹೊಲಿದುಕೊಟ್ಟು ಖ್ಯಾತಿ ಗಳಿಸುವಂತೆ ಸಹಾಯ ಮಾಡುತ್ತವೆ.

ಇನ್ನು ತನ್ನ ಗಂಡ ಯೂಲಿಸಿಸ್ ಯುದ್ಧಕ್ಕೆ ಹೋದಾಗ ತನ್ನನ್ನು ಮದುವೆಯಾಗಬಂದ ಗ್ರೀಕ್ ವೀರರನ್ನು ತನ್ನ ವರುಷಗಟ್ಟಲೆ ಮುಗಿಯದ ಹೊಲಿಗೆ, ನೇಯ್ಗೆಗಳಿಂದ ದೂರವಿಟ್ಟ ಪೆನೆಲಪಿಯ ಪ್ರೇಮ ಗ್ರೀಕ್ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದೆ. ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಬರೆದಿರುವ ಸುಪ್ರಸಿದ್ಧ ಕಥೆ ‘ದ ಎಂಪರರ್ಸ್ ನ್ಯೂ ಕ್ಲೋದ್ಸ್’ ನಲ್ಲಿ ಠಕ್ಕರಿಬ್ಬರನ್ನು ತನ್ನ ಬಟ್ಟೆ ಹೊಲಿಯಲು ನಿಯಮಿಸುವ ವಿಲಾಸೀ ರಾಜನೊಬ್ಬ ಫಜೀತಿಗೊಳಗಾದ ವಿವರಣೆಯಿದೆ. ಠಕ್ಕರಿಬ್ಬರು ತಮ್ಮ ಬಳಿಯಿರುವ ವಿಶೇಷ ಬಟ್ಟೆ ಕೇವಲ ಬುದ್ಧಿವಂತರಿಗೆ ಮಾತ್ರ ಕಾಣುವದೆಂದೂ ಪೆದ್ದರಿಗೆ ಕಾಣಬರದೆಂದು ಹೇಳಿ ತಾವು ಪೆದ್ದರೆಂದು ಒಪ್ಪಿಕೊಳ್ಳಲು ರೆಡಿಯಿಲ್ಲದ ರಾಜನಾದಿಯಾಗಿ ಎಲ್ಲರಿಗೂ ಮಂಕುಬೂದಿ ಎರಚಿ ಕೊನೆಗೆ ರಾಜ ನಗ್ನನಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ಮಗುವೊಂದು ಜೋರಾಗಿ ನಕ್ಕು ಎಲ್ಲರ ಪೆದ್ದುತನವನ್ನೂ ಬಯಲುಮಾಡುತ್ತದೆ. ‘ಸೀಮ್ಸ್ಟ್ರೆಸ್ ಆಫ್ ಸಾಲ್ಸ್ಬರಿ’ ಎಂಬ ಆಂಗ್ಲ ಜಾನಪದ ಕಥೆಯಲ್ಲಿ ತನ್ನ ಭಾವೀ ಪತ್ನಿಯನ್ನು ಆಯ್ಕೆ ಮಾಡಲು ಆಗಮಿಸಲಿರುವ ರಾಜಕುಮಾರನನ್ನು ಬರಮಾಡಿಕೊಳ್ಳಲು ಕಾತುರರಾದ ಆಸ್ಥಾನದ ಹೆಂಗಸರು ತಮ್ಮ ಬಟ್ಟೆ ಹೊಲಿಯಲು ಟೈಲರಳೊಬ್ಬಳನ್ನು ನೇಮಿಸುತ್ತಾರೆ. ಆಕೆಗೆ ತಮ್ಮ ಬಟ್ಟೆಗೆ ಹೆಚ್ಚುಹೆಚ್ಚು ಫ್ರಿಲ್, ಬೋ ಇತ್ಯಾದಿ ಹಾಕಿ ಸುಂದರವನ್ನಾಗಿಸಲು ಅಣತಿ ನೀಡುತ್ತಾರೆ. ಆ ಬಟ್ಟೆಗಳು ಎಷ್ಟು ಭಾರವಾಗುತ್ತವೆಂದರೆ ರಾಜಕುಮಾರ ಬಂದು ನಿಂತಾಗ ಎಲ್ಲರ ಬಟ್ಟೆಗಳೂ ಹರಿದುಹೋಗುತ್ತವೆ. ಅವರೆಲ್ಲರ ನಡುವೆ ಸರಳವಾದ ವಸ್ತ್ರಧರಿಸಿ ನಿಂತ ಟೈಲರಳೇ ಸರಿಯೆಂದು ನಿರ್ಧರಿಸಿದ ರಾಜಕುಮಾರ ಆಕೆಯನ್ನೆ ವರಿಸುತ್ತಾನೆ!!

ಫ್ಯಾಶನ್ ಶೋಗಳಲ್ಲಿ ಗೊಂಬೆಗಳ ರೀತಿ ಬಟ್ಟೆ ಧರಿಸಿ ವಯ್ಯಾರದಿಂದ ಕ್ಯಾಟ್ವಾಕ್ ಮಾಡುತ್ತ ರಾಂಪಿನ ಮೇಲೆ ಓಡಾಡುವ ಲಲನೆಯರ ಚೆಂದದ ಹಿಂದೆ ನೂರಾರು ಟೈಲರುಗಳ ಹಗಲುರಾತ್ರೆಗಳ ಶ್ರಮವಿದೆ. ಇಡೀದಿನ ಹೊಲಿಗೆ ಯಂತ್ರದೆದುರು ಕೂತು ಒಂದೇ ಸವನೆ ಹಲವಾರು ಥರದ ಬಟ್ಟೆಹೊಲಿಯುವುದು ಸುಲಭದ ಕೆಲಸವೇನಲ್ಲ. ಬೆಂಗಳೂರಿನ ಹಾಗೂ ಸುತ್ತಮುತ್ತಲ ಪ್ರದೇಶಗಳ ಟೆಕ್ಸ್ಟೈಲ್ ಹೊಲಿಗೆ ಉದ್ಯಮ ಸಾವಿರಾರು ಹೆಣ್ಣುಮಕ್ಕಳಿಗೆ ಉದ್ಯೋಗ ದೊರಕಿಸಿದೆ. ಇವರ ಬಿಡುವಿರದ ದುಡಿಮೆ, ಪಾಡುಗಳ ಬಗ್ಗೆ ಇತ್ತೀಚೆಗೆ ಜೋರಾಗಿ ಚರ್ಚೆ ಕೂಡ ನಡೆಯುತ್ತಿದೆ. ಎಷ್ಟೋ ಹೆಸರಾಂತ ಡಿಸೈನರುಗಳು ಇಂದು ತಮ್ಮ ಬ್ರ್ಯಾಂಡುಗಳಿಗಾಗಿ ಪ್ರಾದೇಶಿಕ ಟೈಲರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಹೆಸರು ಕಾಣದಿದ್ದರೂ ನಮ್ಮ ಟೈಲರುಗಳು ಇಂದು ಪ್ಯಾರಿಸ್, ಮಿಲಾನುಗಳವರೆಗೂ ತಮ್ಮ ನೈಪುಣ್ಯವನ್ನು ಕೊಂಡೊಯ್ದಿದ್ದಾರೆ. ಜತೆಗೇ ಜನಪ್ರಿಯವಾಗುತ್ತಿರುವ ವೈಭವೋಪೇತ ಭಾರತೀಯ ಮದುವೆಗಳ ಮೂಲಕವೂ ನಮ್ಮ ಟೈಲರುಗಳ ಕುಶಲತೆ, ನಾಜೂಕು ಎಲ್ಲದಕ್ಕೂ ಹೊಸ ಮಾರುಕಟ್ಟೆ ದೊರಕತೊಡಗಿದೆ. ಫ್ಯಾಶನ್ ಶೋಗಳಿಂದ ಹಿಡಿದು ಮದುವೆಗಳವರೆಗೂ, ನಗರಗಳಿಂದ ಹಿಡಿದು ನಮ್ಮ ಹಳ್ಳಿಯ ಬೀದಿಯವರೆಗೂ ಸರ್ವವ್ಯಾಪಿಯಾಗಿ ನಮ್ಮ ರಂಗುರಂಗಿನ ಬಟ್ಟೆಗಳಿಗೆ ತಮ್ಮ ಹೊಲಿಗೆಯ ಮೆರುಗು ನೀಡುವ ನಮ್ಮ ಟೈಲರುಗಳಿಗೊಂದು ಪುಟ್ಟ ವಂದನೆ.

.

ಪೋರಬಂದರದ ಆತ್ಮ ಹುಡುಕುತ್ತ…

ಎರಡು ದಿನಗಳಿಂದ ನನಗೆ ರಾಜುಭಾಯಿಯ ಬಕವಾಸ್ ಕೇಳಿಕೇಳೀ ಸಾಕಾಗಿಹೋಗುತ್ತ ಬಂದಿತ್ತು. ರಾಜುಭಾಯಿಗಿಂತ ಪೀಚಲುಮನುಷ್ಯ ಇರುವದು ಸಾಧ್ಯವೇ ಇಲ್ಲ ಎಂದು ನಾನು ಆಣೆ ಮಾಡಿ ಹೇಳಬಲ್ಲೆ. ಅವನ ರೊಮ್ಯಾನ್ಸುಗಳ ಕಥೆಗಳೂ ಕೂಡ ಅವನ ದೇಹದ ಪರಿಸ್ಥಿತಿಯಿಂದ ವಿಚಲಿತಗೊಂಡು ತತ್ತರಿಸುತ್ತ ಸ್ವತಂತ್ರವಾಗಲು ಕಾತರಿಸಿಕೊಂಡಿದ್ದವು ಎಂದು ಕಾಣುತ್ತದೆ. ಫಾರಿನ್ನಿನಿಂದ ಬಂದಿದ್ದ ಹೆಂಗಸೊಬ್ಬಳು ಈತನಲ್ಲಿ ಅನುರಕ್ತಳಾದ ಕಥೆಯಿಂದ ಹಿಡಿದು ಗರ್ಬಾ ನೃತ್ಯಗಳ ಸುಪರ್ಫಿಶಿಯಲ್ ಪ್ರೇಮಪ್ರಸಂಗಗಳ ತನಕ ಎಲ್ಲವನ್ನೂ ಕೇಳಲೆಬೇಕಾಗಿದ್ದ ವಿಶೇಷಕರ್ಮ ನನಗೆ ಒದಗಿ ಬಂದಿತ್ತು. ಜತೆಗೆ ಗುಜರಾತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಪಿಡುಗಾದ ಪಾನ್ ಬೀಡಾಗಳ ಕಾಟ ಬೇರೆ. ರಾಜು, ಶಶಿ ಇಬ್ಬರೂ ನಾಳೆ ಬೆಳಗಾದರೆ ಪರಪಂಚದ ಬೀಡಾಸ್ಟಾಕೇ ಮುಗಿದುಹೋಗಿಬಿಡುವುದೊ ಎಂಬ ಆತಂಕ ಇರುವವರ ಹಾಗೆ ಬೀಡಾ ಅಗಿಯುವುದು, ಉಗಿಯುವುದು ನಡೆಸುತ್ತ ಇದ್ದರು. ಬೀಡಾ ಅಂಗಡಿಗಳೋ, ನಮ್ಮ ಕಿರಾಣಿ ಅಂಗಡಿಯಲ್ಲಿರುವ ಸಾಮಾನುಗಳಿಗಿಂತ ಹೆಚ್ಚಿನ ವಸ್ತುಗಳಿಂದ ಸುಸಜ್ಜಿತವಾಗಿ ಕಂಗೊಳಿಸುತ್ತ ಇದ್ದವು. ಮಗಳು ‘ಮಾ, ಇನ್ನೆಷ್ಟು ದೇವಸ್ಥಾನ ನೋಡಬೇಕೂ? ನಂಗೆ ಜನ್ರು ಎಲ್ಲ ನೂಕಾಡಿ ಕಾಲು ತುಳೀತಾರೆ..ನಾನು ಬರೊಲ್ಲಾಆಆ..’ ಎಂದು ರಾಗ ಎಳೆಯುತ್ತ ಇದ್ದಳು. ಮಾರವಾಡದ ಗ್ರಾಮೀಣ ಹೆಂಗಸರ ಬಲಪ್ರದರ್ಶನದ ಅರಿವು ನನಗೂ ಆಗಲೆ ಆಗಿದ್ದರಿಂದ ನನಗೂ ಹೂಂಗುಟ್ಟಬೇಕು ಅನಿಸುತ್ತಿತ್ತು. ಕ್ರಿಸ್ಮಸ್ ರಜಕ್ಕೆ ಗುಜರಾತಿನ ಜಾಮನಗರಕ್ಕೆ ನನ್ನ ಮೈದುನನ ಮನೆಗೆ ಭೇಟಿನೀಡಿದ್ದ ನಾವು ಸುತ್ತಮುತ್ತಲ ವಿಶೇಷಸ್ಥಳಗಳನ್ನು ನೋಡಲು ಹೊರಟಿದ್ದೆವು. ನನ್ನ ಮದುವೆಯಾದಂದಿಂದ ಕಾಟಕೊಡುವದರಲ್ಲಿ ಡಾಕ್ಟರೇಟು ಪದವಿ ಪಡೆಯುವಂತೆ ಆಗಿದ್ದ ನನ್ನ ಮೈದುನ ‘ಈ ಡ್ರೈವರನ್ನೇ ಕರಕೊಂಡು ಹೋಗಿ..’ ಎಂದು ನಗುತ್ತ ರೆಕಮೆಂಡೇಶನ್ನು ನೀಡಿದಾಗಲೆ ನಾನು ಮುಂದೆ ಬರಲಿದ್ದ ಅಪಾಯವನ್ನು ಗ್ರಹಿಸಬೇಕಾಗಿತ್ತು.
’ನೋಡಿ ರಾಜುಭಾಯಿ, ನಾನು ಇಲ್ಲಿ ಈ ಟ್ರಿಪ್ಪಿಗೆ ಬಂದಿರುವುದೆ ಪೋರಬಂದರಿನ ಸಲುವಾಗಿ. ನೀವು ನನಗೆ ಗಾಂಧೀಜಿ ಹುಟ್ಟಿದ ಮನೆ ಸರಿಯಾಗಿ ತೋರಿಸಿಬಿಡಬೇಕು. ಇಲ್ಲದಿದ್ದರೆ ನಿಮ್ಮ ಪೇಮೆಂಟಿಂದ ಅರ್ಧ ಕಟ್!!’ ಎಂದು ರಾಜುಭಾಯಿಯನ್ನು ಬೆದರಿಸಿದ್ದೆ. ಕಳೆದೆರಡು ದಿನಗಳ ನನ್ನ ಅಬ್ನಾರ್ಮಲ್ ಮೌನದಿಂದ ಬೇಸತ್ತಿದ್ದ ಆತ ನನ್ನನ್ನು ಪ್ರಸನ್ನಗೊಳಿಸಲು ಇದೇ ಸಮಯವೆಂದು ಖಾತ್ರಿ ಮಾಡಿಕೊಂಡು ತನ್ನ ಕೆಂಪುಹಲ್ಲುಗಳನ್ನು ತೋರಿಸುತ್ತ, ’ಅರೆ ಬೆಹನ್ ಜೀ. ಆಪ್ ಡೋಂಟ್ ವರಿ ಕರೋಜಿ. ನಾನು ನಿಮಗೆ ಬರೆ ಗಾಂಧೀಜಿ ಮನೆಯೇನು, ಇವತ್ತು ಪೋರಬಂದರದ ಆತ್ಮವನ್ನೆ ತೋರಿಸ್ತೇನೆ. ದಂಗಾಗಿಬಿಡಬೇಕು ನೀವು. ಮುಂದಿನ ವರುಷ ಬಂದು ಟೂರ್ ಹೋಗಲಿಕ್ಕೆ ನನ್ನನ್ನೆ ಹುಡುಕ್ತೀರ ನೋಡಿ!!’ ಅಂದ. ಮಾಧವಪುರದ ಹಸಿರು ಬಿಸಿಲ ದಾರಿಗೆ ತಂಪು ಹುಯ್ಯುತ್ತ ಇತ್ತು. ಪೋರಬಂದರು ಪ್ರವೇಶಿಸುವ ಮುನ್ನ ದಾರಿಯುದ್ದ ಹರಡಿರುವ ಚಂದದ ಬೀಚುಗಳು. ಕಂಡಲ್ಲೆಲ್ಲ ಇಳಿದು ಮನಸಾರ ಆನಂದಿಸಿದ್ದಾಯಿತು. ವಿಪರೀತ ಕುಸಿಯುತ್ತ ಇದ್ದ ಮಳಲನ್ನೂ ಲೆಕ್ಕಿಸದೆ ನೀರಿಗೆ ನುಗ್ಗಿ ದೊಡ್ಡ ಶಂಖ, ಚಿಪ್ಪುಗಳನ್ನ ಆಯ್ದಿದ್ದಾಯಿತು. ಮಗಳ ಮುಖ ಅರಳಿದ್ದು ನೋಡಿ ನಮಗು ಸಮಾಧಾನ. ಹಾಗೂ ಹೀಗೂ ಅರ್ಧ ದಿನವೇ ಬೀಚುಗಳಲ್ಲಿ ಕಳೆದುಹೋಯಿತು. ಇನ್ನು ಲೇಟಾದರೆ ಗಾಂಧೀಜಿ ಮನೆ ತಪ್ಪಿಹೋದೀತು, ಸಂಜೆ ಆರು ಗಂಟೆಗೆ ಪ್ರವೇಶ ಮುಗಿದುಹೋಗುತ್ತದೆ ಎಂದು ಶಶಿ ಎಚ್ಚರಿಸಿದಾಗ ಗಡಿಬಿಡಿ.
’ಮ್ಯಾಡಂಜೀ, ನಿಮ್ಮನ್ನ ಒಂದು ಜಾಗಕ್ಕೆ ಕರ್ಕೊಡುಹೋಗಿ ಚಾಯ್ ಕುಡಿಸ್ತೇನೆ. ಅಂತಹ ಚಾಯ್ ನೀವು ಪ್ರಪಂಚದಲ್ಲೆ ಎಲ್ಲೂ ಕುಡಿದಿರಲಿಕ್ಕಿಲ್ಲ. ಬೀಚಲ್ಲಿ ಓಡಾಡಿ ಸುಸ್ತಾಗಿದೀರಿ. ಈ ಸೂಪರ್ ಚಾಯ್ ಕುಡಿದು ಫಟಾಫಟ್ ಫ್ರೆಶ್ ಆಗಿಬಿಡಿ!’ ಅನ್ನುತ್ತಲೆ ರಾಜು ನಮ್ಮನ್ನು ಒಂದು ನೂರು ವರುಷಗಳ ಪುರಾತನ ಪಳೆಯುಳಿಕೆಯಂತೆ ಕಾಣುತ್ತಿದ್ದ ಚಾದುಕಾನಿನ ಬಳಿ ನಿಲ್ಲಿಸಿದ. ಅಂಗಡಿಯವ ಆಗಷ್ಟೆ ಹಾಲು ಕುದಿಸಿದ್ದವ ರಾಜುವನ್ನು ನೋಡುತ್ತಲೆ ಹರುಷದಿಂದ ಒಂದು ಕೂಗು ಹಾಕಿ ನಾಲಕ್ಕು ಚಹಾ ಕಳಿಸಿಕೊಟ್ಟ. ಒಂದು ಗುಟುಕು ಹೀರುತ್ತಲೆ ಶಶಿ, ’ರಾಜು, ಇನ್ನೂ ನಾಲಕ್ಕು ಹೇಳಿಬಿಡು!’ ಅಂದರು. ಅಷ್ಟು ಸ್ವಾದಿಷ್ಟವಾಗಿತ್ತು ಚಹಾ. ಅಲ್ಲೆ ಬದಿಯಲ್ಲಿ ಒಂದು ಅಂಗಡಿಯಲ್ಲಿ ಒಂದು ತರಹ ಗಬ್ಬು ವಾಸನೆ. ನಾಲಕ್ಕೈದು ಜನ ದಾರಗಳನ್ನು ಗೂಟಗಳಿಗೆ ಹಾಕಿ ಬಣ್ಣ ಉಜ್ಜುತಾ ಇರುವುದು ಕಾಣುತ್ತಿತ್ತು. ರಾಜು “ಇನ್ನೇನು ಸಂಕ್ರಾಂತಿ ಬಂತಲ್ಲಾ, ಅವತ್ತೆ ಇಲ್ಲೆಲ್ಲ ಗಾಳಿಪಟದ ಹಬ್ಬ. ಈಕಡೆ ಪೋರಬಂದರಿನ ಗಾಳಿಪಟಗಳು ಬಹಳ ಫೇಮಸ್. ನಾನೂ ಜಾಮನಗರದಿಂದ ಅವತ್ತು ಇಲ್ಲಿ ಬಂದುಬಿಡ್ತೇನೆ, ಪಟಹಾರಿಸೋದಕ್ಕೆ!!” ಎಂದು ಗಾಡಿ ಹೊರಡಿಸಿ ಒಂದು ಅಂಗಡಿಯ ಎದುರು ನಿಲ್ಲಿಸಿದ. ನಾವು ಕನಸುಮನಸಿನಲ್ಲೂ ಊಹಿಸಲಾರದಷ್ಟು ಬಣ್ಣ, ಡಿಜೈನುಗಳ ಗಾಳಿಪಟಗಳು ಅಲ್ಲಿದ್ದವು. ಆ ಅಂಗಡಿಯೋ, ನಮ್ಮಲ್ಲಿಯ ರೇಶಿಮೆಸೀರೆ ಮಾರುವ ವೈಭವೋಪೇತ ಮಳಿಗೆಗಳಂತೆ ಮಿಂಚುತ್ತಿತ್ತು.
gandhiji-house

ಗಾಂಧೀಜಿಯವರ ಮನೆ

ಗಾಂಧೀಜಿಯವರ ಹುಟ್ಟಿದ ಮನೆ ತಲೆಬಾಗಿಲು ತಲುಪುವ ತನಕ ಆ ಮನೆ ಅಲ್ಲಿದೆ ಎಂದು ತಿಳಿಯುವುದೇ ಇಲ್ಲ. ಅಷ್ಟೊಂದು ಜನಭರಿತ ಜಾಗವದು. ಒಂದು ಕಿರಿದಾದ ಓಣಿ. ರಾಶಿ ವಾಹನಗಳು. ಈ ಶತಮಾನದ್ದಲ್ಲವೆಂದು ಕಂಡರು ಮಜಬೂತಾಗಿ ನಿಂತಿರುವ ಕಟ್ಟಡಗಳು. ಇಲ್ಲೆಲ್ಲ ಪುಟ್ಟಗಾಂಧಿ ಓಡಾಡಿರಬೇಕಲ್ಲ ಎಂದು ಕಲ್ಪಿಸಿಕೊಂಡರೇನೆ ಖುಶಿಯಾಗುತ್ತಿತ್ತು. ಪುಣ್ಯಕ್ಕೆ ಗಾಂಧೀಜಿಯವರ ಮನೆಯಿರುವ ಜಾಗವನ್ನು ಸುಮಾರುಮಟ್ಟಿಗೆ ಚೆನ್ನಾಗಿಯೆ ಕಾಯ್ದಿರಿಸಿಕೊಳ್ಳಲಾಗಿದೆ. ಪುಟ್ಟಪುಟ್ಟ ಕೋಣೆಗಳು, ಪುಟ್ಟ ಕಿಟಕಿಗಳು, ಬಿಸಿಲುಮಚ್ಚು, ಓದುವ ಕೋಣೆ, ಹೆಂಗಸರ ಕೋಣೆ, ಇಕ್ಕಟ್ಟಾದ ಪ್ಯಾಸೇಜುಗಳು. ಆಗಿನ ಕಾಲಕ್ಕೆ ಅನುಕೂಲಸ್ಥರ ಮನೆಯ ಹಾಗೆ ಕಾಣುತ್ತದೆ. ಗಾಂಧೀಜಿ ಹುಟ್ಟಿದ ಜಾಗವನ್ನು ರಂಗೋಲೆ, ಹೂಗಳಿಂದ ಅಲಂಕರಿಸಿದ್ದಾರೆ. ನೋಡುತ್ತ ಇದ್ದರೆ ಮನಕ್ಕೆ ಏನೋ ತಂಪು ಆವರಿಸಿದ ಹಾಗೆನಿಸಿ ಸುಮ್ಮನೆ ನಿಂತುಕೊಂಡಿದ್ದೆವು. ಅಲ್ಲಿದ್ದ ಎಲ್ಲರೂ. ಮತ್ತೆ ಗಾಂಧೀಜಿಯ ಅಪರೂಪದ ಜಿತ್ರ, ಮನೆಯ ವಸ್ತುಗಳಿರುವ ಮ್ಯೂಸಿಯಂ. ಅಲ್ಲೇ ಒಬ್ಬ ಮನುಷ್ಯ, ಗ್ಯಾರಂಟಿ ಬರಹಗಾರನಿರಬೇಕು, ನನ್ನ ಬಳಿ ಬಂದು ನಿಂತು ಜೋರಾಗಿ – ‘ಆತಂಕದ ಮೋಡಗಳ ಎಡೆಯಿಂದಲೆ ಅಲ್ಲವೆ ಬೆಳಕಿನ ಕಿರಣಗಳು ಉದಯಿಸುವುದು? ಇವನೂ ಹೀಗೆಯೆ ಬಂದ. ನಿರೀಕ್ಷೆ ಮಾಡೋಣ, ನಿರೀಕ್ಷೆ ಮಾಡೋಣ..’ ಎಂದು ನಾಟಕೀಯವಾಗಿ ಹೇಳಿ ಹೊರಟುಹೋದ. ರಾಜುಭಾಯಿ “ನಿಮಗೆ ಅವರು ಗೊತ್ತಾ ಬೆಹನ್ ಜೀ?” ಎಂದು ಆತಂಕದಿಂದ ಕೇಳಿದ. ಇಲ್ಲ ಅಂದೆ. “ಈ ರೈಟರ್ ಲೋಗ್ ಹೀಗೆಯೆ. ಸ್ವಲ್ಪ ಹುಚ್ಚರಿರ್ತಾರೆ. ಅವರ ತಪ್ಪಿಲ್ಲ. ಮಾ ಸರಸ್ವತಿಯ ಭಕ್ತಿ ಮಾಡುವವರು ಹೀಗೆಯೆ. ಅಕ್ಷರದಲ್ಲಿ ಕಳೆದುಹೋಗಿರ್ತಾರೆ” ಎಂದು ಸಿಂಪಥಿ ವ್ಯಕ್ತಪಡಿಸಿದ. ಶಶಿ ಬಾಯಿಗೆ ಕೈಮರೆಮಾಡಿಕೊಂಡು ನಗತೊಡಗಿದರು.
santokbens-house

ಚಿತ್ರದಲ್ಲಿ ಕಾಣುವ ಕಾಂಪೌಂಡಿನ ಹಸಿರುಮನೆ ಸಂತೋಕ್ ಬೆನಳದು

ಪೋರಬಂದರದ ಇತಿಹಾಸದ ಜತೆಗೇ ಗಾಂಧೀಜಿಯವರಂತೆಯೆ ಇನ್ನೊಂದು ಹೆಸರೂ ಸೇರಿಕೊಂಡಿದೆ. ಅದು ಸಂತೋಕ್ ಬೆನ್ ಜಡೇಜಾಳದು. ಒಂದು ಕಾಲದಲ್ಲಿ ಇಡೀ ಪೋರಬಂದರನ್ನೆ ಟೆರರೈಜ್ ಮಾಡಿದ್ದ ಹೆಸರದು. ಈಗಲು ಅಲ್ಲಿ ಸಂತೋಕ್ ಬೆನಳ ಹೆಸರೆತ್ತಿದರೆ ಜನ ಬೆದರುತ್ತಾರೆ. ತನ್ನ ಗಂಡನ ಮರಣಾನಂತರ ಮಾಫಿಯಾಲೋಕದಲ್ಲಿ ಪ್ರವರ್ಧಮಾನಕ್ಕೇರಿದ ಈಕೆ ಮಾಡಿಸಿದ ಕೊಲೆಗಳಿಗೆ ಲೆಕ್ಕವೇ ಇಲ್ಲ, ಆಕೆಯ ಮನೆಯ ಎದುರಲ್ಲಿ ಪೋರಬಂದರದ ದೊಡ್ಡ ಡ್ರೈನೇಜಿದೆ. ಅದರೊಳೆಗ ಯಾರೋ ನುಸುಳಲು ಆಗದಷ್ಟು ಕೊರಚಲು, ಮುಳ್ಳುಕಂಟಿ ಅಲ್ಲಿ ತುಂಬಿಕೊಂಡಿವೆ. ಸಂತೋಕ್ ಬೆನ್ ತನಗಾಗದವರನ್ನು ಕೊಲ್ಲಿಸಿ ಹೆಣಗಳನ್ನು ಇಲ್ಲಿಯೆ ದೂಕಿಸುತ್ತಿದ್ದಳಂತೆ. ಇನ್ನುವರೆಗು ಸುಮಾರು ಹೆಣಗಳು ಪತ್ತೆಯಾಗಿಲ್ಲ. ಆಕೆಯ ಗ್ಯಾಂಗಿನ ಹುಡುಗರು ಸಂಜೆಹೊತ್ತು ತಿರುಗಾಡುವಾಗ ಹುಡುಗಿಯರು ಮನೆಗಳಲ್ಲಿ ಅಡಗಿಕೂರುತ್ತ ಇದ್ದರಂತೆ. ಆಕೆಯ ಹಿರಿಸೊಸೆಯನ್ನು ಆಕೆಯ ಎರಡನೆ ಮಗನೆ ಬರ್ಬರವಾಗಿ ಕೊಂದ. ಇಬ್ಬರೂ ಮಗಂದಿರು ಜೈಲುಹವಾ ತಿಂದರು. ಒಬ್ಬ ತಪ್ಪಿಸಿಕೊಂಡು ಭೂಗತನಾದ. ಶಬನಾ ಆಜ್ಮಿ ಅಭಿನಯದ ‘ಗಾಡ್ ಮದರ್’ ಚಲನಚಿತ್ರ  ಸಂತೋಕ್ ಬೆನಳನ್ನು ಆಧರಿಸಿದ್ದು ಎನ್ನಲಾಗುತ್ತದೆ. ಸಂತೋಕ್ ಜೈಲಿನಲ್ಲಿದ್ದಾಳೆಂದು ಕೆಲವರು ಹೇಳಿದರೆ ಕೆಲವರು ಬೇಲ್ ಪಡೆದು ರಾಜಕೋಟದಲ್ಲಿದ್ದಾಳೆಂದು ಹೇಳುತ್ತಾರೆ. ಪೋರಬಂದರದಲ್ಲಿ ಆಕೆಯ ಎರಡು ಮನೆಗಳಿವೆ. ರಾಜು ಈ ಕಥೆಯನ್ನೆಲ್ಲ ಹೇಳಿ “ನಾವು ವಾಪಸು ಹೋಗೋ ದಾರಿಯಲ್ಲೆ ಅವಳ ಮನೆ ಇದೆ, ಇಲ್ಲೇ ಸೊಲ್ಪ ಮುಂದೆ ತೋರಿಸ್ತೀನಿ.” ಅಂದ. ನಾನು ಕ್ಯಾಮೆರಾ ತೆಗೆದೆ. ರಾಜುವಿನ ಮುಖದಲ್ಲಿ ಅಲ್ಲಿಯತನಕ ಇಲ್ಲದ ಭೀತಿ ಕಾಣಿಸಿತು. “ನೋಡಿ ಬೆಹನ್ ಜೀ, ನಾನು ಗಾಡಿ ನಿಲ್ಲಿಸೋಕಾಗೊಲ್ಲ. ಕೊಂಚ ಸ್ಲೋ ಮಾಡ್ತೀನಿ. ಹಿಂದೆ ಕೂತು ಕ್ಲಿಕ್ ಮಾಡಿ. ಅವರಿಗೆ ಇದು ಯಾರ ಗಾಡಿ ಅಂತ ಗೊತ್ತುಮಾಡೋಕೆ ಹೆಚ್ಚು ಸಮಯ ಬೇಕಾಗಲ್ಲ. ಆಮೇಲೆ ನಾನು.. ಬಿಡಿ. ಅಂಥ ಜನ ಅವರು.” ಎಂದು ವಾಹನದ ವೇಗ ಕಡಿಮೆ ಮಾಡಿದ. ನಾನು ಕಿಟಕಿ ಗಾಜು ಸ್ವಲ್ಪವೇ ಕೆಳಗಿಳಿಸಿ ಕ್ಲಿಕ್ಕಿಸಿದೆ.
2008ರ ಕ್ರಿಸ್ಮಸಿನ ದಿನ. ಒಂದೇ ಊರು. ಒಬ್ಬ ಸಂತನ ಮನೆ. ಒಬ್ಬ ಹಂತಕಿಯ ಮನೆ. ಎಂಥಾ ಅಜಗಜಾಂತರ!! ವಾಹನ ಜಾಮನಗರದ ಕಡೆ ಧಾವಿಸತೊಡಗಿತು. ಪೋರಬಂದರದ ಆತ್ಮವು ಪಾನ್ ಅಂಗಡಿ, ಚಾಯ್, ಗಾಳಿಪಟ, ಗಾಂಧೀಜಿ ಮನೆಯ ಓಣಿ, ಸಂತೋಕಳ ಮನೆಯೆದುರ ಡ್ರೈನೇಜುಗಳ ಮೂಲಕ ಹಾದುಬಂದು ‘ಹೇಳು, ನಿಜವಾಗಿ ನನ್ನ ಕಂಡೆಯಾ?’ ಎಂದು ಅಣಕಿಸತೊಡಗಿತು. ಅದಕ್ಕೆ ಉತ್ತರಿಸಲು ಯತ್ನಿಸುತ್ತ ಕಣ್ಣುಹತ್ತಿದ್ದೇ ತಿಳಿಯಲಿಲ್ಲ. ಒಂದು ಪುಟ್ಟ ನಿದ್ದೆ ತೆಗೆದೆದ್ದರೆ, ಆಗಲೇ ಸಂಜೆ ಕಳೆದಾಗಿದೆ. ಹೊಸ ರಿಲಯನ್ಸ್ ರಿಫೈನರಿಯ ಸಾವಿರಗಟ್ಟಲೆ ಬೆಳಕುಗಳು ಮಾಯಾನಗರಿಯಂತೆ ಕಂಡವು. ನಾನು ಕಣ್ಣುಜ್ಜುತ್ತ “ರಾಜುಭಯ್ಯಾ, ಮುಂದಿನ ವರ್ಷ ಹೊಸ ಕಥೆಗಳ ಜತೆ ರೆಡಿಯಾಗಿರಿ!!” ಅಂದೆ.

ಮಾಯ್ಸನೂ ಸ್ಲಮ್ಮಿನ ಒಂದು ನಾಯಿಯೂ

ನಾನು ಈಗಿನ ಬಹುಚರ್ಚಿತ ಚಲನಚಿತ್ರವಾದ ’ಕೋಟ್ಯಾಧಿಪತಿಯಾದ ಕೊಳೆಗೇರಿ ನಾಯಿ’ ಯನ್ನು ನೋಡಿ ಆನಂದಿಸಿ, ಅದರ ಬಗ್ಗೆ ಸಾಂಗತ್ಯದಲ್ಲಿ ಬರೆದು, ನನ್ನ ಬ್ಲಾಗೆಳೆಯರ ಬರಹಗಳನ್ನೂ ಓದಿ ಪುಳಕಿತಳಾಗಿರುವಾಗ ಒಂದು ಬರಹವು ಈ ಮೊದಲು ನನ್ನ ಗೃಧ್ರದೃಷ್ಟಿಯನ್ನು ಮೀರಿ ಅಡಗಿಕೊಂಡಿದ್ದುದು ನನ್ನ ವಿಶೇಷಪ್ರಝ್ನೆಗೆ ಅರಿವಾಯಿತು. ಮಾಯ್ಸನೆಂಬ ಈ ಮನುಷ್ಯಜೀವಿಯು ಇದನ್ನು ಊಂಕಿಸಿರುವನು. ಕೂಡಲೆ ಅದನ್ನು ಓದಿ ಗಹಗಹಿಸಿ ನಕ್ಕನಂತರ ಓದುಗಮಹಾರಥಿಗಳಾದ ತಮ್ಮ ಅವಗಾಹನೆಗೆಂದು ಇಲ್ಲಿ ನೀಡುತ್ತಿರುವೆನು. ಓದಿ ಅಟ್ಟಹಾಸಗೈದು ಪುನೀತರಾಗಬೇಕಾಗಿ (ಸ್ಪಷ್ಟನೆ: ಇಲ್ಲಿ ನಾನು ಯಾವ ಚಲನಚಿತ್ರ ನಟನ  ಬಗ್ಗೆಗೂ ಮಾತನಾಡುತ್ತಿಲ್ಲ.) ನನ್ನ ಕಳಕಳಿಯ ವಿನಂತಿ.

ಡಿಸೆಂಬರ್ ಮೆಲುಕುಗಳು

pic-solan-women20in20fog1

‘ಬೂಹೂ!’ ಎಂದು ಆಕೆ ಅಳುತ್ತ ಇದ್ದಳು ಮತ್ತು ಆಕೆಯನ್ನು ನೋಡುತ್ತ ನನಗೆ ಯಾಕೊ ನಗೆ ಉಕ್ಕಿ ಉಕ್ಕಿ ಬರುತ್ತ ಇತ್ತು. ಆಕೆಯ ಹುಡುಗ ಕಾಣಲು ಬರುತ್ತೇನೆ ಎಂದು ಹೇಳಿ ಕೈಕೊಟ್ಟಿದ್ದ. ನನಗೆ ಈ ಥರದ ‘ಸೊರಬರ’ ಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗಿ ಮುಜುಗರ ಬರಿಸುತ್ತವೆ. ಟಿಶ್ಯೂ ಪೇಪರಿನ ಬಾಕ್ಸು ಆಕೆಯ ಕೈಗಿತ್ತು ನೋಡಿದೆ. ಉಹೂಂ. ಧಾರೆ ಜೋರಾಗಿ ಉಕ್ಕಲಾರಂಭಿಸಿತೆ ವಿನಃ ಕಡಿಮೆಯಾಗುವ ಹಾಗೆ ಕಾಣಲೆ ಇಲ್ಲ. ಒಂದು ಲೋಟ ನೀರು. ಒಳ್ಳೆಯ ಮದ್ದು. ‘ಮುಖ ತೊಳಕೋ, ಫ್ರೆಶ್ ಅನ್ಸತ್ತೆ’ ಎಂದು ಎದ್ದು ಹೋಗಿ ಎರಡು ಕಪ್ ಬಿಸಿಬಿಸಿ ಟೀ ಮಾಡಿಕೊಂಡು ಬಂದೆ. ಆಕೆ ಅಳಿಸಿಹೋಗಿದ್ದ ಐಲೈನರು ಹಚ್ಚಿಕೊಳ್ಳುತ್ತ ಇದ್ದಳು. ಆಕೆಯ ಕಣ್ಣ ರೆಪ್ಪೆಗಳ ಉದ್ದಕ್ಕು ಹಾವಿನಂತೆ ಹಬ್ಬಿದ್ದ ಕರಿಯ ಗೆರೆಯನ್ನೆ ನೋಡುತ್ತ ನಿಂತೆ. ‘ಅಳು ಎಂದರೆ ಅಳಿಸಿಹೋದ ಐಲೈನರು’ ಅನ್ನಿಸಿ ಮತ್ತೆ ನಗು ಉಕ್ಕಿತು. ಟೀ ಕುಡಿದು ‘ಹೊರಡ್ತೀನಿ. ಆಫೀಸಿಗೆ ಹೋಗ್ಬೇಕು.’ ಎಂದು ಹೊರಟಳು. ಆಕೆಯ ದುಃಖ ಆಫೀಸಿನ ಮೆಟ್ಟಿಲು ಹತ್ತುವವರೆಗಷ್ಟೆ ಸೀಮಿತವಾಗಿರುವುದೆ ಎಂದು ಯೋಚನೆ ಮಾಡಿದೆ.

ಚಳಿಗಾಳಿ ಮುಖಕ್ಕೆ ರಾಚಿತು. ಕಿಟಕಿ ಮುಚ್ಚಿದೆ. ಮನೆಗಳು ಬೆಚ್ಚಗಿರಬೇಕು. ಅಪ್ಪ ಚಳಿಗಾಲದಲ್ಲಿ ಬೆಳಜಾವ ತಾನೆದ್ದ ಮೇಲೆ ತನ್ನ ಕಂಬಳಿಯನ್ನು ನಮಗೆ ಹೊದಿಸಿ ಹೋಗುತ್ತ ಇದ್ದರು. ನಾವು ತಲೆಪೂರ್ತಿ ಕಂಬಳಿ ಹೊದ್ದು ಅದರೊಳಗೆ ಹೊಡೆದಾಟ ನಡೆಸುತ್ತ ಇರುತ್ತಿದ್ದೆವು. ನೀರೊಲೆಗೆ ಉರಿ ಹಾಕಿ ನಮ್ಮನ್ನೆಬ್ಬಿಸಿದ ಮೇಲೆ ನಾವು ಮಂಕಿಕ್ಯಾಪು ಹಾಕಿಕೊಂಡು ಅಂಗಳದಲ್ಲಿ ಬೀಳುತ್ತಿದ್ದ ಮಂಜು ನೋಡುತ್ತ ಉಫ್ ಉಫ್ಫೆಂದು ಊದಿ ನಮ್ಮ ಬಾಯಿಂದ ಬರುವ ಹಬೆಯನ್ನು ನೋಡುತ್ತ ನಾವು ಸಿಗರೇಟು ಸೇದುತ್ತಿದ್ದೇವೆಂದು ಭಾವಿಸಿಕೊಂಡು ಸಂತಸಪಡುತ್ತಿದ್ದೆವು. ಆಮೇಲೆ ತೆಂಗಿನಸಸಿಗಳಿಗೆ ನೀರು ಹಣಿಸಬೇಕು. ಅದೆಲ್ಲ ಆದಮೇಲೆ ಸ್ನಾನ, ತಿಂಡಿ, ಸ್ಕೂಲು.. ನಮ್ಮ ದಿನಕ್ಕೊಂದು ಲಯಬದ್ಧತೆಯಿತ್ತು. ತುಂಟತನ ಮೇರೆಮೀರಿದರೆ ಬೀಳುವ ಏಟುಗಳಿಗೆ ನೋವಾಗಿ ಅಳು ಬರುತ್ತಿತ್ತೆ ವಿನಃ ದುಃಖ ಅಂದರೆ ಏನೆಂದು ನಮಗೆ ಗೊತ್ತೇ ಇರಲಿಲ್ಲ. ಕಾಲೇಜಿನಲ್ಲಿ ಗೆಳತಿಯರೆಲ್ಲ ‘ನೀನು ಯಾಕೆ ಅಳೊಲ್ಲ?’ ಎಂದು ಕೇಳಿದರು ನಕ್ಕುಬಿಡುತ್ತ ಇದ್ದೆ.

ಮೊನ್ನೆ ಸಂಜೆ ಯಾಕೊ ಸ್ವೆಟರು ಹಾಕಲು ಕೇಳದೆ ಮೊಂಡಾಟ ಮಾಡುತ್ತ ಇದ್ದ ಮಗಳ ಮೇಲೆ ರೇಗಿದೆ. ದುಃಖಿಸೀ ದುಃಖಿಸೀ ಅತ್ತಳು. ‘ನೀನು ನಂಗೆ ಬೈದ್ರೆ ನಾನು ತುಂಬಾ ಅಳ್ತೀನಿ. ಮನೇ ಬಿಟ್ಟು ಚಿಕ್ಕಪ್ಪನ ಮನೆಗೆ ಹೋಗ್ತೀನಿ.’ ಅಂದಳು. ನನಗೆ ತಲೆಯ ಮೇಲೆ ಪಟ್ಟನೆ ಬಾರಿಸಿದ ಹಾಗಾಗಿ ಸುಮ್ಮನೆ ಕೂತೆ. ಏನು ಹೇಳಲಿ ಇಂಥ ಮಗುವಿಗೆ? ‘ಎಲ್ಲದನ್ನೂ ಚೆಂದ ಮಾಡಿಕೋಬೇಕು ಕಣವ್ವಾ, ಇದು ಆಗದೆ ಇರೋ ಕೆಲಸ ಏನಲ್ಲ’ ಮಂಜು ಯಾವಾಗಲು ಹೇಳುವುದು ನೆನಪಾಯಿತು. ಅವಳ ಬಳಿ ಹೋದೆ. ‘ಎಷ್ಟು ಹೊತ್ತಿಗೆ ಮನೆಬಿಟ್ಟು ಹೋಗ್ತೀ?’ ಕೇಳಿದೆ. ಮುಖ ಉಬ್ಬಿಸಿಕೊಂಡು, ‘ಈಗ ಕತ್ತಲಾಗಿದೆ, ಚಳಿ. ನಾಳೆ ಬೆಳಿಗ್ಗೆ ಹೋಗ್ತೀನಿ’ ಅಂದಳು. ನಾನು ಹುಬ್ಬು ಹಾರಿಸಿದೆ. ಕೆಟ್ಟಕೆಟ್ಟ ಮುಖ ಮಾಡಿದೆ. ಇಬ್ಬರೂ ನಕ್ಕೆವು. ಅವಳು ಸ್ವೆಟರು ಹಾಕಿಸಿಕೊಂಡಳು. ನಾನು ಮೊನ್ನೆ ಮೈಸೂರಿಗೆ ಸ್ವೆಟರಿಲ್ಲದೆ ಹೋಗಿ ಯಾವುದೊ ದುಃಖಕ್ಕೆ ಸಿಲುಕಿ ಮತ್ತೂ ಚಳಿ ಕೊರೆವ ವೊಲ್ವೋ ಬಸ್ಸಿಗೆ ಹತ್ತಿ ಬಂದಿದ್ದು ನೆನಪಾಯಿತು. ಆವತ್ತು ಕೂತು ನಾಲಕ್ಕು ಸಾಲು ಬರೆದಿದ್ದೆ…

ಮೈಸೂರಿಗೆ ಡಿಸೆಂಬರ್ ಕಾಲಿಟ್ಟಿದೆ..

…ಸಂಜೆಯ ಘಳಿಗೆ
ತೆಳುಮಂಜಿನ ಪರದೆ
ಬೀದಿದೀಪಗಳಿಗೂ
ಹೊತ್ತಿಕೊಳ್ಳಲು ನಾಚಿಕೆ
ಟೆಂಟುಗಳೊಳಗಿನ ಮಕ್ಕಳಿಗೆ
ಅಲ್ಲಾಡಲೂ ಬೇಸರ..
ಹರಕು ಕಂಬಳಿಯೊಳಗೆ
ಚಳಿ ನುಗ್ಗಿಬಿಟ್ಟರೆ!
***

ಸೆಟೆದುನಿಂತ
ನೀಲಗಿರಿ ಮರಗಳ ಪಕ್ಕ
ವಾಕಿಂಗ್ ಶೋಕಿಯ ಜನ
ಹರೆಯದ ಬಿಸಿನೋಟದ
ಹುಡುಗ ಹುಡುಗಿಯರು
ಸಂಧ್ಯಾರಾಗ ಹಾಡುವ
ಅಜ್ಜಿ ತಾತಂದಿರು
ಕೊಬ್ಬು ಕರಗಿಸಲು ಪಾಡು ಪಡುವ
ಆಫೀಸು ಹೆಂಗೆಳೆಯರು..
***

ನೋಡುತ್ತ
ಮನೆಯಲಿರುವ ಮಗಳ
ಸುರುಳಿಗೂದಲ ನೆನೆಯುತ್ತ
ಲಹರಿಯಲ್ಲಿ
ನಡೆಯುತ್ತೇನೆ.

ಮೈಸೂರಿಗೆ
ಡಿಸೆಂಬರ್
ಕಾಲಿಟ್ಟಿದೆ.

ಚಿತ್ರಕೃಪೆ: www.upstateartists.com

ಒಂದು ಲಾಸ್ಟ್ ಮಿನಿಟ್ ಅನೌನ್ಸ್ ಮೆಂಟು!!

ಸಂವಾದ.ಕಾಂ ನ ಗೆಳೆಯರ ಬಗ್ಗೆ ನಾನು ನಿಮಗೆ ತಿಳಿಸಿಲ್ಲ ಅಲ್ವಾ? ಬ್ಲಾಗರ್ ಅರೇಹಳ್ಳಿರವಿಯವರ ಮುಖಾಂತರ ನನಗೆ ಪರಿಚಯವಾದ ಬಳಗ ಇದು. ಯಾವುದೇ ಆಡಂಬರವಿಲ್ಲದೆ, ಹೆಚ್ಚಿಗೆ ಗಲಾಟೆ ಮಾಡದೆ ಅಚ್ಚುಕಟ್ಟಾಗಿ ಕನ್ನಡಸಾಹಿತ್ಯ, ಸಂಸ್ಕೃತಿಯನ್ನ ತನ್ನದೇ ವಿಶಿಷ್ಟ ರೀತಿಯಲ್ಲಿ ಬದಲಾಗುತ್ತಿರುವ ಕಾಲದೊಂದಿಗೆ ಹೆಜ್ಜೆಹಾಕುತ್ತ ಕಾಣಲೆಳಸುತ್ತಿರುವ ಆಸಕ್ತರ ಗುಂಪು ಇದು. ಇಲ್ಲಿ ಹಿರಿಕಿರಿಯರನೇಕರಿದ್ದಾರೆ..ಕರ್ನಾಟಕದೆಲ್ಲೆಡೆಯಿಂದ. ಆಗಾಗ ಭೇಟಿಯಾಗಿ, ಕಾರ್ಯಕ್ರಮಗಳನ್ನು ಆಯೋಜಿಸಿ ಚೆಂದವಾಗಿ ನಡೆಸಿಯೂಬಿಡುತ್ತಾರೆ. ಈ ಶನಿವಾರ -ಭಾನುವಾರ ಅಂದರೆ ೨೨ ಹಾಗೂ ೨೩ ನವೆಂಬರ್ ತುಮಕೂರು ಬಳಿಯ ಐತಿಹಾಸಿಕ ತಾಣವಾದ ದೇವರಾಯನದುರ್ಗದಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಸಿನಿಮಾ ರಸಗ್ರಹಣ ಶಿಬಿರವೊಂದನ್ನು ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಬನ್ನಿ, ಭಾಗವಹಿಸಿ, ಪ್ರೋತ್ಸಾಹ ನೀಡಿ.

ಏನು? ಪ್ಲಾನ್ ಮಾಡಿಕೊಂಡಿಲ್ಲವಲ್ಲ ಅಂದುಕೊಳ್ಳುತ್ತ ಇದೀರ. ಪ್ಲಾನ್ ಮಾಡದೆ ಹೊರಟುನೋಡಿ, ಚನಾಗಿರತ್ತೆ. ದೇವರಾಯನದುರ್ಗ ಬೆಂಗಳೂರಿಂದ ಏನು ಮಹಾ ದೂರ ಏನಿಲ್ಲ. ನಾನು ಕೊಟ್ಟಿರುವ ಲಿಂಕಿನಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿ ಇದೆ. ಬಂದರೆ ಶನಿವಾರ ನಾನೂ ಇರ್ತೇನೆ.